ಅನಿರೀಕ್ಷಿತ ಸಹಾಯ ಅವಿಸ್ಮರಣೀಯ
Team Udayavani, Feb 25, 2019, 7:32 AM IST
ಬದುಕಿನಲ್ಲಿ ಅನಿರೀಕ್ಷಿತ ಸಹಾಯ ಸದಾ ನೆನಪಿನಲ್ಲಿ ಇರುತ್ತದೆ. ಅದರಲ್ಲೂ ಯಾರಾದರೂ ಅಪರಿಚಿತರು ನೆರವಿಗೆ ಬಂದಾಗ ಉಂಟಾಗುವ ಭಾವ ವಿಶೇಷವಾಗಿರುತ್ತದೆ. ಬೇಷರತ್, ಜತೆಗೆ ಅಯಾಚಿತವೂ ಆಗಿ ದೊರೆತ ಅಂಥ ನೆರವು ಮಾನವತೆಯ ಮೌಲ್ಯದ ಮೇಲೆ ಭರವಸೆ ಇಡುವಂತೆ ಮಾಡುವುದಲ್ಲದೆ, ಕೆಲವೊಮ್ಮೆ ಅಚ್ಚರಿಯನ್ನೂ ಮೂಡಿಸುತ್ತದೆ.
ನಾನು ಚಿಕ್ಕವನಿದ್ದಾಗ ತಮ್ಮನಿಗೆ ಅನಾರೋಗ್ಯ ಎಂದು ಹತ್ತಿರದ ಚಿಕ್ಕ ಕ್ಲಿನಿಕ್ಗೆ ಅವನನ್ನು ಕರೆದು ಕೊಂಡು ಹೋಗಿದ್ದೆ. ಸುಮಾರು ಹತ್ತು ನಿಮಿಷದ ಹಾದಿ. ಹೊಸದಾಗಿ ಬಂದಿದ್ದ ಯುವ ವೈದ್ಯ. ಬಡತನ ಹೆಚ್ಚಾಗಿದ್ದ ಆ ಸಮಯದಲ್ಲಿ ಆತ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ಕಡಿಮೆ ಹಣ ಪಡೆದು ಔಷಧ ಕೊಡುತ್ತಾರೆ ಎಂಬ ಮಾತಿತ್ತು. ಅದರಂತೆಯೇ ಆಯಿತು ಕೂಡ.
ಆದರೆ ಅಲ್ಲಿಂದ ಮುಖ್ಯ ರಸ್ತೆ ಬದಿಯಲ್ಲಿ ಮರಳಿ ಸಾಗುವಾಗ ಕಲ್ಲಿಗೆ ತಮ್ಮನ ಕಾಲು ಎಡವಿ ಗಾಯವಾಗಿ ರಕ್ತ ಸೋರತೊಡಗಿತು. ಅಂಗವಸ್ತ್ರವೂ ಕೈಯಲ್ಲಿರಲಿಲ್ಲ. ಮರಳಿ ಕ್ಲಿನಿಕ್ ಗೆ ಹೋಗಬಹುದಾಗಿತ್ತಾದರೂ, ಹಣ ಬೇಕಲ್ಲ? ಎಡವಿ ಗಾಯ ಮಾಡಿಕೊಳ್ಳುವುದು ಚಿಕ್ಕ ಹುಡುಗರಿಗೆ ವಿಶೇಷವೇನೂ ಆಗಿರಲಿಲ್ಲ. ಆದರೆ ತಮ್ಮನನ್ನು ಸಮಾಧಾನಪಡಿಸಲು ನನ್ನಿಂದಾಗಲಿಲ್ಲ. ಆದರೂ ಹೇಗೋ ಕುಂಟುತ್ತಿದ್ದ ತಮ್ಮನ ಕೈ ಹಿಡಿದು ನಿಧಾನ ನಡೆದು ಅರ್ಧ ದಾರಿ ತಲುಪುವಾಗ ನಮ್ಮ ಹಿಂಭಾಗದಿಂದ ಸ್ಕೂಟರ್ ಒಂದು ಬಂದು ನಿಂತಿತು. ಅಂಗಿ, ಪಂಚೆ ಉಟ್ಟಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಇಳಿದು ಗಾಯಕ್ಕೆ ಬ್ಯಾಂಡೇಜ್ ಹಚ್ಚಿದರು. ತಡ ಮಾಡದೇ ಸೀದಾ ಗಾಡಿ ಹತ್ತಿ ಹೊರಟು ಹೋದರು. ಅನಿರೀಕ್ಷಿತವಾದ ಈ ಘಟನೆಯನ್ನು ನಾನು ಅತ್ಯಂತ ಅಚ್ಚರಿಯಿಂದ ನೋಡಿದೆ. ಶಾಲೆಗೆ ಹೊಸದಾಗಿ ಬಂದಿದ್ದ ಟೀಚರ್, ಯಾರಾದರೂ ಉಪಕಾರ ಮಾಡಿದರೆ ‘ಥ್ಯಾಂಕ್ಸ್’ ಎನ್ನಬೇಕು ಎಂದು ಹೇಳಿಕೊಟ್ಟಿದ್ದು ನೆನಪಾಯಿತಾದರೂ ನಾನು ಏನನ್ನೂ ಹೇಳಲಾಗಲಿಲ್ಲ. ಆ ವ್ಯಕ್ತಿಗೆ ನಮ್ಮ ಪರಿಚಯ ಇತ್ತೋ ಇಲ್ಲವೋ ತಿಳಿಯದು. ಮುಖ್ಯ ರಸ್ತೆಯ ಬದಿಯಲ್ಲೇ ಇದ್ದ ನಮ್ಮ ಮನೆಯ ಬೇಲಿ ಬದಿ ನಿಂತು ರಸ್ತೆ ನೋಡುತ್ತಿದ್ದಾಗ ನೇರವಾದ ಆ ರಸ್ತೆಯಲ್ಲಿ ವೇಗವಾಗಿ ಸಾಗುವ ಎಲ್ಲ ವಾಹನಗಳಂತೆ ಅವರ ವಾಹನವೂ ಸಾಗಿತ್ತು. ಬಹುಶಃ ವ್ಯಾಪಾರಿಯಂತೆ ಕಾಣುತ್ತಿದ್ದ ಆ ವ್ಯಕ್ತಿಯನ್ನು ಅದಕ್ಕಿಂತ ಮೊದಲಾಗಲೀ ಅನಂತರವಾಗಲಿ ನಾನು ಎಲ್ಲೂ ಕಾಣಲಿಲ್ಲ.
ಕಲ್ಲೆಡವಿ ಆದ ಸಾಮಾನ್ಯ ಗಾಯಕ್ಕೆ ದಾರಿಹೋಕರು ಯಾರು ತಲೆಕೆಡಿಸಿಕೊಳ್ಳುತ್ತಾರೆ? ಅದೂ ವಾಹನದಲ್ಲಿ ತೆರಳುತ್ತಿರುವವರು ಯಾರೋ ಪರಿಚಯವಿಲ್ಲದ ಹುಡುಗನ, ಚಪ್ಪಲಿಯಿಲ್ಲದ, ಧೂಳು ಮೆತ್ತಿದ ಕಾಲ ಬೆರಳಿಗೆ ಬ್ಯಾಂಡೇಜ್ ಹಚ್ಚುವುದು ನಿರೀಕ್ಷಿಸಲು ಕಷ್ಟವಾಗಿತ್ತು. ಘಟನೆ ಬಲು ಸಣ್ಣದಾದರೂ, ಏಕಾಏಕಿ ಬಂದು ಸಹಾಯ ಮಾಡಿ ಹೊರಟು ಹೋದ ರೀತಿ ವಿಲಕ್ಷಣವೂ, ವಿಶೇಷವೂ ಆಗಿ, ಅವಿಸ್ಮರಣೀಯವಾಗಿ ಉಳಿಯಿತು.
ಕುದ್ಯಾಡಿ ಸಂದೇಶ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ