‘ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ’
Team Udayavani, Sep 5, 2018, 3:12 PM IST
ಈಶ್ವರಮಂಗಲ: ಧರ್ಮದ ಅಧಃಪತನವಾದ ಸಂದರ್ಭ ಧರ್ಮ ಸಂಸ್ಥಾಪನೆಗೆ ಕೃಷ್ಣ ಹುಟ್ಟಿದ್ದಾನೆ. ಧರ್ಮದ ಉಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ನಿರಂತರವಾಗಿ ಧಾರ್ಮಿಕ ಆಚರಣೆಯ ಮೂಲಕ ಧರ್ಮವನ್ನು, ಸಮಾಜವನ್ನು ಉಳಿಸುವ ಕಾರ್ಯ ಯುವಜನತೆಯಿಂದ ಆಗಬೇಕಾಗಿದೆ ಎಂದು ಧಾರ್ಮಿಕ ಮುಖಂಡ ಅರುಣ ಕುಮಾರ ಪುತ್ತಿಲ ಹೇಳಿದರು. ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈಶ್ವರಮಂಗಲ ಪೇಟೆಯಲ್ಲಿ ನಡೆದ 4ನೇ ವರ್ಷದ ಮೊಸರು ಕುಡಿಕೆ ಉತ್ಸವ, ಅಟ್ಟಿ ಮಡಿಕೆ ಮತ್ತು ಕಬಾತ್ ಹೊಡೆಯುವ ಸ್ಪರ್ಧೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಶ್ವರಮಂಗಲ ಹಿಂ.ಜಾ.ವೇ. ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ ಮಾತನಾಡಿ, ಆಚರಣೆಯ ಹಿಂದೆ ಜೀವನಕ್ಕೆ ಬೇಕಾಗುವ ಮಾರ್ಗದರ್ಶನ ಇದೆ. ಇದನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಧಾರ್ಮಿಕ ಚಿಂತಕ ಪೂರ್ಣಾತ್ಮರಾಮ್ ಈಶ್ವರಮಂಗಲ ಮಾತನಾಡಿದರು.
ಬಹುಮಾನ ವಿತರಣೆ
ಅಟ್ಟಿ ಮಡಿಕೆ ಮತ್ತು ಕಬಾತ್ ಒಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಡಾ| ಶ್ರೀಕುಮಾರ್ ಶೋಭಾಯಾತ್ರೆ ಉದ್ಘಾಟಿಸಿದರು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಪುಟಾಣಿ ಕೃಷ್ಣ ವೇಷಧಾರಿಗಳಿಗೆ ಸ್ಮರಣಿಕೆ ವಿತರಿಸಲಾಯಿತು. ಹಿಂ.ಜಾ.ವೇ. ನಿಕಟಪೂರ್ವ ಅಧ್ಯಕ್ಷ ರಾಜೇಶ್ ನಾಯರ್ ಬಂಟುಕಲ್ಲು ಶಿವಾಜಿ ವೇಷಧಾರಿಯಾಗಿ ಗಮನ ಸೆಳೆದರು.
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಶಂಕರಿ ಭಂಡಾರಿ, ಶ್ರೀರಾಮ್ ಪಕ್ಕಳ, ಪ್ರಗತಿಪರ ಕೃಷಿಕ ಶಿವರಾಂ ಭಟ್ ಕಾವೇರಿಮೂಲೆ, ಹಿಂ.ಜಾ.ವೇ. ಈಶ್ವರ ಮಂಗಲ ಘಟಕದ ನಿಕಟಪೂರ್ವ ಸಂಚಾಲಕ ಅನಂತ್ ಈಶ್ವರಮಂಗಲ, ಪುತ್ತೂರು ನಗರ ಹಿಂ.ಜಾ.ವೇ. ಉಪಾಧ್ಯಕ್ಷ ದಿನೇಶ್ಪಿ., ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಚರಣ್ ಮಡ್ಯಲಮಜಲು, ಸಂಚಾಲಕ ಅವಿನಾಶ್ ಪಳನೀರು, ಪ್ರಗತಿಪರ ಕೃಷಿಕ ಸುರೇಶ್ ಆಳ್ವ ಸಾಂತ್ಯ ಉಪಸ್ಥಿತರಿದ್ದರು. ರಮಾನಂದ ಕೋರಿಗದ್ದೆ ಸ್ವಾಗತಿಸಿದರು. ದೀಕ್ಷಿತ್ ಮುಂಡ್ಯ ವಂದಿಸಿದರು. ಹರೀಶ್ ಬಾಬು, ಚಂದ್ರಹಾಸ್ ಮುಂಡ್ಯ, ಪ್ರವೀಶ್ ನಾಯರ್ ನಿರ್ವಹಿಸಿದರು. ಚಿನ್ಮಯ್ ರೈ, ಸುರೇಶ್ ರೈ ನಡುಬೈಲು ಸಹಕರಿಸಿದರು.