ಹೊಸ ಕಾದಂಬರಿ ಬರೆಯುತ್ತಿರುವ ಮೊಗಳ್ಳಿ ಗಣೇಶರಿಗೆ ಆರು ಪ್ರಶ್ನೆಗಳು
Team Udayavani, Feb 16, 2020, 5:17 AM IST
ಹೊಸ ಕಾದಂಬರಿ ಬರೆಯುತ್ತಿದ್ದೀರಂತೆ. ಎಷ್ಟು ಪುಟಗಳಾದವು?
-ಎರಡು ವರ್ಷಗಳಿಂದ ಬರೆದು ತಿದ್ದಿತೀಡಿ ನಿನ್ನೆ ತಾನೆ ಮುಗಿಸಿದೆ. ದೀರ್ಘ ನಿರೂಪಣೆ. 986 ಪುಟಗಳಷ್ಟು ವಿಸ್ತರಿಸಿದೆ.
ಎಲ್ಲರೂ ವೇಗವಾಗಿ ಕಿರಿದನ್ನು ಓದಲು ಬಯಸುತ್ತಿರುವ ಕಾಲ. ಇಷ್ಟು ದೀರ್ಘ ಕಾದಂಬರಿ ಈ ಕಾಲಕೆೆR ಅಗತ್ಯವೆ?
-ತತ್ಕಾಲೀನ ಸಮಾಜದ ವೇಗದ ಬರಹ ನನ್ನದಲ್ಲ. ವಿಶಾಲವಾದ ನದಿಯೊಂದು ಸಾಗುವ ರೀತಿಯ ಭಾವನೆಗಳಲ್ಲಿ ನಾನು ಬಂದವನು. ಯಾರದೋ ತುರ್ತಿನ ಸಲುವಾಗಿ ನಾನು ಬರೆಯಲಾರೆ. ಒಳ್ಳೆಯ ಬರಹ ಮುಖ್ಯವೇ ವಿನಹ ಹಿರಿದು- ಕಿರಿದು ಎಂಬ ಲೆಕ್ಕದ ಲೇಖಕ ನಾನಲ್ಲ. ದೊಡ್ಡ ವ್ಯಾಪ್ತಿಯ ಬರಹಗಳು ನಮ್ಮ ನಾಳಿನ ಸಮಾಜಗಳಿಗೆ ಅವಶ್ಯವಿದೆ.
ಕತೆ ಮತ್ತು ಕಾದಂಬರಿ ಮಾಧ್ಯಮಗಳಲ್ಲಿ ಯಾವುದು ನಿಮಗಿಷ್ಟ? ಯಾಕೆ?
-ಎಲ್ಲ ಬಗೆಯ ಬರವಣಿಗೆಯ ಕ್ರಮಗಳೂ ನನಗೆ ಒಂದೇ. ಉಸಿರಾಟದ ಕ್ರಿಯೆಯಂತೆ. ಕತೆ, ಕಾವ್ಯ, ಕಾದಂಬರಿ ಬರೆಯುವಾಗ ಆಗುವಷ್ಟೇ ಸೃಜನಶೀಲ ಸಂವೇದನೆ ಇತರೆ ವಿಚಾರ- ವಿಮರ್ಶೆಯ ಬರಹಗಳನ್ನು ಬರೆದಾಗಲೂ ಉಂಟಾಗುತ್ತದೆ.
ಶೋಷಿತ ವರ್ಗಗಳ ಬದುಕಿನ ಚಿತ್ರಣವನ್ನು ಕೊಡುವುದು ನಿಮ್ಮ ಕತೆ-ಕಾದಂಬರಿಗಳ ಮುಖ್ಯ ಆಶಯ. ಈ ಕಾದಂಬರಿಯಲ್ಲಿಯೂ ಅದೇ ವಸ್ತುವೆ?
-ನನ್ನ ಬೇರುಗಳು ನನ್ನ ಊರುಕೇರಿ -ನಾಡು ನುಡಿ- ದೇಶದಗಲಕ್ಕೂ ವ್ಯಾಪಿಸಿವೆ. ನನ್ನ ಜನಾಂಗದ ಲೋಕವನ್ನು ನಾನು ಉಳಿದೆಲ್ಲ ಸಮಾಜಗಳ ಜೊತೆ ಬೆಸುಗೆ ಮಾಡಿಕೊಂಡೇ ಬರೆಯುತ್ತ ಬಂದವನು. ಈ ನನ್ನ ಕಾದಂಬರಿ ಬೇರು ವಿನಲ್ಲೂ ಅದೇ ಜಗತ್ತನ್ನು ವಿಸ್ತರಿಸಿದ್ದರೂ ಆ ನನ್ನ ಅಂದಿನ ಅನುಭವಗಳೆಲ್ಲ ಇಲ್ಲಿ ಭಿನ್ನವಾಗಿ ವಿಶ್ವಾತ್ಮಕವಾಗಿ ಚಾಚಿಕೊಂಡಿವೆ.
ಎಷ್ಟನೆಯ ಕಾದಂಬರಿ ಇದು? ಬರೆಯಲೇಬೇಕೆಂದು ಯಾಕೆ ಅನ್ನಿಸಿತು ನಿಮಗೆ?
-ಇದು ನನ್ನ ನಾಲ್ಕನೆಯ ಕಾದಂಬರಿ. ಒಂದು ರಾತ್ರಿ
ದುಃಖದಲ್ಲಿ ಯೋಚಿಸುತ್ತಿದ್ದೆ- “ನಾನಿನ್ನೂ ಒಳ್ಳೆಯದನ್ನು ಬರೆಯಲು ಆಗಲಿಲ್ಲವಲ್ಲ. ಟಾಲ್ಸ್ಟಾಯ್, ದಾಸ್ತೋವ್ಸ್ಕಿಯರು ಬರೆದಂತೆ ಬೃಹತ್ ಕಾದಂಬರಿ ಒಂದನ್ನು ಬರೆದು ಈ ಬರಹದ ಯಾನವನ್ನು ಮುಗಿಸಬಹುದೆ ಎಂಬ ಸಂಕಟದ ಮರುದಿನವೇ ಈ ಆರಂಭಿಸಿದೆ. ಬರಹ ನನ್ನ ವಿಮೋಚನೆಯ ಸುಖ. ಹಾಗಾಗಿ, ಈ ಕಾದಂಬರಿಯಲ್ಲಿ ಮುಳುಗಿ ಬರೆದಿರುವೆ.
ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಜಡವಾಗಿವೆ ಎಂಬ ಆರೋಪವಿದೆ. ಹಂಪಿ ಕನ್ನಡ ವಿ. ವಿ. ಯಲ್ಲಿ ಪ್ರಾಧ್ಯಾಪಕರಾಗಿರುವ ನೀವು ಬರವಣಿಗೆಯ “ಋಜುತ್ವ’ ಅಥವಾ “ಪ್ರಾಮಾಣಿಕತೆ’ಯನ್ನು ಹೇಗೆ ಕಾಯ್ದುಕೊಂಡಿದ್ದೀರಿ?
-ವಿಶ್ವವಿದ್ಯಾನಿಲಯಗಳು ಜಡವಾಗಿವೆ ಎನ್ನುವುದು ಕೆಲವರ ಅಭಿಪ್ರಾಯ; ಆದರೆ, ನನಗೆ ಹಾಗೆ ಅನಿಸಿಲ್ಲ. ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮರುಜನ್ಮ ಪಡೆದವನು. ಇದರ ಮೂಲಕ ಅನ್ನ ಉಣ್ಣುತ್ತಿರುವವನು. ಯಾರು ಎಷ್ಟೇ ಜಡವಾದರೂ ನನಗೆ ನಿತ್ಯವೂ ಕನ್ನಡ ವಿಶ್ವವಿದ್ಯಾಲಯ ಬರಹದ ದೇಗುಲದ್ದಂತೆ. ಹಾಗಾಗಿ, ನಾನಿಲ್ಲಿ ನಿತ್ಯ ಬರಹಗಾರ, ಚಿಂತಕ, ಬೋಧಕ, ಕನ್ನಡ ವಿಶ್ವವಿದ್ಯಾಲಯದ ಸಂಶೋಧನ ಬರಹಗಳಲ್ಲಿಯೂ ನಾನು ಸ್ವೂಪಜ್ಞತೆ, ಸೃಜನಶೀಲತೆಗಳನ್ನು ಕಾಯ್ದುಕೊಂಡು ಬಂದವನು.
ಮೊಗಳ್ಳಿ ಗಣೇಶ್ ಸಂಪರ್ಕ:
[email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್