ಅಯೋಧ್ಯೆ ಟೌನ್ ಶಿಪ್ ಗೆ ಬೇಕಾಗಿದೆ ಇನ್ನಷ್ಟು ಜಾಗ: ಹೇಗಿರಲಿದೆ ಗೊತ್ತಾ ಟೌನ್ ಶಿಪ್
Team Udayavani, Nov 17, 2019, 5:20 PM IST
ಅಹಮದಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದನಂತರ ಮಂದಿರ ನಿರ್ಮಾಣದ ರೂಪುರೇಷೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಮಂದಿರ ಹೇಗಿರಲಿದೆ ಎಂಬುದರ ಬಗ್ಗೆ 30 ವರ್ಷಗಳ ಹಿಂದೆಯೇ ನೀಲನಕ್ಷೆ ರೂಪಿಸಿದ್ದ ಚಂದ್ರಕಾಂತ್ ಸೋಂಪುರ ಅಯೋಧ್ಯೆ ಟೌನ್ ಶಿಪ್ ಗೆ ಇನ್ನಷ್ಟು ಜಾಗ ಬೇಕಾಗಿದೆ ಎಂದಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೋಂಪುರ, ಸದ್ಯ ಅಯೋಧ್ಯೆ ಟೌನ್ ಶಿಪ್ ನಲ್ಲಿ ಮಂದಿರದೊಂದಿಗೆ ಭೋಜನ ಗೃಹ, ಭೋಗ್ ಶಾಲಾ, ಅರ್ಚಕರ ಕ್ವಾರ್ಟ್ರಸ್ ಮತ್ತು ಯಾತ್ರಿಕರ ಭವನವನ್ನು ಸೇರಿಸಲಾಗಿದೆ. ಇದರೊಂದಿಗೆ ಹೋಟೆಲ್ ಗಳು ಮತ್ತು ಆಸ್ಪತ್ರೆಯನ್ನು ಕಟ್ಟಿಸುವ ಅಗತ್ಯವಿದೆ. ಆಗ ಟೌನ್ ಶಿಪ್ ಸಂಪೂರ್ಣವಾಗುತ್ತದೆ. ಇದಕ್ಕಾಗಿ ಇನ್ನಷ್ಟು ಜಾಗದ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಮ ಮಂದಿರದ ನೀಲನಕ್ಷೆಯ ಬಗ್ಗೆ ಮಾತನಾಡಿದ ಅವರು, ಭವ್ಯ ಮಂದಿರ 250 ಕಂಬಗಳನ್ನು ಹೊಂದಿರಲಿದ್ದು, ಪ್ರತಿ ಕಂಬದಲ್ಲಿ ರಾಮನ ಸುಮಾರು 16 ಮೂರ್ತಿಗಳಿರಲಿವೆ. ಗರ್ಭಗೃಹದಲ್ಲಿನ ರಾಮಲಲ್ಲಾನ ಮೂರ್ತಿ ಸುಮಾರು ಏಳು ಅಡಿ ಉದ್ದವಿರಲಿದೆ ಎಂದು ಹೇಳಿದರು.