ಕುಲದೀಪ್ ಯಾದವ್ ಹ್ಯಾಟ್ರಿಕ್: ಏಕದಿನ ಸರಣಿ ಗೆದ್ದ ಭಾರತ “ಎ’
Team Udayavani, Sep 25, 2022, 10:57 PM IST
ಚೆನ್ನೈ: ಚೈನಾಮನ್ ಬೌಲರ್ ಕುಲದೀಪ್ ಯಾದವ್ ಸಾಧಿಸಿದ ಅಮೋಘ ಹ್ಯಾಟ್ರಿಕ್, ಆರಂಭಕಾರ ಪೃಥ್ವಿ ಶಾ ಅವರ ಸ್ಫೋಟಕ ಚೇಸಿಂಗ್ ಸಾಹಸದಿಂದ ಪ್ರವಾಸಿ ನ್ಯೂಜಿಲ್ಯಾಂಡ್ “ಎ’ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ಭಾರತ “ಎ’ ಏಕದಿನ ಸರಣಿ ವಶಪಡಿಸಿಕೊಂಡಿದೆ.
ರವಿವಾರ ಚೆನ್ನೈಯಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ “ಎ’ 47 ಓವರ್ಗಳಲ್ಲಿ 219ಕ್ಕೆ ಆಲೌಟ್ ಆಯಿತು. ಜವಾಬಿತ್ತ ಭಾರತ “ಎ’ 34 ಓವರ್ಗಳಲ್ಲೇ 6 ವಿಕೆಟ್ ನಷ್ಟಕ್ಕೆ 222 ರನ್ ಬಾರಿಸಿತು.
ಕುಲದೀಪ್ ಯಾದವ್ ಕಿವೀಸ್ ಸರದಿಯ ಕೊನೆಯ 3 ಎಸೆತಗಳಲ್ಲಿ ವಾನ್ ಬೀಕ್ (4), ಜೋ ವಾಕರ್ (0) ಮತ್ತು ಜೇಕಬ್ ಟಫಿ (0) ವಿಕೆಟ್ ಕಿತ್ತು ಹ್ಯಾಟ್ರಿಕ್ ಪೂರ್ತಿಗೊಳಿಸಿದರು. 210ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಪ್ರವಾಸಿ ತಂಡ 9 ರನ್ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಕುಲದೀಪ್ ಯಾದವ್ ಸಾಧನೆ 51ಕ್ಕೆ 4 ವಿಕೆಟ್. ರಿಷಿ ಧವನ್ ಮತ್ತು ರಾಹುಲ್ ಚಹರ್ ತಲಾ 2 ವಿಕೆಟ್ ಕಿತ್ತರು.
“ಯಾವ ಪಂದ್ಯವೇ ಆಗಿರಲಿ, ಹ್ಯಾಟ್ರಿಕ್ ಸಾಧಿಸುವುದೆಂದರೆ ಅದೊಂದು ವಿಶೇಷ ಕ್ಷಣ, ನನ್ನ ಪಾಲಿಗೆ ಇದು ಇನ್ನಷ್ಟು ವಿಶೇಷ’ ಎಂಬುದಾಗಿ ಕುಲದೀಪ್ ಯಾದವ್ ಪ್ರತಿಕ್ರಿಯಿಸಿದರು.
ನ್ಯೂಜಿಲ್ಯಾಂಡ್ ಪರ ಆರಂಭಕಾರ ರಚಿನ್ ರವೀಂದ್ರ 61, ಜೋ ಕಾರ್ಟರ್ ಸರ್ವಾಧಿಕ 72 ರನ್ ಹೊಡೆದರು.
ಪೃಥ್ವಿ ಶಾ ಪರಾಕ್ರಮ
ಚೇಸಿಂಗ್ ವೇಳೆ ಪೃಥ್ವಿ ಶಾ ಪ್ರಚಂಡ ರೀತಿಯಲ್ಲಿ ಬ್ಯಾಟ್ ಬೀಸಿ, ಕಿವೀಸ್ ಬೌಲರ್ಗಳ ಮೇಲೆರಗಿ ಹೋದರು. ಸಿಡಿಸಿದ್ದು 77 ರನ್. ಇದು ಕೇವಲ 48 ಎಸೆತಗಳಿಂದ ಬಂತು. ಈ ರಂಜನೀಯ ಬ್ಯಾಟಿಂಗ್ 11 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಒಳಗೊಂಡಿತ್ತು. ಇವರ ಜತೆಗಾರ ಋತುರಾಜ್ ಗಾಯಕ್ವಾಡ್ ಗಳಿಕೆ 30 ರನ್. ಮೊದಲ ವಿಕೆಟಿಗೆ 10.1 ಓವರ್ಗಳಿಂದ 82 ರನ್ ಹರಿದು ಬಂತು.
ವನ್ಡೌನ್ನಲ್ಲಿ ಬಂದ ರಜತ್ ಪಾಟೀದಾರ್ 20, ನಾಯಕ ಸಂಜು ಸ್ಯಾಮ್ಸನ್ 37 ರನ್ ಮಾಡಿದರೆ, ತಿಲಕ್ ವರ್ಮ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ರಾಜ್ ಬಾವಾ ಕೂಡ ರನ್ ಗಳಿಸಲು ವಿಫಲರಾದರು. ರಿಷಿ ಧವನ್ ಅಜೇಯ 22 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 25 ರನ್ ಮಾಡಿ ಭಾರತದ ಸರಣಿ ಗೆಲುವು ಸಾರಿದರು.
ಅಂತಿಮ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್ “ಎ’-47 ಓವರ್ಗಳಲ್ಲಿ 219 (ಜೋ ಕಾರ್ಟರ್ 72, ರಚಿನ್ ರವೀಂದ್ರ 61, ಸೋಲಿಯ 28, ಕುಲದೀಪ್ ಯಾದವ್ 51ಕ್ಕೆ 4, ರಿಷಿ ಧವನ್ 16ಕ್ಕೆ 2, ರಾಹುಲ್ ಚಹರ್ 50ಕ್ಕೆ 2). ಭಾರತ “ಎ’-34 ಓವರ್ಗಳಲ್ಲಿ 6 ವಿಕೆಟಿಗೆ 222 (ಪೃಥ್ವಿ ಶಾ 7, ಸಂಜು ಸ್ಯಾಮ್ಸನ್ 37, ಋತುರಾಜ್ ಗಾಯಕ್ವಾಡ್ 30, ಶಾರ್ದೂಲ್ ಠಾಕೂರ್ ಔಟಾಗದೆ 25, ರಿಷಿ ಧವನ್ ಔಟಾಗದೆ 22).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ