ಭುಗಿಲೆದ್ದ ಅಸ್ಸಾಂ ಸಮರ, ಸರಕಾರ-ವಿಪಕ್ಷಗಳ ನಡುವೆ ವಾಗ್ಯುದ್ಧ
Team Udayavani, Aug 1, 2018, 10:56 AM IST
ಹೊಸದಿಲ್ಲಿ: ಅಸ್ಸಾಂನಲ್ಲಿನ ನಿಜವಾದ ನಾಗರಿಕರ ಗುರುತಿಸುವಿಕೆ ಪ್ರಕ್ರಿಯೆಯಾದ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ಆರ್ಸಿ) ಕರಡು ಪಟ್ಟಿ ಭಾರೀ ಸಂಚಲನವನ್ನೇ ಹುಟ್ಟುಹಾಕಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಸಮರಕ್ಕೂ ನಾಂದಿ ಹಾಡಿದೆ.
ಇಡೀ ಪ್ರಕ್ರಿಯೆಯನ್ನು ಯುಪಿಎ ಸರಕಾರದ ಅವಧಿಯಲ್ಲೇ ಶುರು ಮಾಡಿರುವುದರಿಂದ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರಕಾರದ ವಿರುದ್ಧ ತಿರುಗಿಬಿದ್ದಿ ದ್ದಾರೆ. 40 ಲಕ್ಷ ವಲಸಿಗರನ್ನು ಗುರುತಿಸಿರುವ ಈ ವರದಿಯಿಂದಾಗಿ ಆಂತರಿಕ ಯುದ್ಧ ಮತ್ತು ರಕ್ತಪಾತವೇ ಜರುಗೀತು ಎಂದು ಎಚ್ಚರಿಕೆ ನೀಡಿದ್ದಾರೆ. ಮಮತಾಗೆ ಎದಿರೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಈ ವಿಚಾರದಲ್ಲಿ ವಿಪಕ್ಷಗಳ ನಿಲುವು ಏನು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಇದಷ್ಟೇ ಅಲ್ಲ, ನೀವು ಜನರ ಹಕ್ಕಿನ ಬಗ್ಗೆ ಮಾತನಾಡುವಾಗ ಅಸ್ಸಾಮಿಗರು ನೆನಪಾಗಲಿಲ್ಲವೇ? ಬಾಂಗ್ಲಾದೇಶದ ಅಕ್ರಮ ವಲಸಿಗರಿಂದಾಗಿಯೇ ಲಕ್ಷಾಂತರ ಅಸ್ಸಾಮಿಗರು ಉದ್ಯೋಗ ಕಳೆದುಕೊಂಡಿದ್ದಾರೆ. ಎನ್ಆರ್ಸಿಯು ಅಸ್ಸಾಂ ಒಪ್ಪಂದದ ಭಾಗವಾಗಿದ್ದು, ಭಾರತೀಯರ ಹಕ್ಕುಗಳನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ. ಜತೆಗೆ, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅಸ್ಸಾಂ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ದೇಶ ವಿಭಜಿಸಲು ತಂತ್ರ: ನಾಗರಿಕರ ರಾಷ್ಟ್ರೀಯ ನೋಂದಣಿ ಕರಡು ಪಟ್ಟಿ ಬಹಿರಂಗ ಮಾಡುವ ಮೂಲಕ ಬಿಜೆಪಿ ದೇಶವನ್ನು ವಿಭಜಿಸಲು ನೋಡುತ್ತಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಆದರೆ, ಬಿಜೆಪಿಯ ಇಂಥ ಯಾವುದೇ ತಂತ್ರಗಳು ನಡೆಯುವುದಕ್ಕೆ ಬಿಡುವುದಿಲ್ಲ ಎಂದೂ ಮಮತಾ ಹೇಳಿದ್ದಾರೆ. ಸಂಜೆ ಮಮತಾ ಅವರು ಗೃಹ ಸಚಿವ ರಾಜನಾಥ್ ಸಿಂಗ್ರನ್ನು ಭೇಟಿ ಮಾಡಿ, ಅಂತಿಮ ವರದಿ ಬಿಡುಗಡೆ ಮಾಡದಂತೆ ಕೋರಿ ಕೊಂಡಿದ್ದಾರೆ.
ಯಾವುದೇ ನಿರ್ಣಯ ಬೇಡ
ಅಸ್ಸಾಂನ ನಾಗರೀಕರ ರಾಷ್ಟ್ರೀಯ ನೋಂದಣಿಯ ಕರಡು ಪಟ್ಟಿಯ ಅಂಶಗಳ ಅನುಸಾರ ಯಾವುದೇ ನಿರ್ಣಯ ಜಾರಿ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರಗಳಿಗೆ ಸೂಚನೆ ನೀಡಿದೆ. ಇದರ ಅಂತಿಮ ವರದಿ ಬರಲಿ, ಅಲ್ಲಿವರೆಗೆ ಈಗ ಗುರುತಿಸಲಾಗಿರುವ 40 ಲಕ್ಷ ಅಕ್ರಮ ವಲಸಿಗರಲ್ಲಿ ಯಾರನ್ನೂ ದೇಶದಿಂದ ಹೊರಗೆ ಹಾಕುವುದು ಅಥವಾ ಅವರ ವಿರುದ್ಧ ವಿಚಾರಣೆ ನಡೆಸುವುದನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ವರದಿ ಅನುಸಾರ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಆ.16 ರಂದು ವರದಿ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮಧ್ಯೆ, ಇಡೀ ಕರಡು ಪಟ್ಟಿಯನ್ನು ಎನ್ಆರ್ಸಿ ಸಂಚಾಲಕ ಪ್ರತೀಕ್ ಹಜೇಲಾ ಕೋರ್ಟ್ ಮುಂದೆ ಇಟ್ಟರು. ಜತೆಗೆ ಆ.7 ರಂದು ಇದನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತೇವೆ ಎಂದರು.
ರಾಜ್ಯಸಭೆಯಲ್ಲೂ ಗದ್ದಲ
ಸದನ ಆರಂಭವಾಗುತ್ತಿದ್ದಂತೆ ಟಿಎಂಸಿ ಸದಸ್ಯರು ಎನ್ಆರ್ಸಿ ಪಟ್ಟಿ ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಸರಕಾರವು ಈ ವರದಿ ಯನ್ನು ಸೂಕ್ಷ್ಮ ವಾಗಿ ಮತ್ತು ಮಾನವೀಯ ನೆಲೆಗಟ್ಟಿ ನಲ್ಲಿ ಒಪ್ಪಿಕೊಳ್ಳ ಬೇಕು ಎಂದು ಆಗ್ರಹಿಸಿದರು. ನಿಜವಾದ ಭಾರ ತೀಯ ಈ ಪಟ್ಟಿಯಿಂದ ಹೊರಗುಳಿಯುವಂತೆ ಮಾಡ ಬಾರದು ಎಂದೂ ಹೇಳಿದರು. ಭಾರತ, ಬಾಂಗ್ಲಾ ದೇಶದ ಜತೆ ಉತ್ತಮ ಸಂಬಂಧ ಇರಿಸಿ ಕೊಂಡಿ ರುವುದರಿಂದ ಇದು ಅಂತಾರಾಷ್ಟ್ರೀಯ ಸಮಸ್ಯೆಗೂ ಕಾರಣವಾಗಬಹುದು ಎಂಬ ಎಚ್ಚರಿಕೆ ಯನ್ನೂ ನೀಡಿದರು. ಇದೇ ವೇಳೆ, ಗದ್ದಲವೆಬ್ಬಿಸಿದ ಟಿಎಂಸಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮಿತ್ ಶಾ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ವರದಿ ತಯಾರಿಸಲಾಗಿದೆ ಎಂದರು. ಅಲ್ಲದೆ ಈ ವರದಿ ಒಪ್ಪಿಕೊಳ್ಳಲು ಕಾಂಗ್ರೆಸ್ನವರಿಗೆ ಧೈರ್ಯವಿಲ್ಲ ಎಂದು ವ್ಯಂಗ್ಯವಾ ಡಿದರು. ಅಸ್ಸಾಂ ಸಂಸದ ಬಿಸ್ವಜಿತ್ ಡೈಮರಿ (ಬಿಪಿ ಎಫ್) ಮಾತನಾಡಿ, ಕೆಲ ತಾಂತ್ರಿಕ ತೊಂದರೆಯಿಂ ದಾಗಿ ಹೆಸರುಗಳು ಬಿಟ್ಟು ಹೋಗಿವೆ. ಮುಂದೆಯೂ ಹೆಸರು ಸೇರಿಸಲು ಅವಕಾಶವಿದೆ. ಸರಿಯಾದ ದಾಖಲೆ ನೀಡಿದರೆ ಸೇರಿಕೊಳ್ಳಬಹುದು ಎಂದರು.
ಕಾಂಗ್ರೆಸ್ನಲ್ಲಿ ಗೊಂದಲ
ಈ ಪಟ್ಟಿ ವಿರೋಧಿಸಬೇಕೇ, ಒಪ್ಪಿಕೊಳ್ಳಬೇಕೇ ಎಂಬ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಗೊಂದಲವಿದೆ. ಏಕೆಂದರೆ, ಅಸ್ಸಾಂನ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ತರುಣ್ ಗೊಗೋಯ್ ಬಹಿರಂಗವಾಗಿಯೇ ಎನ್ಆರ್ಸಿ ತಮ್ಮದೇ ಐಡಿಯಾ ಎಂದು ಸಾರಿಬಿಟ್ಟಿದ್ದಾರೆ. ಅಸ್ಸಾಂ ಒಪ್ಪಂದದಲ್ಲಿ ಇದು ಇರಲೇ ಇಲ್ಲ, ನಾನೇ ಇದನ್ನು ಶುರು ಮಾಡಿದ್ದು. ಬಳಿಕ ಇದಕ್ಕೆ ಸುಪ್ರೀಂಕೋರ್ಟ್ನ ಮೇಲ್ವಿಚಾರಣೆ ಸಿಕ್ಕಿತು ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಉಳಿದ ನಾಯಕರು ಈ ವರದಿ ವಿಚಾರದಲ್ಲಿ ಅಳೆದು ತೂಗಿ ಹೇಳಿಕೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು