ನಿರ್ಲಕ್ಷ್ಯಕ್ಕೊಳಗಾದ ಕೋ. ರೂ. ವೆಚ್ಚದ ಪಾದಚಾರಿ ಮೇಲ್ಸೇತುವೆ
Team Udayavani, Nov 11, 2018, 9:54 AM IST
ಬಂಟ್ವಾಳ : ಕೋಟಿ ರೂ.ಗೂ ಅಧಿಕ ವೆಚ್ಚದಿಂದ ಮಂಗಳೂರು-ಬಂಟ್ವಾಳ ರಾ.ಹೆ.ಯಲ್ಲಿ ತುಂಬೆ ಬಿ.ಎ. ಕಾಲೇಜಿನ ಎದುರು, ಕಣ್ಣೂರಲ್ಲಿ ರಾ.ಹೆ. ಪ್ರಾಧಿಕಾರದಿಂದ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆ ((foot over Bridge) ಸಮರ್ಪಕ ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಟ್ಟಿದೆ. ಈ ಮೇಲ್ಸೇತುವೆಯನ್ನು ತಲಾ 54 ಲಕ್ಷ ರೂ. ವೆಚ್ಚದಲ್ಲಿ ಬಲವಾದ ಉಕ್ಕಿನಿಂದ ಎಕ್ಸ್ರೇ ವೆಲ್ಡ್ ಬಳಸಿ ನಿರ್ಮಿಸಿದ್ದು, ಸುದೀರ್ಘ ಅವಧಿಗೆ ತುಕ್ಕು ಹಿಡಿಯದಂತೆ ನಿರ್ಮಾಣ ಪೂರ್ವದಲ್ಲಿಯೇ ವಿನ್ಯಾಸ ಮಾಡಲಾಗಿದೆ.
ತುಂಬೆಯಲ್ಲಿ ಶಾಲಾ ಮಕ್ಕಳಿಗೆ, ಕಣ್ಣೂರಿನಲ್ಲಿ ರಸ್ತೆ ದಾಟುವ ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ನಿರ್ಮಾಣ ಆಗಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈ ಮೇಲ್ಸೇತುವೆ ಮೂಲಕ ಹಾದು ಹೋಗುವುದಕ್ಕೆ ಈ ಸೌಲಭ್ಯ ಕಲ್ಪಿಸಿದೆ. ಸುಮಾರು 12 ಮೀ. ಎತ್ತರ, 25 ಮೀ. ಉದ್ದ, 1.5 ಮೀ. ಅಗಲ ಇರುವಂತೆ ನಿರ್ಮಾಣ ಮಾಡಲಾಗಿದೆ. ಮಳೆ-ಬಿಸಿಲಿಗೆ ತೊಂದರೆ ಆಗದಂತೆ ಶೆಲ್ಟರ್, ಸೂಕ್ತ ರಕ್ಷಣ ಕವಚವನ್ನು ಒದಗಿಸಲಾಗಿದೆ.
ಕೋಟಿ ರೂ. ಖರ್ಚು ಮಾಡಿದ ಈ ಯೋಜನೆಯನ್ನು ನಿರ್ವಹಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ. ತುಂಬೆ ಮೇಲ್ಸೇತುವೆ ಬುಡದಲ್ಲಿ ಪೊದೆ ಬೆಳೆದಿದೆ. ಕಣ್ಣೂರಿ ನಲ್ಲಿಯೂ ವಿವಿಧ ಕಾರಣದಿಂದ ಬಳಸುತ್ತಿಲ್ಲ ಎಂದು ಇಲಾಖೆ ಮಾಹಿತಿ ಹೇಳುತ್ತದೆ.
ಬಳಸದಿರುವುದಕ್ಕೆ ಕಾರಣ
ಈ ಮೇಲ್ಸೇತುವೆ ಏರಿ ಮತ್ತೂಂದಷ್ಟು ಉದ್ದಕ್ಕೆ ಸಾಗಿ ಪುನಃ ಇಳಿಯುವುದು ಎಂದರೆ ತ್ರಾಸದಾಯಕ ಹಾಗೂ ಸಮಯ ವ್ಯರ್ಥ. ಇದರ ಬದಲು ರಸ್ತೆ ದಾಟುವುದು ಸುಲಭ. ಹಾಗಾಗಿ ಕಣ್ಣೂರಲ್ಲಿ ವ್ಯರ್ಥವಾಗಿದೆ. ತುಂಬೆಯಲ್ಲಿ ಮೇಲ್ಸೇತುವೆಯನ್ನು ವಿದ್ಯಾರ್ಥಿಗಳು ಬಳಸುತ್ತಾರೆ. ಮೇಲ್ಸೇತುವೆ ಏರಲು ಸಾಧ್ಯವಿಲ್ಲದ ಮಂದಿಗೆ ರಸ್ತೆಯಲ್ಲಿ ಹಾದು ಹೋಗುವುದಕ್ಕೂ ಅವಕಾಶವಿದೆ. ಈಗ ಬ್ಯಾರಿಕೇಡ್ ಅಳವಡಿಸಿ ವಿದ್ಯಾರ್ಥಿಗಳು ಬರುವ, ಸಂಜೆ ಹೋಗುವ ಸಂದರ್ಭ ಶಾಲೆಯ ಆಡಳಿತ ಇಲ್ಲೊಬ್ಬರು ಗಾರ್ಡ್ ಇಟ್ಟು ರಸ್ತೆ ದಾಟಿಸುವ ವ್ಯವಸ್ಥೆ ಇದೆ.
ಮೇಲ್ಸೇತುವೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಅಷ್ಟೊಂದು ಎತ್ತರಕ್ಕೆ ಹತ್ತಿ ಇಳಿಯುವುದು ಸಾಧ್ಯವಾಗುವ ವಿಚಾರವಲ್ಲ. ನಿಬಿಡ ವಾಹನ ಸಂಚಾರದ ಸಂದರ್ಭದಲ್ಲಿ ಪೂರಕ ಸುರಕ್ಷಿತ ವ್ಯವಸ್ಥೆ ಇಲ್ಲವೆಂದಾಗ ಹೋಗುವುದಕ್ಕೆ ಒಂದು ವ್ಯವಸ್ಥೆಯಾಗಿ ಬಳಕೆಯಾಗುತ್ತಿದೆ. ರಾ.ಹೆ.ಯಲ್ಲಿ ವಾಹನ ಸಂಚಾರದ ಒತ್ತಡ ಕಡಿಮೆ ಇದ್ದಾಗ ಜನರು ಒಂದಷ್ಟು ಕಾದು ನಿಂತು ರಸ್ತೆ ದಾಟಿ ಹೋಗಲು ಬಯಸುತ್ತಾರೆ.
ಅಂಡರ್ಪಾಸ್ ಉಪಯುಕ್ತ
ಪ್ರಸ್ತುತ ಇರುವ ಮೇಲ್ಸೇತುವೆ ಸಾರ್ವಜನಿಕ ಹಿತದೃಷ್ಟಿಯಿಂದ ಸೀಮಿತ ಉದ್ದೇಶಕ್ಕೆ ಎಂಬಂತಾಗಿದೆ. ಹಾಗಾಗಿ ಇಲ್ಲೊಂದು ಅಂಡರ್ ಪಾಸ್ ಮಾಡುತ್ತಿದ್ದರೆ ಅದರಲ್ಲಿ ಸಂಚಾರವು ಮೇಲ್ಸೇತುವೆಗಿಂತ ಸುಲಭವಾಗುತ್ತಿತ್ತು. ಮಂಗಳೂರು – ಬೆಂಗಳೂರು ರಸ್ತೆ ವಿಸ್ತರಣೆ ಸಂದರ್ಭ ಇಂತಹ ಸ್ಥಳಗಳಲ್ಲಿ ಅವಶ್ಯವಿದ್ದರೆ ಅಂಡರ್ ಪಾಸ್ ಒದಗಿಸುವುದು ಹೆಚ್ಚು ಸೂಕ್ತ.
ಸಂಚಾರ ಸುರಕ್ಷತೆ
ಮೇಲ್ಸೇತುವೆ ನಿರ್ಮಾಣ ಆದಾಗ ಸಂಚಾರ ಸುರಕ್ಷತೆ ಹೆಚ್ಚು ವುದು. ರಾ.ಹೆ. ವಿಸ್ತರಣೆ ಸಂದರ್ಭ ಜನನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ಮೇಲ್ಸೇತುವೆ ಮಾಡುವುದು ಒಳಿತು. ಅಂಡರ್ ಪಾಸ್ ಮೇಲ್ಸೇತುವೆಯಷ್ಟು ಸುರಕ್ಷಿತವಲ್ಲ.
– ಮಂಜುಳಾ ಕೆ.ಎಂ.
ಸಂಚಾರ ಪೊಲೀಸ್
ಉಪನಿರೀಕ್ಷಕರು, ಮೆಲ್ಕಾರ್ ಠಾಣೆ
ರಾಜಾ ಬಂಟ್ವಾಳ