ಕಿನಾರೆ ನಿರ್ದೇಶಕನ ಕಾರ್ಗಲ್ ನೈಟ್ಸ್
Team Udayavani, Aug 28, 2020, 8:54 PM IST
ಈ ಹಿಂದೆ “ಕಿನಾರೆ’ ಎಂಬ ಸಿನಿಮಾ ನಿರ್ದೇಶಿಸಿದ್ದ ದೇವರಾಜ್ ಪೂಜಾರಿ “ಕಾರ್ಗಲ್ ನೈಟ್ಸ್’ ಎಂಬ ವೆಬ್ ಸೀರಿಸ್ವೊಂದನ್ನು ಸಿದ್ಧಪಡಿಸಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ “ಕಾರ್ಗಲ್ ನೈಟ್ಸ್’ ತಯಾರಾಗಿದೆ.
ಹರ್ಷಿಲ್ ಕೌಶಿಕ್, ಅಕ್ಷತಾ ಅಶೋಕ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಂದೀಪ್ ನಾಗರಾಜ್, ನಾಗರಾಜ್ ಬೈಂದೂರ್, ಅರ್ಚನಾ ಮೊಸಳೆ, ಸುಚನ್ ಶೆಟ್ಟಿ ಹಾಗೂ ಚಂದ್ರಕಾಂತ್ ಮೊದಲಾದವರು ಉಳಿದ ಪಾತ್ರವರ್ಗದಲ್ಲಿದ್ದಾರೆ. ಯಶಸ್ ಪ್ರೊಡಕ್ಷನ್ ಬ್ಯಾನರ್ನಡಿಯಲ್ಲಿ ಎನ್.ಮಂಜುನಾಥ್ ಮತ್ತು ಜೆ.ಎನ್.ಪ್ರದೀಪ್ ಜಂಟಿಯಾಗಿ “ಕಾರ್ಗಲ್ ನೈಟ್ಸ್’ ನಿರ್ಮಿಸಿದ್ದಾರೆ. ಕನ್ನಡದ ಮೊದಲ ಒಟಿಟಿ ವೆಬ್ ಸೀರಿಸ್ ಅನ್ನೋದು ಇದರ ಹೆಗ್ಗಳಿಕೆ. 1995ರಲ್ಲಿ ಮಲೆನಾಡು ಸುತ್ತಮುತ್ತ ನಡೆದ ನೈಜ ಘಟನೆಯನ್ನು ಎಳೆಯಾಗಿಟ್ಟುಕೊಂಡು “ಕಾರ್ಗಲ್ ನೈಟ್ಸ್ ಸಿದ್ಧಪಡಿಸಲಾಗಿದೆ. ರೆಟ್ರೋ ಕ್ರೈಂ-ಥ್ರಿಲ್ಲರ್ ಕಥಾಹಂದರವಿರುವ ಈ ವೆಬ್ ಸೀರಿಸ್ ಸಿಂಕ್ ಸೌಂಡ್ನಲ್ಲಿ ತಯಾರಾಗಿರುವುದು ವಿಶೇಷ. ಶಿವಮೊಗ್ಗ, ಸಾಗರ, ಜೋಗ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಿರುವ “ಕಾರ್ಗಲ್ ನೈಟ್ಸ್’ ಮುಂದಿನ ದಿನಗಳಲ್ಲಿ ತಮಿಳು ಹಾಗೂ ತೆಲುಗಿಗೂ ಡಬ್ ಮಾಡುವ ಆಲೋಚನೆಯಲ್ಲಿದ್ದಾರೆ ದೇವರಾಜ್ ಪೂಜಾರಿ.
………………………………………………………………………………………………………………………………………………..
ಆಡಿಸಿದಾತ ಟೀಸರ್ ಬಂತು : ನಟ ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಚಿತ್ರ “ಆಡಿಸಿದಾತ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೈಯಲ್ಲಿ “ಆಡಿಸಿದಾತ’ನ ಟೀಸರ್ ಬಿಡುಗಡೆ ಮಾಡಿಸಿದೆ.
ಇದೇ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್, “ಟೀಸರ್ ತುಂಬ ಚೆನ್ನಾಗಿ ಬಂದಿದ್ದು, ಪ್ರಾಮಿಸಿಂಗ್ ಆಗಿದೆ. ಅಲ್ಲದೆ ರಾಘಣ್ಣ ಲುಕ್ ಹೊಸದಾಗಿದೆ. “ಆಡಿಸಿದಾತ’ ಆಡಿಯನ್ಸ್ಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ. ಸಿನಿಮಾ ಟೀಮ್ಗೆ ಶುಭವಾಗಲಿ’ ಎಂದರು. “ಆಡಿಸಿದಾತ’ ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕ ಎಸ್.ಎ ಗೋವಿಂದ ರಾಜು, ಹೆಚ್. ಹಾಲೇಶ್, ನಾಗರಾಜ್. ವಿ, ನಿರ್ದೇಶಕ ಫಣೀಶ್ ಭಾರದ್ವಾಜ್ ಸೇರಿದಂತೆ ಚಿತ್ರತಂಡದ ಹಲವರು ಹಾಜರಿದ್ದರು.