ಪದ್ಮಿನಿಯ ಕಾರುಬಾರು
Team Udayavani, Mar 1, 2019, 12:30 AM IST
“ದರ್ಶನ್ ಎದುರು ತುಂಬಾ ಕುಳ್ಳಗೆ ಕಾಣಬಾರದೆಂದು ಹೊಸ ಹೀಲ್ಡ್ ಚಪ್ಪಲಿ ಹಾಕಿಕೊಂಡು ಬಂದಿದ್ದೇನೆ …’
– ಹೀಗೆ ತಮ್ಮದೇ ಶೈಲಿಯಲ್ಲಿ ಹೇಳಿ ದರ್ಶನ್ ಮುಖ ನೋಡಿದರು ಜಗ್ಗೇಶ್. ದರ್ಶನ್ ನಕ್ಕರು. ಹೀಗೆ ಹೇಳುತ್ತಲೇ ಅಲ್ಲೊಂದು ಜಾಲಿ ಮೂಡ್ ಸೃಷ್ಟಿಯಾಗಿತ್ತು. ಅಲ್ಲಿ ಸೇರಿದ್ದ ಎಲ್ಲರೂ ಪರಸ್ಪರ ಖುಷಿಯಿಂದ ಮಾತನಾಡಿದರು. ಇದಕ್ಕೆ ಕಾರಣವಾಗಿದ್ದು, “ಪ್ರೀಮಿಯರ್ ಪದ್ಮಿನಿ’. ಹೌದು, ಜಗ್ಗೇಶ್ ನಾಯಕರಾಗಿ ನಟಿಸಿರುವ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ದರ್ಶನ್ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು. “ಈ ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ಮಾಡಿದ್ದಾರೆ. ಈಗ ಹಿರಿತೆರೆಗೆ ಬರುತ್ತಿದ್ದಾರೆ. ಅವರ ನಿರ್ಮಾಣದ ಮೊದಲ ಸಿನಿಮಾದ ಟೈಟಲ್ ಅವರ ಅಭಿರುಚಿಗೆ ತಕ್ಕಂತಿದೆ. ಶ್ರುತಿ ಅವರು ಸಾಕಷ್ಟು ಒಳ್ಳೊಳ್ಳೆ ಕಾರುಗಳನ್ನು ಇಟ್ಟಿದ್ದಾರೆ. ಈಗ ಮೊದಲ ಸಿನಿಮಾಕ್ಕೂ ಕಾರಿನ ಹೆಸರನ್ನೇ ಇಟ್ಟಿದ್ದಾರೆ’ ಎಂದರು.
ನಾಯಕ ನಟ ಜಗ್ಗೇಶ್ ಈ ಚಿತ್ರದ ಮೇಲೆ ತುಂಬಾನೇ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರ ಬೇರೆ ಭಾಷೆಗಳಿಗೂ ರೀಮೇಕ್ ಆದರೆ ಚೆನ್ನಾಗಿರುತ್ತದೆ ಎನ್ನುವ ಮಟ್ಟಕ್ಕೆ ಅವರಿಗೆ ಸಿನಿಮಾ ಇಷ್ಟವಾಗಿದೆ. “ಸಾಮಾನ್ಯವಾಗಿ ನಾನು ನಟಿಸಿದ ಎಲ್ಲಾ ಸಿನಿಮಾಗಳ ಬಗ್ಗೆ ತುಂಬಾ ಮಾತನಾಡಲ್ಲ. ಏಕೆಂದರೆ ಆ ಸಿನಿಮಾಗಳ ಬಂಡವಾಳ ನಮಗೆ ಗೊತ್ತಿರುತ್ತದೆ. ಆದರೆ, “ಪ್ರೀಮಿಯರ್ ಪದ್ಮಿನಿ’ ಒಂದು ಒಳ್ಳೆಯ ಸಿನಿಮಾವಾಗುತ್ತದೆ ಎಂಬ ನನಗೆ ವಿಶ್ವಾಸವಿದೆ. ನಿರ್ದೇಶಕ ರಮೇಶ್ ಇಂದಿರಾ ಅವರು ಪಕ್ಕಾ ತಯಾರಿಯೊಂದಿಗೆ ಸೆಟ್ಗೆ ಬರುತ್ತಿದ್ದರು. ಅವರಿಗೆ ಎಷ್ಟು ತೆಗೆಯಬೇಕು ಮತ್ತು ಏನು ತೆಗೆಯಬೇಕು ಎಂಬುದು ಚೆನ್ನಾಗಿ ಗೊತ್ತಿತ್ತು’ ಎಂದ ಜಗ್ಗೇಶ್ ಚಿತ್ರದಲ್ಲಿ ನಟಿಸಿದ ಪ್ರಮೋದ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಬಗ್ಗೆ ಮೆಚ್ಚುಗೆ ಸೂಚಿಸಿದರು.
ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಸಿನಿಮಾ ಮಾಡಬೇಕೆಂಬ ಆಸೆಯೇನೂ ಇರಲಿಲ್ಲವಂತೆ. ಆದರೆ, ನಿರ್ಮಾಪಕಿ ಶ್ರುತಿ ನಾಯ್ಡು ಅವರ ಒತ್ತಾಯಕ್ಕೆ ಈ ಸಿನಿಮಾ ಮಾಡಿದ್ದಾರೆ. “ನೀವು ಬರವಣಿಗೆ ಮಾಡಬೇಕೆಂದು ನನ್ನಲ್ಲಿ ಬರೆಸಿ, ಈ ಸಿನಿಮಾ ಮಾಡಿಸಿದ್ದಾರೆ. ಶೆಡ್ನೂಲ್ಗಿಂತ ಒಂದು ದಿನ ಮೊದಲೇ ಚಿತ್ರೀಕರಣ ಮುಗಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ವಿಶ್ವಾಸವಿದೆ’ ಎಂದರು. ನಿರ್ಮಾಪಕಿ ಶ್ರುತಿ ನಾಯ್ಡು ಹೆಚ್ಚೇನು ಮಾತನಾಡಲಿಲ್ಲ. ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕಲಾವಿದೆ ಆಶಾರಾಣಿಯವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಿದರು ಶ್ರುತಿ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ನಟ ಪ್ರಮೋದ್ ತಮ್ಮ ಅನುಭವ ಹಂಚಿಕೊಂಡರು.