ಎದೆಉರಿ ಸಮಸ್ಯೆ: ಮುಕ್ತಿ ಹೇಗೆ?
Team Udayavani, Jan 28, 2020, 5:40 AM IST
ಎದೆಉರಿ ಇಂದು ಸರ್ವ ಸಾಮಾನ್ಯವಾಗಿ ಎಲ್ಲರಲ್ಲಿ ಕಂಡು ಬರುವ ಸಮಸ್ಯೆ. ಎದೆ ಉರಿಯು ವಂತಹ ಅನುಭವ ಅಥವಾ ಜಠರದ ಆಮ್ಲವು ಅನ್ನನಾಳದ ಮೂಲಕ ಮೇಲೆ ಬರುವುದರಿಂದ ಗಂಟಲಿನಲ್ಲಿ ಉರಿ ಉಂಟಾಗುವುದಕ್ಕೆ ಅನೇಕ ಸಂದರ್ಭದಲ್ಲಿ ಅಸಮರ್ಪಕ ಆಹಾರ ಸೇವನೆ ಮತ್ತು ಜೀವನ ಶೈಲಿಯೇ ಕಾರಣ. ಹೀಗಾಗಿ ನಮ್ಮ ಜೀವನ ಶೈಲಿ ಮತ್ತು ಆಹಾರ ಕ್ರಮವನ್ನು ಕೊಂಚ ಬದಲಾಯಿಸಿದಲ್ಲಿ ಸಮಸ್ಯೆಗೆ ಪರಿಹಾರ ಸಾಧ್ಯ.
ಮಸಾಲೆ ಪದಾರ್ಥಗಳ ಬಳಕೆ
ಅಡುಗೆಯಲ್ಲಿ ಬಳಸುವ ಕೆಲವು ಸಾಂಬಾರ ಪದಾರ್ಥಗಳೇ ಈ ಸಮಸ್ಯೆ ನಿವಾರಣೆಗೆ ಸಹಕರಿಸಬಲ್ಲವು. ಮಸಾಲೆ ಪದಾರ್ಥಗಳಾದ ಚೆಕ್ಕೆ, ಏಲಕ್ಕಿ ಮತ್ತು ಶುಂಠಿ ಜಠರದಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ನ ಹರಿವನ್ನು ಹೆಚ್ಚಿಸುವ ಮೂಲಕ ಎದೆಉರಿ ಸಮಸ್ಯೆ ನಿವಾರಿಸಬಲ್ಲವು. ಆ್ಯಸಿಡಿಟಿ ಮತ್ತು ಅಜೀರ್ಣದಂಥ ಸಮಸ್ಯೆಗಳಿಗೂ ಇವು ದಿವೌÂಷಧ.
ದೇಹದ ಭಂಗಿ
ದೇಹದ ಭಂಗಿ ಮತ್ತು ಎದೆ ಉರಿಗೆ ಸಂಬಂಧವಿದೆ. ರಾತ್ರಿ ಅಥವಾ ನಿದ್ರೆ ಮಾಡುವ ಸಂದರ್ಭ ಎದೆ ಉರಿ ಉಂಟಾಗುವುದಾದರೆ ಗುರುತ್ವಾಕರ್ಷಣೆಗೆ ಒಳಗಾಗಲು ಸಲಹೆ ನೀಡಲಾಗುತ್ತದೆ. ಮಲಗುವಾಗ ಯಾವಾಗಲೂ ತಲೆಯು ಸ್ವಲ್ಪ ಮೇಲಕ್ಕೆ ಇರಲಿ. ಊಟ ಮತ್ತು ಮಲಗುವುದರ ನಡುವೆ 1-2 ಗಂಟೆಯಾದರೂ ಅಂತರವಿರಬೇಕು ಎಂಬುದು ತಜ್ಞರ ಅಭಿಪ್ರಾಯ.
ತಂಬಾಕು ವಸ್ತುಗಳ ಸೇವನೆ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೆ ಎದೆಉರಿಯಂತಹ ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಹೊಟ್ಟೆ ಮತ್ತು ಅನ್ನನಾಳ ನಡುವೆ ಇರುವ ಕವಾಟಕ್ಕೆ ತಂಬಾಕು ಕಿರಿಕಿರಿ ಮಾಡುವುದರಿಂದ ಎದೆಉರಿ ಉಂಟಾಗುತ್ತದೆ. ಜತೆಗೆ ನರಮಂಡಲವನ್ನೂ ದುರ್ಬಲಗೊಳಿಸುತ್ತದೆ.
ಒತ್ತಡದಿಂದ ಮುಕ್ತರಾಗಿ
ಎದೆಉರಿಯಂತಹ ಸಮಸ್ಯೆಗಳಿಗೆ ಒತ್ತಡ ಮತ್ತು ಆಯಾಸಗಳೂ ಕಾರಣ ಎಂಬುದು ನೆನಪಿರಲಿ. ಇವು ಆ್ಯಸಿಡಿಟಿ ಹೆಚ್ಚಳಕ್ಕೆ ಪ್ರಚೋದನೆ ನೀಡುವುದರಿಂದ ಎದೆಉರಿ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಒತ್ತಡ ಮತ್ತು ಆಯಾಸದಿಂದ ಮುಕ್ತರಾಗಬಹುದಾಗಿದೆ.
ಹಣ್ಣುಗಳ ಸೇವನೆ
ಹೆಚ್ಚೆಚ್ಚು ಹಣ್ಣುಗಳ ಸೇವನೆ ದೇಹಕ್ಕೆ ಅಗತ್ಯ ವಿಟಮಿನ್ಗಳನ್ನು ಒದಗಿಸುವುದು ಮಾತ್ರವಲ್ಲದೆ ಎದೆ ಉರಿ ಸಮಸ್ಯೆಯ ನಿವಾರಣೆಗೂ ಅತ್ಯಂತ ಪರಿಣಾಮಕಾರಿಯಾಗಿದೆ. ಸೇಬು ಹಣ್ಣಿನ ಸೇವನೆಯಿಂದ ಆಮ್ಲಿàಯವು ಹೊಟ್ಟೆಯನ್ನು ತಟಸ್ಥಗೊಳಿಸುತ್ತದೆ.