ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ
Team Udayavani, Oct 13, 2017, 11:57 AM IST
ವಿಜಯಪುರ: ಯಾವುದೇ ಶಿಕ್ಷಣ ಸಂಸ್ಥೆ ಇರುವ ಪ್ರದೇಶದಿಂದ ನೂರು ಮೀಟರ್ ಅಂತರದಲ್ಲಿ ತಂಬಾಕುಯುಕ್ತ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಂಬಾಕು ನಿಯಂತ್ರಣ ಜಿಲ್ಲಾ ಸಲಹಗಾರರು ಡಾ.ವಿಜಯರಾಣಿ ತಿಳಿಸಿದರು.
ಪಟ್ಟಣದಲ್ಲಿ ಬಸ್ ನಿಲ್ದಾಣ ಪುರಸಭೆ ಸರ್ಕಲ್ ಮುಖ್ಯ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕುಯುಕ್ತ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 18 ವರ್ಷದ ಒಳಗಿನ ಮಕ್ಕಳ ಮೂಲಕ ತಂಬಾಕುಯುಕ್ತ ಪದಾರ್ಥಗಳನ್ನು ತರಿಸಿಕೊಳ್ಳುವುದು ಕಾನೂನಿನಲ್ಲಿ ಅಪರಾಧವಾಗುತ್ತಿದೆ. ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಪದಾರ್ಥಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಿ ಆಕರ್ಷಿತವಾಗಿ ವ್ಯಾಪಾರ ಮಾಡುವುದು, ಬೀಡಿ, ಸೀಗರೇಟಿನಂತಹ ಪದಾರ್ಥಗಳನ್ನು ಜನಸಮೂಹವಿದ್ದ ಕಡೆ ಸೇದುವಂತಹ ಪ್ರವೃತ್ತಿ ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು.
ತಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದ ದೂರವಿರಬೇಕು. ಸೇವನೆಯಿಂದ ಆಗುವಂತಹ ದುಷ್ಪಾರಿಣಾಮಗಳ ಬಗ್ಗೆ ಜನ ಸಾಮಾನ್ಯರಿಗೆ ಹಾಗೂ ಮಾರಾಟಗಾರರಿಗೆ ವಿವರಿಸಿದರು. ಈ ಸಂದರ್ಭದಲ್ಲಿ 20 ರಿಂದ 30 ಅಂಗಡಿಗಳ ಮೇಲೆ ದಾಳಿ ನಡೆಸಿ 1,020 ರೂ. ಗಳಷ್ಟು ದಂಡ ವಿಧಿಸಲಾಯಿತು. ಇನ್ನು ಕೆಲವು ಅಂಗಡಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಡಿಎಚ್ಒ ರಮೇಶ್, ವೈದ್ಯೆ ಮಂಜುಳಾ, ಆರೋಗ್ಯ ನಿರೀಕ್ಷಕ ವೆಂಕಟೇಶ್, ಸಮಾಜ ಸೇವಕ ಸಂಪತ್ ಕುಮಾರ್ ಮತ್ತಿತರರಿದ್ದರು.