ರಾಮಮಂದಿರಕ್ಕಾಗಿ ಕಾನೂನು ಜಾರಿಯಾಗಲಿ
Team Udayavani, Oct 20, 2018, 6:00 AM IST
ಹೊಸದಿಲ್ಲಿ: ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಆದಷ್ಟು ಬೇಗ ಕಾನೂನೊಂದನ್ನು ಜಾರಿಗೊಳಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್ಎಸ್ಎಸ್) ಮುಖಂಡ ಮೋಹನ್ ಭಾಗವತ್ ಆಗ್ರಹಿಸಿದ್ದಾರೆ. ಗುರುವಾರ, ನಾಗ್ಪುರದಲ್ಲಿರುವ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “”ರಾಮಮಂದಿರವು ಆತ್ಮಗೌರವದ ಪ್ರತೀಕವಾಗಿದ್ದು, ಮಂದಿರ ನಿರ್ಮಾಣವು ದೇಶದ ಏಕತೆಯ ಪ್ರತೀಕವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆನಂತರ, ಶಬರಿಮಲೆ ವಿಚಾರ ಪ್ರಸ್ತಾಪಿಸಿದ ಅವರು, ಶತಮಾನಗಳಿಂದ ದೇಗುಲದಲ್ಲಿ ಆಚರಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೆ, ಮಹಿಳೆಯರ ಪ್ರವೇಶ ಕೋರಿಕೆಯ ವಿರುದ್ಧ ಸಲ್ಲಿಸಲಾಗಿದ್ದ ಅಹವಾಲುಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಬೇಸರಿಸಿದರು.
ಮಂದಿರ ನಿರ್ಮಾಣಕ್ಕೆ ಸಿದ್ಧ: ಭಾಗವತ್ ಅವರ ರಾಮಮಂದಿರ ಕಾನೂನು ಆಗ್ರಹಕ್ಕೆ ಲಕ್ನೋದಲ್ಲಿ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಮಂದಿರ ನಿರ್ಮಾಣ ವ್ಯಾಜ್ಯಕ್ಕೆ ಸಂಬಂಧಪಟ್ಟವರ ಒಮ್ಮತದ ಅಭಿಪ್ರಾಯ ಅಥವಾ ಸುಪ್ರೀಂ ಕೋರ್ಟ್ ಒಪ್ಪಿಗೆಯೊಂದಿಗೆ ಮಂದಿರ ನಿರ್ಮಾಣಕ್ಕೆ ಈಗಲೂ ನಾವು ಸಿದ್ಧ ಎಂದಿದ್ದಾರೆ.
ಆರ್ಎಸ್ಎಸ್ ಹೊಗಳಿದ ಕೈಲಾಶ್ ಸತ್ಯಾರ್ಥಿ: ದೇಶದ ಪ್ರತಿಯೊಬ್ಬ ಮಕ್ಕಳ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಭದ್ರಕೋಟೆಯನ್ನು ನಿರ್ಮಿಸುವುದು ಆರ್ಎಸ್ಎಸ್ಗೆ ಮಾತ್ರ ಸಾಧ್ಯ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ. ನಾಗ್ಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ದಸರಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ಈ ಹೇಳಿಕೆ ನೀಡಿದ್ದಾರೆ.