ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !
Team Udayavani, Dec 1, 2020, 7:46 AM IST
ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ(ನ.30) “ನಿರ್ಣಾಯಕ ಹೋರಾಟಕ್ಕೆ” ದೆಹಲಿಗೆ ಬಂದಿರುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದೆ.
ದೆಹಲಿ-ಎನ್ಸಿಆರ್ ಗಡಿಯಲ್ಲಿ ರೈತರ ಪ್ರತಿಭಟನೆಯು ಮುಂದುವರಿದಿದ್ದರಿಂದ ಕೇಂದ್ರ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿತು. ಪರಿಣಾಮವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಎರಡು ದಿನಗಳ ಮೊದಲೇ ಮಂಗಳವಾರ ( ಡಿ.1) ರೈತ ಸಂಘವನ್ನು ಮಾತುಕತೆಗೆ ಕರೆದಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಮೊದಲು ಡಿಸೆಂಬರ್ 3 ರಂದು ರೈತರ ಜೊತೆಗಿನ ಮಾತುಕತೆ ನಿಗದಿಯಾಗಿತ್ತು. ಆದರೆ, ರೈತರು ಪ್ರತಿಭಟನೆಯನ್ನು ಮುಂದುವರೆಸಿರುವುದರಿಂದ ಮತ್ತು ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಡಿಸೆಂಬರ್ 3ಕ್ಕೂ ಮೊದಲೇ ಸಚಿವ ತೋಮರ್ ಎಲ್ಲಾ ಕಿಸಾನ್ ಯೂನಿಯನ್ ಗಳನ್ನು ಅಹ್ವಾನಿಸಿದ್ದಾರೆ. ಮಾತ್ರವಲ್ಲದೆ ಕೂಡಲೇ ಪ್ರತಿಭಟನೆಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನ; ಎಚ್ಐವಿ ಸೋಂಕಿನ ವಿರುದ್ಧ ಹೋರಾಡೋಣ
ಏತನ್ಮಧ್ಯೆ, ಪ್ರಧಾನಿ ಮೋದಿ ಮೂರು ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಇವರು, ವಿರೋಧಿಗಳು ತಪ್ಪು ಮಾಹಿತಿಯ ಮೂಲಕ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ವಿರೋಧ ಪಕ್ಷಗಳು ಕೂಡ ಕೇಂದ್ರ ಸರ್ಕಾದ ಮೇಲೆ ಒತ್ತಡ ಹೇರಿದ್ದು, ‘ರೈತರ ಪ್ರಜಾಪ್ರಭುತ್ವ ಹೋರಾಟವನ್ನು ಗೌರವಿಸಿ’ ಮತ್ತು ಜಾರಿಗೊಳಿಸಿರುವ ಕಾನೂನುಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿವೆ.
ಇದನ್ನೂ ಓದಿ: ವ್ಯಾಕ್ಸಿನೇಟರ್ ತಂಡ ರಚಿಸಿ: ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಪತ್ರ