Hunsur: ನ್ಯಾಯ ದೊರಕಿಸಿ ಕೊಡಿ; ಮೃತ ವಿದ್ಯಾರ್ಥಿಯ ಪೋಷಕರ ಮನವಿ
ಮುತ್ತುರಾಜು ಕುಟುಂಬಕ್ಕೆ ಮಾಜಿ ಶಾಸಕ ಮಂಜುನಾಥ್ ಸಾಂತ್ವಾನ
Team Udayavani, Feb 24, 2024, 12:06 PM IST
ಹುಣಸೂರು: ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕಾಲೇಜು ವಿದ್ಯಾರ್ಥಿ ತಾಲೂಕಿನ ದಾಸನಪುರದ ಮುತ್ತುರಾಜ್ ಮನೆಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮುಖಂಡರೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ದೈರ್ಯ ತುಂಬಿದರು.
ಮುತ್ತುರಾಜ್ನ ತಂದೆ ರವಿಕುಮಾರ್ ಘಟನೆಯ ಕುರಿತು ಮಾಹಿತಿ ನೀಡಿ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದೇವೆ, ನನಗೆ ದಿಕ್ಕೇ ತೋಚದಂತಾಗಿದೆ. ಆತ ಏನಾದರೂ ತಪ್ಪು ಮಾಡಿದ್ದರೆ ತಮಗೆ ಅಥವಾ ಪೊಲೀಸರಿಗೆ ತಿಳಿಸಬೇಕಿತ್ತು. ಅದು ಬಿಟ್ಟು ಆತನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿರುವುದು ಆತಂಕ ಉಂಟು ಮಾಡಿದ್ದು, ಇಂತಹ ಸ್ಥಿತಿ ಯಾವ ತಂದೆ-ತಾಯಿಗೂ ಬರಬಾರದು. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪೋಷಕರು ಮನವಿ ಮಾಡಿಕೊಂಡರು.
ಈ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿ ಗೋಪಾಲಕೃಷ್ಣರಿಂದ ಆಗಿರುವ ಘಟನೆ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಅವರು ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಕುರಿತು ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವೆನೆಂದರು.
ಈ ವೇಳೆ ಗ್ರಾ.ಪಂ.ಸದಸ್ಯ ರಾಘವೇಂದ್ರ, ತಾ.ಪಂ.ಮಾಜಿ ಸದಸ್ಯ ವೆಳ್ಳಂಗಿರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಹೇಶ್, ಗೋವಿಂದಶೆಟ್ಟಿ, ದಿನೇಶ್, ಚಂದ್ರು ಮತ್ತಿತರರಿದ್ದರು.