ಆಧಾರ್: ಕೇಂದ್ರಕ್ಕೆ 58,439 ಕೋ.ರೂ. ಉಳಿತಾಯ!
Team Udayavani, Oct 14, 2017, 8:55 AM IST
ವಾಷಿಂಗ್ಟನ್: ಭಾರತ ಸರಕಾರ ಹೊರತಂದ ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆಯಿಂದಾಗಿ (ಆಧಾರ್) ಬೊಕ್ಕಸಕ್ಕೆ 58,439 ಕೋಟಿ ರೂ. ಉಳಿತಾಯವಾಗಿದೆ ಎಂದು ಆಧಾರ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ, ಇನ್ಫೋಸಿಸ್ನ ಕಾರ್ಯನಿರ್ವಾಹ ಕೇತರ ಅಧಿಕಾರಿ ನಂದನ್ ನಿಲೇಕಣಿ ಹೇಳಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಯೋಜನೆ ಜಾರಿಯಾಗಿದ್ದು, ಇದನ್ನು ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅತ್ಯುತ್ಸಾಹದಿಂದ ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ. ನಿಲೇಕಣಿ ಅವರು ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಆಯೋಜಿಸಿದ್ದ ಅಭಿವೃದ್ಧಿಗಾಗಿ ಡಿಜಿಟಲ್ ಅರ್ಥವ್ಯವಸ್ಥೆ ಚರ್ಚಾಕೂಟದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಆಧಾರ್ನಲ್ಲಿ ಇಂದು ಕೋಟ್ಯಂತರ ಮಂದಿ ನೋಂದಾವಣೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಸಬ್ಸಿಡಿ ಸೋರಿಕೆಯನ್ನು ತಡೆಗಟ್ಟುವುದು ಸಾಧ್ಯವಾಗಿದೆ. ಇದರಿಂದ ನಕಲಿ ಫಲಾನುಭವಿಗಳು, ಸಿಬಂದಿಗಳ ಪಟ್ಟಿಯನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ. ಆಧಾರ್ ವ್ಯವಸ್ಥೆ ಜಾರಿಗೆ ಬಂದ ಬಳಿಕ 77,910 ಕೋಟಿ ರೂ. ಗಳನ್ನು ಡಿಜಿಟಲ್ ರೂಪದಲ್ಲಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಸರಿಯಾದ ಡಿಜಿಟಲ್ ಮೂಲಸೌಕರ್ಯವನ್ನು ಸ್ಥಾಪಿಸಿದ್ದೇ ಆದಲ್ಲಿ ಅದರಿಂದ ವ್ಯವಸ್ಥೆ ಅಭಿವೃದ್ಧಿಯೆಡೆಗೆ ಭಾರೀ ಮಟ್ಟದಲ್ಲಿ ದಾಪುಗಾಲಿಕ್ಕುವುದಕ್ಕೆ ಸಾಧ್ಯವಾಗಲಿದೆ ಎಂಬ ನಂಬಿಕೆ ನನ್ನದಾಗಿದೆ ಎಂದವರು ಹೇಳಿದ್ದಾರೆ. ವಿಶ್ವಬ್ಯಾಂಕ್ನ ಈ ಚರ್ಚಾಕೂಟದಲ್ಲಿ 15-20 ದೇಶಗಳ ಅತ್ಯುನ್ನತ ಪ್ರತಿ ನಿಧಿಗಳು ಭಾಗಿಯಾಗಿದ್ದು, ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.