ಮಣಿಪಾಲಕ್ಕೆ ಕೋವಿಡ್-19 ಪರೀಕ್ಷಾ ಕೇಂದ್ರ
Team Udayavani, May 17, 2020, 6:05 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಮಣಿಪಾಲ ಕೆಎಂಸಿಗೆ ಕೋವಿಡ್-19 ಪರೀಕ್ಷಾ ಕೇಂದ್ರ ಮಂಜೂರಾಗಿದೆ.ಮಣಿಪಾಲದಲ್ಲಿ ಈಗಾಗಲೇ ಸುಸಜ್ಜಿತ ಕೇಂದ್ರವಿದ್ದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಸೋಮವಾರ ಯಾ ಮಂಗಳವಾರದಿಂದ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಆರಂಭದಲ್ಲಿ ಶಂಕಿತರ ಮಾದರಿಗಳನ್ನು ಶಿವಮೊಗ್ಗ, ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. ಅನಂತರ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. ಇದರಿಂದ ವರದಿ ಕೈಸೇರುವಲ್ಲಿ ವಿಳಂಬವಾಗುತ್ತಿತ್ತು. ಹಿಂದೆ ಒಂದು ಬಾರಿ ಮಣಿಪಾಲಕ್ಕೆ ಕೇಂದ್ರ ಮಂಜೂರಾಗಿದ್ದರೂ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಕೇಂದ್ರ ಮಂಜೂರಾಗಿದೆ.
ಉಡುಪಿ ಜಿಲ್ಲೆಯ ಕೋವಿಡ್-19 ಶಂಕಿತರ ಗಂಟಲ ದ್ರವ ಮಾದರಿಗಳನ್ನು ಮಣಿಪಾಲ ಕೇಂದ್ರಕ್ಕೆ ಕಳುಹಿಸಲಾಗುವುದು. ಇಲ್ಲಿ ಕೇವಲ ಅರ್ಧ ದಿನದೊಳಗೆ ವರದಿ ಸಿಗಲಿದೆ. ಈ ಹಿಂದೆ ವೈರಾಣು ಸೋಂಕು ಬಂದಾಗ ಮಣಿಪಾಲ ಕೇಂದ್ರ ಮಹತ್ವದ ಪಾತ್ರ ವಹಿಸಿದ್ದನ್ನು ಸ್ಮರಿಸಬಹುದಾಗಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸರಕಾರಿ ಪ್ರಯೋಗಾಲಯವನ್ನು ಆರಂಭಿಸಲು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸಮ್ಮತಿಸಿದ್ದರು.ಇದೀಗ ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೆಲಸಗಳು ನಡೆಯುತ್ತಿದೆ. ಉಪಕರಣಗಳನ್ನು ತರಿಸಿಕೊಳ್ಳಲೂ ವ್ಯವಸ್ಥೆ ನಡೆಯುತ್ತಿದೆ. ಸದ್ಯವೇ ಇಲ್ಲಿಯೂ ಪ್ರಯೋಗಾಲಯ ಆರಂಭವಾಗಲಿದೆ.