ಸರಕಾರಿ ನೌಕರರ ಕೆಲಸದ ವೇಳೆಯಲ್ಲಿ ಬದಲಾವಣೆ ಸಾಧ್ಯವೇ?


Team Udayavani, Oct 16, 2018, 12:30 AM IST

z-28.jpg

ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳ / ಕಂಪೆನಿಗಳ ನೌಕರರಿಗೆ ಮಧ್ಯಂತರ ವಿರಾಮದ ವೇಳೆಯನ್ನು ಹೊರತುಪಡಿಸಿ ಪ್ರತಿ ದಿನ ಎಂಟು ಗಂಟೆಗಳ ಕೆಲಸ ನಿರ್ವಹಣೆ ಕಡ್ಡಾಯ. ಆದರೆ ಸರಕಾರಿ ನೌಕರರ ಕೆಲಸದ ಅವಧಿ ದಿನಕ್ಕೆ ಏಳು ಗಂಟೆಗಿಂತಲೂ ಕಡಿಮೆ. ಅಲ್ಲದೆ, ಮಧ್ಯಂತರ ವಿರಾಮದ ಅವಧಿ ನಿಗದಿತವಾಗಿದ್ದರೂ ಅದನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುವುದಿಲ್ಲ. 

ಆರನೇ ರಾಜ್ಯ ವೇತನ ಆಯೋಗದ ಅಂತಿಮ ವರದಿ ಸಚಿವ ಸಂಪುಟದ ಮುಂದೆ ಮಂಡನೆಯಾಗುತ್ತಿರುವ ಸಂದರ್ಭದಲ್ಲಿ ರಜೆ ದಿನಗಳ ಕಡಿತ ಹಾಗೂ ಕೆಲಸದ ಅವಧಿಯನ್ನು ಹೆಚ್ಚಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಯಾವುದೇ ಸರಕಾರದ ಯಶಸ್ಸು ನೌಕರರ ಸೇವಾ ಗುಣಮಟ್ಟ, ಶಿಸ್ತು, ದಕ್ಷತೆ ಹಾಗೂ ಈ ಬಗ್ಗೆ ಸರಕಾರ ಕೈಗೊಳ್ಳುವ ಸುಧಾರಣಾ ಕ್ರಮಗಳನ್ನು ಅವಲಂಬಿಸಿರುತ್ತದೆ. ಸರಕಾರಿ ನೌಕರರು ನಿಷ್ಠೆಯಿಂದ ಮತ್ತು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಲ್ಲಿ ಅದು ಸರಕಾರದ ವರ್ಚಸನ್ನು ವೃದ್ಧಿಸುತ್ತದೆ. ನಾವಿರುವುದು ಜನರ ಸೇವೆಗಾಗಿ, ಅವರೇ ನಮ್ಮ ಅನ್ನದಾತರು ನಾವು ಅವರ ಸೇವಕರೆಂಬ ಮನೋಭಾವನೆ ಯನ್ನು ನೌಕರರು ಹೊಂದಿರಬೇಕಾಗುತ್ತದೆ. ಕರ್ನಾಟಕ ಸರಕಾರ ನೌಕರ ವರ್ಗದ ಆರ್ಥಿಕ ಬೇಡಿಕೆಗೆ ಸಂಬಂಧಿಸಿದಂತೆ ತೃಪ್ತಿಕರವಾಗಿಯೇ ಅವರ ವೇತನ ಪರಿಷ್ಕರಣೆಯನ್ನು ಮಾಡಿರುತ್ತದೆ. ಈಗ ಪ್ರಮುಖವಾಗಿ ನೌಕರರ ರಜೆಯ ಸೌಲಭ್ಯ ಹಾಗೂ ಕೆಲಸದ ಅವಧಿಯ ಬಗ್ಗೆ ಅರ್ಥಪೂರ್ಣ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬೇಕು. ಈ ಬಗ್ಗೆ ನೌಕರರ ಯಾವುದೇ ಸಮಂಜಸವಲ್ಲದ ಬೇಡಿಕೆಗೆ ಮಣಿಯದೆ ವೈಜ್ಞಾನಿಕವಾಗಿ ಪರಾಮರ್ಶಿಸಿ ತೀರ್ಮಾನ ಕೈಗೊಳ್ಳಬೇಕು. 

ರಾಜ್ಯ ಸರಕಾರಿ ನೌಕರರಿಗೆ ಪ್ರಸಕ್ತ ನಿಯಮಾವಳಿಯನುಸಾರ ಇರುವ ರಜೆಯ ಸೌಲಭ್ಯ ಅತಿ ಹೆಚ್ಚು. ವರ್ಷಕ್ಕೆ 30 ದಿನ ಗಳಿಕೆ ರಜೆ, 18 ದಿನಗಳ ಅರ್ಧವೇತನ ರಜೆ (ಪೂರ್ಣ ವೇತನ ರಜೆಯಾಗಿ ಪರಿವರ್ತಿಸಬಹುದು) 15 ದಿನಗಳ ಸಾಂದರ್ಭಿಕ ರಜೆ ಹಾಗೂ 18ರಿಂದ 20 ರಾಷ್ಟ್ರೀಯ ಹಾಗೂ ಹಬ್ಬದ ರಜೆಯ ಸೌಲಭ್ಯವಿರುತ್ತದೆ. ಜತೆಗೆ ವರ್ಷಕ್ಕೆ 52 ಭಾನುವಾರಗಳು ಹಾಗೂ 12 ಎರಡನೆ ಶನಿವಾರವೂ ರಜೆ. ಅಂದರೆ ಕನಿಷ್ಟ ವರ್ಷಕ್ಕೆ 145 ದಿನಗಳ ರಜೆಗೆ ಸರಕಾರಿ ನೌಕರರು ಅರ್ಹರಾಗಿರುತ್ತಾರೆ. ಅಂದರೆ ವರ್ಷಾವಧಿಯಲ್ಲಿ ಶೇಕಡ 40ರಷ್ಟು ದಿನಗಳ ರಜೆಯ ಸೌಲಭ್ಯವಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಸರಕಾರಿ ನೌಕರರಿಗೆ ಇಷ್ಟು ಹೆಚ್ಚಿನ ಸಂಖ್ಯೆಯ ರಜೆ ಸೌಲಭ್ಯ ಖಂಡಿತ ಸರಿಯಲ್ಲ. ಅಲ್ಲದೆ ಗಳಿಕೆ ರಜೆಯ ನಗದೀಕರಣದ ಸೌಲಭ್ಯವೂ ಇರುತ್ತದೆ. ಸೇವಾ ಸೌಲಭ್ಯದ ಪ್ರತಿ ವಿಷಯದಲ್ಲಿಯೂ ಕೇಂದ್ರ ಸರಕಾರಿ ನೌಕರರ ಸೌಲಭ್ಯವನ್ನೇ ಹಕ್ಕಿನಂತೆ ಒತ್ತಾಯಿಸುವುದು ಸರಿಯಲ್ಲ. ಸರಕಾರ ಅದಕ್ಕೆ ಮಣಿಯಲೂ ಬಾರದು. 

ಕಾರ್ಖಾನೆಗಳಲ್ಲಿ ದಿನಕ್ಕೆ 8 ತಾಸಿಗಿಂತ ಕಡಿಮೆ ಇಲ್ಲದಷ್ಟು ದುಡಿಯುವ ಕೋಟ್ಯಂತರ ನೌಕರರಿಗೆ ಕಾರ್ಖಾನೆಗಳ ಕಾಯಿದೆ 1948ರನ್ವಯ ನಿಗದಿಪಡಿಸಲಾದ ರಜೆ ವರ್ಷಕ್ಕೆ ಕೇವಲ 18 ದಿನಗಳು. ಅಂದರೆ ಪ್ರತಿ 20 ದಿನಗಳ ಕೆಲಸ ನಿರ್ವಹಣೆಗೆ 1 ದಿನದಂತೆ ಗಳಿಕೆ ರಜೆ ಹಾಗೂ ಒಂದು ಕ್ಯಾಲೆಂಡರ್‌ ವರ್ಷದಲ್ಲಿ 8 ದಿನಗಳ ರಾಷ್ಟ್ರೀಯ (3ದಿನ) ಹಬ್ಬದ ರಜೆ (ಐದು ದಿನ) ಸೇರಿ ವರ್ಷಕ್ಕೆ ಒಟ್ಟು 23 ದಿನಗಳ ರಜೆಗೆ ಅರ್ಹರಾಗುತ್ತಾರೆ. ಕಾರ್ಖಾನೆಗಳ ಕಾಯಿದೆ 1948ರನುಸಾರ ಇವರಿಗೆ ಸಾಂದರ್ಭಿಕ ರಜೆಯ ಸೌಲಭ್ಯವಿಲ್ಲ. ಅದೇ ರೀತಿ ಅಂಗಡಿ ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿಯ ನೌಕರರಿಗೆ ಅನ್ವಯಿಸುವ ಕಾಯ್ದೆಯನುಸಾರ ಲಭ್ಯವಿರುವ ರಜೆ ಸೌಲಭ್ಯವೆಂದರೆ ವರ್ಷಕ್ಕೆ 12ರಿಂದ 15 ದಿನಗಳ (ವಾರಕ್ಕೆ 5 ಅಥವಾ 5 ಕೆಲಸದ ದಿನಗಳನುಸಾರವಾಗಿ) ಗಳಿಕೆ ರಜೆ ಮತ್ತು ಒಂದು ಕ್ಯಾಲೆಂಡರ್‌ ವರ್ಷದಲ್ಲಿ 12 ದಿನಗಳಿಗೆ ಮೀರದಂತೆ ಕಾಯಿಲೆ ಸಂಬಂಧ ರಜೆ ಹಾಗೂ ರಾಷ್ಟ್ರೀಯ ಮತ್ತು ಹಬ್ಬದ ರಜಾದಿನಗಳ ಕಾಯಿದೆ 1963ರ ಅನುಸಾರ ಎಂಟು ದಿನಗಳು ಸೇರಿ ಒಟ್ಟಾರೆ ವರ್ಷಕ್ಕೆ 32ರಿಂದ 35ದಿನಗಳ ರಜೆ ಮಾತ್ರವಿರುತ್ತದೆ. ಅಂದರೆ ಸರಕಾರಿ ನೌಕರರಿಗಿರುವ ರಜೆಯ ಪ್ರಮಾಣ ಇವರು ಸಾರ್ವಜನಿಕರ ಸೇವೆಯಲ್ಲಿದ್ದರೂ ವಾಣಿಜ್ಯಕವಾಗಿ ಉತ್ಪಾದನಾ ವಲಯದ ನೌಕರರಿಗೆ ರಜೆಯ ಪ್ರಮಾಣದ ದುಪ್ಪಟ್ಟಿಗಿಂತ ಹೆಚ್ಚಿನದು. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಗಮನಿಸುವುದು ತೀರಾ ಅವಶ್ಯಕ.

ಕಾರ್ಖಾನೆ ಹಾಗೂ ವಾಣಿಜ್ಯ ಸಂಸ್ಥೆಗಳ / ಕಂಪೆನಿಗಳ ನೌಕರರಿಗೆ ಮಧ್ಯಂತರ ವಿರಾಮದ ವೇಳೆಯನ್ನು ಹೊರತುಪಡಿಸಿ ಪ್ರತಿ ದಿನ ಎಂಟು ಗಂಟೆಗಳ ಕೆಲಸ ನಿರ್ವಹಣೆ ಕಡ್ಡಾಯ. ಆದರೆ ಸರಕಾರಿ ನೌಕರರ ಕೆಲಸದ ಅವಧಿ ದಿನಕ್ಕೆ ಏಳು ಗಂಟೆಗಿಂತಲೂ ಕಡಿಮೆ. ಅಲ್ಲದೆ, ಮಧ್ಯಂತರ ವಿರಾಮದ ಅವಧಿ ನಿಗದಿತವಾಗಿದ್ದರೂ ಅದನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುವುದಿಲ್ಲ. ಕಾರ್ಖಾನೆಗಳಲ್ಲಿ ಹಾಗೂ ಕಂಪೆನಿಗಳಲ್ಲಿಯಷ್ಟು ಹಾಜರಿಯ ದಾಖಲೆ ಪದ್ಧತಿ ಸರಕಾರಿ ಕಚೇರಿಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. 

ಆದುದರಿಂದ ಈಗಿರುವ ರಾಷ್ಟ್ರೀಯ ಮತ್ತು ಹಬ್ಬದ ರಜಾ ದಿನಗಳು ಯಾವುದೇ ಕಾರಣಕ್ಕೂ 10 ದಿನಗಳಿಗೆ ಮೀರುವಂತಿರಬಾರದು. ಕರ್ನಾಟಕ ರಾಷ್ಟ್ರೀಯ ಮತ್ತು ಹಬ್ಬದ ರಜಾ ದಿನಗಳ ಕಾಯಿದೆ 1963ರನುಸಾರ ರಾಷ್ಟ್ರೀಯ ದಿನಗಳಿಗೆ ಮೂರು ದಿನ ಮತ್ತು ಹಬ್ಬಕ್ಕೆ ಐದು ದಿನಗಳ ರಜಾ ನೀಡಬೇಕಾಗುತ್ತದೆ. ಕರ್ನಾಟಕ ಸರಕಾರಿ ನೌಕರರಿಗೆ ಮೇ 1 ಹಾಗೂ ನವಂಬರ್‌ 1 ಸೇರಿ ಒಟ್ಟು ಹತ್ತು ದಿನಗಳ ರಜೆಯನ್ನು ನಿಗದಿಪಡಿಸುವುದು ಅರ್ಥಪೂರ್ಣ. ಅದೇ ರೀತಿ ಸಾಂದರ್ಭಿಕ ರಜೆಯನ್ನು ಈಗಿರುವ 15 ದಿನಗಳಿಂದ 8 ದಿನಗಳಿಗೆ ನಿಗದಿ ಪಡಿಸಿ ಈಗಿರುವ ಅರ್ಧವೇತನ ರಜೆಯನ್ನು 9 ದಿನಗಳ ಕಾಯಿಲೆ ರಜೆಯನ್ನಾಗಿ ಪರಿವರ್ತಿಸಿ ನಿಗದಿಪಡಿಸಬೇಕು. ಗಣ್ಯರ ಜಯಂತಿ ಅಥವಾ ನಿಧನದ ಸಂದರ್ಭದಲ್ಲಿ ಸಂವಿಧಾನತ್ಮಾಕವಾಗಿ ನಿಗದಿಯಾಗಿರುವ ಹೊರತು ಯಾವ ಸಂದರ್ಭದಲ್ಲಿಯೂ ವಿಶೇಷ ರಜೆ ಘೋಷಿಸತಕ್ಕದ್ದಲ್ಲವೆಂಬ ದೃಢ ನಿರ್ಧಾರವನ್ನು ಶಾಸಕಾಂಗದ ಒಪ್ಪಿಗೆಯನ್ನೂ ಪಡೆದು ಕೈಗೊಳ್ಳಬೇಕು. 

ಪ್ರತಿ ಸರಕಾರಿ ನೌಕರನೂ ವರ್ಷದಲ್ಲಿ ಕನಿಷ್ಠ 10 ಗಳಿಕೆ ರಜೆಯನ್ನು ಉಪಯೋಗಿಸುವ ನಿಯಮ ರೂಪಿಸಬೇಕು. ಉತ್ತಮ ಆಡಳಿತವನ್ನು ನೀಡುವ ದೃಷ್ಟಿಯಿಂದಲೂ ಇದು ಸಹಕಾರಿಯೂ ಹೌದು. ನೌಕರರೂ ಕಡ್ಡಾಯವಾಗಿ ರಜೆ ಪಡೆಯುವುದರಿಂದ ಒತ್ತಡ ರಹಿತವಾಗಿ 10 ದಿನ ಇರಬಹುದು. ಅನೇಕ ನೌಕರರು ಇಂತಹ ರಜೆಯಲ್ಲಿ ಗೈರಾದಾಗ ಅವರು ತಿಳಿದೋ ಅಥವಾ ತಿಳಿಯದೆಯೋ ಎಸಗಿರುವ ತಪ್ಪುಗಳು ಬೆಳಕಿಗೆ ಬರುತ್ತವೆ. ಇಂತಹ ನಿಯಮದಿಂದ ನೌಕರರೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವುದು ಅನಿವಾರ್ಯವಾಗುತ್ತದೆ. ಆರ್ಥಿಕ ದೃಷ್ಟಿ ಯಿಂದಲೂ ಸರಕಾರಕ್ಕೆ ಗಳಿಕೆ ರಜೆಯ ನಗದೀಕರಣದ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. 

ದಿನದ ಕೆಲಸದ ಅವಧಿ ಮತ್ತು ವಾರದಲ್ಲಿಯ ಕೆಲಸದ ದಿನಗಳ ಬಗ್ಗೆಯೂ ಪ್ರಸ್ತಾವನೆಯಿದೆ. 2ನೇ ಮತ್ತು 4ನೇ ಶನಿವಾರ ರಜೆ ನೀಡಿ ಕೆಲಸದ ಅವಧಿಯನ್ನು ಹೆಚ್ಚಿಸುವ ಅಥವಾ ಕೇಂದ್ರ ಸರ‌ಕಾರದಂತೆ ರಾಜ್ಯದಲ್ಲಿಯೂ  ಐದು ದಿನಗಳ ವಾರದ ಪದ್ಧತಿ ಜಾರಿಗೊಳಿಸಬೇಕೆಂಬ ಸಚಿವ ಪ್ರಿಯಾಂಕ ಖರ್ಗೆಯವರ ಒತ್ತಾಯವೂ ಸರಿಯಲ್ಲ. ಇಂತಹ ಪದ್ಧತಿಯಿಂದ ಕಾರ್ಯಕ್ಷಮತೆ ಹೆಚ್ಚುವುದಿಲ್ಲ. ಈಗಾಗಲೇ ಈ ಹಿಂದೆ ಕರ್ನಾಟಕದಲ್ಲಿ ಪ್ರಯೋಗ ನಡೆಯಿಸಿ ಕೈ ಸುಟ್ಟುಕೊಳ್ಳಲಾಗಿದೆ. ಸಾರ್ವಜನಿಕ ಸೇವಕರನ್ನು ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡುವಂತೆ ನಿಯಮ ತರುವುದು ಖಂಡಿತ ಸರಿಯಲ್ಲ. ರಾಜ್ಯ ಸರಕಾರದ ಕಚೇರಿಗಳೊಂದಿಗೆ ರಾಜ್ಯದ ಜನತೆಗಿರುವ ವ್ಯವಹಾರಿಕ ಸಂಬಂಧ, ಅವಶ್ಯಕತೆಯನ್ನು ಕೇಂದ್ರ ಸರಕಾರದ ಕಚೇರಿಗಳ ಕೆಲಸಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಕೇಂದ್ರ ಸರಕಾರದ ಅಂಚೆ ಕಚೇರಿಗಳು ವಾರದಲ್ಲಿ ಆರೂ ದಿನ ತೆರೆದಿರುತ್ತವೆ. ಅದೇ ರೀತಿ ಈಗಿರುವ ಕೆಲಸದ ಅವಧಿಯನ್ನು ಹೆಚ್ಚಿಸಿದರೂ ನೌಕರರ ಕಾರ್ಯಕ್ಷಮತೆಯ ಗುಣಮಟ್ಟದಲ್ಲಿ ಹೆಚ್ಚಿನದನ್ನು ನಿರೀಕ್ಷಿಲಾಗದು. ಈಗಿರುವ ಅವಧಿಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನೌಕರರು ಕೆಲಸ ನಿರ್ವಹಿಸುವಂತೆ ಮಾಡಬೇಕು.

 ಸೇವಾವಧಿಯಲ್ಲಿ ಕನಿಷ್ಠ ನಾಲ್ಕು ಪದೋನ್ನತಿಯನ್ನಾದರೂ ಪಡೆಯಲು ಅವಕಾಶ ಕಲ್ಪಿಸಬೇಕೆಂಬುದು ಸರಕಾರಿ ನೌಕರರ ಸಾಮಾನ್ಯ ಬೇಡಿಕೆ . ಅದು ಸರಿಯೂ ಇರಬಹುದು. ಅದೇ ರೀತಿ ಸರಕಾರವೂ ನೌಕರರ ಸೇವಾವಧಿಯಲ್ಲಿ ಕನಿಷ್ಠ ನಾಲ್ಕು ಬೇರೆ ಬೇರೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಕಡ್ಡಾಯ ನಿಯಮವನ್ನು ತಂದು ವಿಧಾನ ಸೌಧದ ಸಿಬ್ಬಂದಿಗೂ ಅನ್ವಯಿಸುವಂತೆ ಸಮಾನತೆಯನ್ನು ತೋರಬೇಕಲ್ಲದೆ ಯಾವೊಬ್ಬ ನೌಕರನೂ ಒಂದೇ ಕಚೇರಿಯಲ್ಲಿ ಐದು ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಇರಕೂಡದೆಂಬ ನಿಯಮವನ್ನು ರೂಪಿಸಿ ಯಾವುದೇ ವಿನಾಯಿತಿಯಿಲ್ಲದೆ ಜಾರಿಗೊಳಿಸಬೇಕು. 

ಇಂದು ಕಚೇರಿಗಳಲ್ಲಿ ಬಹುತೇಕ ಕಾರ್ಯ ನಿರ್ವಹಣೆ ಕಂಪ್ಯೂಟರ್‌ ಮೂಲಕ ನಡೆಯುತ್ತಿದೆ. ಸಿಬಂದಿಗಳಿಗೆ ಕಾಲಕಾಲಕ್ಕೆ ಕಂಪ್ಯೂಟರ್‌ ಉಪಯೋಗಿಸುವ ತರಬೇತಿ ನೀಡಿದ್ದರೂ ಸಹ ಏನಾದರೂ ಕಾರಣವೊಡ್ಡಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್‌ ಆಪರೇಟರ್ ಸೇವೆ ಪಡೆಯುವುದನ್ನೂ ಮುಂದುವರಿಸಲಾಗುತ್ತಿದೆ. ಇದರಲ್ಲಿ ಕೆಲವು ಪ್ರಕರಣಗಳಲ್ಲಿ ಸಿಬಂದಿ ವರ್ಗ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಅಪಾದನೆಯೂ ಇದೆ. ಬದಲಾದ ಕಾರ್ಯ ವಿಧಾನದಲ್ಲಿ ಎಲ್ಲ ಕ್ಷೇತ್ರದಲ್ಲಿ ಕಂಪ್ಯೂಟರ್‌ ಅಳವಡಿಕೆಯಿಂದ ಬೆರಳಚ್ಚುಗಾರರಿಗೆ ಮತ್ತು ಬಹುತೇಕ ಶಿಘ್ರ ಲಿಪಿಗಾರರಿಗೆ ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಕೆಲಸವಿಲ್ಲದೆ ಅವರ ಅಗತ್ಯ ಕಂಡು ಬರುವುದಿಲ್ಲ ಮಾಸಿಕ ರೂ. 60,000ದಿಂದ 80,000ವನ್ನೂ ಮೀರಿ ವೇತನ ಪಡೆಯುವ ಇವರ ಪ್ರಸ್ತುತ ಸೇವಾ ಕ್ಷೇತ್ರ ತಮ್ಮ ಮೇಲಾಧಿಕಾರಿಗಳ ದೂರವಾಣಿ ಕರೆಗಳನ್ನು ಜೋಡಿಸುವುದು ಮತ್ತು ಅವರ ಖಾಸಗಿ ಕೆಲಸ ಮಾಡುವ ಪದ್ಧತಿಗೇ ಶರಣಾಗಿದ್ದಾರೆ. ಹೆಚ್ಚು ಕಡಿಮೆ ಆಡಳಿತ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತಿರುವುದರಿಂದ ಅನೇಕ ಅಧಿಕಾರಿಗಳು ಉಕ್ತಲೇಖನವನ್ನು ನೀಡುವ ಪರಿಣಿತಿ ಹೊಂದಿರುವುದಿಲ್ಲ. ಈ ಹುದ್ದೆಗಳಲ್ಲಿ ತೀರಾ ಅವಶ್ಯಕತೆಯ ಹುದ್ದೆಗಳನ್ನು ಮಾತ್ರ ಗುರುತಿಸಿ ಉಳಿದವುಗಳನ್ನು ರದ್ದುಗೊಳಿಸಬೇಕು. 

ಹಿಂದೆ ಸಾಕಷ್ಟು ನೌಕರರ ಸಾಮಾಜಿಕ ಭದ್ರತೆ ಹಾಗೂ ನೌಕರ ಕುಟುಂಬದ ಕಲ್ಯಾಣಕರ ಸೌಲಭ್ಯ ಹಾಗೂ ಸೇವಾವಧಿಯಲ್ಲಿ ನಿಧನ ಹೊಂದಿದ ನೌಕರರ ಪತಿ/ಪತ್ನಿ ಅಥವಾ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ ನಿಯಮ ಅಸ್ತಿತ್ವದಲ್ಲಿ ಇಲ್ಲದಿದ್ದುದರಿಂದ ಆ ರೀತಿ ನಿಧನ ಹೊಂದಿದ ನೌಕರರ ಪತ್ನಿ/ಪತಿಯರಿಗೆ ಏಳು ವರ್ಷಗಳ ಅವಧಿಯವರೆಗೆ ಅಥವಾ ಅಂತಹ ವ್ಯಕ್ತಿಯು ಸೇವೆಯಲ್ಲಿದ್ದಲ್ಲಿ ಆತನ ನಿವೃತ್ತಿ ವಯಸ್ಸು ಮುಟ್ಟುವವರೆಗೆ ಕುಟುಂಬ ಪಿಂಚಣಿ ಮೊತ್ತವನ್ನು ಮಾಮೂಲಿಗಿಂತ ಎರಡು ಪಟ್ಟು ನೀಡುವ ನಿಯಮಾವಳಿಯಿತ್ತು. ಅಂದಿನ ದಿನದಲ್ಲಿ ಅದರ ಅವಶ್ಯಕತೆಯೂ ಇತ್ತು. ಆದರೆ ಈಗ ಸೇವಾ ಸವಲತ್ತುಗಳಲ್ಲಿ ಗಣನೀಯ ಸುಧಾರಣೆಯಾಗಿದೆ. ಪ್ರತಿ ನೌಕರರಿಗೂ ಆಯ್ಕೆಯನುಸಾರ ಜೀವ ವಿಮಾ ಯೋಜನೆಯಲ್ಲದೆ ಸರಕಾರಿ ಜೀವ ವಿಮಾ ಮಾಡುವುದನ್ನೂ ಕಡ್ಡಾಯಗೊಳಿಸಿರುವುದರಿಂದ ಹೆಚ್ಚಿನ ಆರ್ಥಿಕ ಬಲ ಕುಟುಂಬಕ್ಕೆ ಸಿಗುತ್ತದೆ. ಅನುಕಂಪದ ಆಧಾರದಲ್ಲಿ ಸೇವಾವಧಿಯಲ್ಲಿರುವಾಗ ನಿಧನರಾದ ನೌಕರರ ಕುಟುಂಬದ ಸದಸ್ಯರೊಬ್ಬರಿಗೆ ಖಾಯಂ ನೌಕರಿಯನ್ನೂ ನೀಡುವ ನಿಯಮವನ್ನು ಬಹಳ ಹಿಂದೆಯೇ ರೂಪಿಸಿ ಜಾರಿಗೊಳಿಸಿದ್ದರೂ ಸಹ ಈ ರೀತಿ ಅನುಕಂಪದ ಆಧಾರದಲ್ಲಿ ನೇಮಕಾತಿ ಪಡೆದ ಕುಟುಂಬ ಪಿಂಚಣಿದಾರರಿಗೂ ಎರಡು ಪಟ್ಟು ಕುಟುಂಬ ಪಿಂಚಣಿ ನೀಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ತಿದ್ದುಪಡಿ ತಂದು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದ ಕುಟುಂಬ ಪಿಂಚಣಿದಾರರನ್ನು ಎರಡು ಪಟ್ಟು ಕುಟುಂಬ ಪಿಂಚಣಿ ಸೌಲಭ್ಯದಿಂದ ಹೊರಗಿಡಬೇಕು.

 ಪಾರದರ್ಶಕವಾದ, ಸ್ಪಷ್ಟತೆಯಿಂದ ಕೂಡಿದ ವರ್ಗಾವಣೆ ನೀತಿ ನಿಯಮವನ್ನು ರೂಪಿಸಿ ಅದನ್ನು ನಿಗದಿತ ಅವಧಿಯಲ್ಲಿಯೇ ಪ್ರತಿವರ್ಷ ಕಾರ್ಯಗತಗೊಳಿಸಲು ಮಾನದಂಡವನ್ನು ನಿಗದಿಗೊಳಿಸಿ ಪ್ರತಿ ಇಲಾಖೆಯಲ್ಲಿಯೂ ವರ್ಗಾವಣೆ ಸಮಿತಿಯನ್ನು ಅಧಿಕಾರಿ ಸದಸ್ಯರಿಂದ ರಚಿಸಬೇಕು. ಈ ವಿಷಯದಲ್ಲಿ ಮಂತ್ರಿಗಳ ಅಥವಾ ರಾಜಕೀಯ ವ್ಯಕ್ತಿಗಳ ಶಿಫಾರಸ್ಸು ಅಥವಾ ಹಸ್ತಕ್ಷೇಪಕ್ಕೆ ಯಾವುದೇ ರೂಪದಲ್ಲಿ ಅವಕಾಶ ಇರಕೂಡದು. ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರುವುದು ದೂರದರ್ಶಿ ಆರ್ಥಿಕ ಹೊರೆಯ ಕಾರಣ ಕಷ್ಟ ಸಾಧ್ಯ. ನಿಜವಾಗಿಯೂ ಈ ಹೊಸ ಪಿಂಚಣಿ ಯೋಜನೆ ಸುಮಾರು 30 ವರ್ಷಗಳಷ್ಟು ಹಿಂದೆಯೇ ಜಾರಿಗೆ ತರುವ ಅವಕಾಶವಿತ್ತು. ಆದರೆ ಈ ಯೋಜನೆ ನೌಕರರ ನಂಬಿಕೆಯನ್ನು ಕಳೆದುಕೊಳ್ಳುವಂತಿರಬಾರದು. ಪಿಂಚಣಿ ಎಂಬುದು ಜೀವನಪೂರ್ತಿ ಸೇವೆ ಸಲ್ಲಿಸಿದ ನಂತರ ಸ್ವತಂತ್ರವಾಗಿ ನೆಮ್ಮದಿಯಿಂದ ಜೀವನ ನಡೆಸಲು ಸಿಗುವ ಖಾತ್ರಿಯಾದ ಇಡಗಂಟು. 

ಯಾವುದೇ ಸುಧಾರಣೆ ಜಾರಿಗೆ ತರುವುದರ ಜತೆಗೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸರಕಾರ ಸೂಕ್ತವಾದ ನಿರ್ವಹಣಾ ಯಂತ್ರ ರಚಿಸಬೇಕು. ಈ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಜಾಗೃತ ತಂಡವನ್ನು ರಚಿಸಿ ಆಡಳಿತದಲ್ಲಿ ಚುರುಕು ಮುಟ್ಟಿಸಬೇಕು. 

ಬೆಳ್ಳೆ ಚಂದ್ರಶೇಖರ ಶೆಟ್ಟಿ

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.