ಕಥೆ: ನಾಣ್ಯದ ಚೀಲ
Team Udayavani, Mar 2, 2017, 11:13 AM IST
ಒಂದು ಊರಿನಲ್ಲಿ ಒಬ್ಬ ಎಣ್ಣೆ ವ್ಯಾಪಾರಿ ಮತ್ತು ಮಾಂಸದ ವ್ಯಾಪಾರಿಗಳಿದ್ದರು. ಅವರಿಬ್ಬರ ಮಧ್ಯೆ ಒಂದು ವಿಷಯಕ್ಕೆ ದೊಡ್ಡ ಜಗಳವಾಯಿತು. ಆ ಜಗಳದಲ್ಲಿ ನ್ಯಾಯಕ್ಕಾಗಿ ರಾಜಾ ಅಕ್ಬರನ ಬಳಿಗೆ ಹೋದರು. “ಬೀರಬಲ್, ಇವರ ಜಗಳಕ್ಕೆ ನೀನೇ ಪರಿಹಾರ ಸೂಚಿಸಬೇಕು’ ಎಂದ ಅಕ್ಬರ್.
“ನಿಮ್ಮಿಬ್ಬರ ನಡುವಿನ ಜಗಳವೇನು?’ ಬೀರಬಲ್ ಕೇಳಿದ. ಮಾಂಸದ ವ್ಯಾಪಾರಿ “ನಾನು ಮಾಂಸ ಮಾರುತ್ತಿದ್ದವ. ಈ ಎಣ್ಣೆ ವ್ಯಾಪಾರಿ ನನ್ನ ಅಂಗಡಿಗೆ ಬಂದು ಎಣ್ಣೆ ಕೊಂಡುಕೊಳ್ಳುವಂತೆ ಕೇಳಿದ. ನಾನು ಎಣ್ಣೆ ಹಾಕಿಸಿಕೊಳ್ಳಲು ಪಾತ್ರ ತರಲೆಂದು ಒಳಗೆ ಹೋದೆ. ನಾನು ಪಾತ್ರೆ ತೆಗೆದುಕೊಂಡು ಹೊರ ಬರುವ ವೇಳೆಗೆ ಈತ ನನ್ನ ನಾಣ್ಯಗಳ ಚೀಲವನ್ನು ಎತ್ತಿಕೊಂಡುಬಿಟ್ಟಿದ್ದಾನೆ. ನನ್ನ ನಾಣ್ಯದ ಚೀಲ ನನಗೆ ಕೊಡಿಸಬೇಕು’ ಎಂದು ಕೇಳಿಕೊಂಡನು.
ಎಣ್ಣೆ ವ್ಯಾಪಾರಿ “ಇಲ್ಲ! ಈತ ಸುಳ್ಳು ಹೇಳುತ್ತಿದ್ದಾನೆ. ಆ ನಾಣ್ಯದ ಚೀಲ ನನ್ನದೇ… ನಾನು ಆ ಚೀಲದಲ್ಲಿದ್ದ ನಾಣ್ಯಗಳನ್ನು ಎಣಿಸಿಕೊಳ್ಳುತ್ತಿದ್ದೆ. ಅದನ್ನು ಈತ ನೋಡಿದ. ನಾಣ್ಯಗಳ ಮೇಲಿನ ದುರಾಸೆಯಿಂದ ಆ ನಾಣ್ಯದ ಚೀಲ ತನ್ನದೆಂದು ಹೇಳುತ್ತಿದ್ದಾನೆ. ಈ ಚೀಲ ನನ್ನದೇ, ನನಗೆ ನ್ಯಾಯ ಮಾಡಿ’ ಎಂದು ಬೇಡಿಕೊಂಡನು. ಆ ಹಣದ ಚೀಲ ಯಾರದ್ದೆಂದು ನಿಜ ಹೇಳಿ ಎಂದು ಬೀರಬಲ್ ಎಷ್ಟು ಬಾರಿ ಕೇಳಿದರೂ ಅವರಿಬ್ಬರೂ “ನನ್ನದು, ನನ್ನದು’ ಎಂದು
ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿದ್ದರು. ಆಗ ಬೀರಬಲ್ಗೆ ಒಂದು ಉಪಾಯ ಹೊಳೆಯಿತು. ಒಂದು ದೊಡ್ಡ ಪಾತ್ರೆಯಲ್ಲಿ ನೀರು ತರುವಂತೆ ಬೀರಬಲ್
ಸೇವಕರಿಗೆ ಹೇಳಿದರು.
ಸೇವಕರು ದೊಡ್ಡ ಪಾತ್ರೆಯಲ್ಲಿ ನೀರು ತಂದಿಟ್ಟರು. ಬೀರಬಲ್ ಚೀಲದಲ್ಲಿದ್ದ ನಾಣ್ಯಗಳನ್ನು ನೀರಿನ ಪಾತ್ರೆಯೊಳಗೆ ಹಾಕಿದನು. ನೀರಿನ ಪಾತ್ರೆಯಲ್ಲಿ ನಾಣ್ಯಗಳಿಗೆ ಅಂಟಿಕೊಂಡಿದ್ದ ಎಣ್ಣೆ ತೇಲಿತು.ಆ ನಾಣ್ಯಗಳ ಚೀಲ ಎಣ್ಣೆ ವ್ಯಾಪಾರಿಯದ್ದೆಂದು ಎಲ್ಲರಿಗೂ ಅರ್ಥವಾಯಿತು. ಬೀರಬಲ್ ನಾಣ್ಯಗಳನ್ನು ಮತ್ತೆ ಚೀಲದಲ್ಲಿ ತುಂಬಿ ಎಣ್ಣೆ ವ್ಯಾಪಾರಿಗೆ ಕೊಟ್ಟು, ಸುಳ್ಳು ಹೇಳಿದ್ದಕ್ಕೆ ಮಾಂಸದ ವ್ಯಾಪಾರಿಗೆ ಶಿಕ್ಷೆ ವಿಧಿಸಿದರು.
ಬಿ.ವಿ.ಅನುರಾಧ