ಬದುಕಿನ ಸಂಘರ್ಷವನ್ನು ತೆರೆದಿರುವ ದ ರಿನೆವೆಂಟ್
Team Udayavani, Aug 6, 2018, 3:15 PM IST
ಹ್ಯು ಗ್ಲಾಸ್ ಎಂಬ ಬೇಟೆಗಾರನೊಬ್ಬನ ಕತೆಯಿದು. 1823ರಲ್ಲಿ ಆ್ಯಂಡ್ರೂ ಹೆನ್ರಿ ಎಂಬಾತನ ನೇತೃತ್ವದ ಬೇಟೆಗಾರರ ಗುಂಪಿಗೆ ಮಾರ್ಗದರ್ಶಕನಾಗಿದ್ದ ಹ್ಯು ಗ್ಲಾಸ್. ಒಮ್ಮೆ ಇವರ ಗುಂಪು ಕಾಡಿನ ಆದಿವಾಸಿಗಳ ದಾಳಿಗೆ ಸಿಲುಕುತ್ತದೆ. ಗ್ಲಾಸ್ ಗೆ ಕಾಡಿನ ಅಡ್ಡದಾರಿಗಳೆಲ್ಲ ಚಿರಪರಿಚಿತ. ಸಹವರ್ತಿಗಳ ಪ್ರಾಣ ಕಾಪಾಡುವ ಸಂಕಷ್ಟದಲ್ಲಿದ್ದಾಗ ಒಂದು ಅಡ್ಡದಾರಿಯಲ್ಲಿ ಕರೆದೊಯ್ಯುತ್ತಾನೆ. ಆದರೆ ಅನಿರೀಕ್ಷಿತವಾಗಿ ಕರಡಿಯೊಂದು ಅವನ ಮೇಲೆ ದಾಳಿ ನಡೆಸುತ್ತದೆ. ಒಂದು ಅಪಾಯದಿಂದ ಪಾರಾಗಲು ಹೋಗಿ ಅದಕ್ಕಿಂತಲೂ ದೊಡ್ಡ ಅಪಾಯಕ್ಕೆ ತುತ್ತಾಗುತ್ತಾನೆ. ಗ್ಲಾಸ್ ಮತ್ತು ಕರಡಿ ಮಧ್ಯೆ ಭೀಕರ ಕಾದಾಟವೇ ನಡೆದುಹೋಗುತ್ತದೆ. ಆತ ತೀವ್ರವಾಗಿ ಗಾಯಗೊಂಡು, ಸಾವು ಬದುಕಿನ ನಡುವೆ ನರಳಾಡುವ ಸ್ಥಿತಿ ತಲುಪುತ್ತಾನೆ.
ಅರ್ಧ ದಾರಿಯವರೆಗೆ ಬಂದುಬಿಟ್ಟಿರುವ ಬೇಟೆಗಾರರ ತಂಡ ಅನಿವಾರ್ಯವಾಗಿ ಹ್ಯು ಗ್ಲಾಸ್ ಚೇತರಿಸಿಕೊಳ್ಳುವ ತನಕ ಕಾಯಬೇಕಾಗುತ್ತದೆ. ಏಕೆಂದರೆ ದಾರಿ ಗೊತ್ತಿರುವುದು ಅವನೊಬ್ಬನಿಗೆ ಮಾತ್ರ. ಎಲ್ಲರೂ ಅಲ್ಲೇ ಬಿಡಾರ ಹೂಡುತ್ತಾರೆ. ಒಂದೆರಡು ದಿನಗಳಲ್ಲಿಯೇ ಗುಂಪಿನಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ.
ಅರಣ್ಯದಲ್ಲೇ ಕಾಯಬೇಕು ಎನ್ನುವವರದ್ದೊಂದು ಗುಂಪು. ಅಲ್ಲೇ ಇದ್ದರೆ ಆದಿವಾಸಿಗಳ ಬಾಯಿಗೆ ತುತ್ತಾಗಬೇಕಾಗುತ್ತದೆ ಎನ್ನುವವರದ್ದು ಇನ್ನೊಂದು ಗುಂಪು. ಗ್ಲಾಸ್ನನ್ನು ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಆತನಿಗೆ ದಯಾಮರಣ ನೀಡುವ ಬಗ್ಗೆ ಮಾತಾಗುತ್ತದೆ. ಈ ನಡುವೆ ಗ್ಲಾಸ್ ಅನುಭವಿಸುವ ನರಕ ಯಾತನೆಯ ನೋವು ನೋಡುಗರ ಹೃದಯ ಹಿಂಡುವಂತೆ ಮಾಡುತ್ತದೆ.
ಅಲೆಹಾಂಡ್ರೊ ಇನರಿತು ನಿರ್ದೇಶನದ 2016ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥಾಹಂದರ ನೋಡುಗರನ್ನು ಕೊನೆಯವರೆಗೂ ಕುತೂಹಲದಿಂದ ಕಾಯುವಂತೆ ಮಾಡುತ್ತದೆ. ಬದುಕಿನ ಸಂಘರ್ಷವನ್ನು ತೆರೆದಿಡುವ ಈ ಚಿತ್ರದ ಸಣ್ಣ ಸಣ್ಣ ಮಾತುಗಳು ಕೂಡ ಅರ್ಥಪೂರ್ಣವಾಗಿರುವಂತೆ ಭಾಸವಾಗುತ್ತದೆ. ಬದುಕಿನುದ್ದಕ್ಕೂ ಗ್ಲಾಸ್ನ ಸಾಹಸಗಾಥೆ ಚಿತ್ರವನ್ನು ಮೆಚ್ಚುವಂತೆ ಮಾಡುತ್ತದೆ.