ಶಾಸಕರ ಖರೀದಿ, ಬಿಜೆಪಿ ಹಣಬಲದಿಂದ ಜನಾದೇಶಕ್ಕೆ ಸೋಲು: ರಾಹುಲ್ ಗಾಂಧಿ
Team Udayavani, Mar 14, 2017, 5:01 PM IST
ನವದೆಹಲಿ:ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ವಿರುದ್ಧದ ಜನಾದೇಶವನ್ನು ಸ್ವೀಕರಿಸುವುದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಪ್ರತಿಕ್ರಿಯೆ ನೀಡಿದ್ದು, ಪಕ್ಷದೊಳಗೆ ರಚನಾತ್ಮಕ ಬದಲಾವಣೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ರಾಹುಲ್ ಗಾಂಧಿ, ನಾವು ವಿರೋಧಪಕ್ಷದಲ್ಲಿದ್ದೇವೆ. ಸೋಲು, ಗೆಲುವು ಇದ್ದೇ ಇರುತ್ತೆ. ಹಾಗಾಗಿ ಉತ್ತರಪ್ರದೇಶದಲ್ಲಿ ನಮಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ. ಜನಾದೇಶವನ್ನು ನಾವು ಸ್ವೀಕರಿಸುತ್ತೇವೆ ಎಂದರು.
ಬಿಜೆಪಿ ಜೊತೆಗೆ ನಮ್ಮದು ಸೈದ್ಧಾಂತಿಕ ಹೋರಾಟ, ಆ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದ ರಾಹುಲ್, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 2 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನಾವು 3 ರಾಜ್ಯಗಳಲ್ಲಿ ಜಯ ಸಾಧಿಸಿದ್ದೇವೆ. ಆದರೆ ಹಣಬಲದಿಂದ ಬಿಜೆಪಿ ಗೋವಾ ಮತ್ತು ಮಣಿಪುರದಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.