ಮುಖವಾಡದ ಹಿಂದಿದೆ ಸತ್ಯ
Team Udayavani, Oct 15, 2018, 2:49 PM IST
ಬದುಕಿನ ದಾರಿ ಸ್ಪಷ್ಟವಾಗಿದೆ ಎಂದುಕೊಳ್ಳುತ್ತೇವೆ. ಆದರೆ ಸ್ಪಷ್ಟತೆಯಲ್ಲಿಯೂ ಅಸ್ಪಷ್ಟತೆಯ ನೆರಳು ಕಾಣಿಸಿಕೊಳ್ಳುತ್ತದೆ. ಅಂತೆಯೇ ಪ್ರತಿಯೊಬ್ಬರಿಗೂ ಒಂದೊಂದು ಮುಖವಿದ್ದಂತೆ ನೂರಾರು ಮುಖವಾಡಗಳಿರುತ್ತವೆ. ಒಂದು ಮುಖ ಬಾಹ್ಯ ರೂಪದಲ್ಲಿ ಶಾರೀರಿಕವಾಗಿದ್ದರೆ, ಮುಖವಾಡಗಳು ಹತ್ತಾರು ಸಂದರ್ಭಗಳಲ್ಲಿ ನೂರಾರು ರೀತಿಯಲ್ಲಿ ಹೊರ ಬರುತ್ತವೆ.
ಮುಖವಾಡಗಳು ಬೇಕೇ?, ಬೇಡವೇ ? ಎಂಬ ಪ್ರಶ್ನೆಗಳು ತೀರಾ ವೈಯಕ್ತಿಕವಾದರೂ ಇದರಲ್ಲಿ ಇನ್ನೊಬ್ಬರೂ ಸೇರಿಕೊಳ್ಳುವುದರಿಂದ ಒಂದಷ್ಟು ಯೋಚನೆ, ಭವಿಷ್ಯದಲ್ಲಿ ಉಂಟಾಗುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಯಾವ ಮುಖವಾಡ ಧರಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯ ಖಂಡಿತ.
ಮುಖವಾಡಗಳು ಮನದ ಕನ್ನಡಿಯಿದ್ದಂತೆ. ನಾವು ಹೇಗಿರುತ್ತೇವೆ ಎಂದು ತಿಳಿಯುವುದೇ ಈ ಮುಖವಾಡದ ಭಾವಗಳನ್ನು ವ್ಯಕ್ತಪಡಿಸುವ ಮೂಲಕ. ಮುಖವಾಡ ಪ್ರದರ್ಶನ ಇನ್ನೊಂದು ತೆರನಾಗಿರುತ್ತದೆ. ಇದು ವ್ಯಕ್ತಿ ವಿಭಿನ್ನತೆಯನ್ನೂ ಪಡೆದಿದೆ.
ಸುಳ್ಳು ಹೇಳಬೇಕಾದರೆ ಮಾತಿನಲ್ಲಿ, ಮುಖದಲ್ಲಿ ಸತ್ಯದ ನೆರಳು ಹುಟ್ಟಿಸುವುದು, ಇನ್ನೊಬ್ಬರನ್ನು ಕಂಡರೆ ಆಗದಿದ್ದರೂ ಅವರು ಎದುರು ಬಂದಾಗ ನಗುವುದು, ಇಷ್ಟವಿಲ್ಲದಿದ್ದರೂ ಹಸ್ತಲಾಘವ ನೀಡುವುದು ಹೀಗೆ ಒಳಗೊಂದು ಹೊರಗೊಂದು ಭಾವನೆಗಳ ಹೊರಸೂಸುವಿಕೆ ಕೆಲವರಿಗೆ ಅನಿವಾರ್ಯವಾಗಿರಬಹುದು, ಇನ್ನು ಕೆಲವರಿಗೆ ನಿತ್ಯ, ಸಹಜ ಸ್ವಭಾವವೇ ಆಗಿ ಬಿಡಬಹುದು. ತೀರಾ ಹತ್ತಿರದವರು ಇಂಥ ವರ್ತನೆ ತೋರಿದರೆ ವಿಶ್ವಾಸ ದ್ರೋಹ ಎಂದೆನಿಸಿಕೊಳ್ಳುತ್ತದೆ. ಆದರೆ ಶಿಕ್ಷಕರು, ಹಿರಿಯರ ಎದುರು ಅತಿಯಾಗಿ ವಿಧೇಯನಾಗಿದ್ದೇನೆ ಎಂದು ಪ್ರದರ್ಶಿಸುವುದು ಇನ್ನೊಂದು ರೀತಿಯಲ್ಲಿ ಅತಿರೇಕತೆಯಾಗಿ ಬಿಡುತ್ತದೆ.
ಮುಖವಾಡ ಇದು ಶಾಶ್ವತವಾಗಿ ಉಳಿಯಲು ಸಾಧ್ಯವೇ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ತೊಟ್ಟುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಯಾವುದೇ ಮಾರ್ಗವಿಲ್ಲ ಎಂದಾಗ ಮಾತ್ರ ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ತೊಟ್ಟುಕೊಳ್ಳಬೇಕು. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ, ಅದನ್ನು ಬಿಚ್ಚಿಡುವ ಧೈರ್ಯ ಪ್ರದರ್ಶಿಸಿದರೆ ಇಂಥ ಮುಖವಾಡಗಳ ಅನಿವಾರ್ಯತೆಯೇ ನಮಗೆ ಬರುವುದಿಲ್ಲ.
ವ. ಉಮೇಶ್ ಕಾರಂತ, ಮಂಗಳೂರು