ನಿನ್ನೆಯ ತನಕ ಶಿವಸೇನೆ..ಇಂದು ಬಿಜೆಪಿ: ಏನಿದು ಶರದ್ ‘ಪವರ್’
Team Udayavani, Nov 23, 2019, 9:03 AM IST
ಮುಂಬೈ: ಮಹಾರಾಷ್ಟ್ರದ ಗದ್ದುಗೆ ಗುದ್ದಾಟಕ್ಕೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ. ಬಿಜೆಪಿ- ಎನ್ ಸಿಪಿ ಮೈತ್ರಿ ಸರಕಾರದಲ್ಲಿ ದೇವೇಂದ್ರ ಫಡ್ನವೀಸ್ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.\
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿದ್ದ ಎನ್ ಸಿಪಿ, ಫಲಿತಾಂಶದ ನಂತರ ಶಿವಸೇನೆ ಜೊತೆ ಸರ್ಕಾರ ರಚಿಸುವ ಮನಸ್ಸು ಮಾಡಿತ್ತು.
ಚುನಾವಣೆಯಲ್ಲಿ ಶಿವಸೇನೆಗಿಂತ ಕೇವಲ ಎರಡು ಸ್ಥಾನಗಳನ್ನು ಕಡಿಮೆ (54) ಗಳಿಸಿದ್ದ ಪವಾರ್ ನೇತೃತ್ವದ ಎನ್ ಸಿಪಿ ಮಹಾರಾಷ್ಟ್ರದಲ್ಲಿ ಕಿಂಗ್ ಮೇಕರ್ ರೀತಿಯೇ ಕೆಲಸ ಮಾಡಿದೆ.
ಶುಕ್ರವಾರ ಶಿವಸೇನೆ, ಶನಿವಾರ..
ಸುಮಾರು ಒಂದು ತಿಂಗಳ ರಾಜಕೀಯ ಬಿಕ್ಕಟ್ಟಿನ ನಂತರ ಶಿವಸೇನೆ- ಎನ್ ಸಿಪಿ – ಕಾಂಗ್ರೆಸ್ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದಿದ್ದವು. ಶುಕ್ರವಾರ ಮುಂಬೈನಲ್ಲಿ ನಡೆದಿದ್ದ ಸಭೆಯಲ್ಲಿ ಮೂರು ಪಕ್ಷದ ಪ್ರಮುಖರು ಈ ಬಗ್ಗೆ ಸರ್ವಾನುಮತದ ನಿರ್ಧಾರಕ್ಕೆ ಬಂದಿದ್ದರು. ಈ ಪ್ರಕಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗುವುದೆಂದು ಬಹುತೇಕ ಖಚಿತವಾಗಿತ್ತು. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿತ್ತು. ಆದರೆ ಶನಿವಾರ ಸೂರ್ಯನ ಕಿರಣಗಳು ಮುಂಬೈ ನಗರವನ್ನು ಮುಟ್ಟುವುದರೊಳಗೆ ಎಲ್ಲವೂ ಉಲ್ಟಾ ಪಲ್ಟಾ.
ರಾಜಕೀಯದಲ್ಲಿ ಏನೂ ಆಗಬಹುದು..
“ರಾಜಕೀಯ ಮತ್ತು ಕ್ರಿಕೆಟ್ ನಲ್ಲಿ ಏನೂ ಆಗಬಹುದು. ನಮ್ಮ ಲೆಕ್ಕಾಚಾರ ಯಾವ ಹಂತದಲ್ಲೂ ತಲೆಕೆಳಗಾಗಬಹುದು” ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚಿಗೆ ಹೇಳಿದ ಮಾತು. ಅದರಂತೆ ನಡೆದಿದೆ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ.
ಅದರಲ್ಲೂ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಅದೇ ನಿತಿನ್ ಗಡ್ಕರಿಯವರು ಶುಕ್ರವಾರ ನೀಡಿದ ಹೇಳಿಕೆ. “ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಮಾಡಿಕೊಂಡಿರುವ ಮೈತ್ರಿ ಅವಕಾಶವಾದಿತನವಾಗಿದೆ. ಇದರ ಆಯಸ್ಸು ಕೇವಲ ಆರರಿಂದ ಏಳು ತಿಂಗಳು ಮಾತ್ರ ಎಂಬ ಮಾತನ್ನು ಸ್ವತಃ ಗಡ್ಕರಿ ಹೇಳಿದ್ದರು. ಹಾಗಾಗಿ ಒಂದು ತಿಂಗಳಲ್ಲಿ ಆಗದ ಕೆಲಸ ಕೇವಲ ಒಂದು ರಾತ್ರಿಯಲ್ಲಿ ಹೇಗಾಯಿತು ಅಥವಾ ಗಡ್ಕರಿಯಂತಹ ನಾಯಕರಿಗೂ ತಿಳಿಯದೆ ಬಿಜೆಪಿಯಲ್ಲಿ ಸರಕಾರ ರಚನೆ ಕೆಲಸ ನಡೆಯಿತಾ ಎನ್ನುವುದು ಸದ್ಯ ಕಾಡುತ್ತಿರುವ ಪ್ರಶ್ನೆ.