‘ಮನಃಪರಿವರ್ತನೆ ಮಹತ್ಸಾಧನೆ’
Team Udayavani, Oct 8, 2018, 12:45 PM IST
ಬಂಟ್ವಾಳ : ಲಕ್ಷಾಂತರ ಮಂದಿಯ ಅವರು ಹೇಳಿದರು. ಮನಃಪರಿವರ್ತನೆ ಮಾಡಿ ಪಾನಮುಕ್ತರನ್ನಾಗಿಸಿದ ಸಾಧನೆ ಶ್ರೀಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ಯೋಜನೆಯದ್ದಾಗಿದೆ. ಎಲ್ಲರೂ ವ್ಯಸನಮುಕ್ತರಾಗಬೇಕು ಎಂದು ಮಹಾತ್ಮಾ ಗಾಂಧಿ ಕಂಡಿರುವ ರಾಮ ರಾಜ್ಯದ ಕನಸು ಯೋಜನೆ ಮೂಲಕ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನನಸು ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಸಭಾಂಗಣದಲ್ಲಿ ಅ. 7ರಂದು ನಡೆದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ, ಪಾನ ಮುಕ್ತರ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾನಮುಕ್ತ ಸಮಾಜವಾಗಲಿ
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚಿಸಿ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಜನ ಜಾಗೃತಿ ವೇದಿಕೆ ಕಾರ್ಯ ಶ್ಲಾಘನೀಯ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಎಲ್ಲರೂ ಸಮಾಜ ಪರಿವರ್ತನೆಯಲ್ಲಿ ತೊಡಗಿಕೊಳ್ಳಬೇಕು. ಪಾನಮುಕ್ತ ಸಮಾಜ ನಮ್ಮದಾಗಬೇಕು. ಮದ್ಯಪಾನದಿಂದ ದೇಶಕ್ಕೆ ಪ್ರತಿಭಾವಂತರ ನಷ್ಟ ಆಗುವುದು ಎಂದು ತಿಳಿಸಿದರು.
ಸುಂದರ ಸಮಾಜ
ಸಚಿವ ಯು.ಟಿ. ಖಾದರ್ ಮಾತನಾಡಿ, ಪಾನಮುಕ್ತ ಸಮಾಜ ನಿರ್ಮಾಣದ ದೊಡ್ಡ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆ ಮಾಡುತ್ತಿದೆ. ದೇಶದ ಅಭಿವೃದ್ಧಿ ಆರೋಗ್ಯವಂತ ಸಮಾಜವನ್ನು ಅವಲಂಬಿಸಿದೆ. ಮಾನವ ಚಟಮುಕ್ತ, ಪಾನಮುಕ್ತ, ದ್ವೇಷ-ಅಸೂಯೆ ಮುಕ್ತ ಆಗುವ ಮೂಲಕ ಸುಂದರ ಸಮಾಜ ನಿರ್ಮಾಣ ಆಗಲಿ ಎಂದರು.
ಖಾವಂದರ ದೂರದರ್ಶಿತ್ವ
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಖಾವಂದರ ದೂರದರ್ಶಿತ್ವದಿಂದ ಸಹಸ್ರಾರು ಕುಟುಂಬಗಳು ದುಶ್ಚಟ ಮುಕ್ತವಾಗಿವೆ. ಬಡತನದಿಂದ ಅಭಿವೃದ್ದಿ ಕಡೆಗೆ ಸಾಗಿವೆ ಎಂದು ತಿಳಿಸಿದರು.
ಭಾರತಕ್ಕೆ ಗೌರವ
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ವಿಶ್ವಸಂಸ್ಥೆ ಮಹತ್ಮಾ ಗಾಂಧಿ ಜನ್ಮ ದಿನವನ್ನು ವಿಶ್ವದ ಅಹಿಂಸಾ ದಿನವಾಗಿ ಘೋಷಿಸಿದ್ದು, ಭಾರತಕ್ಕೆ ಸಿಕ್ಕಿರುವ ದೊಡ್ಡ ಗೌರವ ಎಂದರು. ಸೇವಾಂಜಲಿ ಪ್ರತಿಷ್ಠಾನ ಸಂಚಾಲಕ ಕೃಷ್ಣ ಕುಮಾರ್ ಪೂಂಜ ಮಾತನಾಡಿದರು.
ನಿರಂತರ ಶ್ರಮವಹಿಸಿ
ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎನ್. ಪ್ರಕಾಶ ಕಾರಂತ ಮಾತನಾಡಿ, ಜನಜಾಗೃತಿ ವೇದಿಕೆ ಹಾಕಿಕೊಂಡಿರುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ನಿರಂತರ ಶ್ರಮವಹಿಸಿ. ಪರಿವರ್ತನೆ ಜಗದ ನಿಯಮವಾಗಿದ್ದು, ಅದನ್ನು ನಾವೆಲ್ಲರೂ ಮಾಡೋಣ ಎಂದರು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ಎ.ಸಿ. ಭಂಡಾರಿ, ಕೈಯ್ಯೂರು ನಾರಾಯಣ ಭಟ್, ಎ. ರುಕ್ಮಯ ಪೂಜಾರಿ, ರೊನಾಲ್ಡ್ ಡಿ’ಸೋಜಾ, ಪ್ರಮುಖರಾದ ಸದಾನಂದ ನಾವೂರು, ಉಮಾನಾಥ, ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ, ಶಾಹುಲ್ ಹಮೀದ್, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯರಾದ ಗಣೇಶ್ ಸುವರ್ಣ, ಪದ್ಮಶ್ರೀ ಡಿ. ಶೆಟ್ಟಿ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸೇವಾಂಜಲಿ ಪ್ರತಿಷ್ಠಾನ ಅಧ್ಯಕ್ಷ ಎ. ವಜ್ರನಾಭ ಶೆಟ್ಟಿ ಉಪಸ್ಥಿತರಿದ್ದರು. ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಪಿ. ಜಯಾನಂದ ಸ್ವಾಗತಿಸಿ, ಸದಾನಂದ ಆಳ್ವ ವಂದಿಸಿದರು. ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಪಾನಮುಕ್ತರಾದ ಶ್ರೀನಿವಾಸ ಪೂಜಾರಿ ಕೊçಲ ಮತ್ತು ರೋಹಿತಾಶ್ವ ಅನಿಸಿಕೆ ವ್ಯಕ್ತ ಮಾಡಿದರು. ಶಿಬಿರ ಸಂಘಟಕರನ್ನು ಪೇಟ ತೊಡಿಸಿ, ಶಾಲು ಹೊದೆಸಿ ಸಮ್ಮಾನಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು 150ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಲ್ಲರೂ ತೊಡಗಿಸಿಕೊಳ್ಳಿ
ಧಾರ್ಮಿಕ ಮೌಲ್ಯಗಳಿಂದ ಸಮಾಜದ ಪರಿವರ್ತನೆ ಸಾಧ್ಯ. ಪೂಜ್ಯ ಹೆಗ್ಗಡೆಯವರು ಜನಜಾಗೃತಿ ಮೂಲಕ ಹಮ್ಮಿಕೊಂಡ ಪರಿವರ್ತನೆಯ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು.
– ಶ್ರೀ ಮೋಹನದಾಸ
ಪರಮಹಂಸ ಸ್ವಾಮೀಜಿ ಮಾಣಿಲ
ಪ್ರಥಮ ಪ್ರಾಶಸ್ತ್ಯ
ಪಾನಮುಕ್ತರಿಗೆ ವ್ಯಾಪಾರ ಉದ್ದೇಶದ ಸಾಲ ನೀಡುವಾಗ ಮೊದಲ ಆದ್ಯತೆ ನೀಡಲಾಗುವುದು. ನಿಗಮದ ವಿವಿಧ ಉದ್ದೇಶದ ಯೋಜನೆಗಳಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.
-ಯು.ಟಿ. ಖಾದರ್
ಸಚಿವರು
ರಾಷ್ಟ್ರವ್ಯಾಪಿ ನಡೆಯಲಿ
ಬಂಟ್ವಾಳ ತಾಲೂಕು ಪಾನಮುಕ್ತ ತಾಲೂಕು ಎಂಬ ಬಿರುದು ಪಡೆಯಲಿ. ಸಮಾಜದ ಪರಿವರ್ತನೆಗೆ ಹೆಗ್ಗಡೆಯವರು ಹಾಕಿಕೊಂಡ ಕಾರ್ಯಕ್ರಮ ಸಾಧಿತವಾಗಲಿ. ಶಿಬಿರವು ಒಂದು ತಪಸ್ಸಾಗಿ ಪಾನ ವಿರೋಧಿ ಚಳವಳಿ ರಾಷ್ಟ್ರವ್ಯಾಪಿ ನಡೆಯಲಿ. ಮಹಾತ್ಮಾ ಗಾಂಧಿ ವಿಚಾರಧಾರೆಗಳು ಎಲ್ಲರಿಗೂ ಸ್ಫೂರ್ತಿ ನೀಡಲಿ.
– ನಳಿನ್ ಕುಮಾರ್
ಕಟೀಲು, ಸಂಸದರು