ಚಿತ್ರರಂಗದತ್ತ ಡಾ| ಮೋಹನ್ ಆಳ್ವರ ಚಿತ್ತ: ಚಿತ್ರೋತ್ಸವದಲ್ಲಿ ಅಭಿವ್ಯಕ
Team Udayavani, Nov 17, 2018, 1:43 PM IST
ವಿದ್ಯಾಗಿರಿ (ಮೂಡಬಿದಿರೆ): ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಆಳ್ವಾಸ್ ನುಡಿಸಿರಿಯ ರೂವಾರಿ ಡಾ| ಎಂ. ಮೋಹನ್ ಆಳ್ವ ಇದೀಗ ಕೃಷಿ ಹಾಗೂ ಸರಕಾರಿ ಶಾಲೆಗಳ ಮೇಲೆ ಬೆಳಕು ಚೆಲ್ಲುವ ಎರಡು ಸಿನೆಮಾಗಳನ್ನು ನಿರ್ಮಿಸುವತ್ತ ಮನ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನುಡಿಸಿರಿಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರ ಸಿರಿಯ ಉದ್ಘಾಟನೆ ಸಂದರ್ಭ ಅವರು ತನ್ನ ಕನಸನ್ನು ಬಹಿರಂಗಪಡಿಸಿದರು. ಆರೂರು ಪಟ್ಟಾಭಿ 1978ರಲ್ಲಿ ನನ್ನನ್ನು ಹೀರೋ ಆಗಿ ಸಿನೆಮಾ ಮಾಡುವ ಉತ್ಸುಕತೆ ತೋರಿದ್ದರು. ‘ಸಿನೆಮಾ ರಂಗಕ್ಕೆ ಹೋಗುವುದಾದರೆ ಮನೆಗೆ ಬರಬೇಡ’ ಎಂಬ ತಾಯಿಯ ಬೆದರಿಕೆಗೆ ಮಣಿದು ಅತ್ತ ಮನಸ್ಸು ಮಾಡಿಲ್ಲ. ಆದರೆ ಈಗಿನ ಕೆಲವು ಸಿನೆಮಾಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿಗೆ ಆಗುತ್ತಿರುವ ಅವಮಾನ ಕಾಣುವಾಗ ಮನೆ ಮಂದಿ ನೋಡುವಂತಹ ಕಲಾತ್ಮಕ, ಸುಂದರ ಸಂದೇಶ ವುಳ್ಳ ಸಿನೆಮಾ ಮಾಡಬೇಕೆಂಬ ಆಸೆ ಮೂಡುತ್ತಿದೆ ಎಂದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಿ ಪ್ರದರ್ಶನದಿಂದ ಬರುವ ಹಣವನ್ನು ಸರಕಾರಿ ಶಾಲೆಯ ಅಭಿವೃದ್ಧಿಗೆ ಬಳಸುವುದು ನನ್ನ ಉದ್ದೇಶ ಎಂದರು.
ಬಹುಕಲೆಗಳ ಆಸ್ಥಾನ ಮಂಟಪ
ಚಲನಚಿತ್ರೋತ್ಸವ ಉದ್ಘಾಟಿಸಿ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಎಲ್ಲ ಬಗೆಯ ಕಲೆಗಳ ಮೂಲಕ ವರ್ತಮಾನವನ್ನು ಹಿಡಿದಿಟ್ಟುಕೊಳ್ಳುವ ನುಡಿಸಿರಿ ಬಹುಕಲೆಗಳ ಆಸ್ಥಾನ ಮಂಟಪ ಎಂದರು. ಅತ್ಯದ್ಭುತ ಸಿನೆಮಾಗಳು ಮಾರುಕಟ್ಟೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗುತ್ತವೆ. ಅದಕ್ಕಾಗಿ ಅಲ್ಲಲ್ಲಿ ಚಿತ್ರೋತ್ಸವ ಮಾಡಲಾಗುತ್ತಿದೆ ಎಂದರು.