ಗ್ರಾಮರಸ್ ಸವರ್ಣ
ವೀರೇಂದ್ರ ಶೆಟ್ಟಿ ದೀರ್ಘ ಮಾತು
Team Udayavani, Oct 18, 2019, 5:30 AM IST
“ಸವರ್ಣ ದೀರ್ಘ ಸಂಧಿ’- ಈ ಚಿತ್ರದ ಬಗ್ಗೆ ನೀವು ಕೇಳಿರುತ್ತೀರಿ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಹಿಟ್ ಆಗುವ ಮೂಲಕ ಸಿನಿಮಾದ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೀರೇಂದ್ರ ಶೆಟ್ಟಿ ಈ ಚಿತ್ರದ ನಿರ್ದೇಶಕ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ನೀವು ತುಳು ಚಿತ್ರ ನೋಡುವವರಾಗಿದ್ದರೆ “ಚಾಲಿ ಪೋಲಿಲು’ ಸಿನಿಮಾ ಬಗ್ಗೆ ಗೊತ್ತೇ ಇರುತ್ತದೆ. ತುಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಆದ ಸಿನಿಮಾ. ಮಲ್ಟಿಪ್ಲೆಕ್ಸ್ವೊಂದರಲ್ಲೇ 511 ದಿನ ಓಡಿರುವ ಸಿನಿಮಾ ಎಂಬ ಖ್ಯಾತಿ ಕೂಡಾ ಈ ಸಿನಿಮಾಕ್ಕಿದೆ. ಇಂತಹ ಹಿಟ್ ಸಿನಿಮಾವನ್ನು ನಿರ್ದೇಶಿಸಿದವರು ವೀರೇಂದ್ರ ಶೆಟ್ಟಿ. ಈಗ ಕನ್ನಡ ಸಿನಿಮಾ ನಿರ್ದೇಶಿಸಿ, ನಾಯಕರಾಗಿಯೂ ನಟಿಸಿದ್ದಾರೆ.
“”ಚಾಲಿಪೋಲಿಲು’ ನಂತರ ನನಗೆ ತುಳುವಿನಲ್ಲೇ ಸಾಕಷ್ಟು ಅವಕಾಶಗಳು ಬಂದವು. ನಿರ್ದೇಶನ, ನಟನೆ ಎರಡೂ ಬಂತು. ಆದರೆ, ನಾನು ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದೆ. ಈ ಬಾರಿ ಕನ್ನಡ ಸಿನಿಮಾ ಮಾಡಬೇಕು ಎಂಬ ನಿರ್ಧಾರ ಮಾಡಿ, ಆ ನಿಟ್ಟಿನಲ್ಲಿ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೆ. ಅದರ ಫಲವಾಗಿ ಹುಟ್ಟಿಕೊಂಡಿದ್ದೆ “ಸವರ್ಣ ದೀರ್ಘ ಸಂಧಿ’. ಟ್ರೇಲರ್ ನೋಡಿದವರು ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರ ಕೂಡಾ ಆ ನಿರೀಕ್ಷೆಯನ್ನು ಹುಸಿಮಾಡುವುದಿಲ್ಲ’ ಎಂಬ ಮಾತು ವೀರೇಂದ್ರ ಶೆಟ್ಟಿಯವರು. ಇನ್ನು, ವೀರೇಂದ್ರ ಶೆಟ್ಟಿಯವರಿಗೆ ರೆಗ್ಯುಲರ್ ಹೀರೋ ತರಹ ಸುಖಾಸುಮ್ಮನೆ ಹೊಡೆದಾಟ, ಬಿಲ್ಡಪ್ ಇಷ್ಟವಿಲ್ಲವಂತೆ. ಹೊಸ ಬಗೆಯ ಕಥೆ ಮೂಲಕ ಹೀರೋ ಆಗಬೇಕೆಂಬ ಆಸೆ ವೀರೇಂದ್ರ ಶೆಟ್ಟಿಯವರದು. ಹೀರೋ ಆಗಿ ಕ್ಲಿಕ್ ಆದ ಅನೇಕರು ಆ ನಂತರ ನಿರ್ದೇಶನದಿಂದ ದೂರ ಉಳಿದ ಸಾಕಷ್ಟು ಉದಾಹರಣೆಗಳಿವೆ. ಈ ಬಗ್ಗೆ ವೀರೇಂದ್ರ ಅವರ ನಿಲುವೇನು ಎಂದರೆ, “ನನಗೆ ಎರಡರಲ್ಲೂ ಆಕ್ತಿ ಇದೆ. ಸಮಯ, ಸಂದರ್ಭ ನೋಡಿಕೊಂಡು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎನ್ನುತ್ತಾರೆ.
ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಸವರ್ಣ ದೀರ್ಘ ಸಂಧಿ’ ಚಿತ್ರದ ಮೂಲಕ ಗ್ಯಾಂಗ್ಸ್ಟಾರ್ ಕಾಮಿಡಿ ಹೇಳಲು ಹೊರಟಿದ್ದಾರೆ ವೀರೇಂದ್ರ ಶೆಟ್ಟಿ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಗ್ಯಾಂಗ್ಸ್ಟಾರ್ ಸಿನಿಮಾಗಳು ಬಂದಿವೆ. ಆದರೆ, ಗ್ಯಾಂಗ್ಸ್ಟಾರ್ ಕಾಮಿಡಿ ಚಿತ್ರಗಳು ಬಂದಿರೋದು ಸ್ವಲ್ಪ ಕಡಿಮೆಯೇ. ಆದರೆ, ವೀರೇಂದ್ರ ಶೆಟ್ಟಿ “ಸವರ್ಣ ದೀರ್ಘ ಸಂಧಿ’ ಚಿತ್ರದಲ್ಲಿ ಗ್ಯಾಂಗ್ಸ್ಟಾರ್ ಕಾಮಿಡಿಯನ್ನು ಪ್ರಯತ್ನಿಸಿದ್ದಾರೆ. “ಗ್ಯಾಂಗ್ಸ್ಟಾರ್ ಕಾಮಿಡಿ ಸಿನಿಮಾಗಳು ಕನ್ನಡದಲ್ಲಿ ಸ್ವಲ್ಪ ಕಡಿಮೆಯೇ. ನಮ್ಮ ಸಿನಿಮಾದಲ್ಲಿ ಆ ತರಹದ ಒಂದು ಪ್ರಯತ್ನ ಮಾಡಲಾಗಿದೆ. ಇಲ್ಲಿ ಔಟ್ ಅಂಡ್ ಔಟ್ ಕಾಮಿಡಿ ಇದೆ. ಚಿತ್ರದಲ್ಲಿ ಗನ್, ಮಚ್ಚು, ರಕ್ತಪಾತ ಯಾವುದೂ ಇಲ್ಲ. ಈ ಚಿತ್ರದ ಕಥೆ ನನಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಹೀರೋ ಆದೆ. ಹೀರೋ ಆದ ಮೊದಲ ಪ್ರಯತ್ನ ನಾನಂದುಕೊಂಡಂತೆಯೇ ಬಂದಿದೆ’ ಎನ್ನುವುದು ವೀರೇಂದ್ರ ಶೆಟ್ಟಿಯವರ ಮಾತು. ಚಿತ್ರದಲ್ಲಿ ಕೃಷ್ಣಾ ನಾಯಕಿಯಾಗಿ ನಟಿಸಿದ್ದಾರೆ.
ರವಿಪ್ರಕಾಶ್ ರೈ