ಎಬಿವಿಪಿ ಮುಖಂಡ ಸಹಿತ ಮೂವರ ಸಾವು
Team Udayavani, Aug 12, 2019, 3:00 AM IST
ಯಲ್ಲಾಪುರ: ಪಿಕ್ಅಪ್ ವಾಹನ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎಬಿವಿಪಿ ಮುಖಂಡ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ 93ರಲ್ಲಿ ತಾಲೂಕಿನ ಬಾಳೆಹದ್ದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಭೈರುಂಬೆ ಸೂರಿಮನೆಯ ಮಹಾಬಲೇಶ್ವರ ಗಣೇಶ ಹೆಗಡೆ(55), ಅವರ ಪತ್ನಿ ಶಾರದಾ ಮಹಾಬಲೇಶ್ವರ ಹೆಗಡೆ(50) ಹಾಗೂ ಎಬಿವಿಪಿ ಮುಖಂಡ, ಮೈಸೂರು ಲಕ್ಷ್ಮೀಪುರದ ರವಿಕುಮಾರ ತಿಪ್ಪೇರುದ್ರಪ್ಪ (35) ಮೃತಪಟ್ಟವರು.
ಮಹದೇವ ಹಾಗೂ ಶೇಖರ ಮೈಸೂರು ಗಾಯಗೊಂಡವರು ಎಂದು ಗುರುತಿಸಲಾಗಿದೆ. ರವಿಕುಮಾರ ಅವರು ಇಬ್ಬರು ಸ್ನೇಹಿತರೊಂದಿಗೆ ಕಿರವತ್ತಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಹೋಗಿ ಪರಿಹಾರ ಸಾಮಗ್ರಿ ನೀಡಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎರಡೂ ವಾಹನಗಳು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ದಂಪತಿ ಹಾಗೂ ಪಿಕಪ್ನಲ್ಲಿದ್ದ ರವಿಕುಮಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.