ಉಪಚುನಾವಣೆ: ಕೈಕೊಟ್ಟ ಇವಿಎಂಗಳು
Team Udayavani, May 29, 2018, 6:00 AM IST
ಹೊಸದಿಲ್ಲಿ: ವಿವಿಧ ರಾಜ್ಯಗಳ 4 ಲೋಕಸಭೆ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆದಿದ್ದು, ಕೆಲವು ಕಡೆ ಕಂಡುಬಂದ ಇವಿಎಂ ಲೋಪವು ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಕೈರಾನಾ, ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಮತ್ತು ಪಾಲಾ^ರ್ ಕ್ಷೇತ್ರಗಳಲ್ಲಿ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಇವಿಎಂಗಳು ತಾಂತ್ರಿಕ ಸಮಸ್ಯೆ ತಂದೊಡ್ಡಿವೆ ಎಂದು ಬಿಜೆಪಿ, ಕಾಂಗ್ರೆಸ್, ಎಸ್ಪಿ, ಆರ್ಎಲ್ಡಿ ಪ್ರತಿಪಾದಿಸಿ, ಮರು ಮತದಾನವಾಗಬೇಕೆಂದು ಒತ್ತಾಯಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯೋಗ ಹೆಚ್ಚಿನ ಸಂಖ್ಯೆಯಲ್ಲಿ ಇವಿಎಂಗಳಲ್ಲಿ ದೋಷ ಕಂಡುಬಂದಿದೆ ಎಂಬ ವಾದ ಸರಿಯಲ್ಲ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿನ ಬಿಸಿ ವಾತಾವರಣದಿಂದ ಇವಿಎಂಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಿದೆ.
ಉ.ಪ್ರ.ದಕೈರಾನಾದಲ್ಲಿ ಶೇ.54ರಷ್ಟು ಹಕ್ಕು ಚಲಾವಣೆಯಾಗಿದೆ. ಇಲ್ಲಿ ಬಿಜೆಪಿಗೆ ಆರ್ಎಲ್ಡಿ ಅಭ್ಯರ್ಥಿ ಪ್ರಬಲ ಸ್ಪರ್ಧೆ ನೀಡಿದೆ.ಅದಕ್ಕೆ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಬೆಂಬಲ ನೀಡಿದೆ. ಮಹಾರಾಷ್ಟ್ರದ 2 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್-ಎನ್ಸಿಪಿ ನಡುವೆ ನಿಕಟ ಸ್ಪರ್ಧೆ ಇದೆ.