ಕುಳಾಯಿ: ಮತಜಾಗೃತಿ ಮೂಡಿಸಿದ ಮಕ್ಕಳ ಚುನಾವಣೆ
Team Udayavani, Jun 24, 2018, 12:43 PM IST
ಕುಳಾಯಿ : ಕುಳಾಯಿ ವೆಂಕಟರಮಣ ಅನುದಾನಿತ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಮತದಾನದ ಕೇಂದ್ರ, ಮತಗಟ್ಟೆ ಅಧಿಕಾರಿ, ರಿಟರ್ನಿಂಗ್ ಆಫೀಸರ್, ಭದ್ರತಾ ಅಧಿಕಾರಿ ಎಲ್ಲವೂ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಸರತಿ ಸಾಲಿನಲ್ಲಿ ಬಂದು ಕೈಗೆ ಶಾಯಿ ಹಾಕಿಸಿ ಕೊಂಡು ಮತದಾನ ಮಾಡಿದರು. ಇದು ಇಲ್ಲಿನ ಶಾಲೆಯ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡಲು ಶಾಲೆಯ ಶಿಕ್ಷಕರು ಮಾಡಿದ ವಿಶೇಷ ವ್ಯವಸ್ಥೆ.
ಗುಪ್ತ ಮತದಾನದ ಮಹತ್ವ, ಮತದಾನದಿಂದ ಆಗುವ ಬದಲಾವಣೆ, ಮತದಾನ ಮಾಡುವ ಜವಾಬ್ದಾರಿ ಎಲ್ಲವೂ
ಕಿರಿಯ ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವುದಕ್ಕಾಗಿ ನಾಯಕ, ಉಪನಾಯಕನ ಆಯ್ಕೆಯನ್ನು ಮತದಾನದ ಮೂಲಕ ಕ್ರಮ ಬದ್ಧವಾಗಿ ಮಾಡಲಾಯಿತು. 2018-19ರ ಸಾಲಿನ ವಿದ್ಯಾರ್ಥಿ ನಾಯಕನಾಗಿ ಏಳನೇ ತರಗತಿಯ ಸಾಗರ್, ಉಪನಾಯಕನಾಗಿ ದರ್ಶನ್ ಆಯ್ಕೆಯಾದರು. ಸುಮಾರು ಇನ್ನೂರ ಎಂಬತ್ತು ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಮತದಾನ ಜಾಗೃತಿ
ಚುನಾವಣೆಯ ಅರಿವು ಮಕ್ಕಳಿಗೆ ಆಗಬೇಕು. ಗುಪ್ತ ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಕರ್ತವ್ಯ ಅಂದುಕೊಂಡರೆ ಉತ್ತಮ ಆಡಳಿತವನ್ನು ಪ್ರತಿಷ್ಠಾಪಿಸಬಹುದು. ಮಕ್ಕಳಲ್ಲಿ ಮತದಾನದ ಜಾಗೃತಿಗಾಗಿ ಶಾಲೆಯಲ್ಲಿ ಅಣಕು ಮತದಾನ ಪ್ರಕ್ರಿಯೆ ನಡೆಸಿದ್ದೇವೆ.
– ಜಯಶ್ರೀ,
ಮುಖ್ಯೋಪಾಧ್ಯಾಯಿನಿ