ಬಿಎಂಎಸ್ ಕಾರ್ಯಕರ್ತ ವಿನು ಕೊಲೆ : ಮೂವರಿಗೆ ಜಾಮೀನು ರಹಿತ ಬಂಧನ ವಾರಂಟ್
Team Udayavani, Apr 8, 2022, 5:45 AM IST
ಕಾಸರಗೋಡು: ಕುಂಬಳೆಯ ಬಿಎಂಎಸ್ ಕಾರ್ಯಕರ್ತ ಸಂತೋಷ್ ಯಾನೆ ವಿನು ಅವರನ್ನು ಕೊಲೆಗೈದ ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತ, ಕುಂಬಳೆ ಗ್ರಾ.ಪಂ. ಸದಸ್ಯನಾಗಿದ್ದ ಎಸ್. ಕೊಗ್ಗು ಸಹಿತ ಮೂವರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ನಾಲ್ಕು ವಾರದೊಳಗೆ ನ್ಯಾಯಾಲ ಯಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಈ ಕೇಸನ್ನು ಜೂ. 14ರಂದು ಪರಿಗಣಿಸಲಾಗುವುದು. ಆರೋಪಿಗಳಿಗೆ ಕೆಳಗಿನ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಈ ಹಿಂದೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ತೀರ್ಪಿನ ವಿರುದ್ಧ ಕೊಗ್ಗು ಸಹಿತ ಆರೋಪಿಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಗಣಿಸ ಬೇಕಿದ್ದರೆ ಆರೋಪಿಗಳು ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಹಾಜ ರಾಗಬೇಕೆಂದು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇವರಿಗೆ ಮತ್ತೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಬಾಲನ್ ಯಾನೆ ಸೋಡಾ ಬಾಲನ್ (62), ಎಸ್. ಕೊಗ್ಗು (56) ಮತ್ತು ಕುಂಟಂಗೇರಡ್ಕದ ಮುಹಮ್ಮದ್ ಕುಂಞಿ (55) ವಿನು ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿ ವಿ. ಬಾಲಕೃಷ್ಣನ್ ಈ ಹಿಂದೆಯೇ ಸಾವಿಗೀಡಾಗಿದ್ದಾರೆ.
ಸುಪ್ರೀಂಗೆ ಮೇಲ್ಮನವಿ
ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇವರಿಗೆ ವಿಧಿಸಿದ್ದ 7 ವರ್ಷಗಳ ಕಠಿನ ಸಜೆಯನ್ನು ಮೇಲ್ಮನವಿಯಲ್ಲಿ ಹೈಕೋರ್ಟ್ 4 ವರ್ಷವಾಗಿ ಕಡಿಮೆಗೊಳಿಸಿತ್ತು. ಇದರ ವಿರುದ್ಧ ತಮ್ಮನ್ನು ಪೂರ್ಣವಾಗಿ ಆರೋಪ ಮುಕ್ತಗೊಳಿಸಬೇಕೆಂದು ಆರೋಪಿಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಶಿಕ್ಷೆ ವಿಧಿಸಿದ ಕಾರಣ ಕೊಗ್ಗು ಪಂಚಾಯತ್ ಸದಸ್ಯನಾಗಿ ಮುಂದುವರಿಯುವುದನ್ನು ತಾತ್ಕಾಲಿಕವಾಗಿ ಚುನಾವಣಾ ಆಯೋಗ ಮಾ. 30ರಿಂದ ತಡೆಹಿಡಿದಿತ್ತು. 1998ರ ಅ. 9ರಂದು ವಿನು (19) ಅವರನ್ನು ಕೊಲೆಗೈಯ್ಯಲಾಗಿತ್ತು.