ದೇಗುಲ ದರ್ಶನ: ಇಂದಿನಿಂದ 5 ದಿನ ಅಯ್ಯಪ್ಪ ದರ್ಶನ
Team Udayavani, Feb 12, 2019, 12:30 AM IST
ತಿರುವನಂತಪುರ: ತಿಂಗಳ ಪೂಜಾ ಕೈಂಕರ್ಯಗಳಿಗಾಗಿ ಶಬರಿಮಲೆ ಅಯ್ಯಪ್ಪ ದೇಗುಲ ಫೆ. 12ರಿಂದ 16ರ ವರೆಗೆ ಐದು ದಿನ ತೆರೆಯಲಿದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. 10ರಿಂದ 50 ವರ್ಷ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡ ಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೆ ಗದ್ದಲ- ಗಲಾಟೆಗಳು ಉಂಟಾಗಬಹುದು ಎಂಬ ಆತಂಕ ಇರುವುದರಿಂದ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮಲಯಾಳ ತಿಂಗಳು ಕುಂಭ ಪ್ರಯುಕ್ತ ದೇಗುಲ ತೆರಯಲಿದೆ. ಕಲಾಶಾಭಿಷೇಕ, ಸಹಸ್ರಕಲಶ, ಲಕ್ಷಾರ್ಚನೆಗಳು ಸಹಿತ ವಿವಿಧ ರೀತಿಯ ಧಾರ್ಮಿಕ ವಿಧಿ ವಿಧಾನಗಳು ಐದು ದಿನಗಳಲ್ಲಿ ನೆರವೇರಲಿವೆ. ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಮುಖ್ಯ ಅರ್ಚಕ ವಾಸುದೇವನ್ ನಂಬೂದರಿ ಅವರು ದೇಗುಲದ ಬಾಗಿಲು ತೆರೆಯಲಿರುವರು. ಯಾವುದೇ ಅನಪೇಕ್ಷಿತ ಘಟನೆಗಳು ನಡೆಯದಂತೆ ನೀಲಕ್ಕಲ್ನಿಂದಲೇ ಪೊಲೀಸರು ನಿಗಾ ಇರಿಸುವರು. ಫೆ. 12ರ ಬೆಳಗ್ಗೆ 10 ಗಂಟೆಯ ಬಳಿಕವಷ್ಟೇ ಭಕ್ತರನ್ನು ಇಲ್ಲಿಂದ ಮುಂದುವರಿಯಲು ಅವ ಕಾಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 10ರಿಂದ ಬದರೀನಾಥ ದರ್ಶನ
ಡೆಹ್ರಾಡೂನ್: ವಿಶ್ವ ಪ್ರಸಿದ್ಧ ಬದರೀನಾಥ ದೇಗುಲವು ಮೇ 10ರ ಮುಂಜಾನೆ 4.25ಕ್ಕೆ ತೆರೆಯುವುದೆಂದು ನಿರ್ಧರಿಸಲಾಗಿದೆ. ಸಂಪ್ರದಾಯದಂತೆ ವಸಂತ ಪಂಚಮಿಯಂದು ನರೇಂದ್ರ ನಗರ ದಲ್ಲಿರುವ ಹಿಂದಿನ ರಾಜರ ಅರಮನೆಯಲ್ಲಿ ಶಾಸ್ತ್ರಸಮ್ಮತವಾಗಿ ಘಳಿಗೆಯನ್ನು ನಿರ್ಧರಿಸಲಾಯಿತು ಎಂದು ದೇಗುಲದ ಪ್ರಕಟನೆ ತಿಳಿಸಿದೆ.