ಮೋದಿ ಸರಕಾರದ ಸಾಧನೆ ಹೇಳುವುದು ನೀತಿ ಸಂಹಿತೆ ಉಲ್ಲಂಘನೆಯಲ್ಲ
Team Udayavani, Mar 19, 2019, 1:00 AM IST
ಮಂಗಳೂರು: ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಯ ಆಧಾರದಲ್ಲಿ ಬಿಜೆಪಿ ಪಕ್ಷವಾಗಲಿ ಅಥವಾ ಸಂಸದ ನಳಿನ್ ಕುಮಾರ್ ಆಗಲಿ ಮತಯಾಚನೆ ಮಾಡಿದರೆ ತಪ್ಪಾಗಲಾರದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಬ್ರಹ್ಮಾಂಡ ರಫೇಲ್ ಭ್ರಷ್ಟಾಚಾರ’: ಬಿಜೆಪಿ ಹೇಳಿ ದ್ದೇನು? ಮಾಡಿದ್ದೇನು?’, ಎಂಬ 16 ಪುಟಗಳ ಸಾರ್ವ ಜನಿಕ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ ಐವನ್ ಡಿ’ಸೋಜಾ ಅವರಿಗೆ ಪ್ರತ್ಯುತ್ತರ ನೀಡಿದ ಕೋಟ, ಮನಮೋಹನ್ ಸಿಂಗ್ ಆಡಳಿತ ಅವಧಿ ಯಲ್ಲಿ ಪಾಕಿಸ್ಥಾನದ ಪರವಾದ ಭಯೋತ್ಪಾದಕರಿಗೆ ಸರಕಾರದ ವತಿಯಿಂದ ಭದ್ರತೆ ಕೊಟ್ಟು ರಾಜೋಪಚಾರ ಮಾಡಿ, ಗಡಿ ಕಾಯುವ ಸೈನಿಕರಿಗೆ ಕಲ್ಲು ಹೊಡೆದು ಹಿಂಸೆ ನೀಡುತ್ತಿದ್ದ, ರಾಷ್ಟ್ರ ದ್ರೋಹಿಗಳನ್ನು ದಾರಿ ತಪ್ಪಿದವರೆಂದು ತಲೆ ನೇವರಿಸಿದ್ದರಿಂದ ಇಂದು ವಿಧ್ವಂಸಕ ಕೃತ್ಯ ಜೀವಂತವಾಗಿ ಉಳಿದಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಮುಗಿಸುವ ಬೆದರಿಕೆ ಹಾಕಿದ ಭಯೋತ್ಪಾದಕರನ್ನು ಜೀ ಎಂದು ಕರೆಯುವ ರಾಹುಲ್ ಗಾಂಧಿಯ ಹೇಳಿಕೆಗೆ ಐವನ್ ಮೌನವಾಗಿರುವುದು ಸಮ್ಮತಿಯ ಲಕ್ಷಣವೇ ಎಂದು ವ್ಯಂಗ್ಯವಾಗಿ ಕೇಳಿದ ಕೋಟ, ಪಾಕ್ ನೆಲದಲ್ಲಿ ಭಯೋತ್ಪಾದಕರನ್ನು ಹುಟ್ಟಡಗಿಸಿ ಬಂದ ಸೇನೆಯನ್ನೇ ಶಂಕಿಸಿ ಸಾಕ್ಷಿ ಕೇಳಿದ ಕಾಂಗ್ರೆಸ್ ಮುಖಂಡರಿಗೆ, ನಡುರಾತ್ರಿ ಶತ್ರು ದೇಶಕ್ಕೆ ನುಗ್ಗಿ ಹೊಡೆದ ಸೈನಿಕರನ್ನು ಬೆಂಬಲಿಸಿದ ನರೇಂದ್ರ ಮೋದಿಯನ್ನು ದೇಶವಾಸಿಗಳು ಬೆಂಬಲಿಸಿ ಎಂದು ನಳಿನ್ ಕುಮಾರ್ ಹೇಳಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಕೇವಲ ನಳಿನ್ ಮಾತ್ರವಲ್ಲ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ಮೋದಿ ಸರಕಾರದ ರಾಷ್ಟ್ರ ಭದ್ರತೆಯ ಬಗ್ಗೆ ನೆನಪು ಮಾಡುತ್ತಾ ಮತ ಕೋರಲಿದ್ದೇವೆ. ಈ ಬಾರಿ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಮೋದಿಗೋಸ್ಕರ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದಾರೆ.