ಒಂದು ಬಸ್ ಪಯಣದ ಕತೆ
Team Udayavani, Jul 14, 2019, 5:00 AM IST
ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು ಹೇಳಿಕೊಳ್ಳಬೇಕೆಂದು ಯಾಕೆ ಅನ್ನಿಸುವುದಿಲ್ಲ !
ನಲವತ್ತು ವರ್ಷಗಳ ಹಿಂದಿನ ಮಾತು. ಅದು ಮೇ ತಿಂಗಳ ಒಂದು ಬಿರುಬಿಸಿಲ ದಿನ. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ನಾನು, ಮಹಾರಾಷ್ಟ್ರದ ಕೊಲ್ಹಾಪುರದಿಂದ, ಔರಂಗಾಬಾದ್ಗೆ ಹೋಗಬೇಕಿತ್ತು. 40 ವರ್ಷಗಳ ಹಿಂದೆ ಅಂದರೆ ಬಿಡಿಸಿ ಹೇಳಬೇಕೆ? ಆಗ ಬಸ್ಗಳು ವಿರಳವಾಗಿದ್ದವು. ಆಗಷ್ಟೇ ಎಕ್ಸ್ಪೆಸ್ ಸರ್ವಿಸ್ ಎಂಬ ಸಾರಿಗೆ ಸೇವೆಯೂ ಚಾಲ್ತಿಗೆ ಬಂದಿತ್ತು.
ಕೊಲ್ಹಾಪುರದಿಂದ ಔರಂಗಾಬಾದ್ಗೆ, ಪೂರ್ತಿ ಎಂಟು ತಾಸುಗಳ ಪ್ರಯಾಣ. ಅವತ್ತು ಎಲ್ಲಾ ಸೀಟ್ಗಳೂ ಭರ್ತಿಯಾಗಿದ್ದವು. 50ಕ್ಕೂ ಹೆಚ್ಚು ಸೀಟ್ಗಳಿದ್ದರೂ, ಮೊದಲ ನಾಲ್ಕು ಗಂಟೆಯ ಪ್ರಯಾಣದಲ್ಲಿ ಇಳಿಯುವ ಪ್ರಯಾಣಿಕರು ಒಬ್ಬರೂ ಇರಲಿಲ್ಲ. ವಾಸ್ತವ ಹೀಗಿದ್ದರೂ, ಇನ್ನೂ 20 ಮಂದಿ ಬಸ್ ಹತ್ತಿಬಿಟ್ಟರು. ಎಲ್ಲರಿಗೂ ಏನೋ ಅವಸರ, ಏನೋ ಗಡಿಬಿಡಿ. ಮತ್ತೂಂದು ಬಸ್ ಬರದೆಹೋದರೆ… ಎಂಬ ಆತಂಕ. “ಹೆಚ್ಚುವರಿ’ ಎಂಬಂತೆ ಹತ್ತಿಕೊಂಡರಲ್ಲ; ಅವರೆಲ್ಲ ನಿಂತುಕೊಂಡೇ ಪ್ರಯಾಣಿಸಬೇಕಿತ್ತು. ಅಂಥದೊಂದು ರಿಸ್ಕ್ ತಗೊಳ್ಳಲು ಸಿದ್ಧರಾಗಿಯೇ ಎಲ್ಲರೂ ಹತ್ತಿದ್ದರು. ಅಂಥವರ ಪೈಕಿ ನಾನು ಒಬ್ಬನಾಗಿದ್ದೆ. ಅವತ್ತಿನ ಸಂದರ್ಭದಲ್ಲಿ, ಮನೆರಂಜನೆಗೆಂದು ಇದ್ದ ಏಕೈಕ ಮಾಧ್ಯಮವೆಂದರೆ ರೇಡಿಯೋ.. ಆದರಲ್ಲೂ ರಾಷ್ಟ್ರೀಯ ವಾರ್ತೆ, ಪ್ರದೇಶ ಸಮಾಚಾರ ಹಾಗೂ ಮೆಚ್ಚಿನ ಚಿತ್ರಗೀತೆ ಕೇಳುವುದು ಹಲವರಿಗೆ ಅಭ್ಯಾಸ ಮತ್ತು ಹವ್ಯಾಸ ಆಗಿತ್ತು ಆದೇ ಕಾರಣದಿಂದ ಬಸ್ನಲ್ಲಿದ್ದ ಐದಾರು ಜನ ರೇಡಿಯೋಗಳನ್ನೂ ತಂದಿದ್ದರು.
ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಹೊರಟಿತು. ಕಿಟಕಿಯ ಪಕ್ಕ ಕೂತಿದ್ದವರೇನೋ, ಗ್ಲಾಸ್ ಹಿಂದಕ್ಕೆ ನೂಕಿ, ಆಗಾಗ್ಗೆ ನುಗ್ಗಿ ಬರುತ್ತಿದ್ದ ತಂಗಾಳಿಗೆ ಮುಖವೊಡ್ಡಿ, ಕಿಟಕಿಯಿಂದಾಚೆಗೆ ದೃಷ್ಟಿ ಹಾಯಿಸಿ ಕೂತುಬಿಟ್ಟರು. ಆದರೆ, ಮಧ್ಯದ ಹಾಗೂ ಕಡೆಯ ಸೀಟುಗಳಲ್ಲಿ ಕುಳಿತಿದ್ದವರು ಸಾಕಷ್ಟು ಹಿಂಸೆ ಅನುಭವಿಸಿದರು. ಮಧ್ಯೆ ಕುಳಿತಿದ್ದವರಿಗೆ, ಆಚೀಚೆ ಒತ್ತರಿಸಿಕೊಂಡು ಕುಳಿತಿದ್ದ ಇಬ್ಬರೊಂದಿಗೆ “ಅಡೆjಸ್ಟ್’ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. ಎರಡೂ ಬದಿಯ ಸೀಟುಗಳ ಅಂಚಿನಲ್ಲಿ ಕುಳಿತಿದ್ದವರ ಸಂಕಟ ಇನ್ನೊಂದು ಥರದ್ದಾಗಿತ್ತು. ಡ್ರೈವರ್ ಸೀಟ್ನಿಂದ ಕಂಡಕ್ಟರ್ ಸೀಟ್ನವರೆಗೂ ಕ್ಯೂನಲ್ಲಿ ನಿಂತವರಂತೆ ನಿಂತಿದ್ದ “ಸ್ಟಾಂಡಿಂಗ್ ಪ್ರಯಾಣಿಕರು’ ಆಗೊಮ್ಮೆ ಈಗೊಮ್ಮೆ ಗೊತ್ತಿಧ್ದೋ, ಗೊತ್ತಿಲ್ಲದೆಯೇ ಅಂಚಿನಲ್ಲಿ ಕೂತಿದ್ದವರಿಗೆ ಒತ್ತರಿಸಿಕೊಂಡು ನಿಲ್ಲುತ್ತಿದ್ದರು. ಇಲ್ಲವಾದರೆ, ಬಸ್ಸು ತಿರುವು ಪಡೆದಾಗ ಮೇಲೆ ಬೀಳುವಂತೆ ವಾಲಿ ಬಿಡುತ್ತಿದ್ದರು. ಆಗೆಲ್ಲ , ಇವರದೊಳ್ಳೇ ಶನಿಕಾಟ ಆಯ್ತಲ್ಲ. ಇವರು ಯಾವಾಗ ಇಳಿತಾರೆ? ಎಂಬಂಥ ಅಸಹನೆಯ ಭಾವ, ಅಂಚಿನಲ್ಲಿ ಕುಳಿತಿದ್ದ ಪ್ರಯಾಣಿಕರ ಕಂಗಳಲ್ಲಿ ಗೋಚರವಾಗುತ್ತಿತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬಸ್ನಲ್ಲಿ ಸ್ನೇಹಮಯ ವಾತಾವರಣವೇ ಇರಲಿಲ್ಲ. ಬಸ್ನ ತುಂಬ ಇದ್ದವರೆಲ್ಲಾ ಪ್ರಯಾಣಿಕರೇ ಆಗಿದ್ದರೂ, ಪರಸ್ಪರರನ್ನು ನೋಡಿ “ಸ್ಟೈಲ್’ ಕೊಡಲಿಕ್ಕೂ ಹೆಚ್ಚಿನವರು ಸಿದ್ಧರಿರಲಿಲ್ಲ. ಆಗಾಗ ಸುತ್ತಲೂ ತಿರುಗಿ ನೋಡುತ್ತ, ಈ ಹಾಳಾದ ಬಸ್ಸು ಬೇಗ ಹೋಗಬಾರದೆ ಎಂದು ಗೊಣಗಿಕೊಳ್ಳುತ್ತ ಕೂತು ಬಿಟ್ಟಿದ್ದರು.
ಈ ವೇಳೆಗೆ, ಪ್ರಯಾಣ ಶುರುವಾಗಿ ಮೂರು ಗಂಟೆಗಳೇ ಕಳೆದುಹೋಗಿದ್ದವು. ಅಷ್ಟು ಹೊತ್ತಿನಿಂದ ನಿಂತಿದ್ದೆನಲ್ಲ; ಅದೇ ಕಾರಣಕ್ಕೆ ಕಾಲುಗಳು ನೋಯತೊಡಗಿದವು. ಬಸ್ಸು ವೇಗ ಪಡೆದುಕೊಂಡಾಗ, ಈ ತುದಿಯಿಂದ ಆ ತುದಿಯವರೆಗೂ ಜೋತು ಬಿದ್ದಿದ್ದ ರಾಡ್ ಒಂದನ್ನು ಹಿಡಿದು ನಿಂತಿದ್ದೆ. ಹಾಗಾಗಿ, ಕೈನೋವೂ ಶುರುವಾಗಿತ್ತು. ಐದ್ಹತ್ತು ನಿಮಿಷ ಕೂತು ರೆಸ್ಟ್ ತಗೊಂಡ್ರೆ ಸ್ವಲ್ಪ ರಿಲ್ಲಾಕ್ಸ್ ಆಗುತ್ತೆ ಅನ್ನಿಸಿತು. ಆದರೆ, ಕೂರುವುದಾದರೂ ಎಲ್ಲಿ? ಹಾಗಂತ, ಮತ್ತೆ ನಿಂತೇ ಇರಲು ನನ್ನ ದೇಹಕ್ಕೆ ಶಕ್ತಿ ಇರಲಿಲ್ಲ. ಆಗ ನಾನೊಂದು ಉಪಾಯ ಮಾಡಿದೆ. ಪ್ರತಿ ಐದೈದು ನಿಮಿಷಕ್ಕೆ ಒಂದೇ ಕಾಲಲ್ಲಿ ನಿಲ್ಲುತ್ತ ಕಾಲಿನ ನೋವು ತಡೆಯಲು ಪ್ರಯತ್ನಿಸಿದೆ.
ಹೀಗೇ ಹತ್ತಿಪ್ಪತ್ತು ನಿಮಿಷಗಳು ಕಳೆದವು. ಆಗಲೇ, ನನ್ನ ಭುಜವನ್ನು ಯಾರೋ ಮೆದುವಾಗಿ ತಟ್ಟಿದಂತಾಯಿತು. ಹಿಂದೆ ತಿರುಗಿ ನೋಡಿದರೆ-ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹಿರಿಯರು ಎದ್ದು ನಿಂತಿದ್ದರು. ನನ್ನ ಹೆಗಲು ತಟ್ಟಿದ್ದು ಅವರೇ ಎಂಬುದು ಖಾತ್ರಿಯಾಯಿತು. “ಏನ್ಸಾರ್?’ ಎಂದು ನಾನು ಕೇಳುವ ಮೊದಲೇ ಆ ಹಿರಿಯರು -“ನಿಂತು ನಿಂತು ಕಾಲು ನೋವು ಬಂದಿದೆಯೇನಪ್ಪಾ? ಅರ್ಧ ಗಂಟೆ ಕಾಲ ನನ್ನ ಸೀಟಿನಲ್ಲಿ ಕೂತುಕೋ. ದೇಹಕ್ಕೆ ಸ್ವಲ್ಪ ರೆಸ್ಟ್ ಸಿಕ್ಕಿದ್ರೆ ರಿಲ್ಯಾಕ್ಸ್ ಆಗುತ್ತೆ’ ಅಂದರು. ಅಂಥದೊಂದು ಮಾತಿಗೇ ಕಾದಿದ್ದವನಂತೆ ನಾನು ತಕ್ಷಣವೇ ಅವರ ಸೀಟ್ನಲ್ಲಿ ಕೂತುಬಿಟ್ಟೆ. ಅಷ್ಟೇ ಅಲ್ಲ: ಕೂತ ತಕ್ಷಣವೇ ನಿರಾಳ ಭಾವದಿಂದ ಹತ್ತಾರು ಮಂದಿಗೆ ಕೇಳಿಸುವಂತೆ ಉಸ್ಸಪ್ಪಾ… ಎಂದು ನಿಟ್ಟುಸಿರು ಬಿಟ್ಟೆ. ಬಸ್ನಲ್ಲಿದ್ದ ಹಲವರು, ಇದೇನಿದು ವಿಚಿತ್ರ ಎನ್ನುವಂತೆ ನನ್ನತ್ತ ತಿರುಗಿ ನೋಡಿದರು.
ನೋಡನೋಡುತ್ತಲೇ 40 ನಿಮಿಷಗಳು ಕಳೆದವು. ಅಷ್ಟು ಹೊತ್ತೂ ನನಗೆ ಸೀಟು ಬಿಟ್ಟುಕೊಟ್ಟಿದ್ದ ಹಿರಿಯರು, ಒಂದೂ ಮಾತಾಡದೆ ಮೌನವಾಗಿ ನಿಂತಿದ್ದರು. ಈ ವೇಳೆಗೆ ಸಾಕಷ್ಟು ವಿಶ್ರಾಂತಿ ಪಡೆದು ನಾನು ಫ್ರೆಶ್ ಆಗಿದ್ದೆ. ಗಡಿಬಿಡಿಯಿಂದ ಎದ್ದು- “ಸಾರ್, ನಿಮ್ಮಿಂದ ತುಂಬಾ ಉಪಕಾರ ಆಯ್ತು ಬನ್ನಿ ಕೂತ್ಕೊಳಿ’ ಅಂದೆ.
ನಾವಿಬ್ಬರೂ ನಮ್ಮ ಸ್ಥಳ ಬದಲಿಸಿಕೊಂಡು, ಪರಸ್ಪರ ನಗೆಯ ವಿನಿಮಯ ಮಾಡಿಕೊಂಡು ಎರಡು ನಿಮಿಷ ಕಳೆದಿರಲಿಲ್ಲ. ಆಗಲೇ, ನಾನು ಕನಸಿನಲ್ಲೂ ಊಹಿಸಿರದಿದ್ದ ಘಟನೆಯೊಂದು ನಡೆಯಿತು.
ನನ್ನೆದುರು ನಿಂತಿದ್ದ ವ್ಯಕ್ತಿಗೆ, ಮತ್ತೂಂದು ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಸೀಟ್ ಬಿಟ್ಟುಕೊಟ್ಟರು. “ಅಷ್ಟೊತ್ತಿಂದ ನಿಂತಿದೀರಾ! ಆಯಾಸ ಆಗಿರುತ್ತೆ. ಸ್ವಲ್ಪಹೊತ್ತು ಕೂತುಕೊಳ್ಳಿ’ ಎನ್ನುತ್ತಲೇ ಎದ್ದು ನಿಂತರು. ಆನಂತರದಲ್ಲಿ, ಇದೇ ರೀತಿಯ ವಿಸ್ಮಯಕಾರಿ ಪ್ರಸಂಗಗಳು ನಡೆಯುತ್ತಲೇ ಹೋದವು. ಆವರನ್ನು ನೋಡಿ ಇವರು, ಇವರನ್ನು ನೋಡಿ ಅವರು, ನಿಂತಿದ್ದ ಪ್ರಯಾಣಿಕರಿಗೆ ಸೀಟ್ ಬಿಟ್ಟುಕೊಟ್ಟರು. ಆವತ್ತು, ನಿಂತಿದ್ದರಲ್ಲ; ಆ ಇಪ್ಪತ್ತು ಮಂದಿಗೂ ಪ್ರತಿ ಗಂಟೆಗೆ ಒಮ್ಮೆಯಂತೆ ಇನ್ನೊಬ್ಬರ ಸೀಟ್ನಲ್ಲಿ ಕೂತು ಪ್ರಯಾಣಿಸುವ ಅವಕಾಶ ಲಭ್ಯವಾಯಿತು !
ಅದುವರೆಗೂ, ಪರಸ್ಪರ ಪರಿಚಯವೇ ಇಲ್ಲದಂತೆ ಮುಖ ಗಂಟಿಕ್ಕಿಕೊಂಡು ಶೂನ್ಯದತ್ತ ನೋಡುವವರಂತೆ ಕೂತಿದ್ದವರು, ಈಗ ಪರಸ್ಪರ ಚರ್ಚೆಗೆ ತೊಡಗಿದ್ದರು. ಮತಾöರೋ ಗಟ್ಟಿದನಿಯಲ್ಲಿ ಜೋಕ್ ಹೇಳಿ, ಬಸ್ನಲ್ಲಿ ಇದ್ದವರನ್ನೆಲ್ಲಾ ನಗಿಸಿದರು. ಈ ಮಧ್ಯೆ ಒಬ್ಬರು ರೇಡಿಯೋ ಚಾಲೂ ಮಾಡಿ. ಎಲ್ಲರಿಗೂ ಸುಮಧುರ ಚಿತ್ರಗೀತೆಗಳನ್ನೂ ಕೇಳಿಸಿದರು. ಒಂದೇ ವಯೋಮಾನದವರು ತಂತಮ್ಮ ಮನೆಯ ಸಮಸ್ಯೆ ಹೇಳಿಕೊಂಡು, ಅಷ್ಟರ ಮಟ್ಟಿಗೆ ಮನಸ್ಸು ಹಗುರ ಮಾಡಿಕೊಂಡರು. ಒಂದೇ ಮಾತಲ್ಲಿ ಹೇಳುವುದಾದರೆ, ಅವತ್ತು ಚಲಿಸುವ ಬಸ್ನಲ್ಲಿ ಮರೆಯಲಾಗದ ಮಧುರ ಕ್ಷಣವೊಂದು ತಂತಾನೇ ಸೃಷ್ಟಿಯಾಗಿತ್ತು.
ಕಡೆಗೊಮ್ಮೆ ಔರಂಗಾಬಾದ್ ಬಂದೇ ಬಿಟ್ಟಿತು. ಅದು ನಮ್ಮ ಬಸ್ ಹಾಗೂ ನಾವೆಲ್ಲರೂ ತಲುಪಬೇಕಿದ್ದ ಕಡೆಯ ನಿಲ್ದಾಣ. ಅದುವರೆಗೂ ಪರಸ್ಪರ ರೇಗಿಸುತ್ತಾ, ಕಾಲೆಳೆಯುತ್ತಾ, ಜೋಕ್ ಮಾಡುತ್ತಾ, ಹಾಡು ಹೇಳುತ್ತ, ಸುಖ-ದುಃಖ ಹಂಚಿಕೊಳ್ಳುತ್ತಾ ಖುಷಿಯಿಂದ ಇದ್ದವರು, ಈಗ ಭಾರವಾದ ಹೆಜ್ಜೆಯೊಂದಿಗೆ ಬಸ್ ಇಳಿಯತೊಡಗಿದ್ದರು. ಪರಸ್ಪರರನ್ನು ಬೀಳ್ಕೊಡುವ ಮೊದಲು, ನಿಮ್ಮ ಪರಿಚಯ ಆಗಿದ್ದು ಬಹಳ ಸಂತೋಷಾರೀ. ಮತ್ತೂಂದ್ಸಲ ಭೇಟಿಯಾಗೋಣ. ನಮ್ಮನ್ನು ಮರೆತುಬಿಡಬೇಡಿ ಎಂದು ಹೇಳುತ್ತಲೇ ಭಾವುಕರಾಗಿ ಕಣ್ತುಂಬಿಕೊಳ್ಳುತ್ತಿದ್ದರು. ಅವತ್ತು ಎಲ್ಲರ ಕಂಗಳಲ್ಲೂ ನೀರಿದ್ದವು. ಮಾತಲ್ಲಿ ವಿವರಿಸಲಾಗದ ಸಂತೋಷವೂ ಕಣ್ಣೊಳಗೇ ಇತ್ತು.
ಮೂಲ: ಜಗದೀಶ್ ಜೋಶಿ
ಕನ್ನಡಕ್ಕೆ: ಎ.ಆರ್. ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ