44 ತರಕಾರಿ ಕಟ್ಟೆಗಳ ಸುಂಕ ವಸೂಲಾತಿ ಬಹಿರಂಗ ಹರಾಜು
Team Udayavani, Feb 19, 2022, 4:49 PM IST
ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ಬರುವ ತಳ್ಳುವ ಗಾಡಿ ಹಾಗೂ ಸಂತೆ ಮೈದಾನದ ಒಳಗೆ ನಿರ್ಮಾಣಗೊಂಡಿರುವ 44 ತರಕಾರಿ ಕಟ್ಟೆಗಳ ಸುಂಕ ವಸೂಲಾತಿ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಳ್ಳುವ ಗಾಡಿಗಳ ಸುಂಕ ವಸೂಲಾತಿಯಲ್ಲಿ ರವಿ ಎಂಬುವವರು 10 ಲಕ್ಷ ರೂ. ಹರಾಜು ಕೂಗುವ ಮೂಲಕ ಟೆಂಡರ್ ಅನ್ನು ತಮ್ಮದಾಗಿಸಿಕೊಂಡರು. ಇನ್ನು ಸಂತೆಕಟ್ಟೆಗಳ ಸುಂಕ
ವಸೂಲಾತಿಯನ್ನು ಇಬ್ರಾನ್ 11.30 ಲಕ್ಷಕ್ಕೆ ಟೆಂಡರ್ ತಮ್ಮದಾಗಿಸಿಕೊಂಡರು. ಟೆಂಡರ್ ಹರಾಜು ಪ್ರಕ್ರಿಯೆ ಬಳಿಕ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕಳೆದ
2 ವರ್ಷಗಳಿಂದ ಸಂತೆ ಮತ್ತು ತಳ್ಳುವ ಗಾಡಿಗಳ ಸುಂಕ ವಸೂಲಾತಿ ಹರಾಜು ಕಡಿಮೆ ಪ್ರಮಾಣದಲ್ಲಾಗಿತ್ತು. ಆದರೆ ಈ ಬಾರಿ ಹೆಚ್ಚು ಹಣಕ್ಕೆ ಟೆಂಡರ್ ಆಗಿದ್ದು ನಗರಸಭೆಗೆ ಹೆಚ್ಚು ಆದಾಯ ತರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ನಗರಸಭೆ ನಿಗ ದಿಪಡಿಸಿರುವ ಹಣಕ್ಕಿಂತ ಹೆಚ್ಚು ಸುಂಕ ವಸೂಲಿ ಮಾಡಿದ ಬಗ್ಗೆ ದೂರುಗಳು ಕೇಳಿಬಂದಲ್ಲಿ ಟೆಂಡರ್ ರದ್ದುಗೊಳಿಸಿ ಮರುಟೆಂಡರ್ ಕರೆಯಲಾಗುವುದು. ಆ ನಿಟ್ಟಿನಲ್ಲಿ
ತಳ್ಳುವ ಗಾಡಿ, ಸಂತೆ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಸುಂಕ ವಸೂಲಿ ಮಾಡುವಂತೆ ಟೆಂಡರ್ದಾರರಿಗೆ ಸೂಚಿಸಿದರು. ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ,
ಈ ಬಾರಿಯ ಸಂತೆ ಮತ್ತು ತಳ್ಳುವ ಗಾಡಿಗಳ ಸುಂಕ ವಸೂಲಾತಿ ಹರಾಜು ಟೆಂಡರ್ನಲ್ಲಿ ನಗರಸಭೆಗೆ ಹೆಚ್ಚು ಆರ್ಥಿಕ ಲಾಭ ಗಳಿಸಿದೆ. ಕಳೆದ ಬಾರಿಯಲ್ಲಿ ಕೋವಿಡ್ ಮತ್ತಿತರ ಕಾರಣಕ್ಕಾಗಿ ತಳ್ಳುವ ಗಾಡಿ ಸುಂಕ ವಸೂಲಿ ಟೆಂಡರ್ 4 ಲಕ್ಷಕ್ಕೆ ಹರಾಜಾಗಿತ್ತು, ಆದರೆ ಈ ಬಾರಿ 10.10 ಲಕ್ಷಕ್ಕೆ ರವಿ ಎಂಬುವವರು ತಮ್ಮದಾಗಿಸಿಕೊಂಡಿದ್ದಾರೆ ಎಂದರು.
ಸಂತೆ ಕಟ್ಟೆಗಳ ಸುಂಕ ವಸೂಲಿ ಹರಾಜು ಕಳೆದ ಬಾರಿ 7 ಲಕ್ಷಕ್ಕೆ ಹರಾಜಾಗಿತ್ತು. ಇದೀಗ 11.30 ಲಕ್ಷಕ್ಕೆ ಇಬ್ರಾನ್ ಎಂಬುವವರು ಟೆಂಡರ್ ವಹಿಸಿಕೊಂಡಿದ್ದಾರೆ. ಇದರಿಂದಾಗಿ ನಗರಸಭೆಗೆ 21.40 ಲಕ್ಷ ಆರ್ಥಿಕವಾಗಿ ಲಾಭವಾಗಲಿದೆ ಎಂದು ತಿಳಿಸಿದರು.
ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಪರಮೇಶ್ರಾಜ್ ಅರಸ್, ಸಿ.ಎಂ. ಕುಮಾರ್, ಜೆ. ರಾಜು, ವಿಫುಲ್ ಕುಮಾರ್ ಜೈನ್, ಕಂದಾಯಾಧಿಕಾರಿ ಬಸವರಾಜ್, ಆರ್ಐ ಶಿವಾನಂದ್,
ವ್ಯವಸ್ಥಾಪಕ ಮಂಜುನಾಥ್, ಕಂದಾಯ ನಿರೀಕ್ಷಕ ಜಗದೀಶ್ ಇದ್ದರು.