ಇನ್ನೊಂದು ಶ್ರೇಷ್ಠ ದಾನ : ಚರ್ಮದಾನ


Team Udayavani, Apr 25, 2021, 5:06 PM IST

Untitled-1

ಚರ್ಮವು ನಮ್ಮ ರಕ್ಷಕ, ಸ್ಪರ್ಶದ ಅನುಭವವನ್ನು ನೀಡುತ್ತದೆ ಮತ್ತು ನಮ್ಮ ಗುರುತು ಕೂಡ ಆಗಿದೆ. ಜಗತ್ತಿಗೆ ಕಾಣುವ ನಮ್ಮ ಸ್ವರೂಪಕ್ಕೆ ಕಾರಣ ಅದು. ನಮ್ಮ ಅಂಗಾಂಗಗಳ ಸುತ್ತ ರಕ್ಷಕ ಕವಚವಾಗಿ ನಿಲ್ಲುವ ಚರ್ಮವು ಚಳಿ, ಮಳೆ, ಬಿಸಿಲು ಹಾಗೂ ದಿನಂಪ್ರತಿಯ ಗಾಯ- ಗೀರುಗಳಿಂದ ನಮ್ಮ ದೇಹವನ್ನು ಕಾಪಾಡುತ್ತದೆ. ಚರ್ಮವು ಒಂದೆಡೆ ಕಠಿನ ಮತ್ತು ಬಲಿಷ್ಠವಾಗಿರುವಂತೆಯೇ ಇನ್ನೊಂದೆಡೆ ಸೂಕ್ಷ್ಮ ಸಂವೇದಿ ಮತ್ತು ಸುಂದರವೂ ಆಗಿದೆ. ನಿರ್ದಿಷ್ಟ ಆಕಾರ ಮತ್ತು ಆಕೃತಿ ಇಲ್ಲದ ಅಂಗವಾಗಿರುವ ಅದು ದೇಹದ ಇತರ ಯಾವುದೇ ಅಂಗದಂತೆ ಇಲ್ಲ. ಜತೆಗೆ ವಿಸ್ತೀರ್ಣ ಮತ್ತು ಪ್ರಮಾಣದಲ್ಲಿ ಅದು ಅತ್ಯಂತ ದೊಡ್ಡ ಅಂಗವಾಗಿದೆ.

ತನ್ನಿಂದ ತಾನಾಗಿಯೇ ಗುಣ ಹೊಂದುವ ಇನ್ನೊಂದು ಅದ್ಭುತ ಶಕ್ತಿಯೂ ಚರ್ಮಕ್ಕಿದೆ. ದಿನಂಪ್ರತಿ ಗಾಯ, ಹಾನಿಗಳಿಗೆ ಒಳಗಾದರೂ ಹೆಚ್ಚುಕಡಿಮೆ ಸಂಪೂರ್ಣವಾಗಿ ಗುಣ ಹೊಂದಿ ಪೂರ್ವ ಸ್ವರೂಪಕ್ಕೆ ಮರಳುವ ಸಾಮರ್ಥ್ಯ ಚರ್ಮಕ್ಕಿದೆ. ಅಪಘಾತ, ಅಗ್ನಿ ಅನಾಹುತ, ಸೋಂಕುಗಳು ಮತ್ತು ಇತರ ಘಟನೆಗಳಿಂದ ಬಾಹ್ಯ ಸಹಾಯ ಇಲ್ಲದೆ ಗುಣ ಹೊಂದುವುದು ಕಷ್ಟಸಾಧ್ಯ ಎನ್ನಬಹುದಾದಷ್ಟು ಮಟ್ಟಿಗೆ ಚರ್ಮವು ಹಾನಿಗೀಡಾಗುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹವು ತನ್ನ ಇತರ ಎಲ್ಲ ಸಂಪನ್ಮೂಲಗಳನ್ನು ಚರ್ಮದ ಗಾಯ ಗುಣಪಡಿಸಿಕೊಳ್ಳುವುದಕ್ಕೆ ಮೀಸಲಾಗಿ ಇರಿಸುತ್ತದೆ. ಇದು ದೇಹದ ಮೇಲೆ ಹಲವು ಬಗೆಗಳಲ್ಲಿ ಪರಿಣಾಮ ಬೀರುತ್ತದೆ. ಪ್ರೊಟೀನ್‌ಗಳು, ಶಕ್ತಿ, ವಿಟಮಿನ್‌ಗಳು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ಗಾಯ ಗುಣ ಮಾಡಿಕೊಂಡು ಸೋಂಕು ಉಂಟಾಗದಂತೆ ಹೋರಾಡುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಇದೇ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ನಷ್ಟ, ದಣಿವು, ಸ್ನಾಯುರಾಶಿ ನಷ್ಟದಂತಹ ಸಮಸ್ಯೆಗಳಿಗೆ ಕಾರಣವಾಗುವ ದೇಹಕ್ರಿಯಾ ಪ್ರತಿಸ್ಪಂದನೆಯೂ ಉಂಟಾಗಬಹುದು. ಗಾಯಗಳು ದೇಹದೊಳಗೆ ಸೋಂಕುಗಳು ಪ್ರವೇಶಿಸುವ ದುರ್ಬಲ ರಕ್ಷಣ ವ್ಯವಸ್ಥೆಯಿರುವ ಪ್ರವೇಶ ದ್ವಾರಗಳೂ ಆಗಿರುತ್ತವೆ. ಚರ್ಮದ ರಕ್ಷಣ ವ್ಯವಸ್ಥೆಗೆ ಆಗಿರುವ ನಷ್ಟದಿಂದಾಗಿ ದೇಹದಿಂದ ನೀರಿನಂಶ, ಪ್ರೊಟೀನ್‌ಗಳು, ಖನಿಜಾಂಶಗಳು ಮತ್ತು ಇಲೆಕ್ಟ್ರೊಲೈಟ್‌ಗಳು ಭಾರೀ ಪ್ರಮಾಣದಲ್ಲಿ ಸೋರಿಕೆಯಾಗುತ್ತವೆ. ಇದರಿಂದಾಗಿ ರೋಗಿಯ ಆರೋಗ್ಯ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ, ಪರಿಣಾಮವಾಗಿ ಪ್ರಾಣಾಪಾಯ ಉಂಟಾಗಬಹುದು ಅಥವಾ ಗುಣ ಕಾಣುವುದು ವಿಳಂಬವಾಗಬಹುದು, ಮುಂದಿನ ಅಸ್ತಿತ್ವ ವಿರೂಪ ಮತ್ತು ವೈಕಲ್ಯಗಳಿಂದ ಕೂಡಿದ್ದಾಗಿರಬಹುದು.

ಬೆಂಕಿಯಿಂದ ಉಂಟಾಗುವ ಗಾಯ ಇಂತಹ ತೀವ್ರ ಸ್ವರೂಪದ ಗಾಯಗಳಲ್ಲಿ ಒಂದಾಗಿದೆ. ಅನೇಕ ಬಾರಿ ಈ ಗಾಯಗಳು ಕ್ಷುಲ್ಲಕವಾಗಿ ಕಾಣಬಹುದಾಗಿದ್ದರೂ ರೋಗಿಯು ತೀವ್ರ ನೋವನ್ನು ಅನುಭವಿಸುತ್ತಿರುತ್ತಾನೆ, ಆಸ್ಪತ್ರೆಗೆ ಬಂದರೂ ತೀವ್ರವಾಗಿ ಕಂಗಾಲಾಗಿರುತ್ತಾನೆ, ಕೆಲವು ದಿನಗಳ ಕಾಲ ಹಾಸಿಗೆಯಲ್ಲಿ ಇರಬೇಕಾಗುತ್ತದೆ. ದೇಹದ ಮೇಲ್ಮೆ„ಯ ಶೇ. 25ರಷ್ಟು ಭಾಗವನ್ನು ಒಳಗೊಂಡ ತೀವ್ರ ಬಿಸಿಲಿನ ಹೊಡೆತ ಕೂಡ ವ್ಯಕ್ತಿಯನ್ನು ತೀವ್ರವಾಗಿ ಬಾಧಿಸಬಹುದಾಗಿದ್ದು, ಆತ ಅಥವಾ ಆಕೆಯ ಪ್ರಾಣಕ್ಕೆ ಅಪಾಯ ತರಬಲ್ಲುದಾಗಿದೆ.

ಜಾಗತಿಕವಾಗಿ ಬೆಂಕಿಯ ಗಾಯಗಳ ಪ್ರಮಾಣ ಹೆಚ್ಚಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಪ್ರತೀ ವರ್ಷ ಭಾರತದಲ್ಲಿ 70 ಲಕ್ಷ ಮಂದಿ ಅಗ್ನಿ ದುರಂತಗಳಲ್ಲಿ ಗಾಯಗೊಳ್ಳುತ್ತಾರೆ. ಪ್ರತೀ ವರ್ಷ 1.4 ಲಕ್ಷ ಮಂದಿ ಬೆಂಕಿ ದುರಂತಗಳಲ್ಲಿ ಸಾವಿಗೀಡಾದರೆ 2.4 ಲಕ್ಷ ಮಂದಿ ಅಂಗವೈಕಲ್ಯ ಅನುಭವಿಸುತ್ತಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಇದರಿಂದ ಕುಟುಂಬಗಳ ಮೇಲಾಗುವ ಮಾನಸಿಕವಾದ ಮತ್ತು ಆರ್ಥಿಕವಾದ ಪರಿಣಾಮಗಳು ಚೇತರಿಸಿಕೊಳ್ಳಲಾಗದಷ್ಟು ತೀವ್ರವಾಗಿರುತ್ತವೆ.

ವಿಜ್ಞಾನದಲ್ಲಿ ಆಗಿರುವ ಅದ್ಭುತ ಪ್ರಗತಿಯಿಂದಾಗಿ ನಾವು ಅನೇಕ ಭೀಕರ ಕಾಯಿಲೆಗಳ ಮೇಲೆ ವಿಜಯ ಸಾಧಿಸಿದ್ದೇವೆ ಮತ್ತು ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆದು ಸುಖ-ಸೌಖ್ಯಗಳನ್ನು ಹೊಂದಿದ್ದೇವೆ. ಇಷ್ಟೆಲ್ಲ ಪ್ರಗತಿ ಸಾಧ್ಯವಾಗಿದ್ದರೂ ಈಗಲೂ ಜಗತ್ತಿನ ಅತ್ಯುತ್ತಮ ಕೇಂದ್ರಗಳಲ್ಲಿ ಕೂಡ ಬೆಂಕಿಯ ಗಾಯಗಳ

ನಿರ್ವಹಣೆಯು ವೈದ್ಯಲೋಕಕ್ಕೆ ಒಂದು ಸವಾಲಾಗಿ ಉಳಿದಿದೆ. ಇದು ಅಭಿವೃದ್ಧಿಶೀಲ ದೇಶಗಳಲ್ಲಿ ಇನ್ನೂ ಹೆಚ್ಚಿದೆ. ಜಗತ್ತಿನ ಅನೇಕ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಹೋಲಿಸಬಹುದಾದ ಸೌಕರ್ಯ, ಸಮೃದ್ಧಿ, ಶಿಕ್ಷಣ ವ್ಯವಸ್ಥೆ ಮತ್ತು ವೈದ್ಯಕೀಯ ಮುನ್ನಡೆ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿದೆ. ಇಲ್ಲಿ ಜಗತ್ತಿನ ಮುಂದುವರಿದ ಭಾಗಗಳಿಗೆ ತುಲನೆ ಮಾಡಬಹುದಾದ ಪರಿಣಿತ ವೈದ್ಯರು ಮತ್ತು ತರಬೇತಾದ ನರ್ಸಿಂಗ್‌ ಸಿಬಂದಿಯನ್ನು ಹೊಂದಿರುವ ವೈದ್ಯಕೀಯ ಸಂಸ್ಥೆಗಳಿವೆ.

ಮಣಿಪಾಲ ಕೆಎಂಸಿಯಲ್ಲಿ ಚರ್ಮ ಕಸಿ, ಬ್ಯಾಂಕ್‌ :

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ರೋಗಿಗಳ ಚಿಕಿತ್ಸೆಯಲ್ಲಿ ಚರ್ಮದ ಅಲೊಗ್ರಾಫ್ಟ್ ಚಿಕಿತ್ಸೆಯನ್ನು ಒದಗಿಸಲಾಗುತ್ತಿದ್ದು, ಸುಟ್ಟಗಾಯಗಳ ಚಿಕಿತ್ಸೆಯ ವಿಚಾರದಲ್ಲಿ ಇದೊಂದು ಆಶಾದಾಯಕ ಹೆಜ್ಜೆ ಎಂದು ಸಾಬೀತಾಗಿದೆ. ತೀವ್ರ ಸುಟ್ಟಗಾಯಗಳಿಗೆ ಒಳಗಾಗಿರುವ ರೋಗಿಗಳ ನಿರ್ವಹಣೆ, ಪುನರುಜ್ಜೀವನ ಹಿಂದೆ ಅಪರೂಪದ ಸಾಧನೆಯಾಗಿತ್ತು, ಆದರೆ ಚರ್ಮದ ಅಲೊಗ್ರಾಫ್ಟ್ ಚಿಕಿತ್ಸೆಯಿಂದಾಗಿ ಈಗ ಇದೊಂದು ರೂಢಿಗತ ಕ್ರಿಯೆ ಎಂಬಂತಾಗಿದೆ. ನವಿಮುಂಬಯಿಯ ನ್ಯಾಶನಲ್‌ ಬರ್ನ್ಸ್ ಸೆಂಟರ್‌, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಕೊಯಮತ್ತೂರಿನ ಗಂಗಾ ಆಸ್ಪತ್ರೆಯಂತಹ ಕೇಂದ್ರಗಳಿಂದ ನಾವು ಇಲ್ಲಿಗೆ ಹ್ಯೂಮನ್‌ ಸ್ಕಿನ್‌ ಅಲೊಗ್ರಾಫ್ಟ್ (ಎಚ್‌ಎಸ್‌ಎ)ಗಳನ್ನು ತರಿಸಿಕೊಳ್ಳುತ್ತಿದ್ದೆವು. ಆದರೆ ಈ ದೂರದ ಸ್ಥಳಗಳಿಂದ ಎಚ್‌ಎಸ್‌ಎಯನ್ನು ತರಿಸಿಕೊಳ್ಳುವ ಸಂದರ್ಭದಲ್ಲಿ ಉಂಟಾಗುವ ಸರಬರಾಜು, ಸಮಯ, ವೆಚ್ಚ ಮೊದಲಾದ ಅಂಶಗಳು ನಾವು ನಮ್ಮದೇ ಆದ ಚರ್ಮ ಬ್ಯಾಂಕ್‌ ಒಂದನ್ನು ಸ್ಥಾಪಿಸಿಕೊಳ್ಳಬೇಕು ಎಂಬ ದೃಢ ನಿರ್ಧಾರವನ್ನು ಹೊಂದುವುದಕ್ಕೆ ಕಾರಣವಾದವು.

ಹೀಗಾಗಿ ಭಾರತದಲ್ಲಿ ಬಹುತೇಕ ಚರ್ಮ ಬ್ಯಾಂಕ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ ರೋಟರಿ ಫೌಂಡೇಶನ್‌ನ ಸಹಾಯವನ್ನು ಕೇಳಿದೆವು. ನವಿ ಮುಂಬಯಿಯಲ್ಲಿರುವ ನ್ಯಾಶನಲ್‌ ಬರ್ನ್ಸ್ ಸೆಂಟರ್‌ (ಎನ್‌ಬಿಎ)ನ ಡಾ| ಸುನಿಲ್‌ ಕೇಶ್ವಾನಿ ಅವರ ಸಹಾಯ ಮತ್ತು ಮಾರ್ಗದರ್ಶನದಲ್ಲಿ ನಮಗೆ ನಮ್ಮದೇ ಆದ ಚರ್ಮ ಬ್ಯಾಂಕ್‌ ಸ್ಥಾಪಿಸುವುದಕ್ಕೆ ಸಾಧ್ಯವಾಗಿದೆ. ಮೂರು ಪ್ರತಿಷ್ಠಿತ ಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಈ ಮಹಾಸಾಧನೆ ಸಾಧ್ಯವಾಗಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜ್ಯುಕೇಶನ್‌ (ಮಾಹೆ), ರೋಟರಿ ಇಂಟರ್‌ನ್ಯಾಶನಲ್‌ ಮತ್ತು ಎನ್‌ಬಿಸಿ – ಇವೇ ಆ ಮೂರು ಸಂಸ್ಥೆಗಳು. ಎನ್‌ಬಿಸಿಯು ಭಾರತದಲ್ಲಿ ಸುಟ್ಟಗಾಯಗಳ ಆರೈಕೆಯಲ್ಲಿ ಅತ್ಯುತ್ಕೃಷ್ಟತೆಯ ಕೇಂದ್ರವಾಗಿದ್ದು, ಚರ್ಮದ ಅಲೊಗ್ರಾಫ್ಟ್ ಮತ್ತು ಸುಟ್ಟಗಾಯಗಳ ಆರೈಕೆಯ ವಿಚಾರದಲ್ಲಿ ಮೊದಲಿಗನಾಗಿದೆ. ರೋಟರಿ ಇಂಟರ್‌ನ್ಯಾಶನಲ್‌ನ ಸಮಾಜಸೇವಾ ಕಾರ್ಯಗಳು ಜಾಗತಿಕವಾಗಿ ಗುರುತಿಸಲ್ಪಟ್ಟಂಥವು. ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಯ ಕ್ಷೇತ್ರಗಳಲ್ಲಿ ಮಣಿಪಾಲ್‌ ಗ್ರೂಪ್‌ ಮತ್ತು ಮಾಹೆಯ ಹೆಸರುಗಳು ದೇಶದಲ್ಲಿ ಮನೆಮಾತಾಗಿರುವಂಥವು. ರೋಟರಿ ಇಂಟರ್‌ನ್ಯಾಶನಲ್‌ ಗ್ರ್ಯಾಂಟ್‌ನ ಸಹಾಯ ಮತ್ತು ರೋಟರಿ ಕ್ಲಬ್‌ ಆಫ್ ಮಣಿಪಾಲ್‌ ಟೌನ್‌ಗಳ ಪ್ರಯತ್ನಗಳ ಫ‌ಲವಾಗಿ ರೋಟರಿಯು 83 ಲಕ್ಷ ರೂ.ಗಳಿಗೆ ಮಿಗಿಲಾಗಿ ಮತ್ತು ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜ್ಯುಕೇಶನ್‌ 50 ಲಕ್ಷ ರೂ.ಗಳನ್ನು ಒದಗಿಸಿದೆ.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಚರ್ಮ ಬ್ಯಾಂಕ್‌ ಭಾರತದಲ್ಲಿ 17ನೆಯದು, ಕರ್ನಾಟಕದಲ್ಲಿ ಮೂರನೆಯದು ಹಾಗೂ ಕರಾವಳಿ ಕರ್ನಾಟಕದ ಪಾಲಿಗೆ ಮೊದಲನೆಯದು. ಪ್ರಸ್ತುತ ಮಾಹೆ ಮತ್ತು ರೋಟರಿಗಳ ಸಹಯೋಗದಲ್ಲಿ ಮುದ್ರಣ, ದೂರದರ್ಶನ, ರೇಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಚರ್ಮದಾನದ ಪ್ರಾಮುಖ್ಯ, ಸುಟ್ಟಗಾಯ, ಅವಘಡಗಳ ಸಂದರ್ಭದಲ್ಲಿ ಚರ್ಮದ ಅಲೊಗ್ರಾಫ್ಟ್ನ ಜೀವ ಉಳಿಸುವ ಪಾತ್ರಗಳ ಬಗ್ಗೆ ಜನಸಮುದಾಯದಲ್ಲಿ ಅರಿವು ಹೆಚ್ಚಿಸುವ, ವಿಸ್ತರಿಸುವ ಕಾರ್ಯ ನಡೆಯುತ್ತಿದೆ. “ನೀವೂ ಹೀರೋಗಳಾಗಬಹುದು’ ಎಂಬ ಧ್ಯೇಯದಡಿಯಲ್ಲಿ ಜನಸಾಮಾನ್ಯರಲ್ಲಿ ಅಂಗದಾನ, ಚರ್ಮದಾನದ ಬಗ್ಗೆ ತಿಳಿವಳಿಕೆ ಹೆಚ್ಚಿಸುವ ಅಭಿಯಾನವೊಂದನ್ನು ನಾವು ಆರಂಭಿಸಿದ್ದೇವೆ.

ಮೊದಲ ಚರ್ಮ ಬ್ಯಾಂಕ್‌ :

1949ರಲ್ಲಿ ಆರಂಭವಾದ ಅಮೆರಿಕದ ನೌಕಾಸೇನಾ ವಿಭಾಗದ ಚರ್ಮ ಬ್ಯಾಂಕ್‌ ಜಗತ್ತಿನ ಮೊದಲ ಚರ್ಮ ಬ್ಯಾಂಕ್‌ ಆಗಿದೆ. ಕಳೆದ ಹಲವು ದಶಕಗಳ ಅವಧಿಯಲ್ಲಿ ಅಮೆರಿಕ ಮತ್ತು ಯುರೋಪಿನ ಹಲವಾರು ದೇಶಗಳಲ್ಲಿ ಚರ್ಮ ಬ್ಯಾಂಕ್‌ಗಳು ಆರಂಭವಾಗಿವೆ. 2009ರಲ್ಲಿ ಮುಂಬಯಿಯಲ್ಲಿ ಆರಂಭವಾದ ಚರ್ಮ ಬ್ಯಾಂಕ್‌ ಭಾರತದಲ್ಲಿ ಮೊದಲನೆಯದು. ಇದನ್ನು ನೆದರ್‌ಲ್ಯಾಂಡ್ಸ್‌ ನಲ್ಲಿರುವ ಯುರೋ ಸ್ಕಿನ್‌ ಬ್ಯಾಂಕ್‌ ಮತ್ತು ರೋಟರಿ ಇಂಟರ್‌ನ್ಯಾಶನಲ್‌ ಸಹಕಾರದಿಂದ ಆರಂಭಿಸಲಾಗಿತ್ತು. ಇದುವರೆಗೆ ನಮ್ಮ ದೇಶದಲ್ಲಿ 16 ಚರ್ಮ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಎರಡು ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಇವೆ.

ಚರ್ಮದಾನ :

ಸಂಸ್ಕರಣೆಗೊಂಡ ಚರ್ಮವನ್ನು ಸುಟ್ಟಗಾಯದ ಮೇಲೆ ಡ್ರೆಸ್ಸಿಂಗ್‌ ಮಾಡಿದಂತೆ ಇರಿಸಿದಾಗ ಒಂದು ವಿಸ್ಮಯದಂತೆ ಸುಟ್ಟಗಾಯವು ತ್ವರಿತಗತಿಯಲ್ಲಿ ಗುಣವಾಗಿ ಜೀವ ಉಳಿಯುತ್ತದೆ. ಚರ್ಮದ ಮ್ಯಾಚಿಂಗ್‌ ಅಗತ್ಯವಿರುವುದಿಲ್ಲ, ಏಕೆಂದರೆ, ಗಾಯ ಗುಣವಾದ ಅನಂತರ ಡ್ರೆಸಿಂಗ್‌ ಮಾಡಿದ ಚರ್ಮವು ತಂತಾನೇ ಉದುರಿಹೋಗುತ್ತದೆ. ರೋಟರಿ ಮಾಹೆ ಚರ್ಮ ಬ್ಯಾಂಕ್‌ನಲ್ಲಿ ನಾವು ಯಾವುದೇ ನಷ್ಟವನ್ನು ಮಾಡಿಕೊಳ್ಳದೆ, ಲಾಭವನ್ನೂ ಇರಿಸಿಕೊಳ್ಳದೆ ಚರ್ಮವನ್ನು ಚಿಕಿತ್ಸೆಗಾಗಿ ಒದಗಿಸುತ್ತೇವೆ. ಚರ್ಮದಾನಕ್ಕೆ ನಾವು ಹಣ ಕೊಡುವುದಿಲ್ಲ. ಇದೊಂದು ಶ್ರೇಷ್ಠವಾದ ಅಂಗದಾನವಾಗಿದೆ.

ಚರ್ಮದಾನ ಮಾಡುವುದು ಹೇಗೆ? :

ಇಹಲೋಕ ಪಯಣವನ್ನು ಮುಗಿಸಿದ ದಾನಿಯ ದೇಹದಿಂದ ಚರ್ಮವನ್ನು ನಮ್ಮ ರೋಟರಿ ಮಾಹೆ ಚರ್ಮ ಬ್ಯಾಂಕ್‌ನ ವೈದ್ಯಕೀಯ ತಂಡ ಮನೆಗೇ ಬಂದು ಸಂಗ್ರಹಿಸಿ, ಸಂಸ್ಕರಿಸಿ, ಶೇಖರಿಸಿ ಇರಿಸುತ್ತಾರೆ. ದಾನಿಗೆ ಅತ್ಯಂತ ಗೌರವವನ್ನು ನೀಡಿ, ದೇಹವನ್ನು ವಿರೂಪಗೊಳಿಸದೆಯೇ ಬೆನ್ನು, ಒಳತೊಡೆಗಳಿಂದ ಚರ್ಮ ಸಂಗ್ರಹಣೆ ನಡೆಯುತ್ತದೆ. ವ್ಯಕ್ತಿ ಮೃತಪಟ್ಟ ಆರು ಗಂಟೆಗಳ ಒಳಗೆ ನಮಗೆ ಮಾಹಿತಿ ನೀಡಿದರೆ ನಮ್ಮ ವೈದ್ಯಕೀಯ ತಂಡ ಚರ್ಮವನ್ನು ಸ್ವೀಕರಿಸುತ್ತದೆ. ಇದೊಂದು ಶ್ರೇಷ್ಠವಾದ ಮತ್ತು ಅಮೂಲ್ಯವಾದ ಅಂಗದಾನವಾಗಿದೆ. ರೋಟರಿ ಮಾಹೆ ಚರ್ಮ ಬ್ಯಾಂಕ್‌ನ ಸಹಾಯವಾಣಿ: 96866 76564.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತು ಇನ್ನಿತರ ವೈದ್ಯಕೀಯ ಕಾಲೇಜುಗಳು ಹಾಗೂ ಚಾರಿಟೆಬಲ್‌ ಸಂಸ್ಥೆಗಳಿಂದಾಗಿ ಕರಾವಳಿ ಭಾಗವು ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಗಳನ್ನು ಒದಗಿಸುವಷ್ಟು ಸಶಕ್ತವಾಗಿದೆ.

ಜನರ ಅಗತ್ಯಗಳನ್ನು ಪೂರೈಸುವ, ಸೇವೆ ಒದಗಿಸುವ ಸಾಮಾಜಿಕ ಸಂಸ್ಥೆಯನ್ನು ಕಟ್ಟಿಬೆಳೆಸುವ ಡಾ| ಟಿ.ಎಂ.ಎ. ಪೈ ಅವರ ಆಗಿನ ಕನಸು ಇಂದು ಸಾಕಾರವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷವಾಗಿ ಗಮನ ಹರಿಸಬೇಕಾದ ಹಲವು ವಿಭಾಗಗಳನ್ನು ಅಂದೇ ಗುರುತಿಸಿದ್ದ ಡಾ| ಪೈಯವರು ಸುಟ್ಟ ಗಾಯಗಳಿಗೆ ಚಿಕಿತ್ಸೆ ಒದಗಿಸುವ ಸೌಲಭ್ಯ ಮತ್ತು ಸಂಪನ್ಮೂಲಗಳ ಬಗ್ಗೆ ಆರಂಭದ ದಿನಗಳಿಂದಲೇ ಕೆಲಸ ಮಾಡಿದ್ದರು. ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಅಡಿಯಲ್ಲಿ ಸುಟ್ಟ ಗಾಯಗಳ ಯೂನಿಟ್‌ ಅನ್ನು 1967ರಲ್ಲೇ ಆರಂಭಿಸಲಾಗಿತ್ತು. ಕಳೆದ 50 ವರ್ಷಗಳಲ್ಲಿ ಈ ಭಾಗದ ಮಾತ್ರವಲ್ಲದೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ – ದಕ್ಷಿಣ ಕರ್ನಾಟಕ, ಮಹಾರಾಷ್ಟ್ರ, ಕೇರಳ ಗಡಿಭಾಗಗಳಿಂದಲೂ ಬರುವ ಅಸಂಖ್ಯಾಕ ಸುಟ್ಟ ಗಾಯಾಳುಗಳಿಗೆ ಈ ವಿಭಾಗವು ಚಿಕಿತ್ಸೆ ಒದಗಿಸಿ ಪುನರ್‌ಜನ್ಮ ನೀಡಿದೆ. ಈ ಘಟಕವನ್ನು ದೇಶದ ಅತ್ಯಾಧುನಿಕ, ಅತ್ಯುತ್ತಮ ಸುಟ್ಟಗಾಯಗಳ ವಿಭಾಗವನ್ನಾಗಿ ಕಟ್ಟಿ ಬೆಳೆಸಲಾಗಿದೆ. ಇಲ್ಲಿ ಗಾಯಾಳುವನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರ ಒತ್ತು ನೀಡುವುದಲ್ಲ; ಆರೈಕೆ -ಚಿಕಿತ್ಸೆಯ ಗುಣಮಟ್ಟದಲ್ಲಿ ಸತತ ಅಭಿವೃದ್ಧಿಯ ಮೂಲಕ ಪುನರ್ವಸತಿ, ಜೀವನದ ಗುಣಮಟ್ಟ ವೃದ್ಧಿಗೂ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಜನಸಾಮಾನ್ಯರ ಕೈಗೆಟಕುವ ರೀತಿಯ ಅತ್ಯುತ್ತಮ ಮತ್ತು ಅತ್ಯಾಧುನಿಕ ಚಿಕಿತ್ಸೆ ಮತ್ತು ಆರೈಕೆಯನ್ನು ಇಲ್ಲಿ ಒದಗಿಸಿಕೊಡುವ ದೃಷ್ಟಿಯಿಂದ ಸಮಗ್ರ ಚಿಕಿತ್ಸಾ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವ ಬಹು ವೈದ್ಯಕೀಯ ವಿಭಾಗ ಏಕೀಕರಣ ಕ್ರಮವು ಕಳೆದ ಹಲವು ವರ್ಷಗಳ ಅವಧಿಯಲ್ಲಿ ಇಲ್ಲಿ ರೂಪುಗೊಂಡಿದೆ.

 

ಡಾ| ಎನ್‌.ಸಿ. ಶ್ರೀಕುಮಾರ್‌

ಪ್ರೊಫೆಸರ್‌ ಮತ್ತು ಹೆಡ್‌,

ಡಾ| ಜೋಸೆಫ್ ಥಾಮಸ್‌

ಅಸೋಸಿಯೇಟ್‌ ಪ್ರೊಫೆಸರ್‌

ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.