ಲಂಚ ಪ್ರಕರಣ: ಪೊಲೀಸ್, ಕಾನ್ಸ್ಟೆಬಲ್ ವಿರುದ್ಧ ಪ್ರಕರಣ ದಾಖಲು
Team Udayavani, Jan 13, 2022, 11:00 PM IST
ಮುಂಬಯಿ: ದಕ್ಷಿಣ ಮುಂಬಯಿಯಲ್ಲಿ ಬಸ್ಗಳನ್ನು ನಿಲ್ಲಿಸಲು ಅನುಮತಿ ನೀಡಲು ಬಸ್ ನಿರ್ವಾಹಕರಿಂದ 3,000 ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತನಿಖೆ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆಜಾದ್ ಮೈದಾನ ಟ್ರಾಫಿಕ್ ಪೊಲೀಸ್ ಶಾಖೆಯ ಉಸ್ತುವಾರಿ ಇನ್ಸ್ಪೆಕ್ಟರ್ ಶೀತಲ್ ಮಹದೇವ್ ಮಾಲ್ಟೆ (39) ಅವರ ಕ್ಯಾಬಿನ್ನಿಂದ 4.81 ಲಕ್ಷ ರೂ.ಗಳನ್ನು ಒಳಗೊಂಡ 10 ಲಕೋಟೆಗಳನ್ನು ವಶಪಡಿಸಿಕೊಂಡಿದೆ. ದೂರಿನ ಆಧಾರದ ಮೇಲೆ ಬುಧವಾರ ಎಸಿಬಿ ಕಾರ್ಯಾಚರಣೆ ನಡೆಸಿದಾಗ ಮಾಲ್ಟೆಯ ಸಹೋದ್ಯೋಗಿ ಕಾನ್ಸ್ಟೆಬಲ್ ತುಷಾರ್ ಕಿಸಾನ್ ಚವಾಣ್ (35) ಲಂಚದ ಮೊತ್ತವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದ ಬಳಿಕ ಆರೋಪಿ ಇನ್ಸ್ಪೆಕ್ಟರ್ ಅನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟೂರ್ ಮತ್ತು ಟ್ರಾವೆಲ್ ವ್ಯವಹಾರ ಹೊಂದಿರುವ ದೂರುದಾರರು ಪ್ರತೀದಿನ ಚೆಂಬೂರ್ನಿಂದ ಕಫ್ ಪರೇಡ್ಗೆ ಎಂಎಂಆರ್ಡಿಎ ಸಿಬಂದಿಯನ್ನು ಕರೆದೊಯ್ಯಲು ಮತ್ತು ಬಿಡಲು ಎರಡು ಬಸ್ಗಳನ್ನು ನಿರ್ವಹಿಸುತ್ತಾರೆ. ಕಳೆದ ಎರಡು ವಾರಗಳಿಂದ ಈ ಪ್ರದೇಶದಲ್ಲಿ ಬಸ್ ನಿಲುಗಡೆ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಬಳಿಕ ಈ ವಿಷಯದ ಬಗ್ಗೆ ಚರ್ಚಿಸಲು ಚವಾಣ್ ಅವರನ್ನು ಭೇಟಿ ಮಾಡಿ ಮಾಲ್ಟೆಯನ್ನು ಭೇಟಿ ಮಾಡುವಂತೆ ಕೇಳಲಾಯಿತು. ಈ ವೇಳೆ ಆರೋಪಿ ಮಾಲ್ಟೆ ಆಜಾದ್ ಮೈದಾನದ ವ್ಯಾಪ್ತಿಯಲ್ಲಿ ಬಸ್ ನಿಲ್ಲಿಸಲು ದೂರುದಾರರಿಂದ ತಿಂಗಳಿಗೆ 3,000 ರೂ. ಬೇಡಿಕೆ ಇರಿಸಿದ್ದರು. ಮಾಲ್ಟೆ ಅವರ ಕ್ಯಾಬಿನ್ನಿಂದ 10 ಲಕೋಟೆಗಳಲ್ಲಿ ಇರಿಸಲಾಗಿದ್ದ 4.81 ಲಕ್ಷ ರೂ. ಹಣವನ್ನು ಎಸಿಬಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.