ಸಂಘದ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ಮಹತ್ತರ: ನವೀನ್ ಶೆಟ್ಟಿ ಇನ್ನಬಾಳಿಕೆ
Team Udayavani, Feb 12, 2021, 8:06 PM IST
ಮುಂಬಯಿ: ಸಂಘದ ಹಿರಿಯ ಸದಸ್ಯ ಅಂಚನ್ ಮಾಸ್ತರ್ ಅವರ ಮನೆಯಿಂದ ಪ್ರಾರಂಭವಾಗಿ ಮುಂದೆ ಹಂತ ಹಂತವಾಗಿ ಬೆಳೆದು ಬಂದ ಕನ್ನಡ ವೆಲ್ಫೆàರ್ ಸೊಸೈಟಿಯು ಇದೀಗ ಹೆಮ್ಮರವಾಗಿ ಬೆಳೆಯುತ್ತಿದ್ದು, ಅದರ ಹಿಂದೆ ಅನೇಕ ಹಿರಿಯ ಸದಸ್ಯರ, ದಾನಿಗಳ, ಕನ್ನಡಾಭಿಮಾನಿಗಳ ಮಹತ್ತರ ಶ್ರಮವಿದೆ. ಅವರೆಲ್ಲರ ಪರಿಶ್ರಮದಿಂದ ಈ ಸಂಸ್ಥೆ ಇಂದು ಈ ಮಟ್ಟಕ್ಕೆ ತಲುಪುವಂತಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ವಹಿಸುವ ಅವಕಾಶ ನನ್ನ ಪಾಲಿಗೆ ಬಂದಿರುವುದು ಕೂಡಾ ನನ್ನ ಸೌಭಾಗ್ಯ. ಅದರಂತೆ ಉದ್ಯಮಿ, ದಾನಿ ಮಹೇಶ್ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ ನನ್ನ ಅಧ್ಯಕ್ಷತೆಯಲ್ಲಿ ಒಂದು ಉತ್ತಮ ಹವಾನಿಯಂತ್ರಿತ ಸಭಾಗೃಹ, ಅದ್ದೂರಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ, ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯಕ್ಷಗಾನ ಸಹಿತ ಅನೇಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದಿವೆ. ಸಂಘದ ಆರ್ಥಿಕ ಪರಿಸ್ಥಿತಿ ಉತ್ತಮ ಮಟ್ಟಕ್ಕೆ ತಲುಪುವಂತಾಗಲು ಶ್ರಮಿಸಿದ್ದೇನೆ ಎಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್ಕೋಪರ್ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ತಿಳಿಸಿದರು.
ಫೆ. 7ರಂದು ಬೆಳಗ್ಗೆ ಕನ್ನಡ ವೆಲ್ಫೆàರ್ ಸೊಸೈಟಿಯ ಕಚೇರಿಯಲ್ಲಿ ನಡೆದ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್ಕೋಪರ್ ಇದರ 42ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಯಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದವರ, ಸರ್ವಸದಸ್ಯರ , ದಾನಿಗಳ ಸಹಕಾರ ಅಪಾರವಾಗಿದೆ. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಕಾರ್ಯಗಳು, ಉನ್ನತಿಗೂ ಸರ್ವರ ಸಹಕಾರವಿರಲಿ ಎಂದರು.
ವೀಣಾ ಶೆಟ್ಟಿ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ಹರೀಶ್ ಶೆಟ್ಟಿ ಅವರು ವಾರ್ಷಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ಸಂಘದ ಲೆಕ್ಕಪರಿಶೋಧಕರನ್ನು ಮುಂದುವರಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸದಸ್ಯ ಸಂಜೀವ ಪೂಜಾರಿ ಮಾತನಾಡಿ, ಸಂಸ್ಥೆಯ ಹಿಂದಿನ ಹಾಗೂ ಇಂದಿನ ಪರಿಸ್ಥಿತಿಗೆ ವ್ಯತ್ಯಾಸವಿದೆ. ಇಂದು ಸಂಘವು ಹೆಮ್ಮರವಾಗಿ ಬೆಳೆದಿದ್ದು, ಹಲವಾರು ಕಾರ್ಯಕ್ರಮಗಳಿಂದ ಮುಂಚೂಣಿಯಲ್ಲಿದೆ ಎಂದರು.
ಇನ್ನೋರ್ವ ಹಿರಿಯ ಸದಸ್ಯ ಸಂಜೀವ ಎ. ಮೆಂಡನ್ ಮಾತನಾಡಿ, ಸಂಘದ ಸದಸ್ಯರ ಹಾಜರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘವು ಮಹಿಳಾ ವಿಭಾಗ, ಯುವ ವಿಭಾಗ ಎಲ್ಲರ ಪ್ರೋತ್ಸಾಹದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಹಿರಿಯ ಸದಸ್ಯ ಎಸ್. ಕೆ. ಸೊರಪ ಮಾತನಾಡಿ, ಸಂಘದ ಸದಸ್ಯತ್ವ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಅಧ್ಯಕ್ಷರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ ಮಾತನಾಡಿ, ಸಂಘದ ಆರ್ಥಿಕತೆಯನ್ನು ಬಲಿಷ್ಟಗೊಳಿಸಲು ಲಕ್ಷ é ಕೊಡಬೇಕು. ಸಂಘದ ಮಹಿಳಾ ವಿಭಾಗ, ಯುವ ವಿಭಾಗದ ಪ್ರೋತ್ಸಾಹದಿಂದ ಭಜನ ಕಾರ್ಯಕ್ರಮ, ಅರಸಿನ ಕುಂಕುಮ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ ಮಾತನಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ನನಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದೀರಿ. ನನ್ನ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲ ಮಹಿಳಾ ಸದಸ್ಯೆಯರಿಗೆ ಮತ್ತು ಯುವ ವಿಭಾಗದವರಿಗೆ ಕೃತಜ್ಞತೆಗಳು ಎಂದರು.
ಮಹಿಳಾ ವಿಭಾಗದ ಕಾರ್ಯದರ್ಶಿ ವೀಣಾ ಶೆಟ್ಟಿ ಮಹಿಳಾ ವಿಭಾಗದ ವರದಿ ವಾಚಿಸಿದರು. ಪ್ರಮೀಳಾ ಶೆಟ್ಟಿ ಅವರು, ಹಲವಾರು ಸಮಸ್ಯೆಗಳನ್ನು ಎದುರಿಸಿ ಸಂಸ್ಥೆಯು ಮುಂದೆ ಬಂದಿದೆ. ನಮ್ಮ ವಿಭಾಗದ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿವೆ ಎಂದು ತಿಳಿಸಿದರು. ಯುವ ವಿಭಾಗದ ರಸಿಕಾ ಶೆಟ್ಟಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಯ ಎ. ಶೆಟ್ಟಿ, ಎಸ್. ಕೆ. ಸೊರಪ, ವಿಮಲಾ ಶೆಟ್ಟಿ, ವಿಶ್ವನಾಥ ಪೂಜಾರಿ, ಸುಜಲಾ ಎ. ಶೆಟ್ಟಿ, ಮನೋಹರ್ ಶೆಟ್ಟಿ, ತಿಮ್ಮ ದೇವಾಡಿಗ, ಹರಿಣಿ ಶೆಟ್ಟಿ, ರಾಧಾಕೃಷ್ಣ ರಾರಾಯಣ ಶೆಟ್ಟಿ ನಂದಳಿಕೆ, ಹರೀಶ್ ಶೆಟ್ಟಿ, ದಯಾನಂದ ಶೆಟ್ಟಿ, ಕಾರ್ತಿಕ್, ರಿಸಿಕಾ, ಪ್ರಜ್ವಲ್, ಪುನೀತ್, ನಿಕ್ಷಿತ್, ಪ್ರವೀಣ್, ವೈದೇಹಿ, ಶ್ರಾವ್ಯಾ, ಸಂಜೀವ ಪೂಜಾರಿ ಮೊದಲಾದವರನ್ನು ಗೌರವಿಸಲಾಯಿತು.
ಮುಂದಿನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇನ್ನಬಾಳಿಕೆ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಎಲ್ಲೂರು, ಉಪಾಧ್ಯಕ್ಷರಾಗಿ ಜಯರಾಜ್ ಜೈನ್, ಗೌರವ ಕೋಶಾಧಿಕಾರಿಯಾಗಿ ಹರಿಣಿ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ತಿಮ್ಮ ಎಸ್. ದೇವಾಡಿಗ ಅವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾರಾಯಣ ಶೆಟ್ಟಿ ನಂದಳಿಕೆ, ಎಸ್. ಕೆ. ಸೊರಪ, ಪೀಟರ್ ರಾಡ್ರಿಗಸ್, ರಾಧಾಕೃಷ್ಣ ಶೆಟ್ಟಿ, ಎ. ಹಿರಿಯಣ್ಣ ಶೆಟ್ಟಿ, ಸುರೇಶ್ ರೇವಣRರ್, ಶಂಕರ್ ಶೆಟ್ಟಿ, ಮನೋಹರ್ ಶೆಟ್ಟಿ, ಸುರೇಶ್ ಎ. ಶೆಟ್ಟಿ, ಸುಭಾಶ್ ಶಿರಿಯಾ, ಶಾಂತಾ ಎನ್. ಶೆಟ್ಟಿ, ವಿಶ್ವನಾಥ ಪೂಜಾರಿ, ಸುಜಲಾ ಎ. ಶೆಟ್ಟಿ ಅವರನ್ನು ನೇಮಿಸಲಾಯಿತು. ಸಂಘಕ್ಕೆ ಸಹಕರಿಸಿದ ಇತ್ತೀಚೆಗೆ ನಿಧನ ಹೊಂದಿದ ಬಾಲಚಂದ್ರ ರಾವ್ ಮತ್ತು ಇತರ ಹಿರಿಯ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುಧಾಕರ ಎಲ್ಲೂರು ವಂದಿಸಿದರು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.