ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾ.ಪಂ.ಗೆ ದೂರು
Team Udayavani, Sep 22, 2018, 3:23 PM IST
ಉಪ್ಪಿನಂಗಡಿ: ನಾದುರಸ್ತಿ ಸ್ಥಿತಿಯಲ್ಲಿರುವ ಮಣ್ಣಿನ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸದಿರುವ ಕುರಿತು ನಿನ್ನಿಕಲ್ಲು ನಿವಾಸಿಗಳು ಪಂಚಾಯತ್ಗೆ ದೂರು ನೀಡಿದ್ದಾರೆ.
ಇಲ್ಲಿನ 2ನೇ ವಾರ್ಡ್ನ ಪಾದಾಳ ಕುಕ್ಕಮಜಲು ರಸ್ತೆ ಸಂಪೂರ್ಣ ಹದ ಗೆಟ್ಟಿರುವ ಕುರಿತು ಉದಯವಾಣಿ ‘ಸುದಿನ’ ಇತ್ತೀಚೆಗೆ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿ ಗ್ರಾ.ಪಂ. ಸದಸ್ಯ ರಾಜಗೋಪಾಲ ಹೆಗ್ಡೆ ಅವರು, ರಸ್ತೆಯಲ್ಲಿ ಹರಿಯುತ್ತಿದ್ದ ನೀರಿಗೆ ಜೆಸಿಬಿ ಮೂಲಕ ಚರಂಡಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಮಳೆಗಾಲ ಮುಗಿದ ಬಳಿಕ ರಸ್ತೆಯನ್ನು ಸರಿಪಡಿಸುವ ಭರವಸೆಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್ ವ್ಯಕ್ತಪಡಿಸಿದ್ದರು. ಸುಮಾರು ಒಂದು ತಿಂಗಳಿಂದ ಮಳೆ ಬಂದಿಲ್ಲ. ಆದರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಾದಾಳ ಕುಕ್ಕಮಜಲು ರಸ್ತೆಯಿಂದ ಗ್ರಾಮಸ್ಥರಿಗೆ ತೊಡಕು ಆಗಿರುವುದು ಗಮನಕ್ಕೆ ಬಂದಿದೆ. ತತ್ಕ್ಷಣ ಕಾಮಗಾರಿ ಆರಂಭಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಿ.ಪಂ. ಎಂಜಿನಿಯರ್ಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾ.ಪಂ. ಸದಸ್ಯ ರಾಜಗೋಪಾಲ ಹೆಗ್ಡೆ ಹೇಳಿದ್ದಾರೆ.
ಅತಿಕ್ರಮಣ: ದೂರು
ಈ ರಸ್ತೆಯನ್ನು ಕೆಲವರು ಅತಿಕ್ರಮಿಸಿದ್ದು, ದಿನದಿನಕ್ಕೆ ಕಿರಿದಾಗುತ್ತಿದೆ. ರಸ್ತೆ ಅಭಿವೃದ್ಧಿ ಮಾಡುವಂತೆ ಗ್ರಾ.ಪಂ.ಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಭರವಸೆ ದೊರೆತಿದೆ ವಿನಾ ಸ್ಪಂದಿಸಿಲ್ಲ. ಈ ನಿಟ್ಟಿನಲ್ಲಿ ಪುತ್ತೂರಿನ ಸಹಾಯಕ ಆಯುಕ್ತರು ಹಾಗೂ ಲೋಕಾಯುಕ್ತರಿಗೆ ದೂರು ನೀಡಿರುವೆ.
– ಬಾಲಸುಬ್ರಹ್ಮಣ್ಯ ಹೊಳ್ಳ ಸ್ಥಳೀಯ ನಿವಾಸಿ