ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಸಿಂಧು ಸೆಮಿಫೈನಲ್ ಪ್ರವೇಶ
Team Udayavani, Apr 13, 2019, 10:03 AM IST
ಸಿಂಗಾಪುರ: ಪಿ.ವಿ. ಸಿಂಧು “ಸಿಂಗಾಪುರ ಓಪನ್’ ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೈನಾ, ಶ್ರೀಕಾಂತ್ ಸಹಿತ ಉಳಿದೆಲ್ಲ ಆಟಗಾರರು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಗುರುವಾರ ನಡೆದ ವನಿತಾ ಸಿಂಗಲ್ಸ್ನಲ್ಲಿ ಪಿ.ವಿ. ಸಿಂಧು ಚೀನದ ಕಿಯಾ ಯಾನ್ ಯಾನ್ ಅವರನ್ನು ಒಂದು ಗಂಟೆಯ ಹೋರಾಟದ ಬಳಿಕ 21-13, 17-21, 21-14 ಗೇಮ್ಗಳಿಂದ ಸೋಲಿಸಿದರು. ಮೊದಲ ಬಾರಿಗೆ ಯಾನ್ ಯಾನ್ ಅವರನ್ನು ಎದುರಿಸಿದ ಸಿಂಧು ಮೊದಲ ಗೇಮ್ ಅನ್ನು ಸುಲಭವಾಗಿ ಜಯಿಸಿದರು. ಆದರೆ ದ್ವಿತೀಯ ಗೇಮ್ನಲ್ಲಿ ಪ್ರತಿಸ್ಪರ್ಧಿಯಿಂದ ಸಿಂಧುಗೆ ತಕ್ಕ ಪೈಪೋಟಿಯೇ ದೊರಕಿದ ಕಾರಣ ಸೋಲನುಭವಿಸಿದರು.
ದ್ವಿತೀಯ ಗೇಮ್ನಲ್ಲಿ ಎಡವಿದ ಸಿಂಧು ನಿರ್ಣಾಯಕ ಗೇಮ್ನಲ್ಲಿ ಎಚ್ಚರಿಕೆ ಆಟವಾಡಿ 21-14 ಗೇಮ್ಗಳಿಂದ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಜಪಾನಿನ ನೊಜೊಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. ಒಕುಹಾರ ತನ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರನ್ನು ಕೇವಲ 37 ನಿಮಿಷಗಳ ಆಟದಲ್ಲಿ 21-8, 21-13 ನೇರ ಗೇಮ್ಗಳಿಂದ ಸೋಲಿಸಿದರು.
ಶ್ರೀಕಾಂತ್ ಪರಾಭವ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಸಮೀರ್ ವರ್ಮ ಮತ್ತು ಕೆ. ಶ್ರೀಕಾಂತ್ ಜಯ ಸಾಧಿಸುವಲ್ಲಿ ವಿಫಲರಾದರು. ಸಮೀರ್ ವರ್ಮ ಚೈನೀಸ್ ತೈಪೆಯ ಚುಹು ಟಿನ್ ಚೆನ್ ವಿರುದ್ಧ 10-21, 21-15, 15-21 ಗೇಮ್ಗಳಿಂದ ಸೋಲನುಭವಿಸಿದರು. ಈ ಸೋಲಿನ ಬೆನ್ನಲ್ಲೆ ಭಾರತದ ಭರವಸೆಯ ಸಿಂಗಲ್ಸ್ ಆಟಗಾರ ಕೆ. ಶ್ರೀಕಾಂತ್ ವಿಶ್ವದ ನಂ. ವನ್ ಆಟಗಾರ. ಜಪಾನಿನ ಕೆಂಟೊ ಮೊಮೊಟಾ ವಿರುದ್ಧ 18-21, 21-19, 9-21 ಗೇಮ್ಗಳಿಂದ ಪರಾಭವಗೊಂಡರು.
ಕೆಂಟೊ ವಿರುದ್ಧದ 15 ಮುಖಾಮುಖೀಯಲ್ಲಿ ಕೇವಲ 3 ಪಂದ್ಯ ಗೆದ್ದಿರುವ ಶ್ರೀಕಾಂತ್ ಈ ಪಂದ್ಯದಲ್ಲಿ ಜಯಿಸಿ ಗೆಲುವಿನ ಅಂತರವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಗೇಮ್ನಲ್ಲಿ ಶ್ರೀಕಾಂತ್ ಸ್ವಲ್ಪ ಪೈಪೋಟಿ ನೀಡಿದರೂ ಕೊನೆಯಲ್ಲಿ ಸೋತರು. ದ್ವಿತೀಯ ಗೇಮ್ನಲ್ಲಿ ಶ್ರೀಕಾಂತ್ ಅತ್ಯುತ್ತಮ ಪ್ರದರ್ಶನ ನೀಡಿ ಜಯಿಸಿದರು. ಆದರೆ ನಿರ್ಣಾಯಕ ಗೇಮ್ನಲ್ಲಿ ಹೀನಾಯವಾಗಿ ಸೋತು ಕೂಟದಿಂದ ನಿರ್ಗಮಿಸಿದರು.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಚೆರ್ರಿ ಜೋಪ್ರಾ-ಎನ್. ಸಿಕ್ಕಿ ರೆಡ್ಡಿ ಜೋಡಿ ಥಾಯ್ಲೆಂಡ್ ಜೋಡಿಯೆದುರು 14-21, 16-21 ನೇರ ಗೇಮ್ಗಳ ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ.