ರಾಜಕುಮಾರಿಯ ಶಾಪ ವಿಮೋಚನೆ
Team Udayavani, Jan 10, 2019, 12:30 AM IST
ತ್ರಿಪುರಾ ರಾಜ್ಯದ ರಾಜಕುಮಾರಿ ಅರೋರಾ ತ್ರಿಪುರ ಸುಂದರಿಯಾಗಿದ್ದಳು. ಹಾಗೂ ಮಹಾರಾಣಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ದೇವರಿಗೆ ಪೂಜೆ ಪುನಸ್ಕಾರ ಮಾಡಿ ಪಡೆದಿದ್ದರಿಂದ ರಾಜಕುಮಾರಿ ಮೇಲೆ ಹೆಚ್ಚಿನ ಪ್ರೀತಿ ಇತ್ತು. ಅರೋರಾಗೆ ನಿದ್ದೆ ಹೋಗುವ ಶಾಪವಿತ್ತು. ಒಮ್ಮೆ ನಿದ್ದೆ ಹೋದರೆ ವಾರಗಟ್ಟಲೆ, ತಿಂಗಳುಗಟ್ಟಲೆ ಏಳುತ್ತಿರಲಿಲ್ಲ. ರಾಜ ತನ್ನ ಮಗಳ ಶಾಪ ದೂರ ಮಾಡಿದವರಿಗೆ ಇನಾಮು ಘೋಷಿಸಿದ. ದೂರ ದೇಶದಿಂದ ಮಂತ್ರವಾದಿಯೊಬ್ಬ ಬಂದು ಮಂತ್ರಿಸಿದ ಗಿಡಮೂಲಿಕೆಯನ್ನು ರಾಜಕುಮಾರಿಗೆ ಮುಟ್ಟಿಸಿದಾಕ್ಷಣ ಆಕೆಯ ಖಾಯಿಲೆ ಗುಣವಾಗಿತ್ತು. ಆದರೆ ಶಾಶ್ವತವಾಗಿ ಶಾಪ ಹೋಗಿರಲಿಲ್ಲ. ಅರೋರಾಳಿಗೆ 23 ವರ್ಷವಾದಾಗ, ಆದೇ ಗಿಡಮೂಲಿಕೆ ಮೈಗೆ ತಗುಲಿದರೆ ಇಡೀ ರಾಜ್ಯಕ್ಕೆ ಆಪತ್ತು ಒದಗುವುದೆಂದು ಅರಮನೆಯ ಜ್ಯೋತಿಷಿಗಳು ಹೇಳಿದರು. ಹೀಗಾಗಿ ರಾಜ್ಯದೆಲ್ಲೆಡೆ ಆ ಗಿಡಮೂಲಿಕೆ ಬೆಳೆಯುವುದನ್ನು ನಿಷೇಧಿಸಲಾಯಿತು.ರಾಜ ರಾಣಿ, ಅರೋರಾಳನ್ನು ಬಹಳ ಜತನದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು.
ಅರೋರಾಗೆ 23 ವರ್ಷವಾದಾಗ ಅರಮನೆಯಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಿದರು. ಬಹಳ ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವಿವಿಧ ರಾಜ್ಯಗಳಿಂದ ಉಡುಗೊರೆಗಳು ಬಂದವು. ಮಾರನೇ ದಿನ ಉಡುಗೊರೆಗಳ ಡಬ್ಬವನ್ನು ತೆರೆದು ನೋಡಿದಳು ಅರೋರಾ. ಶತ್ರು ಪಾಳೆಯದ ರಾಜನೊಬ್ಬ ಯಾವ ಗಿಡಮೂಲಿಕೆಯಿಂದ ತ್ರಿಪುರಾ ರಾಜ್ಯಕ್ಕೆ ಆಪತ್ತು ಒದಗುತ್ತೋ ಅದೇ ಗಿಡಮೂಲಿಕೆಯನ್ನು ಉಡುಗೊರೆಯಾಗಿ ಕಳಿಸಿದ್ದ. ಆ ಉಡುಗೊರೆಯನ್ನು ತೆರೆಯುತ್ತಲೇ ರಾಜಕುಮಾರಿ ಮತ್ತೆ ನಿದ್ದೆ ಹೋದಳು. ಆ ಕ್ಷಣವೇ ಇಡೀ ರಾಜ್ಯದವರಿಗೆಲ್ಲಾ ಶಾಪ ತಟ್ಟಿ ನಿದ್ದೆಗೆ ಶರಣಾದರು.
ಆದರೆ ವಿಧಿ ಮತ್ತಿನ್ನೇನೋ ಬರೆದಿತ್ತು. ತಿಂಗಳುಗಳ ನಂತರ ತ್ರಿಪುರಾ ರಾಜ್ಯಕ್ಕೆ ಯುವ ರಾಜಕುಮಾರನೊಬ್ಬ ಭೇಟಿ ನೀಡಿದನು. ಅಲ್ಲಿ ಎಲ್ಲರೂ ನಿದ್ದೆಗೆ ಶರಣಾಗಿರುವುದನ್ನು ಕಂಡು ಅಚ್ಚರಿಯಾಯಿತು. ಅರಮನೆಯಲ್ಲಿ ಅರೋರಾಳನ್ನು ಕಂಡು ಆಕೆಯ ಸೌಂದರ್ಯಕ್ಕೆ ಮರುಳಾದನು. ಅತ್ಯಂತ ಸುಂದರ ಹಾಗೂ ಆಕರ್ಷಣೆಯಿಂದ ಕೂಡಿದ್ದ ಅರೋರಳನ್ನು ಚುಂಬಿಸುವ ಮನಸ್ಸಾಗಿ ಅವಳ ಹತ್ತಿರ ಬಂದನು. ರಾಜಕುಮಾರನ ಚುಂಬನದಿಂದ ಅರೋರಾಳ ಶಾಪ ವಿಮೋಚನೆಯಾಯಿತು. ಇಡೀ ರಾಜ್ಯವೇ ಶಾಪಮುಕ್ತವಾಯಿತು. ರಾಜಕುಮಾರಿ ಮತ್ತು ರಾಜಕುಮಾರನ ಮದುವೆ ವೈಭವದಿಂದ ನೆರವೇರಿತು. ರಾಜ್ಯದಲ್ಲಿ ಮತ್ತೆ ಶಾಂತಿ ಸಂತಸ ನೆಲೆಸಿತು.
ಪುಷ್ಪಾ