ಪುಣ್ಯಾತ್ ಗಿತ್ತೀರ ಬದುಕು-ಬವಣೆ
ಹೆಣ್ಮಕ್ಳೇ ಸ್ಟ್ರಾಂಗು ಗುರು...
Team Udayavani, Aug 30, 2019, 5:50 AM IST
‘ಒಬ್ಳು ಆರ್ಟಿಸ್ಟ್ ಆರತಿ, ಮತ್ತೂಬ್ಳು ಮೀಟ್ರಾ ಮಂಜುಳ, ಇನ್ನೊಬ್ಳು ಬಾಯ್ಬಡಿಕಿ ಭವ್ಯಾ, ಮಗದೊಬ್ಳು ಸುಳ್ಳಿ ಸುಜಾತ…’
– ಇದು ಈ ವಾರ ಬಿಡುಗಡೆಯಾಗುತ್ತಿರುವ ‘ಪುಣ್ಯಾತ್ಗಿತ್ತೀರು’ ಚಿತ್ರದ ನಾಯಕಿಯರು ನಿರ್ವಹಿಸಿರುವ ಪಾತ್ರಗಳ ಹೆಸರು. ಹೌದು, ಚಿತ್ರದ ಹೆಸರೇ ಹೇಳುವಂತೆ, ಇದು ನಾಯಕಿಯರ ಪ್ರಧಾನ ಚಿತ್ರ. ಇದೊಂದು ಸಮಾಜಕ್ಕೆ ಸಂದೇಶ ಸಾರುವ ಚಿತ್ರ. ಅದರಲ್ಲೂ ನಮ್ಮ ನಡುವಿನ ಸತ್ಯಘಟನೆಗಳನ್ನು ವಿವರಿಸುವಂತಹ ಚಿತ್ರ. ಈ ಚಿತ್ರಕ್ಕೆ ರಾಜು ಬಿ.ಎನ್. ನಿರ್ದೇಶಕರು. ಸತ್ಯನಾರಾಯಣ ಮನ್ನೆ ನಿರ್ಮಾಪಕರು. ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ನಿರ್ಮಾಪಕರು ಚಿತ್ರತಂಡದ ಜೊತೆ ಬಂದಿದ್ದರು.
ನಿರ್ಮಾಪಕ ಸತ್ಯನಾರಾಯಣ ಮನ್ನೆ ಅವರಿಗೆ ಇದು ಮೊದಲ ಅನುಭವ. ಕಥೆ ಕೇಳಿದ ಕೂಡಲೇ, ಸಮಾಜಕ್ಕೊಂದು ಸಂದೇಶ ಕೊಡುವ ಚಿತ್ರವಾಗಿದ್ದರಿಂದ ನಿರ್ಮಾಣಕ್ಕೆ ಮುಂದಾದರಂತೆ. ಇಲ್ಲಿ ನಾಲ್ವರು ನಾಯಕಿಯರ ಬದುಕು, ಬವಣೆ ಕಥೆ ಇದೆ. ಅವರೆಲ್ಲರೂ ಬದುಕಿಗಾಗಿ ಏನೆಲ್ಲಾ ಮಾಡ್ತಾರೆ ಎಂಬುದು ಕಥೆ. ಇದು ಹೊಸಬರ ಚಿತ್ರವಲ್ಲ. ಇಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಅನುಭವ ಇದೆ. ಕನ್ನಡದಲ್ಲಿ ನಾಯಕಿ ಪ್ರಧಾನ ಸಿನಿಮಾಗಳು ಹೆಚ್ಚಬೇಕು. ಇದು ಎಲ್ಲರ ಬೆಂಬಲದಿಂದ ಆದ ಸಿನಿಮಾ ಎಂದರು ನಿರ್ಮಾಪಕರು.
ಮಮತಾ ರಾವತ್ ಇಲ್ಲಿ ಆರ್ಟಿಸ್ಟ್ ಆರತಿ ಪಾತ್ರ ಮಾಡಿದ್ದಾರೆ. ಅವರಿಗೆ ಈ ಚಿತ್ರದ ಪಾತ್ರ ನೆನಪಿಸಿಕೊಂಡರೆ, ಇಷ್ಟು ವರ್ಷಗಳಲ್ಲಿ ಮಾಡಿದ್ದಕ್ಕಿಂತಲೂ ಭಿನ್ನ ಎನಿಸುತ್ತದೆಯಂತೆ. ಸಿನಿಮಾ ರಂಗದಲ್ಲಿ ಆರ್ಟಿಸ್ಟ್ ಆರತಿ ಅವಕಾಶಕ್ಕಾಗಿ ಎಷ್ಟೊಂದು ಸ್ಟ್ರಗಲ್ ಮಾಡ್ತಾಳೆ. ಅವಳಿಗೆ ಒಂದು ಹಂತದಲ್ಲಿ ಅವಮಾನ ಆದಾಗ, ಹೇಗೆ ರಗಡ್ ಹುಡುಗಿಯಾಗ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಮಮತಾ.
ಸಂಭ್ರಮಶ್ರೀ, ಸುಳ್ಳಿ ಸುಜಾತ ಪಾತ್ರ ಮಾಡಿದ್ದಾರಂತೆ. ಲೈಫಲ್ಲಿ ಸುಳ್ಳು ಹೇಳಿ ಹೇಗೆಲ್ಲಾ ಯಾಮಾರಿಸುತ್ತಾಳೆ ಎಂಬ ಪಾತ್ರದ ಮೂಲಕ ಗಮನಸೆಳೆಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಐಶ್ವರ್ಯ ಇಲ್ಲಿ ಬಾಯ್ಬಡಿಕಿ ಭವ್ಯಾ ಪಾತ್ರ ಮಾಡಿದರೆ, ದಿವ್ಯಾಶ್ರೀ ಮೀಟ್ರಾ ಮಂಜುಳ ಪಾತ್ರ ನಿರ್ವಹಿಸಿದ್ದಾರಂತೆ.
ಕುರಿ ರಂಗ ಅವರಿಗಿಲ್ಲಿ ಸಾಕಷ್ಟು ಗೆಟಪ್ ಇರುವ ಪಾತ್ರ ಸಿಕ್ಕಿದೆಯಂತೆ. ಚಿಕ್ಕ ವಯಸ್ಸಲ್ಲೇ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ಎಲ್ಲಾ ಆಸೆ, ಆಕಾಂಕ್ಷೆ ಹೊಂದಿರುವ ಪಾತ್ರದ ಮೂಲಕ ನಾಲ್ವರು ಹುಡುಗಿಯರನ್ನು ಪಟಾಯಿಸುವ ಪ್ರಯತ್ನ ಮಾಡಿದ್ದಾರಂತೆ. ಅವರು ಪಟಾಯಿಸುತ್ತಾರಾ ಇಲ್ಲವಾ ಅನ್ನೋದು ಸಸ್ಪೆನ್ಸ್ ಎಂಬುದು ರಂಗ ಅವರ ಮಾತು.
ಸುಧಿ ಇಲ್ಲಿ ವಿಲನ್ ಆಗಿದ್ದು, ಸುಂದರಿಯರ ಜೊತೆ ಫೈಟ್ ಮಾಡಿದ್ದಾರಂತೆ. ಫೈಟ್ ದೃಶ್ಯಗಳು ರಿಸ್ಕ್ ಇದ್ದರೂ, ಕಷ್ಟಪಟ್ಟು ಎಲ್ಲಾ ನಾಯಕಿಯರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು ಸುಧಿ.
ತ್ರಿಭುವನ್ ಎಲ್ಲಾ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಶರತ್ ಛಾಯಾಗ್ರಹಣವಿದೆ. ರಾಮಾನುಜಂ 4 ಹಾಡುಗಳಿಗೆ ಸಂಗೀತ ಮಾಡಿದ್ದಾರೆ. ವಿಜಯ್ ಸಿನಿಮಾಸ್ ನ ವಿಜಯ್ ವಿತರಣೆ ಮಾಡುತ್ತಿದ್ದು, ನೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡರು.