ಧೋನಿ ಈಗಲೂ ಮ್ಯಾಚ್ವಿನ್ನರ್: ರಾಹುಲ್
Team Udayavani, Dec 22, 2017, 9:01 AM IST
ಕಟಕ್: ಎಂಎಸ್ ಧೋನಿ ಇದೀಗ ತಮ್ಮ ಬಾಳ್ವೆಯ ಅಂತಿಮ ಹಂತದಲ್ಲಿರುವುದು ನಿಜ. ಆದರೆ ಅವರು ಈಗಲೂ ಭಾರತದ ಮ್ಯಾಚ್ವಿನ್ನರ್ ಆಗಿದ್ದಾರೆ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಅವರು ಕಿರಿಯ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಾರತೀಯ ತಂಡದ ಆರಂಭಿಕ ಕೆಎಲ್ ರಾಹುಲ್ ಹೇಳಿದ್ದಾರೆ.
ಕಟಕ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟ್ವೆಂಟಿ20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಭಡ್ತಿ ಪಡೆದಿರುವ ಧೋನಿ 22 ಎಸೆತಗಳಿಂದ ಅಜೇಯ 39 ರನ್ ಸಿಡಿಸಿದರಲ್ಲದೇ ವಿಕೆಟ್ ಹಿಂದುಗಡೆ ನಾಲ್ಕು ವಿಕೆಟ್ ಉರುಳಿಸಲು ನೆರವಾಗಿದ್ದರು. ಇದರಿಂದ ಭಾರತ ದಾಖಲೆ 93 ರನ್ನುಗಳಿಂದ ಗೆಲ್ಲಲು ನೆರವಾಗಿದ್ದರು.
ಧೋನಿ ಅವರ ಈ ಪ್ರಯತ್ನದಿಂದ ಚುಟುಕು ಕ್ರಿಕೆಟ್ನಲ್ಲಿ ಭಾರತ ಪರ ಗರಿಷ್ಠ ಬಲಿ ಪಡೆದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದಾರೆ. 272 ಪಂದ್ಯಗಳನ್ನಾಡಿರುವ ಅವರು 201 ಬಲಿ ಪಡೆದಿದ್ದಾರೆ. ಧೋನಿ ಟ್ವೆಂಟಿ20ಯಲ್ಲಿ 200ಕ್ಕಿಂತ ಹೆಚ್ಚಿನ ಬಲಿ ಪಡೆದ ಎರಡನೇ ಆಟಗಾರರಾಗಿದ್ದಾರೆ. ಪಾಕಿಸ್ಥಾನದ ಕಮ್ರಾನ್ ಅಕ್ಮಲ್ 211 ಪಂದ್ಯಗಳಿಂದ 207 ಬಲಿ ಪಡೆದಿದ್ದಾರೆ.