ವೃತ್ತಿ-ಜೀವನದ ಸಮಾನತೆ
Team Udayavani, Dec 3, 2018, 3:05 PM IST
ಬದುಕು-ಕೆಲಸ ಅಥವಾ ವೃತ್ತಿಗಳೆರಡೂ ಒಂದರೊಳಗೊಂದು ಮೇಳವಿಸಿದೆ. ಮನುಷ್ಯ ಬಾಲ್ಯದಲ್ಲಿ ಏನನ್ನೂ ಸಂಪಾದಿಸಲಾರ. ತಾನು ತನ್ನ ವೈಯಕ್ತಿಕ ಜೀವನದ ಸಹಜ ಕಾರ್ಯಗಳನ್ನು ಮಾಡುತ್ತಾ ಮುಂದುವರಿಯುವನು. ಸಂದರ್ಭ ಅನುಸಾರ ನಡೆದುಕೊಳ್ಳುವುದಷ್ಟೇ ಅವನ ಕಾಯಕ. ಶಿಕ್ಷಣದ ಮೂಲ ಉದ್ದೇಶವಾದ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸಾಧನಾ ಪಥದಲ್ಲಿ ಸಾಗಿ ಸಾಧಕನಾದಾಗ ಬದುಕಿನ ಒಂದು ಮೂಲ ಅಗತ್ಯವೇ ಪರಿಪೂರ್ಣ ವ್ಯವಸ್ಥೆಯನ್ನು ಪಡೆಯಿತೆನ್ನಬೇಕು. ಆಗ ಅವನೊಬ್ಬ ಮಾನವ ಸಂಪತ್ತು ಎಂದು ಕರೆಸಿಕೊಳ್ಳುತ್ತಾನೆ. ಅಲ್ಲಿಗೆ ಆತನ ಜೀವಿತದ ಧ್ಯೇಯವೂ ಪರಿಪೂರ್ಣ ವ್ಯವಸ್ಥೆಯನ್ನು ಪಡೆಯಿತೆಂದರೆ ಆಶ್ಚರ್ಯವಿಲ್ಲ.
ಜವಾಬ್ದಾರಿ ಪಾತ್ರ
ಆತನನ್ನು ಸಮಾಜ ಆಗ ಗುರುತಿಸುವುದು ಮೊದಲಿನಂತಲ್ಲ. ಜವಾಬ್ದಾರಿ ಹೊಂದಿದ್ದಾನೆ ಎನ್ನುವುದೇ ಇಲ್ಲಿನ ಮಹತ್ವದ ಅಂಶವಾಗಿದೆ. ಅಂದರೆ ಆತನೊಬ್ಬ ಸಮುದಾಯದ ಅವಿಭಾಜ್ಯ ಅಂಗವಾಗುವನು ವೃತ್ತಿ ನಿರತರ ಗುಂಪಿನಲ್ಲಿ ಸೇರಿ ಹೋಗುವನು. ಸಾಮಾನ್ಯ ಮಾನವರಲ್ಲಿ ಅವನೊಬ್ಬ ಮಾನವ ಸಂಪನ್ಮೂಲ. ಹೀಗಿರುವಾಗ ಅವನು ಪಡೆದ ವೃತ್ತಿಯೊಂದಿಗೆ ಆತ ಹೇಗಿರಬೇಕು ಎಂಬ ಅಂಶವೇ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಕೆಲವೊಂದು ಪ್ರಶ್ನೆ ಕಾಡುತ್ತದೆ. ವೃತ್ತಿಯಲ್ಲಿಯೇ ಆತ ಮುಳುಗಬೇಕೆ?, ವೃತ್ತಿಯ ಸರ್ವಸ್ವವೇ?, ವೃತ್ತಿಯೇ ಬದುಕಾಗಬೇಕೆ? ಎಂಬುವುದು.
ಈ ಜಿಜ್ಞಾಸೆಯಿಂದ ಉತ್ತಮ ಫಲಿತಾಂಶ ಕಂಡುಕೊಳ್ಳುವುದೇನೆಂದರೆ ಜೀವನದ ನಿರ್ವಹಣೆಗೆ ಉದ್ಯೋಗ ವೃತ್ತಿ ಅನಿವಾರ್ಯ. ಆದರೆ ಅದೇ ಉದ್ಯೋಗ ವೃತ್ತಿಗೆ ಹೆಚ್ಚಿನ ಮಹತ್ವ ನೀಡಿ ತನ್ನ ಜೀವ-ಜೀವನ-ಸಂಸಾರವನ್ನು ಲೆಕ್ಕಿಸದೇ ಬದ್ಧತೆ, ಸಮರ್ಪಣೆಯ ತಲೆಬರೆಹದಡಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೊರ ಬಂದಿದ್ದರೆ ಅವನ ಜೀವನ ಅರ್ಥಹೀನವೆಂಬುವುದೇ ಪ್ರಮುಖ ಅಂಶ. ಆದುದರಿಂದ ವೃತ್ತಿಗೆ, ಜೀವನಕ್ಕೆ ಎಷ್ಟು ಮಹತ್ವ ನೀಡಬೇಕೆಂಬ ಚಿಂತನೆಯು ನಮ್ಮ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಜೀವನದ ರೂಪು ರೇಷೆಗಳನ್ನು ಕೈಗೊಂಡು ಮುನ್ನುಗ್ಗುವುದು ಅತೀ ಅಗತ್ಯ.
ಉಮೇಶ್ ಕಾರಂತ, ಮಂಗಳೂರು