ಮನೆಮನಗಳ ಸುಳಿಯಲ್ಲಿ ಸರಸ್ವತಿ


Team Udayavani, Oct 7, 2018, 6:00 AM IST

6.jpg

ಪ್ರೊಫೆಸರ್‌ ಎಸ್‌. ವಿ. ಪರಮೇಶ್ವರ ಭಟ್ಟರ ಜೊತೆಗೆ ಕೊಣಾಜೆ ನೋಡಲು ಹೋದದ್ದು ನಾವು 16 ಮಂದಿ ವಿದ್ಯಾರ್ಥಿ ಪುರಾತನರು. 50 ವರ್ಷಗಳ ಹಿಂದಿನ ಕೊಣಾಜೆಗೆ ಆಗ ಸಿಟಿಬಸ್‌ ಇರಲಿಲ್ಲ. ಮುಡಿಪು ಮಾರ್ಗವಾಗಿ ವಿಟ್ಲಕ್ಕೆ ಹೋಗುವ ಎರಡು ಸರ್ವಿಸ್‌ ಬಸ್‌ಗಳು ಇದ್ದುವು. ಆ ಬಸ್‌ಗಳು ಕೋಟೆಕಾರ್‌ ಬೀರಿ ಮೂಲಕ ದೇರಳಕಟ್ಟೆ ನಾಟೇಕಲ್‌ ಮಾರ್ಗವಾಗಿ ಕೊಣಾಜೆ ಮೂಲಕ ಹೋಗುತ್ತಿದ್ದವು. ಬೀರಿಯಿಂದ ಕೊಣಾಜೆ ಮೂಲಕದ ಮಾರ್ಗ ಮಣ್ಣಿನದ್ದು, ಡಾಮರು ರಸ್ತೆ ಆಗಿರಲಿಲ್ಲ. ನಾವು ಮಂಗಳೂರಿನಿಂದ ಅಂತಹ ಒಂದು ಸರ್ವಿಸ್‌ ಬಸ್ಸಿನಲ್ಲಿ ಪ್ರಯಾಣ ಮಾಡಿ, ಕೊಣಾಜೆಯ ಕೆಳಗಿನ ಮಾರ್ಗದಲ್ಲಿ ಬಸ್ಸಿನಿಂದ ಇಳಿದು, ಮೇಲಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ಗುಡ್ಡ ಏರಿದಾಗ ಕಂಡದ್ದು ಸಂಪೂರ್ಣ ಮುಳಿಹುಲ್ಲಿನ ಒಂದು ವಿಶಾಲ ಗುಡ್ಡೆ. ಅದರಲ್ಲಿ ಗಿಡಮರವಾಗಲಿ ಯಾವುದೇ ಕಟ್ಟಡವಾಗಲಿ ಇರಲಿಲ್ಲ. ಕೆಲವು ಕಡೆ ಮುರಕಲ್ಲಿನ ನೆಲ ಕಾಣುತ್ತಿತ್ತು. ಅಲ್ಲಿ ಗುರುಗಳ ಜೊತೆಗೆ ನಾವು ಮುಳಿಹುಲ್ಲಿನ ಮೇಲೆ ಕುಳಿತೆವು. ವಿದ್ಯಾರ್ಥಿಗಳು ಹಾಡುಗಳನ್ನು ಹಾಡಿದರು. ಪ್ರೊಫೆಸರ್‌ ಅವರ ಸರಸ ನುಡಿಗಳು ಆ ಪ್ರಶಾಂತ ವಾತಾವರಣದಲ್ಲಿ ಆಹ್ಲಾದಕಾರಿಯಾಗಿದ್ದವು. ಎಸ್‌ವಿಪಿ ಕವಿವಾಣಿ ನುಡಿಯಿತು: “”ಇದು ಮುಂದಿನ ಮಂಗಳಗಂಗೋತ್ರಿ! ಆ ಮುಳಿಹುಲ್ಲಿನ ಗುಡ್ಡೆ ಮುಂದೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಆಗುತ್ತದೆ ಎಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ!”

1968 ದಶಂಬರದಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಉದ್ಘಾಟನೆಯ ಸಮಾರಂಭ ಸೈಂಟ್‌ ಅಲೋಸಿಯಸ್‌ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಪ್ರೊ. ದೇ. ಜವರೇಗೌಡರು ಉದ್ಘಾಟನೆ ಮಾಡಿದರು. ಸೂರ್ಯನಾರಾಯಣ ಅಡಿಗರು ಮತ್ತು ಅಲೋಶಿಯಸ್‌ ಕಾಲೇಜಿನ ಪ್ರಿನ್ಸಿಪಾಲ್‌ ಫಾ. ಲಾರೆನ್ಸ್‌ ರಸ್ಕಿಞ್ಞ ಅವರು ಮುಖ್ಯ ಅತಿಥಿ ಆಗಿದ್ದರು. ಎಸ್‌ವಿಪಿ ಅವರ ಸ್ವಾಗತ ಮತ್ತು ಪ್ರಸ್ತಾವನಾ ಭಾಷಣ. ವಿದ್ಯಾರ್ಥಿಗಳ ಪರವಾಗಿ ನನ್ನನ್ನು ಮಾತಾಡಲು ಹೇಳಿದರು. ಮಂಗಳೂರಿನಲ್ಲಿ ಅದು ನನ್ನ ಮೊತ್ತಮೊದಲನೆಯ ಸಾರ್ವಜನಿಕ ಭಾಷಣ. ಸ್ವಲ್ಪ ಜಾಸ್ತಿ ಕಾವ್ಯಾತ್ಮಕವಾಗಿ ಮಾತಾಡಿದೆ ಎಂದು ನೆನಪು. ಆದರೆ, ಗಣ್ಯರ ಗಮನ ಸೆಳೆಯಲು ನನ್ನ ಆ ಭಾಷಣ ಸಹಾಯಕವಾಯಿತು. ಎಲ್ಲ ಅತಿಥಿಗಳು ಭವಿಷ್ಯದ ವಿಶ್ವವಿದ್ಯಾನಿಲಯದ ಕನಸನ್ನು ಕಟ್ಟಿದರು. ಸ್ನಾತಕೋತ್ತರ ಕೇಂದ್ರದ ಸ್ಥಾಪನೆಯ ಹಿಂದಿನ ಸೂರ್ಯನಾರಾಯಣ ಅಡಿಗರ ಪಾತ್ರವನ್ನು ದೇಜಗೌ ವಿಶೇಷವಾಗಿ ಸ್ಮರಿಸಿದರು.

ನಾವು ಎಂ.ಎ. ವಿದ್ಯಾರ್ಥಿಗಳಾಗಿ ಇದ್ದ ಸಂದರ್ಭದ ಒಂದು ಮಹತ್ವದ ಘಟನೆ 1969 ಫೆಬ್ರವರಿ 3, 4, 5ರಂದು ಮಂಗಳೂರು ಪುರಭವನದಲ್ಲಿ ನಡೆದ ಅಖೀಲ ಕರ್ನಾಟಕ ಎರಡನೆಯ ಜಾನಪದ ಸಮ್ಮೇಳನ. ಎಚ್‌. ಎಲ್‌. ನಾಗೇಗೌಡರು ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಇದ್ದ ಸಂದರ್ಭದಲ್ಲಿ ಅವರು ಯೋಜಿಸಿದ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಅದ್ಭುತವಾಗಿ ಸಂಘಟಿಸಿದ ಐತಿಹಾಸಿಕ ಸಮ್ಮೇಳನದಲ್ಲಿ ಎಸ್‌ವಿಪಿ ಅವರ ನೇತೃತ್ವದಲ್ಲಿ ನಮ್ಮ ಕನ್ನಡ ವಿಭಾಗದ ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆವು. ಸಿಂಪಿ ಲಿಂಗಣ್ಣನವರು ಸಮ್ಮೇಳನದ ಅಧ್ಯಕ್ಷರಾಗಿದ್ದ ಆ ಸಮ್ಮೇಳನದಲ್ಲಿ ಜಾನಪದದ ಹಿರಿಯ ವಿದ್ವಾಂಸರಾದ ದೇ. ಜವರೇಗೌಡ, ಹಾ. ಮಾ. ನಾಯಕ, ಜೀ. ಶಂ. ಪರಮಶಿವಯ್ಯ, ಮತಿಘಟ್ಟ ಕೃಷ್ಣಮೂರ್ತಿ, ಎಲ್‌. ಆರ್‌. ಹೆಗಡೆ, ಪಿ. ಆರ್‌. ತಿಪ್ಪೇಸ್ವಾಮಿ, ಗೊ. ರು. ಚನ್ನಬಸಪ್ಪ, ಕೆ. ಆರ್‌. ಲಿಂಗಪ್ಪನವರ ಜೊತೆಗೆ ಏರ್ಯ, ಅಮೃತ ಸೋಮೇಶ್ವರ, ಎಂ. ರಾಮಚಂದ್ರ ಮೊದಲಾಗಿ ಜಿಲ್ಲೆಯ ವಿದ್ವಾಂಸರೂ ಭಾಗವಹಿಸಿದ್ದರು. ಈ ಜಾನಪದ ಸಮ್ಮೇಳನದಲ್ಲಿ ಇಬ್ಬರು ಎಂ.ಎ. ವಿದ್ಯಾರ್ಥಿಗಳಿಗೆ ಪ್ರಬಂಧ ಮಂಡಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಮಂಗಳೂರು ಕೇಂದ್ರದಿಂದ ನಾನು ಮತ್ತು ಮೈಸೂರು ಕೇಂದ್ರದಿಂದ ತೀ. ನಂ. ಶಂಕರನಾರಾಯಣ ಅವರು ವಿದ್ಯಾರ್ಥಿಗಳಾಗಿ ಪ್ರಬಂಧ ಮಂಡಿಸಿದೆವು. ನಾನು ಆ ವರ್ಷ ತರಗತಿ ಸೆಮಿನಾರ್‌ನಲ್ಲಿ ಮಂಡಿಸಿದ ಪ್ರಬಂಧ ದಕ್ಷಿಣಕನ್ನಡ ಜಿಲ್ಲೆಯ ಜನಪದ ಕಲಾತ್ಮಕ ವಿನೋದಗಳು. ಇದನ್ನು ಮೆಚ್ಚಿಕೊಂಡ ಪ್ರೊಫೆಸರ್‌ ಎಸ್‌ವಿಪಿಯವರು ಈ ಪ್ರಬಂಧವನ್ನು ಆ ಸಮ್ಮೇಳನದಲ್ಲಿ ಮಂಡಿಸಲು ಅವಕಾಶ ಕಲ್ಪಿಸಿದರು. ಇದು ನಾನು ಪ್ರಬಂಧ ಮಂಡಿಸಿದ ಮೊತ್ತಮೊದಲನೆಯ ರಾಜ್ಯಮಟ್ಟದ ಸಮ್ಮೇಳನ. ಜಾನಪದ ಕ್ಷೇತ್ರಕ್ಕೆ ನನ್ನ ಮೊದಲ ಮೆಟ್ಟಿಲು. ಆ ಪ್ರಬಂಧವನ್ನು ಮೆಚ್ಚಿ ಪ್ರೊ. ಎಂ. ರಾಮಚಂದ್ರರು ನಾನು ವಿದ್ಯಾರ್ಥಿ ಆಗಿ¨ªಾಗಲೇ ಕಾರ್ಕಳದ ಭುವನೇಂದ್ರ ಕಾಲೇಜಿಗೆ ಕರೆಸಿ ನನ್ನಿಂದ ಉಪನ್ಯಾಸ ಕೊಡಿಸಿದರು. ಕರ್ನಾಟಕದ ಎಲ್ಲ ಜನಪದ ಕಲೆಗಳ ಪ್ರದರ್ಶನವನ್ನು ಮಂಗಳೂರು ಜಾನಪದ ಸಮ್ಮೇಳನದಲ್ಲಿ ನೋಡಿದ ನನ್ನ ಅನುಭವ ವಿಶಾಲ ಕರ್ನಾಟಕದ ಭವ್ಯ ಕಲ್ಪನೆಯನ್ನು ತಂದುಕೊಟ್ಟಿತು. ಆ ಸಮ್ಮೇಳನಕ್ಕೆ ಮೈಸೂರು ವಿ.ವಿ.ಯ ಕನ್ನಡ ಎಂ.ಎ.ಯ ಆಸಕ್ತ ವಿದ್ಯಾರ್ಥಿಗಳು ಬಂದಿದ್ದರು: ತೀ.ನಂ. ಶಂಕರನಾರಾಯಣ, ಡಿ. ಕೆ. ರಾಜೇಂದ್ರ, ಶ್ರೀಕೃಷ್ಣ ಆಲನಹಳ್ಳಿ, ಕೆ. ರಾಮದಾಸ್‌, ಭೈರವಮೂರ್ತಿ ಮತ್ತು ಬಿ.ಎ. ವಿದ್ಯಾರ್ಥಿ ಕಾಳೇಗೌಡ ನಾಗವಾರ. ಇವರೇ ಮುಂದೆ ಕನ್ನಡ ಸಾಹಿತ್ಯ, ಜಾನಪದ, ವೈಚಾರಿಕ ಲೋಕಗಳಲ್ಲಿ ತೊಡಗಿಸಿಕೊಂಡು ಪ್ರಸಿದ್ಧರಾದವರು.

ಪ್ರೊ. ಎಸ್‌. ವಿ. ಪರಮೇಶ್ವರ ಭಟ್ಟರು ಮಂಗಳೂರು ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾಗಿದ್ದರು. ಮುಂದೆ ಅವರನ್ನು ಕೇಂದ್ರದ ನಿರ್ದೇಶಕರು ಎಂದು ನೇಮಿಸಲಾಯಿತು. ಆಗ ಕೇಂದ್ರದ ಕಚೇರಿಯ ಸಿಬ್ಬಂದಿ ಎಲ್ಲರೂ ಮೈಸೂರು ವಿ. ವಿ. ಯಿಂದ ವರ್ಗಾವಣೆ ಆಗಿ ಬಂದವರಾಗಿದ್ದರು. ಸೂಪರಿಂಟೆಂಡೆಂಟ್‌ ಶಾಸ್ತ್ರೀ, ಕಚೇರಿ ಸಹಾಯಕ ರುದ್ರೇಗೌಡ, ಟೈಪಿಸ್ಟ್‌ ವೃಂದಾಕ್ಷಿ, ಜವಾನರು-ಮಹಾದೇವ, ಚಿನ್ನಯ್ಯ ಮತ್ತು ಬನುಮಯ್ಯ, ಲೈಬ್ರೇರಿಯನ್‌ ಅಸದುಲ್ಲಾ ಷರೀಫ್. ಸೂಪರಿಂಟೆಂಡೆಂಟ್‌ ಶಾಸಿŒಗಳ ವೇಷಭೂಷಣ ಕಂಪೆನಿ ನಾಟಕಗಳ ಪಾತ್ರಗಳ ಹಾಗೆ ಕಾಣಿಸುತ್ತಿತ್ತು; ಕಚ್ಚೆ , ಹಳೆಯ ಕೋಟು, ಕಪ್ಪು ಉರುಟು ಟೊಪ್ಪಿ, ಹಣೆಯ ಮೇಲೆ ಮೂರು ನಾಮ-ನಮಗೆ ಆಗ ಮನೋರಂಜನೆಯ ವಿರಾಮ !

ಮೊದಲ ವರ್ಷ ನಾವು ವಿದ್ಯಾರ್ಥಿಗಳು ಗುರುಗಳ ಜೊತೆಗೆ ಹೋದ ಶೈಕ್ಷಣಿಕ ಪ್ರವಾಸ ಅವಿಸ್ಮರಣೀಯ. ಪ್ರೊಫೆಸರ್‌ ಮತ್ತು ಲಕ್ಕಪ್ಪ ಗೌಡರ ಜೊತೆಗೆ ನಾವು ಮೊದಲು ಹೋದದ್ದು ಮೈಸೂರಿಗೆ. ಅಲ್ಲಿ ಪ್ರಬುದ್ಧಕರ್ನಾಟಕ ಪತ್ರಿಕೆಯ ಚಿನ್ನದ ಹಬ್ಬದಲ್ಲಿ ಭಾಗವಹಿಸಿದ್ದು ಒಂದು ಅಪೂರ್ವ ಅವಕಾಶ. ಮೊದಲ ಬಾರಿ ಕನ್ನಡದ ಹಿರಿಯ ಸಾಹಿತಿಗಳನ್ನು ಕಂಡದ್ದು ಮತ್ತು ಅವರ ಮಾತುಗಳನ್ನು ಕೇಳಿದ್ದು ನನ್ನ ಪಾಲಿಗೆ ಸುವರ್ಣ ಅವಕಾಶ. ಎಸ್‌ವಿಪಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅದ್ಭುತವಾಗಿ ಮಾತಾಡಿದರು. ತಮ್ಮ ಉಪ್ಪುಕಡಲು ಸಂಕಲನದ ವಚನಗಳನ್ನು ಓದುತ್ತ, “ಅವು ಮಂಗಳೂರಿನ ಬಾವುಟಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಹೊರಹೊಮ್ಮಿದ ವಚನಗಳು’ ಎಂದಾಗ ನಮಗೆ ಹರ್ಷ ಮತ್ತು ಹೆಮ್ಮೆ. ನಮಗೆ ಮೈಸೂರು ಮೃಗಾಲಯ, ಅರಮನೆ ಎಲ್ಲ ತೋರಿಸಿದರು. ಕುಕ್ಕರನಹಳ್ಳಿ ಕೆರೆಯಲ್ಲಿ ದೋಣಿ ಪ್ರಯಾಣ ಮಾಡಿದಾಗ ಸಹಪಾಠಿ ಎನ್‌. ಜಿ. ಪಟವರ್ಧನ್‌, ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಕುವೆಂಪು ಹಾಡನ್ನು ಹಾಡಿದರು. ನಾವು ದನಿಗೂಡಿಸಿದೆವು, ಪ್ರೊಫೆಸರ್‌ ತಲೆದೂಗಿದರು. ಮುಂದೆ ಶಿವನಸಮುದ್ರ ಜಲಪಾತದ ರಮಣೀಯ ದೃಶ್ಯದ ಸೊಬಗನ್ನು ಸವಿದೆವು. ಬಳಿಕ ನಮ್ಮ ಪ್ರವಾಸ ಶ್ರವಣಬೆಳಗೊಳಕ್ಕೆ. ಪ್ರೊಫೆಸರ್‌ ಅವರು ಹುಡುಗರ ಹಾಗೆ ಬೆಟ್ಟ ಹತ್ತುವುದನ್ನು ನೋಡುವುದೇ ನಮಗೆ ಅಚ್ಚರಿ ಮತ್ತು ಆನಂದ. ಮುಂದಕ್ಕೆ ನಾವು ಹೋದದ್ದು ಬೇಲೂರು-ಹಳೆಬೀಡುಗಳಿಗೆ. ಸೋಮನಾಥ ದೇವಾಲಯದ ಮುಂದೆ ಕುವೆಂಪು ಅವರ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕವನವನ್ನು ವಿದ್ಯಾರ್ಥಿಗಳು ಹಾಡಿದರು; ಪ್ರೊಫೆಸರ್‌ ಅದರ ವಿವರಣೆ ಕೊಟ್ಟರು. ಹಿರಿಯ ಸಾಹಿತಿ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಜೊತೆಗೆ ಸ್ನೇಹಿತರ ಹಾಗೆ ಬೆರೆತ ಆ ಪ್ರವಾಸದ ನೆನಪುಗಳು ಮನೋದೇಗುಲದ ಸಾಲಭಂಜಿಕೆಗಳು. 

ಮಂಗಳಗಂಗೋತ್ರಿಯ ಅಂಗಳಕ್ಕೇರಿ ಒಂದು ಸುತ್ತು ಮುಗಿಸಿ ಮತ್ತೆ ಪ್ರೊಫೆಸರ್‌ ಮತ್ತು ಲಕ್ಕಪ್ಪ ಗೌಡರ ಸಾರಥ್ಯದಲ್ಲಿ ಮಂಗಳತೇರಿನ ಹಿಂದೆ ಕನ್ನಡ ರಥದ ಇನ್ನೊಂದು ಸುತ್ತಿಗೆ ಮಿಣಿಯನ್ನು ಹಿಡಿದೆವು ಜುಲೈ 1969ರಲ್ಲಿ. ನಮ್ಮ ಜೊತೆಗೆ ತೇರು ಎಳೆಯಲು ಕೈಜೋಡಿಸಲು ಬರುವ ತಮ್ಮ ತಂಗಿಯರಿಗೆ ಕಾತರದಿಂದ ಕಾಯುತ್ತಿದ್ದೆವು. ನಾವು ನೋಡುನೋಡುತ್ತಿದ್ದಂತೆಯೇ ಬಂದರು ಸಾಲು ಸಾಲಾಗಿ  ಮೂವತ್ತೂಂದು ಕನ್ನಡದ ಕಿಂಕರರು ನಾಡಿನ ಮೂಲೆ ಮೂಲೆಗಳಿಂದ. ನಮಗೆ ಬೆರಗು ಸಂಭ್ರಮ; ಎಸ್ವಿಪಿ ಕಿಂದರಿಜೋಗಿಯ ಮಾಂತ್ರಿಕ ಶಕ್ತಿಯ ಬಗ್ಗೆ ಅಭಿಮಾನ! 

ಅಂತಿಮ ಕನ್ನಡ ಎಂಎಯ ಅಧ್ಯಯನಕ್ಕೆ ನಮಗೆ ಇದ್ದ ಪತ್ರಿಕೆಗಳು: 1. ಛಂದಸ್ಸು ಮತ್ತು ಗ್ರಂಥಸಂಪಾದನೆ  2. ವಿಶೇಷ ಸಾಹಿತ್ಯಪ್ರಕಾರ: ವಚನ ಸಾಹಿತ್ಯ 3. ಭಾರತೀಯ ಕಾವ್ಯಮೀಮಾಂಸೆ ಮತ್ತು ಸಾಹಿತ್ಯವಿಮರ್ಶೆ  4. ತೌಲನಿಕ ದ್ರಾವಿಡ ಭಾಷಾವಿಜ್ಞಾನ. 

ಪ್ರೊಫೆಸರ್‌ ಅವರು ಭಾರತೀಯ ಕಾವ್ಯಮೀಮಾಂಸೆ ಜೊತೆಗೆ ವಚನಸಾಹಿತ್ಯದ ಕೆಲವು ಪಠ್ಯಗಳನ್ನು, ಲಕ್ಕಪ್ಪ ಗೌಡರು ಛಂದಸ್ಸು, ಸಾಹಿತ್ಯವಿಮರ್ಶೆ ಮತ್ತು ಕೆಲವು ವಚನಸಾಹಿತ್ಯದ ಪಠ್ಯಗಳನ್ನು ಪಾಠಮಾಡುತ್ತಿದ್ದರು. ಉಳಿದ ಪಾಠಗಳಿಗೆ ಹೊಸ ಅಧ್ಯಾಪಕರ ನಿರೀಕ್ಷೆಯಲ್ಲಿ ಇದ್ದೆವು. ಆದರೆ, ಯಾರೂ ಬಂದಿರಲಿಲ್ಲ. ಮಂಜುನಾಥ ಭಟ್ಟರ ಸಂಸ್ಕೃತ ಪಾಠ ಮುಂದುವರಿದಿತ್ತು. 

31 ಮಂದಿ ಪ್ರಥಮ ಎಂ.ಎ.ಗೆ ಸೇರಿದ್ದು ಸಂಭ್ರಮದ ಜೊತೆಗೆ ಕೆಲವು ಸಮಸ್ಯೆಗಳನ್ನೂ ತಂದಿತು. ಆ ಹಳೆಯ ಕಟ್ಟಡದಲ್ಲಿ ಇದ್ದ ಎರಡು ಕೋಣೆಗಳು ಚಿಕ್ಕವು. ಅವುಗಳಲ್ಲಿ ಇಷ್ಟುಮಂದಿ ಕುಳಿತುಕೊಳ್ಳಲು ಸಾಧ್ಯ ಇರಲಿಲ್ಲ. ಆದರೆ, ಪ್ರೊಫೆಸರ್‌ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಶಕ್ತಿ ಇದ್ದವರು. ಪೋರ್ಟಿಕೋದಲ್ಲಿ ಕಾರಿಡಾರ್‌ ಸ್ಥಳವನ್ನೂ ಬಳಸಿಕೊಂಡು ತರಗತಿ ನಡೆಸಲು ವ್ಯವಸ್ಥೆ ಮಾಡಲಾಯಿತು. ಅಧ್ಯಾಪಕರ ಪ್ಲೇಟ್‌ಫಾರ್ಮ್, ಮೇಜು-ಕುರ್ಚಿಗಳನ್ನು ಎರಡು ಕಾರಿಡಾರ್‌ಗಳು ಸೇರುವ ಮೂಲೆಯಲ್ಲಿ ಇಟ್ಟು, ಎರಡೂ ಕಡೆ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕುರ್ಚಿ-ಮೇಜು ಹಾಕಲಾಯಿತು. ಒಂದು ರೀತಿಯಲ್ಲಿ ಅದು ಆಲಯ ಬಯಲು ಆಗುವ ಸೊಬಗು. ತರಗತಿಗೆ ಗೋಡೆಗಳು ಇಲ್ಲದ್ದರಿಂದ ಹೊರಗಿನ ಗಾಳಿ ಬೆಳಕು, ಕೆಲವೊಮ್ಮೆ ಬಿಸಿಲು ಕೂಡಾ ಧಾರಾಳ. ಆದರೆ ಕೆಳಗೆ ರಸ್ತೆಯಲ್ಲಿ ಬೈಕ್‌ ಲಾರಿಗಳ ಶಬ್ದವಾದಾಗ ಪಾಠಕ್ಕೆ ಕಿರುವಿರಾಮ. ಅಧ್ಯಾಪಕರಿಗೆ ಮಾತ್ರ ತಮ್ಮ ಕತ್ತನ್ನು ತಿರುಗುವ ಫ್ಯಾನ್‌ನಂತೆ ಅರ್ಧಚಂದ್ರಾಕಾರವಾಗಿ ತಿರುಗಿಸುವ ವ್ಯಾಯಾಮ!  

ನಮ್ಮ ಎಂ.ಎ. ಅಂತಿಮ ವರ್ಷದ ಮೊದಲನೆಯ ಶೈಕ್ಷಣಿಕ ಅವಧಿ ಮುಗಿದಾಗ ನವಂಬರದಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ಹರಿದಾಸಸಾಹಿತ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿದ್ದ ಗುಂಡ್ಮಿ ಚಂದ್ರಶೇಖರ ಐತಾಳರು ಕನ್ನಡವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದರು. ಐತಾಳರು ನಮಗೆ ದ್ರಾವಿಡ ಭಾಷಾವಿಜ್ಞಾನ ಮತ್ತು ಗ್ರಂಥಸಂಪಾದನೆ ವಿಷಯಗಳನ್ನು ಬೋಧಿಸಿದರು. ವಚನಸಾಹಿತ್ಯದ ಕೆಲವು ಪಠ್ಯಗಳನ್ನೂ ಪಾಠಮಾಡಿದರು. ದುಂಡಗಿನ ಸುಂದರ ಕೈಬರಹ, ವಿಷಯಗಳನ್ನು ನಿಧಾನವಾಗಿ ಸರಳವಾಗಿ ಸ್ಪಷ್ಟವಾಗಿ ವಿವರಿಸುವ ಉತ್ತಮ ಸಂವಹನದ ಶೈಲಿ, ನಡುವೆ ಹಾಸ್ಯದ ತುಣುಕುಗಳು ಐತಾಳರ ಅನನ್ಯತೆ. ದ್ರಾವಿಡಭಾಷಾವಿಜ್ಞಾನದಂತಹ ಶಾಸ್ತ್ರವಿಷಯವನ್ನು ವಿದ್ಯಾರ್ಥಿಗಳಿಗೆ ದ್ರಾಕ್ಷಾಪಾಕದಂತೆ ಅನುಭವಿಸುವಂತೆ ಮಾಡುವ ಅವರ ಬೋಧನಾ ವಿಧಾನ ಅಪೂರ್ವ. ಅವರು ಕೇವಲ ನಾಲ್ಕು ತಿಂಗಳು ಮಾತ್ರ ನಮಗೆ ಪಾಠಮಾಡಿದರೂ ಅವರ ಶಾಸ್ತ್ರಪಾಠದ ಅನುಭವ ವಿಶೇಷ  ಪರಿಣಾಮಕಾರಿ.

ಪ್ರೊಫೆಸರ್‌ ಎಸ್‌ವಿಪಿಯವರು ಕನ್ನಡವಿಭಾಗದಲ್ಲಿ ನಡೆಸಿದ ಇನ್ನೊಂದು ಅಪೂರ್ವ ಪ್ರಯೋಗ “ಮನೆಮನೆಗೆ ಸರಸ್ವತಿ’. ಅವರ ನೇತೃತ್ವದಲ್ಲಿ ಕನ್ನಡವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು 1969 ನವಂಬರ ಕೊನೆಯ ವಾರ ಮತ್ತು ದಶಂಬರ ಮೊದಲನೆಯ ವಾರ, ಹದಿನೈದು ದಿನಗಳ ಕಾಲ ಚೀಲಗಳಲ್ಲಿ ಕನ್ನಡ ಪುಸ್ತಕಗಳನ್ನು ತುಂಬಿಕೊಂಡು ಮನೆಮನೆಗೆ, ಅಂಗಡಿಯಂಗಡಿಗೆ ಹೋಗಿ, ಪುಸ್ತಕಗಳನ್ನು ಮಾರಾಟಮಾಡಿದೆವು. ಪುಸ್ತಕಪ್ರಕಾಶಕರಿಂದ ಪುಸ್ತಕಗಳನ್ನು ತರಿಸಿಕೊಂಡು ಮಾರಾಟಮಾಡಿ, ಕಮಿಷನ್‌ ಕಳೆದು, ಹಣವನ್ನು ಪ್ರಕಾಶಕರಿಗೆ/ಲೇಖಕರಿಗೆ ಕಳುಹಿಸಿಕೊಟ್ಟದ್ದು ಒಂದು ಸಾಂಸ್ಕೃತಿಕ ದಾಖಲೆ. 

ಕರಂಗಲಪಾಡಿಯ ನಮ್ಮ ಕನ್ನಡವಿಭಾಗದಿಂದ ಹೊರಟು, ಕೊಡಿಯಾಲ್‌ಬೈಲ್‌, ಮಣ್ಣಗುಡ್ಡೆ, ಲಾಲ್‌ಬಾಗ್‌, ಕದ್ರಿಕಂಬಳ, ಬಿಜೈ, ಉರ್ವದವರೆಗೆ ದಾರಿಯಲ್ಲಿ ಕಂಡ ಕಂಡ ಮನೆಗಳಿಗೆ ಸಿಕ್ಕ ಸಿಕ್ಕ ಅಂಗಡಿಗಳಿಗೆ ಪ್ರವೇಶಿಸಿ, ನಮ್ಮ ಉದ್ದೇಶವನ್ನು ವಿವರಿಸಿ ಪುಸ್ತಕ ಮಾರಾಟ ಮಾಡಿದೆವು. ಬಹುತೇಕ ಎಲ್ಲ ಕಡೆ ನಮಗೆ ಒಳ್ಳೆಯ ಸ್ವಾಗತ ಮತ್ತು ಪ್ರತಿಕ್ರಿಯೆ ದೊರೆಯಿತು. ಲಾಲ್‌ಬಾಗ್‌ನ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಕಂಪೌಂಡಿನೊಳಗೆ ನೆರಳಿಗೆ ಬಂದಾಗ, ಬಿಸಿಲಿನಲ್ಲಿ ನಡೆದು ಬಸವಳಿದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತು! ನಮ್ಮ ಪುಸ್ತಕ ಅಭಿಯಾನದಲ್ಲಿ ಅನೇಕ ಸ್ವಾರಸ್ಯಕರ ಪ್ರಸಂಗಗಳೂ ನಡೆದುವು. ಒಂದು ಗಡಂಗು (ಸಾರಾಯಿ ಅಂಗಡಿ)ವಿಗೆ ನುಗ್ಗಿ, ಪುಸ್ತಕ ಕೊಡಲು ಹೋದಾಗ, ಅಲ್ಲಿದ್ದವರು ತುಳುವಿನಲ್ಲಿ ಹೇಳಿದರು: “”ಇಂದ್‌ ಗಡಂಗ್‌. ಈಡೆ ಪರಿಯೆರೆ ಬರ್ಪುನಕುಲು ಅತ್ತಂದೆ ಬೂಕು ಓದಿಯೆರೆ ಬರ್ಪುಜೆರ್‌ (ಇದು ಸಾರಾಯಿ ಅಂಗಡಿ. ಇಲ್ಲಿ ಕುಡಿಯಲು ಬರುವವರೇ ಹೊರತು, ಪುಸ್ತಕ ಓದಲು ಬರುವುದಿಲ್ಲ.) ಪ್ರೊಫೆಸರ್‌, “ಏನು ವಿಷಯ?’ ಎಂದು ಕೇಳಿದರು. ನಾವು ಕನ್ನಡದಲ್ಲಿ ವಿವರಿಸಿದೆವು. “ಹಾಗಾದರೆ ಅವರಿಗೆ ರಾಜರತ್ನಂ ಅವರ ರತ್ನನ ಪದಗಳು ಪುಸ್ತಕ ಕೊಡಿರಿ. ಅದರ ಎಂಡುRಡ್ಕನ ಪದಗಳನ್ನು ಓದಲಿ’ ಎಂದರು ಪ್ರೊಫೆಸರ್‌! ನಾವು ಅವರಿಗೆ ಒತ್ತಾಯಪೂರ್ವಕ ರತ್ನನ ಪದಗಳು ಪುಸ್ತಕ ಕೊಟ್ಟು ಹಣ ತೆಗೆದುಕೊಂಡೆವು. ಅಲ್ಲಿಂದ ಹೊರಡುತ್ತಲೇ ವಿದ್ಯಾರ್ಥಿಗಳ ಹಾಡು ಸುರುವಾಯಿತು: ಯೆಂಡ ಯೆಂಡ್ತಿ ಕನ್ನಡ ಪದಗೊಳ್‌ ಅಂದ್ರೆ ರತ್ನಂಗ್‌ ಪ್ರಾಣ! ಬುಂಡೇನ್‌ ಎತ್ತಿ ಕುಡದ್ಬುಟ್ಟಾಂದ್ರೆ  ತಕ್ಕೊ! ಪದಗೊಳ್‌ ಬಾಣ!

ಎಸ್‌ವಿಪಿ ಅವರು ಸ್ನಾತಕೋತ್ತರ ಕನ್ನಡವಿಭಾಗದಲ್ಲಿ “ಮಂಗಳಗಂಗೋತ್ರಿ ಕನ್ನಡಸಂಘ’ವನ್ನು ಕಟ್ಟಿ, ಅಧ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕರಾವಳಿ ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿಯ ಹೊಸಯುಗವನ್ನು ಆರಂಭಿಸಿದರು. ಕವಿ ಪೂಜೆ, ಸಾಹಿತಿಗಳ ಭಾವಚಿತ್ರ ಅನಾವರಣ, ಸಾಹಿತಿಗಳನ್ನು ಕುರಿತ ಉಪನ್ಯಾಸಗಳು, ಸಾಹಿತಿ ಕಲಾವಿದರ ಸನ್ಮಾನ, ವಿದ್ವತ್‌ ಉಪನ್ಯಾಸಗಳು, ಗ್ರಂಥ ಪ್ರಕಾಶನ ಮತ್ತು ಪುಸ್ತಕ ಬಿಡುಗಡೆ, ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ, ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಬಯಲಾಟ ಸ್ಪರ್ಧೆ- ಹೀಗೆ ಹತ್ತು ಹಲವು ಸಾಹಿತ್ಯ ಸಂಸ್ಕೃತಿಯ ನಿತ್ಯೋತ್ಸವಗಳು. ಅಲ್ಲಿ ಅನುರಣಿಸುತ್ತಿತ್ತು ಸಾಹಿತ್ಯ ಸಂಸ್ಕೃತಿ ಸಂವಾದ, ಮೊಳಗುತ್ತಿತ್ತು ಚೆಂಡೆಮದ್ದಳೆಗಳ ನಾದ.

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.