ಕರುಣೆಯನ್ನೇ ಉಸಿರಾಡಿದಾಕೆ, ಕೋವಿಡ್-19ಕಾಟಕ್ಕೆ ಕಂಗಾಲಾದಳು!


Team Udayavani, May 10, 2020, 6:27 AM IST

ಕರುಣೆಯನ್ನೇ ಉಸಿರಾಡಿದಾಕೆ, ಕೋವಿಡ್-19ಕಾಟಕ್ಕೆ ಕಂಗಾಲಾದಳು!

ಸಾಂದರ್ಭಿಕ ಚಿತ್ರ.

ಕುಟುಂಬ, ಮನೆ-ಮಕ್ಕಳನ್ನು ಮರೆತು ಸೇವೆಗೆ ನಿಲ್ಲುವವರ ಪೈಕಿ ದಾದಿಯರಿಗೆ ಮೊದಲ ಸ್ಥಾನ. ಈ ಕಾರಣದಿಂದಲೇ ಅವರನ್ನು “ಮಾರುವೇಷದ ದೇವತೆ’ ಎನ್ನುವುದುಂಟು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ, ಈ ತಾಯಂದಿರ ಪಾತ್ರ ದೊಡ್ಡದು. ಆದರೆ ಸೇವೆಯೇ ಜೀವನ ಎಂದು ಬಾಳುವ ಇವರಿಗೆ ಕೋವಿಡ್-19 ಸೋಂಕು ತಗುಲಿಬಿಟ್ಟರೆ, ಅದುವರೆಗೆ ಚಿಕಿತ್ಸೆ ನೀಡುತ್ತಿದ್ದಾಕೆಯೇ, ಅದೇ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆ ಯುವ ಸ್ಥಿತಿ ಬಂದುಬಿಟ್ಟರೆ… ಅಂಥ ದೊಂದು ಸಂಕಟದ ಪ್ರಸಂಗಕ್ಕೆ ಸಾಕ್ಷಿಯಾದ ಸಂದರ್ಭ ವನ್ನು, ಅನಂತರದ ಬೆಳವಣಿಗೆಗಳನ್ನು, ಈ ಬದುಕಿನ ವ್ಯಂಗ್ಯ ಮತ್ತು ವಾಸ್ತವವನ್ನು, ಅರ್ಲಾಂಡ್‌ ಎಂಬ ದಾದಿಯೊಬ್ಬರು ಹೇಳಿ ಕೊಂಡಿದ್ದಾರೆ. ಈಕೆ, ಅಮೆರಿಕದ ನ್ಯೂಜೆರ್ಸಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಾರೆ…
* * *
ಕೋವಿಡ್-19ದ ಹಾವಳಿ ಇರುವುದು ಚೀನದಲ್ಲಂತೆ. ಅದು ನಮ್ಮ ದೇಶಕ್ಕೆ ಬರುವುದು ಅಷ್ಟು ಸುಲಭವಲ್ಲ. ಕಾಯಿಲೆಯಾದರೆ ಏನಂತೆ? ಅದೂ ಒಂದು ವಸ್ತುವಿನ ಅಥವಾ ವ್ಯಕ್ತಿಯ ಮೂಲಕವೇ ಬರಬೇಕು. ಅಮೆರಿಕಕ್ಕೆ ಬರುವುದು ಅಂದ್ರೆ ಸುಮ್ನೆನಾ? ಒಂದು ದೇಶದ ಅಧ್ಯಕ್ಷ/ಪ್ರಧಾನಿಯನ್ನೂ ಹತ್ತು ಬಗೆಯಲ್ಲಿ ಚೆಕ್‌ ಮಾಡಿಯೇ ಒಳಗೆ ಬಿಡುವ; ಆ ಮಟ್ಟದ ಎಚ್ಚರಿಕೆ, ಮುಂಜಾಗ್ರತೆ ವಹಿಸುವ ದೇಶ ನಮ್ಮದು. ಹೀಗಿರುವಾಗ, ಒಂದು ಕಾಯಿಲೆಯನ್ನು ತಡೆಯುವ ಬಗ್ಗೆ ಯೋಚಿ ಸದೇ ಇರುತ್ತಾ? ನೆವರ್‌. ವಿಶ್ವದ ದೊಡ್ಡಣ್ಣ ಅನಿಸಿಕೊಂಡಿರುವ ಅಮೆರಿಕವನ್ನು ಯಾವ ಕಾಯಿಲೆಯೂ ಹೆದರಿಸಲು ಸಾಧ್ಯವಿಲ್ಲ…

ಇಂಥದೊಂದು ನಂಬಿಕೆ, ಅಮೆರಿಕದಲ್ಲಿ ಎಲ್ಲರಿಗೂ ಇತ್ತು. ಈ ಕಾರಣದಿಂದಲೇ, ಮಾರ್ಚ್‌ ಮೊದಲ ವಾರದವರೆಗೂ ಯಾರೊಬ್ಬರೂ ಕೋವಿಡ್-19 ಬಗ್ಗೆ ತಲೆಕೆಡಿಸಿ ಕೊಂಡಿರಲಿಲ್ಲ. ನಾನಿರುವ ಆಸ್ಪತ್ರೆಯಲ್ಲಿ, ಹೃದ್ರೋಗ, ಕ್ಯಾನ್ಸರ್‌ ಸೇರಿದಂತೆ ಎಲ್ಲ ಬಗೆಯ ಕಾಯಿಲೆಗೂ ಅತ್ಯುತ್ತಮ ಚಿಕಿತ್ಸೆ ಲಭ್ಯವಿತ್ತು. ತಜ್ಞ ವೈದ್ಯರ ತಂಡವೂ ಅಲ್ಲಿತ್ತು. ಹಾಗಾಗಿ, ನಮಗೆ ಯಾವುದೇ ಚಿಂತೆಯಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನನ್ನೊಂದಿಗೆ ಲೀಸಾ ಇದ್ದಳು. ಆಕೆ ನನ್ನ ಹಿರಿಯ ಸಹೋದ್ಯೋಗಿ. ಅವಳು, ಶಾಂತ ಮನಸ್ಸಿನ, ನಗುಮೊಗದ ದೇವತೆ. ಆಕೆ ಬೇಸರಗೊಂಡಿದ್ದನ್ನು, ಸಿಟ್ಟಾಗಿದ್ದನ್ನು, ರೇಗಿದ್ದನ್ನು, ಕಣ್ಣೀರು ಹಾಕಿದ್ದನ್ನು ಯಾರೂ ನೋಡಿರಲಿಲ್ಲ. ರೋಗಿಯ ಮಗ್ಗುಲಲ್ಲಿ ನಿಂತು- “ನಿಮಗೆ ಅಂತ ಯಾವ ತೊಂದರೆ ಕೂಡ ಇಲ್ಲ. ಬೇಗ ಹುಷಾರಾಗ್ತಿರಿ. ಯೋಚನೆ ಮಾಡಬೇಡಿ. ನೆಮ್ಮದಿಯಾಗಿ ನಿದ್ರೆ ಮಾಡಿ…’ ಅನ್ನುತ್ತಿದ್ದಳು. ರೋಗಿಯ ಕುಟುಂಬದವರಿಗೂ ಸಮಾಧಾನದ ಮಾತು ಹೇಳುತ್ತಿದ್ದಳು. ವೈದ್ಯರಿಗೆ ಸರಿಸಮನಾಗಿ ಕೆಲಸ ಮಾಡುತ್ತಿದ್ದಳು. ಕೆಲವೊಂದು ವಿಚಾರ ಗಳನ್ನು, ವೈದ್ಯರಷ್ಟೇ ಚೆನ್ನಾಗಿ ತಿಳಿದುಕೊಂಡಿದ್ದಳು. ಹಾಗಾಗಿ, ಯಾವುದಾದರೂ ಅತಿಮುಖ್ಯ ಕೇಸ್‌ ಬಂದರೂ, ಲೀಸಾಗೆ ತಪ್ಪದೇ ಕರೆ ಬರುತ್ತಿತ್ತು.

“ಕಾಯಿಲೆಗೆ ಕರುಣೆಯಿಲ್ಲ. ಯುವಕರು, ಮುದುಕರು, ಮಕ್ಕಳು, ನಡುವಯಸ್ಸಿನವರು -ಹೀಗೆ, ಎಲ್ಲರನ್ನೂ ಅದು ಅಟ್ಯಾಕ್‌ ಮಾಡುತ್ತದೆ. ಜೀವಕ್ಕೆ ಅಪಾಯವಿದೆ ಅನ್ನಿಸಿದಾಗ, ಅಳುತ್ತಲೇ ಆಸ್ಪತ್ರೆಗೆ ಬರ್ತಾರೆ ಜನ. ಅವರನ್ನು ಗುಣಮುಖರನ್ನಾಗಿ ಮಾಡಿ ವಾಪಸ್‌ ಕಳಿಸುವುದು, ನಮ್ಮ ಕೆಲಸ. ರೋಗಿಗಳ ಸೇವೆ ಮಾಡುವ ಅವಕಾಶ, ಎಲ್ಲರಿಗೂ ಸಿಗಲ್ಲ. ನರ್ಸ್‌ಗಳಿಗೆ ಮಾತ್ರ ಸಿಗುವ ಅಪೂರ್ವ ಅವಕಾಶ ಅದು. ಅರ್ಥವಾಯ್ತಾ ಅರ್ಲಾಂಡ್‌? ರೋಗಿಗಳನ್ನು, ಕೇವಲ “ರೋಗಿ’ ಎಂದಷ್ಟೇ ನೋಡಿದಾಗ, ಅವರ ಸೇವೆ ಮಾಡಲು ಮುಜುಗರವಾಗುತ್ತೆ. ಆದರೆ ಪೇಷಂಟ್‌ಗಳಲ್ಲಿಯೇ ನಮ್ಮ ಬಂಧುಗಳನ್ನು, ಹಿರಿಯರನ್ನು, ಗೆಳೆಯ-ಗೆಳತಿಯರನ್ನು ಕಲ್ಪಿಸಿ ಕೊಂಡಾಗ, ಎಲ್ಲವೂ ಆಪ್ತವಾಗುತ್ತಾ ಹೋಗುತ್ತೆ. ಆನಂತರ ದಲ್ಲಿ, ರೋಗಿಯ ಕೃಶ ದೇಹವನ್ನೋ, ಗುಪ್ತ ಅಂಗವನ್ನೋ, ಆಕಸ್ಮಿಕವಾಗಿ ಮೇಲೆ ಬಿದ್ದ ಎಂಜಲನ್ನೋ ನೋಡಿದರೂ ಬೇಸರ ಆಗು ವುದಿಲ್ಲ…’ ಅನ್ನುತ್ತಿದ್ದಳು. ಅಷ್ಟೇ ಅಲ್ಲ; ಹಾಗೆಯೇ ಬದುಕಿದ್ದಳು. ಪರಿಣಾಮ: ಬೆಸ್ಟ್ ಎಂಪ್ಲಾಯ್‌ ಪ್ರಶಸ್ತಿ, ಪ್ರತಿ ವರ್ಷವೂ ಲೀಸಾಗೇ ಸಿಗುತ್ತಿತ್ತು.
ಅಮೆರಿಕಕ್ಕೂ ಬಂತು ಕೋವಿಡ್-19 ಎಂಬ ಸುದ್ದಿ, ಮಾರ್ಚ್‌ 2ನೇ ವಾರ ಪ್ರಕಟವಾ ದಾಗಲೂ, ನಮಗೆ ಅಂಥ ಭಯವೇನೂ ಆಗಲಿಲ್ಲ. ಆದರೆ, ನಾವಿದ್ದ ಆಸ್ಪತ್ರೆಗೇ ಕೋವಿಡ್-19 ಸೋಂಕಿತನೊಬ್ಬ ದಾಖಲಾ ದಾಗ ದಿಗಿಲಾಯಿತು. “ನಮ್ಮದು ಪ್ರಬಲ ರಾಷ್ಟ್ರ. ಎಲ್ಲ ಕಾಯಿಲೆಗೂ ಔಷಧ ಹೊಂದಿರುವಂಥ ರಾಷ್ಟ್ರ. ಇಡೀ ಜಗತ್ತು ನಮಗೆ ಹೆದರಬೇಕೇ ಹೊರತು, ನಾವು ಯಾರಿಗೂ ಹೆದರುವುದಿಲ್ಲ. ಹೆದರುವ ಅಗತ್ಯವೂ ಇಲ್ಲ’- ಇಂಥ ನಂಬಿಕೆಗಳೆಲ್ಲ ಉಲ್ಟಾ ಆದ ಸಂದರ್ಭ ಅದು. “ವಿಶೇಷವಾಗಿ ಸಿದ್ಧ ಗೊಂಡ ರೂಮ್ ನಲ್ಲಿಯೇ ಕೋವಿಡ್-19 ಸೋಂಕಿತರು ಇರಬೇಕು. ಕೆಲವೇ ವೈದ್ಯರು- ನರ್ಸ್‌ ಮಾತ್ರ ಅವರನ್ನು ಟ್ರೀಟ್‌ ಮಾಡಬೇಕು. ಯಾರೊಬ್ಬರೂ ಅವರನ್ನು ನೋಡಲು ಬರು ವಂತಿಲ್ಲ, ಅಕಸ್ಮಾತ್‌ ಕಂಡರೂ ಮುಟ್ಟುವಂತಿಲ್ಲ, ಮಾತಾಡುವಂತಿಲ್ಲ. ಅಪ್ಪಿ ಸಂತೈಸುವ ಮಾತಂತೂ ದೂರವೇ ಉಳಿಯಿತು…’ ಎಂಬಂಥ ಮಾತು ಗಳು ಆದೇಶದ, ಎಚ್ಚರಿಕೆಯ ರೂಪದಲ್ಲಿ ನಮ್ಮನ್ನೂ ತಲುಪಿದವು.

ಉಹುಂ, ಇಂಥದೊಂದು ಸಂದರ್ಭ ಎದುರಿಸಲು ನಾವ್ಯಾರೂ ಸಿದ್ಧರಾಗಿರಲಿಲ್ಲ. ಒಂದೇ ವಾರದ ಅವಧಿಯಲ್ಲಿ, ನಾವಿದ್ದ ಏರಿಯಾದಲ್ಲೇ 11 ಮಂದಿಗೆ ಕೋವಿಡ್-19 ಅಮರಿಕೊಂಡಿತ್ತು. ಅವರೆಲ್ಲಾ , ನಾವಿದ್ದ ಆಸ್ಪತ್ರೆಗೇ ದಾಖಲಾಗಿದ್ದರು! ಸಾವೆಂಬುದು, ಇಲ್ಲೇ ಈ ಆಸ್ಪತ್ರೆ ಯೊಳಗೇ, ನಮ್ಮಿಂದ ಸ್ವಲ್ಪ ದೂರದಲ್ಲಿಯೇ ಅಡಗಿ ಕುಳಿತಿದೆ ಎಂದು ತಿಳಿದಾಗ, ನಿಂತಲ್ಲೇ ನಡುಗಿಹೋಗಿದ್ದೆ. ಆಗ, ಲೀಸಾಳೇ ಧೈರ್ಯ ಹೇಳಿದ್ದಳು. ಅಷ್ಟೇ ಅಲ್ಲ; ಕೋವಿಡ್-19ಸೋಂಕಿತರನ್ನು ಹೇಗೆ ಟ್ರೀಟ್‌ ಮಾಡಬೇಕು ಎಂದೂ ವಿವರಿಸಿದ್ದಳು. ಕೋವಿಡ್-19 ಬಂದರೆ, ಬರೀ 14 ದಿನ ದಲ್ಲಿ ಸತ್ತುಹೋಗ್ತೀವೆ ಎಂಬ ಭಯವೇ, ಎಲ್ಲರನ್ನೂ ನಡುಗಿಸಿ ಬಿಟ್ಟಿದೆ. ಹಾಗೇನೂ ಆಗುವುದಿಲ್ಲ ಎಂದೆಲ್ಲಾ ಸಮಾಧಾನ ಹೇಳಿದ್ದಳು.

ಇಂಥ ಸಂದರ್ಭದಲ್ಲಿಯೇ, ಹೃದ್ರೋಗಿ ಯೊಬ್ಬರನ್ನು ಉಪಚರಿಸುವ ಹೊಣೆ ಲೀಸಾ ಹೆಗಲಿಗೆ ಬಿತ್ತು. ಆತ 75 ವರ್ಷದ ಅಜ್ಜ. ವಯೋಸಹಜ ತೊಂದರೆಯ ಕಾರಣಕ್ಕೆ, ಆಸ್ಪತ್ರೆಗೆ ದಾಖಲಾಗಿದ್ದ. ರೋಗಿಗಳೇ ದೇವರು ಎಂದು ನಂಬಿದ್ದ ಲೀಸಾ, ಸಹಜವಾಗಿಯೇ ಆತನ ಸೇವೆಗೆ ನಿಂತಳು. ಅನಾಮಿಕ ನರ್ಸ್‌ ಒಬ್ಬಳ ಕಾಳಜಿ ಕಂಡು, ಆ ವೃದ್ಧನೂ ಖುಷಿ ಗೊಂಡಿದ್ದ. ವೈದ್ಯರ ಬಳಿ- she is an angel ಎಂದು ಮೆಚ್ಚುಗೆಯ ಮಾತು ಹೇಳಿದ್ದ. ವೈದ್ಯರೂ- exactlyಎಂದು ಸಮ್ಮತಿ ಸೂಚಿಸಿ ದ್ದರು. ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದ ಈ ಅಜ್ಜನಿಗೆ, 4ನೇ ದಿನ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡಿತು. ಹಿಂದೆಯೇ ಕೆಮ್ಮು, ಅದರ ಹಿಂದೆಯೇ ಉಸಿರಾಟದ ತೊಂದರೆ!

ಅರೆರೆ, ಇದ್ದಕ್ಕಿದ್ದಂತೆಯೇ ಏನಾಗಿಬಿಡು ಇವರಿಗೆ? ಅಂದು ಕೊಂಡೇ, ಅನುಮಾನ- ಕುತೂಹಲದಿಂದ ಆ ವೃದ್ಧನ ಗಂಟಲ ದ್ರವವನ್ನು ತಪಾಸಣೆಗೆ ಕಳಿಸಿದರೆ- ಎದೆಯೊಡೆಯುವಂಥ ಸುದ್ದಿ ಯೊಂದು ಕೇಳಿಬಂತು: ಕೋವಿಡ್-19 ಪಾಸಿಟಿವ್‌! ಎಲ್ಲಿ ಯಡವಟ್ಟಾ ಯಿತು? ಯಾವ ರೀತಿಯಲ್ಲಿ ಈತನಿಗೆ ಕೋವಿಡ್-19 ವೈರಸ್‌ ಹರಡಿತು? ಎಂದು ಯೋಚಿಸುತ್ತಿದ್ದಾ ಗಲೇ, ಇನ್ನೊಂದು ಶಾಕಿಂಗ್‌ ಸುದ್ದಿ: ಕೋವಿಡ್-19 ಪಾಸಿಟಿವ್‌ ಎಂದು ಗೊತ್ತಾದ ಎರಡೇ ದಿನಗಳಲ್ಲಿ, ಆ ವೃದ್ಧ ತೀರಿಕೊಂಡಿದ್ದ!

ಅವತ್ತೇ, ಆಸ್ಪತ್ರೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆಯಾಯಿತು. ಆ ವೃದ್ಧನ ಕುಟುಂಬದವರು, ಮೊದಲಿಂದಲೂ ಆತನಿಂದ ಅಂತರ ಕಾಯ್ದುಕೊಂಡಿದ್ದರು. ಅದೇ ಕಾರಣಕ್ಕೆ, ಅವರೆಲ್ಲ ನೆಗೆಟಿವ್‌ ರಿಪೋರ್ಟ್‌ ಪಡೆದರು. ಆದರೆ ಅಜ್ಜನಲ್ಲಿ ಒಂದು ಮಗುವನ್ನು, ದೇವರನ್ನು, ತನ್ನ ತಂದೆಯನ್ನು ಕಂಡು ಸೇವೆ ಮಾಡಿದ್ದಳಲ್ಲ ಲೀಸಾ, ಅವಳಿಗೆ ಕೋವಿಡ್-19 ಪಾಸಿಟಿವ್‌ ಎಂದು ರಿಪೋರ್ಟ್‌ ಬಂತು. ಅಷ್ಟೆ: ಪೂರ್ತಿ 21 ವರ್ಷ ಅದೇ ಆಸ್ಪತ್ರೆಯಲ್ಲಿ ಮುಖ್ಯ ನರ್ಸ್‌ ಆಗಿ ದುಡಿದಿದ್ದ ಅವಳನ್ನು, ಯಾರೂ ನೋಡುವಂತಿಲ್ಲ, ಮುಟ್ಟುವಂತಿಲ್ಲ, ಆಕೆ ಯೊಂದಿಗೆ ಯಾರೂ ಮಾತಾಡುವಂತಿಲ್ಲ, ಎಂದು ನಿಯಮ ಮಾಡಲಾಯಿತು. ಹಿಂದಿನ ದಿನದವರೆಗೂ, ಹೆಡ್‌ ನರ್ಸ್‌, ಮಾರು ವೇಷದ ದೇವತೆ ಎಂದು ಕರೆಸಿಕೊಂಡಿದ್ದ ಲೀಸಾ, ಇದ್ದಕ್ಕಿ ದ್ದಂತೆಯೇ ರೋಗಿಯಾಗಿ ಬದಲಾಗಿದ್ದಳು. ಸ್ಟ್ರೆಚರ್‌ ನೂಕಿಕೊಂಡು ಹೋಗು ತ್ತಿದ್ದವಳು, ಅದೇ ಸ್ಟ್ರೆಚರ್‌ನ ಮೇಲೆ ಮಲಗಿಬಿಟ್ಟಿದ್ದಳು!

ಅನಂತರದಲ್ಲಿ, ಇಡೀ ಜಗತ್ತು ಛಕ್ಕನೆ ವೇಷ ಬದಲಿಸಿತು. ಕೋವಿಡ್-19 ಕಾರಣದಿಂದ, ಲೀಸಾಳನ್ನು ಮುಟ್ಟುವಂತಿಲ್ಲ, ಮಾತಾಡಿಸು ವಂತಿಲ್ಲ ಎಂಬ ನಿಯಮವನ್ನು, ಆಕೆಯ ಕುಟುಂಬದವರು ಮುಕ್ತವಾಗಿ ಸ್ವಾಗತಿಸಿದರು. “”ಜೀವ ಮೊದಲು, ಬಾಂಧವ್ಯ ಆಮೇಲೆ” ಅಂದುಬಿಟ್ಟರು. ಆಸ್ಪತ್ರೆಯ ಸಿಬಂದಿ ಕೂಡ, “”ದೇಶದ ಹಿತದೃಷ್ಟಿಯಿಂದ ಅಂತರ ಕಾಯ್ದುಕೊಳ್ಳೋಣ. ಯಾರ್ಯಾರ ಹಣೇಲಿ ಏನು ಬರೆದಿದೆಯೋ ಅದೇ ಆಗುತ್ತೆ. ಈಗ, ಕೋವಿಡ್-19ದಿಂದ ಪಾರಾಗುವುದಷ್ಟೇ ಮುಖ್ಯ” ಅಂದರು.

ಉಹುಂ, ಇಂಥದೊಂದು ಸಂದರ್ಭವನ್ನು, ಲೀಸಾ ಮಾತ್ರವಲ್ಲ, ಯಾರೊಬ್ಬರೂ ಊಹಿಸಿರಲಿಲ್ಲ. ಅದರಲ್ಲೂ, ಗಂಡ-ಮಕ್ಕಳು ದಿಢೀರನೆ ತನ್ನನ್ನು ದೂರ ಮಾಡುವರೆಂಬ ಅಂದಾಜಾಗಲಿ, ತನ್ನಿಂದಲೇ ಕೆಲಸ ಕಲಿತ ನರ್ಸ್‌ಗಳು, ಮುಖ ಕಂಡಾಕ್ಷಣ ಓಡಿಹೋಗ ಬಹುದು ಎಂಬ ಕಲ್ಪನೆಯಾಗಲಿ ಲೀಸಾಗೆ ಇರಲಿಲ್ಲ. 20 ವರ್ಷದ ನರ್ಸಿಂಗ್‌ ಬದುಕಿನಲ್ಲಿ ಸಾವಿರಾರು ಮಂದಿಯನ್ನು ಸಂತೈಸಿದ್ದವಳು ಆಕೆ. ನಾಲ್ಕು ಸಮಾಧಾನದ ಮಾತುಗಳನ್ನು, ಈಗ ನನಗೂ ಯಾರಾದರೂ ಹೇಳಬಾರದೆ? ಎಂದಾಕೆ ಹಂಬಲಿಸಿದಳು. ತನ್ನ ಸಂಕಟವನ್ನು ಸಂಜ್ಞೆಯ ಮೂಲಕ, ಕಣ್ಣಭಾಷೆಯ ಮೂಲಕ ಹೇಳಿಕೊಂಡಳು. ಅದು ಯಾರ ಮನಸ್ಸನ್ನೂ ತಟ್ಟಲಿಲ್ಲ. ಉಳಿದವರ ಮಾತಿರಲಿ: ಇಡೀ ಆಸ್ಪತ್ರೆಗೆ ನಂಬರ್‌ ಒನ್‌ ಅನ್ನಿಸಿಕೊಂಡಿದ್ದ ವೈದ್ಯರು ಕೂಡ- “ಹೆದರಬೇಡ ಲೀಸಾ, ನಿನಗೇನೂ ಆಗುವುದಿಲ್ಲ’ ಎನ್ನಲಿಲ್ಲ. ಬದಲಿಗೆ, ಯಾವಾಗ ಏನಾಗುತ್ತೋ ಹೇಳಲು ಬರಲ್ಲ. I am Helpless ಅಂದುಬಿಟ್ಟರು.
* * *
ದಿನಗಳು ಉರುಳತೊಡಗಿದವು. “ಲೀಸಾಗೆ ಲೋ ಬಿಪಿಯಂತೆ. ಶುಗರ್‌ ಕಂಟ್ರೋಲ್‌ಗೆ ಸಿಗ್ತಾ ಇಲ್ಲವಂತೆ. ಉಸಿರಾಟದ ತೊಂದರೆಯಂತೆ, ಜ್ವರವೂ ಇದೆಯಂತೆ! ನಿನ್ನೆ ಇದ್ದಕ್ಕಿದ್ದಂತೆಯೇ, ಆಕೆ ಕೋಮಾಕ್ಕೆ ಹೋಗಿಬಿಟ್ಟಳಂತೆ…’- ಇಂಥವೇ ಮಾತುಗಳ ಮಧ್ಯೆ 15 ದಿನಗಳು ಕಳೆದುಹೋದವು. 16ನೇ ದಿನ, ಕಡೆಗೂ ಡಿಸ್ಚಾರ್ಜ್ ಆದಳು ಲೀಸಾ. ಆದರೆ, ಮಾನಸಿಕವಾಗಿ ಶಾಕ್‌ಗೆ ಒಳಗಾಗಿ ದ್ದರಿಂದ, ಜನರನ್ನು ಗುರುತಿಸುವ ಶಕ್ತಿಯನ್ನೇ ಕಳೆದು ಕೊಂಡಿದ್ದಳು. “ಈಕೆಯನ್ನು, ಮಾನಸಿಕ ರೋಗಿಗಳ ವಾರ್ಡ್‌ಗೆ ಶಿಫ್ಟ್ ಮಾಡುವುದೇ ಉಳಿದಿರುವ ದಾರಿ’ ಎಂಬ ಷರಾ ಬರೆದು, ಆಸ್ಪತ್ರೆಯ ಮಂಡಳಿ ಕೈತೊಳೆದುಕೊಂಡಿತು.

ಈಗ, ಇಡೀ ಅಮೆರಿಕ, ಕೋವಿಡ್-19ದ ಹೊಡೆತಕ್ಕೆ ಕಂಗಾಲಾಗಿದೆ. ಕೋವಿಡ್-19 ಎಂಬುದು ಕ್ರಿಮಿಯಲ್ಲ, ಕ್ರೂರಿ ಎಂದು ಜಗತ್ತಿಗೇ ಗೊತ್ತಾಗಿದೆ. ಅದರಿಂದ ಪಾರಾಗುವುದು ಹೇಗೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಲೀಸಾ ಎಂಬ ಅಕ್ಕ, ಮೊದಲಿನಂತೆಯೇ ಆಗಿಬಿಡಬಾರದೆ? ಎಂಬ ಕನವರಿಕೆಯಲ್ಲಿ ನಾನಿದ್ದೇನೆ. ಒಂದು ಬೆಚ್ಚನೆಯ ಅಪ್ಪುಗೆ, ಒಂದು ಸಿಹಿಮುತ್ತು, good time always ಎಂಬ ಶುಭಹಾರೈಕೆಯೊಂದಿಗೆ ದಿನವೂ ಜೊತೆಯಾಗುತ್ತಿದ್ದವಳು ಲೀಸಾ. ಅಂಥವಳು ಇವತ್ತು, ಶೂನ್ಯವನ್ನು ನೋಡುತ್ತ ಸುಮ್ಮನೆ ಕೂತುಬಿಟ್ಟಿದ್ದಾಳೆ. ಕೆಲವೊಮ್ಮೆ ನಗುತ್ತಾಳೆ. ಕೆಲವೊಮ್ಮೆ ಅಳುತ್ತಾಳೆ. ಕೆಲವೊಮ್ಮೆ, ನಿರುದ್ವಿಗ್ನಳಾಗಿ ಅದೇನೋ ಮಾತಾಡುತ್ತಿರುತ್ತಾಳೆ! ಅವಳು ತನಗೆ ತಾನೇ ಸಮಾಧಾನ ಹೇಳಿಕೊಳ್ಳುತ್ತಾಳಾ? ತನ್ನ ದುರಾದೃಷ್ಟಕ್ಕೆ, ಕ್ರೂರಿ ಕೋವಿಡ್-19ಕ್ಕೆ ಶಾಪ ಹಾಕುತ್ತಾಳಾ? ಗೊತ್ತಾಗುವುದಿಲ್ಲ…

ಈಗ, ಸಮಯ ಸಿಕ್ಕಾಗಲೆಲ್ಲ, ಲೀಸಾ ಇರುವ ವಾರ್ಡ್‌ಗೆ ಹೋಗುತ್ತೇನೆ. ಆಕೆಯಿಂದ ಮಾರು ದೂರದಲ್ಲಿ ನಿಂತು-“ಬೇಗ ಹುಷಾರಾಗು. ನಿನ್ನ ಜೊತೆಗೆ ನಾನಿತೇìನೆ. ನಿನ್ನೊಳಗೆ- ಒಂದು ಮಗು, ಒಬ್ಬಳು ತಾಯಿ, ಒಬ್ಬಳು ಗೆಳತಿ, ಒಬ್ಬಳು ಸೋದರಿ, ಒಬ್ಬಳು ಅಜ್ಜಿ -ಇವರೆಲ್ಲರ ಬಿಂಬಗಳೂ ನನಗೆ ಕಾಣುತ್ತಿವೆ. ಬೇಗ ಮೊದ ಲಿನಂತಾಗು ಲೀಸಾ…’ ಅಂತೇನೆ ನಾನು. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಕರುಣೆಯನ್ನೇ ಉಸಿರಾಡಿ ದವಳಿಗೆ ಯಾಕಿಂಥ ಕಷ್ಟದ ಬದುಕು, ಎಂದು ಯೋಚಿಸುತ್ತಲೇ ಹೆಜ್ಜೆ ಮುಂದಿಡುತ್ತೇನೆ.
ದಿನಗಳು ಹೀಗೇ ಸಾಗುತ್ತಿವೆ…

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

Sandalwood; ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

MASOCON

MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.