ಸಾಲಮನ್ನಾ ಬೇಡ, ಬೆಳೆಗೆ ಸೂಕ್ತ ಬೆಲೆ ಕೊಡಿಸಿ: ದರ್ಶನ್
Team Udayavani, Apr 28, 2019, 3:04 AM IST
ಬೆಂಗಳೂರು: ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಕೆಲವರು ಪದೇಪದೆ ಹೇಳುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವುದು ಬೇಡ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಲಿ ಎಂದು ನಟ ದರ್ಶನ್ ಪರೋಕ್ಷವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ನಗರದ ಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಸಾಲಮನ್ನಾ ವಿಚಾರ ಪ್ರಸ್ತಾಪಿಸಿ, “ನಾನು ಹಲವು ಬಾರಿ ಈ ಕುರಿತು ಮಾತನಾಡಬೇಕು ಎಂದುಕೊಂಡಿದ್ದೆ. ರೈತರ ಸಾಲಮನ್ನಾ ಮಾಡಿದರೆ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಟ್ಟಾಗ ಮಾತ್ರ ರೈತರ ಬದುಕು ಹಸನಾಗುತ್ತದೆ’ ಎಂದು ಹೇಳಿದರು.
ರೈತರ ಬೆಳೆಗೆ ಸೂಕ್ತ ಬೆಲೆ ಸಿಕ್ಕರೆ ಅವರೇ ಮಾಡಿದ ಸಾಲ ತೀರಿಸುತ್ತಾರೆ. ರೈತರ ಸಾಲಮನ್ನಾ ವಿಚಾರವೇ ಕೆಲವರಿಗೆ ದೊಡ್ಡದು. ಹೀಗಾಗಿ, ಇದರ ಬಗ್ಗೆ ತುಂಬಾ ಬಾರಿ ಹೇಳ್ಳೋಣ ಎಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ ಎಂದರು.
ದೇಶದ ಗಡಿ ಕಾಯುವ ಸೈನಿಕರು ಮುಖ್ಯ. ಅವರು ದೇಶ ಕಾಯುವುದರಿಂದ ನಾವು ಇಲ್ಲಿ ಸುರಕ್ಷಿತವಾಗಿರುತ್ತೇವೆ. ಹೀಗಾಗಿ, ಸೈನಿಕರಿಗೆ ನಾವು ಸದಾ ಗೌರವ ನೀಡಬೇಕು ಎಂದು ಹೇಳಿದರು. ಇಲ್ಲಿ ಓದಿ ವಿದೇಶದಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಡಿ. ದ್ವಿಚಕ್ರ ವಾಹನ ಅಥವಾ ಕಾರನ್ನು ವೇಗವಾಗಿ ಚಾಲನೆ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ದರ್ಶನ್ ಕಿವಿಮಾತು ಹೇಳಿದರು. ಬಳಿಕ, ಸಿನಿಮಾ ಡೈಲಾಗ್ ಹೇಳಿ ನೆರೆದಿದ್ದವರನ್ನು ರಂಜಿಸಿದರು.