ಉಮೇಶ ಜಾಧವ ಮನೆ ಎದುರು ಕುದುರೆ ತಂದು ಪ್ರತಿಭಟನೆ
Team Udayavani, Jan 17, 2019, 12:40 AM IST
ಕಲಬುರಗಿ: ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಹಾಗೂ ಕ್ಷೇತ್ರದ ಮತದಾರರನ್ನು 50 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂಬುದಾಗಿ ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಎನ್ ಜಿಒ ಕಾಲೋನಿಯಲ್ಲಿರುವ ಶಾಸಕರ ಮನೆ ಎದುರು ಬುಧವಾರ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ಕುದುರೆ ತಂದು ವಿನೂತನ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಶಾಸಕ ಡಾ| ಉಮೇಶ ಜಾಧವ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಬೊಬ್ಬೆ ಹಾಕಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ವೈರಲ್: ಮಂಗಳವಾರ ಸಂಜೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಡಾ| ಉಮೇಶ ಜಾಧವ ಭಾವಚಿತ್ರದೊಂದಿಗೆ ಶಾಸಕರು ಚಿಂಚೋಳಿ ಕ್ಷೇತ್ರದ ಮತದಾರರನ್ನು 50 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂಬುದಾಗಿ ಫೇಸ್ಬುಕ್, ವಾಟ್ಸಪ್ನಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ
ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿತಲ್ಲದೇ, ಭಾರಿ ವೈರಲ್ ಉಂಟಾಗಿದೆ.