ಬಿಜೆಪಿ ಪರಿವರ್ತನಾ ರ್ಯಾಲಿ: ಸಭೆಯಲ್ಲಿ ಹಾಲಾಡಿ
Team Udayavani, Oct 31, 2017, 9:51 AM IST
ಕೋಟೇಶ್ವರ/ಕೋಟ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ರ್ಯಾಲಿಯು ನ. 13ರಂದು ಕುಂದಾಪುರಕ್ಕೆ ಆಗಮಿಸಲಿದ್ದು, ಪೂರ್ವಭಾವಿಯಾಗಿ ಕೋಟೇಶ್ವರದ ಶಾರದಾ ಸಭಾಭವನದಲ್ಲಿ ಮತ್ತು ಕೋಟದ ಮಾಂಗಲ್ಯ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೋಟೇಶ್ವರದಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ನೇತೃತ್ವದಲ್ಲಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಂದಿನ ದಿನಗಳಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಘೋಷಿಸಿದರು.
ಕೋಟದಲ್ಲಿ ನಡೆದ ಸಭೆಯಲ್ಲಿ ಕಾಡೂರು ಸುರೇಶ ಶೆಟ್ಟಿ ಮಾತನಾಡಿ, ಹಾಲಾಡಿ ಅವರು ತಾಂತ್ರಿಕ ಕಾರಣಗಳಿಂದ ಬಿಜೆಪಿ ಜತೆ ಹಾಗೂ ಇಂದಿನ ಸಭೆಯಲ್ಲಿ ವೇದಿಕೆ ಹಂಚಿ ಕೊಳ್ಳುತ್ತಿಲ್ಲ. ಆದರೆ ನ. 13ರ ರ್ಯಾಲಿ ಅವರ ನೇತೃತ್ವದಲ್ಲೇ ಪರಿವರ್ತನಾ ರ್ಯಾಲಿ ನಡೆಯಲಿದೆ ಎಂದರು.
ಬಿಜೆಪಿಗೆ ಈಗ ಸೇರ್ಪಡೆಗೊಳ್ಳಲು ಕೆಲವೊಂದು ತಾಂತ್ರಿಕ ತೊಂದರೆಗಳಿದ್ದು, ಸಭೆಯಲ್ಲಿ ಭಾಗವಹಿಸಿದ್ದು, ನಿಜ. ಆದರೆ ವೇದಿಕೆಯೇರಿಲ್ಲ. ಸಾಮಾನ್ಯನಾಗಿ ಭಾಗವಹಿಸಿದ್ದೆ. ಇಷ್ಟವರೆಗೆ ನಾನು ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದೇನೆ. ಚುನಾವಣೆ ಸಂದರ್ಭ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ