ಮಾಣಿ ಜಂಕ್ಷನ್ನಲ್ಲಿ ಪ್ರಕಟನೆಯ ಬ್ಯಾನರ್
Team Udayavani, Jul 20, 2018, 12:14 PM IST
ಮಾಣಿ : ಶಿರಾಡಿ ಘಾಟಿ ರಸ್ತೆ ದುರಸ್ತಿಯಲ್ಲಿರುವುದರಿಂದ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನಗಳು ಮೈಸೂರು ರಸ್ತೆಯಲ್ಲಿ ಸಂಚರಿಸತಕ್ಕದ್ದು ಎಂದು ಮಾಣಿ ಜಂಕ್ಷನ್ನಲ್ಲಿ ವಿಟ್ಲ ಪೊಲೀಸರ ಪ್ರಕಟನೆಯ ಬ್ಯಾನರ್ ಬಿದ್ದಿದೆ. ಮತ್ತು ಅಲ್ಲಿ ಪೊಲೀಸ್ ಸಿಬಂದಿಯೋರ್ವರು ನಿಂತು ಘನ ವಾಹನಗಳಿಗೆ ಮೈಸೂರು ರಸ್ತೆಯಲ್ಲಿ ತೆರಳಲು ಸೂಚನೆ ನೀಡುತ್ತಿರುವುದು ಕೂಡಾ ಕಂಡುಬಂದಿದೆ.
ಶಿರಾಡಿ ಘಾಟಿಯಲ್ಲಿ ಘನ ವಾಹನಗಳಾದ ಲಾರಿ, ಟ್ರಕ್, ಬಸ್ ಇತ್ಯಾದಿಗಳು ಸಂಚರಿಸಲು ಅನನುಕೂಲವಾಗಿರುವ ಹಿನ್ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದು ಸಂಪೂರ್ಣವಾಗುವವರೆಗೂ ಕೇವಲ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಅರಿವಿಲ್ಲದೆ ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಬಾರದು ಎಂಬ ನಿಟ್ಟಿನಲ್ಲಿ ಮಂಗಳೂರಿನಿಂದ ಸಾಗುವ ಘನ ವಾಹನಗಳಿಗೆ ಮಾಣಿಯಲ್ಲೇ ಸೂಚನಾ ಫಲಕ ಹಾಕಲಾಗಿದೆ.
ಮಾಣಿ – ಪುತ್ತೂರು ಮಾರ್ಗವಾಗಿ ಸಂಪಾಜೆ ಘಾಟಿಯ ಮೂಲಕ ಹಾಸನ, ಮೈಸೂರು, ಬೆಂಗಳೂರಿಗೆ ಸಂಚರಿಸಲು ಘನ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಜನವರಿಯಿಂದಲೇ ಈ ಸೂಚನೆ ಪಾಲನೆಯಲ್ಲಿದೆ. ಆದರೆ ಜು. 15ರಂದು ಶಿರಾಡಿ ಘಾಟಿ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಪ್ರಕಟನೆಯ ಪ್ರಕಾರ ಎಲ್ಲ ವಾಹನಗಳೂ ಘಾಟಿಯಲ್ಲಿ ಸಂಚರಿಸಲು ಹೊರಟಿವೆ. ಇದು ಹಲವು ಗೊಂದಲಗಳಿಗೆ ಕಾರಣವಾಗಿವೆ. ಮಾಣಿಯಲ್ಲೇ ಪ್ರಕಟನೆ ಬಿದ್ದಿರುವುದರಿಂದ ಎಲ್ಲ ಘನ ವಾಹನ ಚಾಲಕ, ಮಾಲಕರು ಎಚ್ಚತ್ತುಕೊಂಡಿರಬಹುದು ಎನ್ನಲಾಗಿದೆ.