ಕತೆ: ಶಿಕ್ಷೆ
Team Udayavani, Jan 5, 2020, 5:32 AM IST
ಚಂದ್ರಹಾಸರು ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೇ, ಅವರಿಗಾಗಿ ಕಾಯುತ್ತ ನಿಂತಿದ್ದ ಅಟೆಂಡರ್ ಬಾಬು, ಧಾವಿಸಿ ಬಂದು ಉಸುರಿದ, “”ಪ್ರಿನ್ಸಿಪಾಲ್ ನಿಮಗೆ ಕೂಡಲೇ ಬರ ಹೇಳಿದ್ದಾರೆ”.
ಚಂದ್ರಹಾಸರು ಮುಖ ಸಿಂಡರಿಸಿಕೊಂಡು, “”ಒಳಗೆ ಬರಲು ಬಿಡ್ತೀಯೋ ಇಲ್ವೋ?” ಎಂದಾಗ ಅವರ ಸ್ವಭಾವದ ಪರಿಚಯ ಚೆನ್ನಾಗೇ ಇದ್ದ ಬಾಬು ಹಿಂದೆ ಸರಿದು ನಿಂತ. “”ಈ ಸಿಡುಕು ಬುದ್ಧಿ ಇರೋ ಕಾರಣಕ್ಕೇನೇ, ಇಲ್ಲಿ ಮಕ್ಳ ಮೇಲಲ್ಲ; ಮಾಸ್ಟ್ರ ಮೇಲೆ ದಿನಾ ಕಂಪ್ಲೇಂಟು ಬರೋದು” ಎಂದು ತನ್ನೊಳಗೇ ಗೊಣಗಿಕೊಂಡ.
ಸ್ಟಾಫ್ ರೂಮಿಗೆ ಹೋಗದೇ ನೇರವಾಗಿ ಪ್ರಿನ್ಸಿಯವರ ಕೋಣೆಯ ಬಾಗಿಲು ತೆರೆದು ಪ್ರವೇಶಿಸಿದಾಗ, ಎದುರಿಗೆ ತಲೆತಗ್ಗಿಸಿ ನಿಂತಿದ್ದ ಅವರ ತರಗತಿಯ ವಿದ್ಯಾರ್ಥಿ ಮೋಹನನೂ, ಸಿಟ್ಟಿನಿಂದ ಕುಳಿತಿದ್ದ ಅವನ ತಂದೆಯನ್ನು ಕಂಡು ಅವರಿಗೆ ತಮ್ಮನ್ನು ಕರೆಸಿದ ಕಾರಣ ಅರಿವಾಯಿತು. ಆದರೂ ತೋರಗೊಡದೆ ಪ್ರಿನ್ಸಿಯವರತ್ತ ನೋಡಿ, “”ಏನು ಸರ್, ಬರ ಹೇಳಿದರಂತೆ?” ಎಂದರು ಗಂಭೀರವದನರಾಗಿ.
“”ನೋಡಿ…ನೀವು ಈ ಮೋಹನನನ್ನು ಇಡೀ ದಿನ ತರಗತಿಯಿಂದ ಹೊರಗೆ ನಿಲ್ಲಿಸಿದ್ದೀರಂತೆ. ಹೌದೆ?” ತುಸು ಅಸಮಾಧಾನ ಬೆರೆತ ಧ್ವನಿಯಲ್ಲಿ ಪ್ರಶ್ನಿಸಿದರು.
ಚಂದ್ರಹಾಸರು, “”ಹೌದು… ಆತನಿಗೆ ಕಲಿಕೆಯಲ್ಲಿ ಆಸಕ್ತಿಯಿಲ್ಲ. ಇಡೀ ತರಗತಿಯ ಏಕಾಗ್ರತೆಗೆ ಭಂಗ ತರುತ್ತಾನೆ. ಅದಕ್ಕೇ”
ಅವರ ಮಾತು ಪೂರ್ಣಗೊಳಿಸಲು ಬಿಡದೇ, ಮೋಹನನ ತಂದೆ ಕುಪಿತರಾಗಿ, “”ನನ್ನ ಮಗನನ್ನು ಸಮರ್ಥಿಸಿಕೊಳ್ಳಲು ನಾನು ಬಂದಿಲ್ಲ. ತಪ್ಪು ಮಾಡಿದರೆ ಶಿಕ್ಷೆ ಕೊಡಿ. ಆದರೆ, ಇಡೀ ದಿನ ತರಗತಿಯಿಂದ ಹೊರಗೆ ನಿಲ್ಲಿಸುವುದು ಯಾವ ನ್ಯಾಯ? ಇದು ಸರೀನಾ? ಆತನ ಆತ್ಮವಿಶ್ವಾಸವನ್ನು ಕುಂದಿಸಿದಂತಾಗುವುದಿಲ್ಲವೇ? ನಿಮ್ಮ ಬಗ್ಗೆ, ನೀವು ನೀಡುವ ಶಿಕ್ಷೆಯ ಬಗ್ಗೆ ಬಹಳ ದೂರುಗಳನ್ನು ನಾವು ಕೇಳಿದೀವಿ. ಹೀಗೇ ಮುಂದುವರೆದರೆ ನಾವು ಮುಂದೇನು ಮಾಡಬೇಕೆಂದು ಆಲೋಚಿಸಬೇಕಾಗುತ್ತದೆ” ಎಂದು ಖಾರವಾಗಿಯೇ ನುಡಿದರು.
ಪ್ರಿನ್ಸಿಪಾಲರು, “”ರಾಯರೆ, ಏನೋ ಆಗಿ ಹೋಯಿತು. ಚಂದ್ರಹಾಸರ ಪರವಾಗಿ ನಾನು ಕ್ಷಮೆ ಕೇಳ್ತೀನಿ. ವಿಷಯ ದೊಡ್ಡದು ಮಾಡಬೇಡಿ. ಬಿಟ್ಟುಬಿಡಿ” ಎಂದು ಅವರ ಮನವೊಲಿಸಿ ಕಳುಹಿಸಿ ಕೊಟ್ಟರು.
ಅವರು ತೆರಳಿದ ಬಳಿಕ ತುಸು ಬೇಸರದಿಂದಲೇ ಚಂದ್ರಹಾಸರತ್ತ ತಿರುಗಿದ ಪ್ರಿನ್ಸಿಪಾಲ್, “”ಯಾಕೋ…ಇದು ಮುಗಿಯುವಂತೆ ಕಾಣುತ್ತಿಲ್ಲ ಚಂದ್ರಹಾಸರೇ. ನಿಮ್ಮ ಬಗ್ಗೆ ದೂರುಗಳು ಜಾಸ್ತಿನೇ ಆಗುತ್ತಿವೆ. ಮೊನ್ನೆ ನೋಡಿದರೆ ಯಾವುದೋ ಹುಡುಗನಿಗೆ ಇಡೀ ಪಾಠದ ನೋಟ್ಸು ಐವತ್ತು ಸಲ ಬರೆಯಲು ಹೇಳಿ, ಅದಾಗಲಿಲ್ಲ ಅಂತ ನೆಲದ ಮೇಲೆ ಕೂರಿಸಿ ಬರೆಸಿದಿರಂತೆ. ಮತ್ತೂಮ್ಮೆ, ನೀಟಾಗಿ ಬರೆಯಲಿಲ್ಲ ಅಂತ ನೋಟ್ಸು ಪುಸ್ತಕವನ್ನೇ ಹರಿದು ಹಾಕಿ ಮತ್ತೂಮ್ಮೆ ಬರೆಸಿದರಂತೆ. ಏನ್ರೀ ಇದು. ಯಾಕೆ ಹೀಗೆ ಮಾಡ್ತೀರಾ? ನಮಗೆ ತಲೆನೋವಾಗಿ ಬಿಟ್ಟಿದ್ದೀರಿ ನೀವು. ಸ್ವಲ್ಪ ಕೋಪ ಕಮ್ಮಿ ಮಾಡಿಕೊಳ್ಳಿ. ನಿಮೂY ಒಳ್ಳೇದು. ನಮೂY ನೆಮ್ಮದಿ”
“”ಸರ್… ಶಿಸ್ತು ಕಲಿಸಬೇಕು. ಅವರಿಗೆ ಹೊಡೆಯಬಾರದು.ಅಂದರೆ ಬೇರೆ ದಾರಿ ಏನಿದೆ. ಇದನ್ನೂ ಸಹಿಸಲು ಆಗದಿದ್ದರೆ ಹೇಗೆ. ಅವರು ಶಿಸ್ತು ಕಲಿತರೆ ಮುಂದೆ ಅವರ ಮಕ್ಳು ತಾನೆ ಜೀವನದಲ್ಲಿ ಚೆನ್ನಾಗಿ ಮುಂದೆ ಬರೋದು? ನಾವೆಲ್ಲ ಕೈಗಂಟಿಗೆ ಮೇಷ್ಟ್ರಿಂದ ಪೆಟ್ಟು ತಿನ್ತಾ ಇರಲಿಲ್ವಾ ಸರ್? ಈಗ ಏನು ಮಾಡಿದರೂ ಪೋಷಕರಿಗೆ ಸಮಸ್ಯೆನೇ” ಚಂದ್ರಹಾಸರು ಬೇಸರಿಸಿಕೊಂಡರು.
“”ನಿಮ್ಮ ಉದ್ದೇಶ ಒಳ್ಳೆಯದೇ. ಆದರೆ ಸ್ವಲ್ಪ ಕಠಿಣ ಅಷ್ಟೇ. ಮಕ್ಳನ್ನು ನಾವು ಈಗ್ಲೆà ದೊಡ್ಡವರ ಥರ ವರ್ತಿಸಬೇಕು ಅಂತ ನಿರೀಕ್ಷಿಸುವುದು ತಪ್ಪು. ಅವರ ಮನಸ್ಸು ನಾವು ಅರ್ಥಮಾಡಿಕೊಳ್ಳಬೇಕು. ಮಕ್ಳು ಮಕ್ಳ ಥರ ವರ್ತಿಸಿದರೇನೆ ಚೆನ್ನ. ಹೋಗಿ. ಕ್ಲಾಸು ನೋಡಿಕೊಳ್ಳಿ” ಎಂದು ಸೂಚ್ಯವಾಗಿ ತಮ್ಮ ಆಕ್ಷೇಪಣೆ ಪ್ರದರ್ಶಿಸಿ ಕಳಿಸಿಕೊಟ್ಟರು.
ಚಂದ್ರಹಾಸರು ಸ್ಟಾಫ್ ರೂಮಿಗೆ ಬರುವ ಹೊತ್ತಿಗೆ ಮೋಹನನ ತಂದೆಯ ದೂರಿನ ವಿಷಯ ಎಲ್ಲಾ ಕಡೆ ಹರಡಿಬಿಟ್ಟಿತ್ತು. ಇವರು ಒಳಗೆ ಕಾಲಿರಿಸಿದಂತೇ ಅಲ್ಲಿ ಅರ್ಥಗರ್ಭಿತ ಮೌನ ಸ್ಥಾಪಿಸಿತು. ಇಂಥ ಅನೇಕ ಪ್ರಸಂಗಗಳಿಗೆ ಸಾಕ್ಷಿಯಾದ ಆ ಕೋಣೆಯಲ್ಲಿ ಕುಳಿತುಕೊಳ್ಳದೇ ತಮ್ಮ ಚೀಲವಿಟ್ಟು ತರಗತಿಯತ್ತ ಹೊರಟುಬಿಟ್ಟರು ಚಂದ್ರಹಾಸರು.
.
ಚಂದ್ರಹಾಸರು ಆ ಖಾಸಗಿ ಶಾಲೆಯ ಅಧ್ಯಾಪಕರಾಗಿ ಬಂದು ಒಂದು ವರ್ಷವಾಗಿತ್ತು. ಆದರೂ ಉಳಿದ ಅಧ್ಯಾಪಕರ ಬಳಿ ಸೌಹಾರ್ದವಾಗಿ ಮಾತುಕತೆ ಇರಲಿಲ್ಲ. ತಾವಾಯಿತು ತಮ್ಮ ಪಾಡಾಯಿತು ಎನ್ನುವಂತಿದ್ದರು. ಏನೇ ಹೇಳಿದರೂ ಅದಕ್ಕೆ ಸಿಡುಕಿ, ಋಣಾತ್ಮಕವಾಗಿಯೇ ಸ್ವೀಕರಿಸಿ ಪ್ರತಿಕ್ರಿಯಿಸುತ್ತಿದ್ದರಿಂದ ಈ ಮನುಷ್ಯನ ಸಹವಾಸವೇ ಬೇಡವೆನ್ನುವಂತೆ ಉಳಿದವರು ಇವರನ್ನು ದೂರವೇ ಇಟ್ಟಿದ್ದರು. ಮಾತು ಮೊನಚು, ಕೊಂಕು, ಮೂಗಿನ ತುದಿಯಲ್ಲೇ ಕೋಪ ಇದ್ದರಿಂದ ಮಕ್ಕಳೂ ಅವರನ್ನು ಕಂಡರೆ ಹೆದರುತ್ತಿದ್ದರು. ತರಗತಿಯಲ್ಲಂತೂ ಶ್ವಾಸ ತೆಗೆಯುವುದೇ ಕಷ್ಟವೆನ್ನುವಂಥ ಸ್ಥಿತಿ. ಹಾಗೆಂದು ಒಳ್ಳೆಯವರೆಂದರೆ ಅಷ್ಟೇ ಒಳ್ಳೆಯವರು. ಪಾಠ ವಿವರಿಸಿದರೆ ಅದನ್ನು ತೊಳೆ ಬಿಡಿಸಿದ ಹಣ್ಣಿನಂತೆ ಮನದಟ್ಟಾಗುವಷ್ಟು ವಿವರಿಸಿ ಮಕ್ಕಳ ಮನಸ್ಸಿನಾಳಕ್ಕೆ ಇಳಿಯುವಂತೆ ಪಾಠ ಮಾಡುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿ ಕುರಿತೂ ಅವರ ಚಿಕಿತ್ಸಕ ನೋಟ ಇದ್ದೇ ಇರುತ್ತಿತ್ತು. ಪ್ರಶಂಸೆಗೆ ಯೋಗ್ಯವಾದ ಯಾವುದೇ ಕೃತ್ಯವನ್ನು ವಿದ್ಯಾರ್ಥಿ ಮಾಡಿದಾಗ, ಆತನನ್ನು ತರಗತಿಯ ಮುಂದೆ ಕರೆಸಿ ಇಡೀ ತರಗತಿಯಿಂದ ಚಪ್ಪಾಳೆ ಕೊಡಿಸುತ್ತಿದ್ದರು. ಪುಸ್ತಕದ ಬೈಂಡು ಹರಿದರಂತೂ ಅವರು ಸಹಿಸುತ್ತಿರಲಿಲ್ಲ. ಒಮ್ಮೆ ಯಾವುದೋ ಹುಡುಗನ ಅಂಗಿಯ ಗುಬ್ಬಿ ಕಿತ್ತು ಹೋಗಿತ್ತೆಂದು ಅವರೇ ತಮ್ಮ ಚೀಲದಲ್ಲಿದ್ದ ಸೂಜಿದಾರ ತಂದು ಹೊಲಿದು ಕೊಟ್ಟಿದ್ದರು. ಶಿಸ್ತೆಂದರೆ ಶಿಸ್ತು!
ಹೀಗೆ ಆಟವಾಡುವಾಗ ಒಬ್ಬ ಹುಡುಗ ಬಿದ್ದು ಗಾಯವಾಗಿ ರಕ್ತ ಸುರಿಯತೊಡಗಿದಾಗ, ಹಿಂದೆಮುಂದೆ ಯೋಚಿಸದೇ ಆತನನ್ನು ಎತ್ತಿಕೊಂಡು ಆಸ್ಪತ್ರೆಯತ್ತ ಧಾವಿಸಿದ್ದರು. ಪ್ರತೀದಿನ ಅವರ ತರಗತಿಯಲ್ಲಿ ಕಡ್ಡಾಯವಾಗಿ ಮೂರು ಹೊತ್ತು ಪಾಠ ನಿಲ್ಲಿಸಿ ಮನೆಯಿಂದ ತಂದ ನೀರು ತಮ್ಮೆದುರೇ ಕುಡಿಯುವಂತೆ ಸೂಚಿಸುತ್ತಿದ್ದರು. ಈ ನಿಯಮವನ್ನು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದಿದ್ದರು. ಕಳೆದ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುಣ್ಯಕೋಟಿಯ ಗೀತನೃತ್ಯ ನಾಟಕ ನಡೆದಾಗ ಕೊನೆಗೆ ಪುಣ್ಯಕೋಟಿ ಮಗುವಿಗೆ ಹಾಲೂಡಿಸಿ ಕೊಟ್ಟ ಮಾತು ನಡೆಸಲು, ವ್ಯಾಘ್ರದ ಆಹಾರವಾಗಲು ಬಂದು, ವ್ಯಾಘ್ರನ ಮನ ಪರಿವರ್ತನೆಯಾಗಿ ತಾನೇ ಹಾರಿ ಪ್ರಾಣ ತೆತ್ತಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರೆ, ಈ ಚಂದ್ರಹಾಸರು ಮಾತ್ರ ಭಾವುಕರಾಗಿ ಮುಖ ಮುಚ್ಚಿಕೊಂಡು ಜೋರಾಗಿ ಬಿಕ್ಕಳಿಸುತ್ತಿದ್ದರು.
“”ಇಂಥ ಜೋರು ಮೇಷ್ಟ್ರ ಕಣ್ಣಲ್ಲೂ ನೀರು ತರಿಸುವಷ್ಟು ಚಂದ ನಮ್ಮ ಮಕ್ಕಳು ಅಭಿನಯಿಸಿದರು” ಎಂದು ಪ್ರಿನ್ಸಿಯವರು ಮಕ್ಕಳ ಅಭಿನಯಕ್ಕೆ “ಶಹಬ್ಟಾಸ್ಗಿರಿ’ ನೀಡಿದ್ದರು.
ಇಷ್ಟಿದ್ದೂ ಸಿಟ್ಟು ಮಾತ್ರ ಮೂಗಿನ ತುದಿಯಲ್ಲೇ! ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಇನ್ನು ಆತ್ಮೀಯತೆ ದೂರದ ಮಾತು. ಕೆಲವೊಮ್ಮೆ ಮುಂಚಿತವಾಗಿ ತಿಳಿಸದೇ ಶಾಲೆಗೆ ರಜೆ ಹಾಕಿ ಬಿಡುತ್ತಿದ್ದರು. ಕಾರಣವೂ ತಿಳಿಸುತ್ತಿರಲಿಲ್ಲ. ಆಗೆಲ್ಲ ಪ್ರಿನ್ಸಿಪಾಲ್ ಬೈಯ್ಯುವಾಗ, ಅವರ ಮಾತು ತಮಗೆ ಸಂಬಂಧಿಸಲೇ ಇಲ್ಲವೇನೋ ಎಂಬಂತೆ ನಿಂತು ಬಿಡುತ್ತಿದ್ದರು.
“”ನಿಮ್ಮ ಬಗ್ಗೆ ಪೋಷಕರ ದೂರು ಇದ್ದೇ ಇದೆ. ಜೊತೆಗೆ ಈ ಥರದ ತಾಪತ್ರಯ ನಿಮುª. ರಜೆ ಹಾಕೋದಾದರೆ ಮುಂಚಿತವಾಗಿ ತಿಳಿಸಿದರೆ ನಿಮ್ಮ ತರಗತಿಗೆ ಬೇರೆ ಅಧ್ಯಾಪಕರ ವ್ಯವಸ್ಥೆನಾದರೂ ಮಾಡಬಹುದು. ಅಷ್ಟೂ ತಿಳುವಳಿಕೆ ಇಲ್ವೇನ್ರೀ?” ಎಂದು ಬೇಸರ ವ್ಯಕ್ತಪಡಿಸಿದರೂ ಚಂದ್ರಹಾಸರದ್ದು ನಿರ್ಲಿಪ್ತ ಧೋರಣೆ.
“”ನೀವು ಪಾಠ ಚೆನ್ನಾಗಿ ಮಾಡ್ತೀರ ಅನ್ನೋ ಕಾರಣಕ್ಕೆ ನಾನು ಸುಮ್ನಿದ್ದೀನಿ. ಮ್ಯಾನೇಜೆ¾ಂಟ್ಗೆ ಸಮಾಧಾನ ಪಡಿಸಿದ್ದೀನಿ. ಇಲ್ದಿದ್ರೆ ಯಾವಾಗಲೋ ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿ ಮನೆಗೆ ಕಳಿಸ್ತಿದ್ರು. ನಮುª ಖಾಸಗಿ ಶಾಲೆ. ಆ ಪ್ರಜ್ಞೆ ಇರಲಿ” ಎಂದು ಎಷ್ಟು ಎಚ್ಚರಿಸಿದರೂ ಅವರ ಚಾಳಿ ಮಾತ್ರ ಅವರು ಬಿಡುತ್ತಿರಲಿಲ್ಲ.
.
ಅಂದು ಒಂದು ಅನಿರೀಕ್ಷಿತ ಘಟನೆ ನಡೆದು ಹೋಯಿತು. ಚಂದ್ರಹಾಸರು ಪಾಠ ಮಾಡುತ್ತಿದ್ದ ವೇಳೆ, ಶ್ರೀಶೈಲ ಎನ್ನುವ ವಿದ್ಯಾರ್ಥಿ ತಲೆಬಗ್ಗಿಸಿ ನೋಟ್ಸ್ ಪುಸ್ತಕದಲ್ಲಿ ಯಾವುದೋ ಚಿತ್ರ ಬಿಡಿಸುವಲ್ಲಿ ತಲ್ಲೀನನಾಗಿದ್ದ. ಇದನ್ನು ಕಂಡ ಚಂದ್ರಹಾಸರ ಪಿತ್ತ ನೆತ್ತಿಗೇರಿಬಿಟ್ಟಿತು. ಮೊದಲೇ ದೂರ್ವಾಸಮುನಿಯ ವಂಶದವರಂತೆ ಆಡುತ್ತಿದ್ದ ಅವರಿಗೆ ಸಿಟ್ಟು ಭುಗಿಲೆದ್ದು, ಶ್ರೀಶೈಲನ ನೋಟ್ಸ್ ಪುಸ್ತಕ ಕಿತ್ತುಕೊಂಡು ಹೊರಗೆಸೆದು ಅವನ ಕಪಾಳಕ್ಕೆ ಬಾರಿಸಿ ಬಿಟ್ಟರು. ಅವರ ಪ್ರಹಾರವನ್ನು ತಡೆದುಕೊಳ್ಳಲಾರದೇ ಶ್ರೀಶೈಲ ಅಲ್ಲೇ ಕುಸಿದು ಬಿದ್ದು, ಅವನ ಪ್ರಜ್ಞೆ ತಪ್ಪಿತು. ತಮ್ಮ ದುಡುಕಿನ ಅರಿವು ಆಗುವುದರ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಯಾರೋ ಹುಡುಗ ಓಡಿ ಹೋಗಿ ಪ್ರಿನ್ಸಿಪಾಲರಿಗೆ ಸುದ್ದಿ ಮುಟ್ಟಿಸಿದ. ಅವರು ಸಹಾಯಕರೊಡನೆ ಧಾವಿಸಿ ಬಂದರು. ಶ್ರೀಶೈಲನನ್ನೆತ್ತಿಕೊಂಡು ಹೊರಗಿದ್ದ ಆಟೋ ಕರೆಸಿ, ಅದರಲ್ಲಿ ಕುಳ್ಳಿರಿಸಿ ಅಸ್ಪತ್ರೆಗೆ ಕೊಂಡೊಯ್ದರು. ಆ ಹುಡುಗನ ಹೆತ್ತವರಿಗೆ ವಿಷಯ ಮುಟ್ಟಿಸಲೇಬೇಕಾಯಿತು. ಈ ಸುದ್ದಿ ಪೋಷಕರ ನಡುವೆ ಮಿಂಚಿನಂತೆ ಹರಡಿತು. ಅವರೆಲ್ಲರೂ ಗುಂಪುಗೂಡಿ ಶಾಲೆಯ ಪ್ರಿನ್ಸಿಪಾಲ್ ಕೊಠಡಿಯ ಮುಂದೆ ಜಮೆಗೂಡಿ ಪ್ರತಿಭಟನೆ ನಡೆಸಿದರು.
“”ಇದು ಮೊದಲನೆಯ ಬಾರಿಯಲ್ಲ. ಚಂದ್ರಹಾಸ ಸರ್ದು ಕಂಪ್ಲೇಂಟು. ಎಷ್ಟೋ ಸರ್ತಿ ನಮ್ಮ ಹುಡುಗನ ಮೇಲೆ ಕೈ ಮಾಡಿದ್ದಾರೆ. ಈಗ ಮಕ್ಕಳ ಮೈಮುಟ್ಟಲು ಇಲ್ಲ ಅಂತ ನಿಯಮನೇ ಇದೆ. ಆದರೂ… ಈ ಮಾಸ್ಟ್ರದ್ದು ಅತಿರೇಕ ಆಯಿತು. ಅವರು ಕ್ಷಮಾಪಣೆ ಕೇಳಲೇ ಬೇಕು. ಈಗ ಆ ಹುಡುಗನಿಗೆ ಹೆಚ್ಚುಕಮ್ಮಿ ಆದರೆ ಯಾರು ಜವಾಬ್ದಾರಿ? ನಾಳೆ ನಮ್ಮ ಮಕ್ಳ ಮೇಲೆ ಕೈ ಮಾಡಲ್ಲ ಅಂತ ನಂಬಿಕೆ ಏನು? ಯಾವ ಧೈರ್ಯದ ಮೇಲೆ ನಿಮ್ಮ ಶಾಲೆಗೆ ನಮ್ಮ ಮಕ್ಳನ್ನು ಕಳಿಸೋದು?” ಎಂಬೆಲ್ಲ ಮಾತುಗಳು ಕೇಳಲಾರಂಭಿಸಿದವು.
ಪ್ರಿನ್ಸಿಪಾಲ್ರಿಗೆ ಪೋಷಕರನ್ನು ಸಂಭಾಳಿಸುವುದು, ಅವರನ್ನು ಸಂತೈಸುವುದು ಕಷ್ಟ ಸಾಧ್ಯವಾಯಿತು. ಸುದ್ದಿ ಹೊರಗೆ ಹರಡಿದರೆ ಶಾಲೆಯ ಮಾನ ಹರಾಜು ಹಾಕಿದಂತೆ ಎಂಬ ಜವಾಬ್ದಾರಿಯ ಅರಿವೂ ಇತ್ತು. ಅಂಥ ಅನಾಹುತವನ್ನು ತಡೆಯಲು, ಚಂದ್ರಹಾಸರನ್ನು ಕರೆಸಿ ಪೋಷಕರ ಮುಂದೆ ಕ್ಷಮೆ ಯಾಚಿಸಲು ಆದೇಶಿಸಿದರು. “”ನೀವು ಮಾಡಿದ ಕೃತ್ಯಕ್ಕೆ ನೀವೇ ಹೊಣೆ. ಹೋಗಿ ಕ್ಷಮೆ ಕೇಳಿ. ಆಡಳಿತ ವರ್ಗ ಕೂಡ ಅದನ್ನೇ ಹೇಳಿದ್ದಾರೆ. ಇಲ್ದಿದ್ರೆ ಇವ್ರು ಇಲ್ಲಿಂದ ಕದಲಲ್ಲ. ಮೊದಲು ಹೋಗಿ ಕ್ಷಮೆ ಕೇಳಿ. ನಿಮ್ಮನ್ನು ಇಷ್ಟು ದಿನ ಇಲ್ಲಿ ಇಟ್ಟದ್ದೇ ತಪ್ಪಾಯಿತು” ಪ್ರಿನ್ಸಿಪಾಲ್ ಕಂಗಳಲ್ಲಿ ಅಸಹನೆ ಬೆರೆತ ದನಿಯಲ್ಲಿ ಕನಲಿದರು.
ಚಂದ್ರಹಾಸರು ಕಾಲೆಳೆದುಕೊಂಡು ಹೊರಬಂದರು. ಪೋಷಕರಲ್ಲಿ ಕೆಲವರು ಎದ್ದು ಬಂದು ಅವರನ್ನು ಸಮೀಪಿಸಿದರು.
“”ಏನ್ರೀ ಮನುಷ್ಯತ್ವ ಇಲ್ವಾ ನಿಮಗೆ? ಭಾರೀ ಶಿಕ್ಷೆ ಕೊಡ್ತೀರಾ ನೀವು? ಮಕ್ಳು ಜೊತೆ ಹೇಗೆ ವರ್ತಿಸಬೇಕು ಅಂತ ವಿವೇಚನೆ ಇಲ್ಲದ ನೀವು ಕೂಡಾ ಅಧ್ಯಾಪಕರಾ? ನಿಮ್ಮ ಹೆಸರು ಹೇಳಿದರೇ ನಮ್ಮ ಮಕ್ಳು ನಡುಗ್ತಾರಲ್ರಿ? ಇಷ್ಟು ಜನ ಸೇರಿ ನಿಮ್ಮ ಮೇಲೆ ತಿರುಗಿ ಬಿದ್ರೆ. ನಿಮ್ಮ ಸ್ಥಿತಿ ಏನಾಗಬೇಕು. ಗೊತ್ತಾ?” ಆತ ದನಿ ಏರಿಸಿ ಅವರತ್ತ ಕಣ್ಣು ಕೆಕ್ಕರಿಸಿ ನೋಡುತ್ತಾ ನುಡಿದ. ಹಿಂದಿನಿಂದ ಬಂದ ಪ್ರಿನ್ಸಿಪಾಲರು, ಪರಿಸ್ಥಿತಿ ಬಿಗಡಾಯಿಸುವ ಸೂಚನೆ ದೊರೆತು ಚಂದ್ರಹಾಸರ ರಕ್ಷಣೆಗೆ ಬಂದರು.
“”ಅವರಿಂದ ತಪ್ಪು ನಡೆದಿದೆ. ಅವರು ಕ್ಷಮೆ ಕೇಳ್ತಾರೆ ಅಲ್ವೇನ್ರಿ ಚಂದ್ರಹಾಸ್?” ಎಂದವರು ಕಣ್ಣಲ್ಲೇ ಕ್ಷಮೆ ಕೇಳುವಂತೆ ಸಂಜ್ಞೆ ಮಾಡಿದರು. ಇಡೀ ಪೋಷಕರ ನೋಟ ಅವರತ್ತಲೇ ಇತ್ತು.
ಆದರೆ, ಚಂದ್ರಹಾಸರು ಅಲ್ಲಿ ನಿಲ್ಲಲಿಲ್ಲ. ನೇರವಾಗಿ ಸ್ಟಾಫ್ ಕೋಣೆಯತ್ತ ಹೆಜ್ಜೆ ಹಾಕಿದರು. ಇದನ್ನು ನಿರೀಕ್ಷಿಸದ ಪ್ರಿನ್ಸಿಪಾಲರ ಮುಖವೂ ವಿವರ್ಣವಾಯಿತು. ಪೋಷಕರ ಮುಂದೆ ತಮ್ಮ ಮಾತು ಕಡೆಗಣಿಸಿದಕ್ಕಾಗಿ ಮುಖಭಂಗವೂ ಆಯಿತು.
“”ನೋಡಿದ್ರಾ ಸರ್. ಮಾಡಿರುವ ತಪ್ಪಿಗೆ ಅವರಲ್ಲಿ ಲವಲೇಷವೂ ಪಶ್ಚಾತ್ತಾಪವಿಲ್ಲ. ಕ್ಷಮೆ ಕೇಳುವಷ್ಟು ಸೌಜನ್ಯವೂ ಇಲ್ಲ. ಇಂಥವರು ಈ ಶಾಲೆಗೇ ಕಳಂಕ. ಅವರನ್ನು ಇನ್ನು ಇಲ್ಲಿಟ್ಟರೆ ನಮ್ಮ ಮಕ್ಳನ್ನು ನಾವು ಈ ಶಾಲೆಯಿಂದ ತೆಗೆದು ಬೇರೆ ಶಾಲೆಗೆ ಹಾಕ್ತೀವಿ ಅಷ್ಟೇ”
ಪ್ರಿನ್ಸಿಪಾಲರಿಗೂ ಈ ಸಲ ಮನಸ್ಸು ಒಡೆದು ಹೋಗಿತ್ತು. ಅವರು ತಮ್ಮ ಕೋಣೆಗೆ ಸರಿದು ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳ ಜೊತೆ ಚರ್ಚಿಸಿದರು. ಆಡಳಿತ ವರ್ಗ, ತೆಗೆದು ಕೊಂಡ ನಿರ್ಧಾರವನ್ನು ಹೊರಗೆ ಬಂದು ಪೋಷಕರ ಮುಂದೆ ಪ್ರಕಟಿಸಿದರು.
“”ಈ ಕ್ಷಣದಿಂದ ಚಂದ್ರಹಾಸರನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಇನ್ನು ಮುಂದೆ ಅವರಿಗೂ, ಈ ಶಾಲೆಗೂ ಯಾವುದೇ ಸಂಬಂಧ ಇರುವುದಿಲ್ಲ. ನೀವೆಲ್ಲ ಶಾಂತ ರೀತಿಯಿಂದ ವರ್ತಿಸಿ ಸಹಕರಿಸಬೇಕಾಗಿ ಕೋರುತ್ತೇನೆ”
ಆಡಳಿತ ವರ್ಗದ ಈ ನಿರ್ಧಾರದಿಂದ ಪೋಷಕರ ಉದ್ರಿಕ್ತತೆ ತುಸು ಶಮನಗೊಂಡಿತು. ಅಷ್ಟರಲ್ಲಿ ಅಟೆಂಡರ್ ಬಾಬು ಬಂದು ಒಂದು ಪತ್ರವನ್ನು ತಂದು ಪ್ರಿನ್ಸಿಪಾಲರ ಕೈಗೆ ಕೊಟ್ಟ. “”ಏನಿದು?” ಎಂದು ಅವರು ಪ್ರಶ್ನಿಸುತ್ತಲೇ ಅವನು ತಂದಿತ್ತ ಹಾಳೆಯ ಮೇಲೆ ಕಣ್ಣಾಡಿಸಿದರು. ಅದನ್ನು ಓದಿ, ಭಾರವಾದ ನಿಟ್ಟುಸಿರು ಹೊರ ಹಾಕುತ್ತಾ, ಚಂದ್ರಹಾಸರು ಖುದ್ದು ತಮ್ಮ ವೃತ್ತಿಗೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ” ಎಂದು ಪತ್ರವನ್ನು ಪೋಷಕರ ಮುಂದೆ ಪ್ರದರ್ಶಿಸಿದರು.
ಅಲ್ಲಿ ನೆರೆದಿದ್ದ ಪೋಷಕರ ಗುಂಪು ನಿಧಾನವಾಗಿ ಚದುರಿತು. ಪ್ರಿನ್ಸಿಪಾಲರು ಬಾಬುವನ್ನು ಕರೆದು, “”ಚಂದ್ರಹಾಸರು ಎಲ್ಲಿ?”ಎಂದು ಕೇಳಿದರು.
“”ನೀವು ಮ್ಯಾನೇಮೆಂಟ್ನವರ ಬಳಿ ಫೋನಿನಲ್ಲಿ ಮಾತನಾಡುವಾಗಲೇ ಅವರು ಈ ಪತ್ರ ಬರೆದುಕೊಟ್ಟು ಹೊರಟು ಬಿಟ್ಟರು ಸರ್” ಎಂದ ಹಗುರವಾಗಿ. ಅವನೂ ಈ ನಿರ್ಧಾರದಿಂದ ಗೆಲುವಾಗಿದ್ದವನಂತೆ ಕಂಡುಬಂದ.
“”ಅವರ ಮನೆ ಎಲ್ಲಿ?”
“”ಅವ್ರ ಬಗ್ಗೆ ಯಾರಿಗೂ, ಯಾವ ಮಾಹಿತಿನೂ ಇಲ್ಲಾ ಸರ್. ಆಫೀಸ್ ರೆಕಾರ್ಡ್ಸ್ನಲ್ಲಿ ಇರಬೇಕೇನೋ” ಎಂದ.
ಪ್ರಿನ್ಸಿಪಾಲರು ತಮ್ಮ ಕೋಣೆಯೊಳಗೆ ಹೋಗಿ, ಚಂದ್ರಹಾಸರ ಮೊಬೈಲ್ಗೆ ಕರೆ ಮಾಡಿದರು. ಅದು ಸ್ಥಗಿತ ಗೊಂಡಿತ್ತು.
.
ಆಟೋದಲ್ಲಿ ಹೊರಟ ಚಂದ್ರಹಾಸರ ಎದೆಯಲ್ಲಿ ದುಗುಡ ಮನೆ ಮಾಡಿತ್ತು. ಸಿಟ್ಟಿನ ಭರದಲ್ಲಿ ಹೊಡೆದ ಏಟು ಶ್ರೀಶೈಲನ ಪ್ರಾಣಕ್ಕೆ ಎರವಾಗುವುದೆಂಬ ಕಲ್ಪನೆ ಇರಲಿಲ್ಲ. ದುಡುಕಿನ ಫಲ ಯಾವತ್ತೂ ಕೆಟ್ಟದ್ದೇ. ತನ್ನ ವಿವೇಚನೆಗೆ ಏನು ಮಂಕು ಕವಿದಿತ್ತು! ಚಂದ್ರಹಾಸರು ಮನದಲ್ಲಿ ಹಳಹಳಿಕೆ ತುಂಬಿಕೊಂಡೇ ಆಸ್ಪತ್ರೆಯತ್ತ ದೌಡಾಯಿಸಿದರು. ಹುಡುಗ ಚೇತರಿಸಿಕೊಂಡರೆ ಸಾಕು ಎಂದು ಪ್ರಾರ್ಥಿಸುತ್ತಲೇ ಒಳಗಡಿಯಿಡುವಾಗ ಅಲ್ಲಿ ನೆರೆದಿದ್ದ ಕೆಲವು ಪೋಷಕರು ಮೈಮೇಲೆ ಎಗರಿ ಬಂದರು, “”ಹುಡುಗ ಬದುಕಿದ್ದಾನಾ, ಸತ್ತಿದ್ದಾನಾ ಅಂತ ನೋಡಲು ಬಂದಿರೇನು? ಏನೋ ದೇವರ ದಯೆ. ಸರಿ ಹೋದ. ಹೆಚ್ಚುಕಮ್ಮಿ ಆಗಿದ್ರೆ ನಿಮ್ಮ ಕತೆ ಬೇರೆನೇ ಇರ್ತಿತ್ತು” ಎಂದಾಗ ಎದೆ ಮೇಲೆ ಹೇರಿದಂತಿದ್ದ ಬಂಡೆಕಲ್ಲು ಉರುಳಿ ಬಿದ್ದಂತೆ ನಿರಾಳವಾದರು. ಅಲ್ಲಿ ನಿಲ್ಲದೇ ಶ್ರೀಶೈಲ ಇದ್ದ ವಾರ್ಡಿಗೆ ಧಾವಿಸಿದಾಗ, ಅವನು ದಿಂಬಿಗೊರಗಿ ಕುಳಿತು ಆಹಾರ ಸೇವಿಸುತ್ತಿದ್ದ. ಅವನ ಮುಖ ಎದುರಿಸಲಾರದಾದರು. ಶ್ರೀಶೈಲನ ಹೆತ್ತವರೂ ಅವರತ್ತ ದಿವ್ಯ ನಿರ್ಲಕ್ಷ ತೋರಿಸಿ ನಿಂತರು.
“”ನಿಮ್ಮೆಲ್ಲರ ತಪ್ಪಿತಸ್ಥ ನಾನು. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಆವೇಶಪಟ್ಟು ಹೊಡೆದುಬಿಟ್ಟೆ. ಅವನು ಪಾಠ ಮಾಡುತ್ತಿರುವಾಗ ಗಮನ ಕೊಡದೇ, ಚಿತ್ರ ಬಿಡಿಸುತ್ತಿದ್ದ. ನಾನು ಹೊಡೆದ ಏಟು ಇಷ್ಟು ಕೆಟ್ಟ ಪರಿಣಾಮ ಬೀರುತ್ತೆ ಅಂತ ತಿಳಿದಿರಲಿಲ್ಲ. ದಯಮಾಡಿ ಮತ್ತೂಮ್ಮೆ ನನ್ನನ್ನು ಕ್ಷಮಿಸಿ. ನಾನು ಆ ಶಾಲೆ ನೌಕರಿ ಬಿಟ್ಟಿದ್ದೇನೆ” ಎಂದು ಕೈ ಮುಗಿದು ತಲೆತಗ್ಗಿಸಿ ನಿಂತರು. ಶ್ರೀಶೈಲನ ಕಂಗಳಲ್ಲಿ ಬುಳಬುಳನೇ ನೀರಾಡಿತು, “”ಸಾರಿ ಸರ್… ನನ್ನಿಂದ…” ಎಂದು ಏನನ್ನೋ ಹೇಳಲೆತ್ನಿಸಿದ. ಅವನ ಹೆತ್ತವರೂ ಮೃದುವಾದರು.
“”ಸರ್, ಕೆಲಸ ಯಾಕೆ ಬಿಡಲು ಹೋದಿರಿ. ಅವನು ಬೆಳಿಗ್ಗೆ ಶಾಲೆಗೆ ಬರ್ತಾ ಏನೂ ತಿಂದಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ಬಂದಿದ್ದ. ಅದಿಕ್ಕೆ ಹೀಗಾಗಿದೆ ಅನ್ಸುತ್ತೆ”
ಅವರು ಇನ್ನು ಏನು ಹೇಳುತ್ತಿದ್ದರೋ, ಅದನ್ನು ಆಲಿಸುವ ಚೈತನ್ಯ ಅವರಲ್ಲಿ ಉಳಿದಿರಲಿಲ್ಲ. ನಿಧಾನವಾಗಿ ಕಾಲೆಳೆದುಕೊಂಡು ಬಂದು ಹೊರಗೆ ನಿಂತಿದ್ದ ಆಟೋ ಏರಿದರು. ಮನೆಯ ವಿಳಾಸ ತಿಳಿಸಿದರು.
ಮನದಲ್ಲಿದ್ದ ವಿಪ್ಲವಕ್ಕೆ ಮೌನದ ಪರದೆ ಹೊದೆಸಿ ಕುಳಿತಿದ್ದರು. ಒಳಗೆ ಕುದಿವ ಲಾವಾರಸ. ಅದು ಅಸಹಾಯಕತೆಯೋ, ಕ್ರೋಧವೊ, ನೋವೋ, ಜಿಗುಪ್ಸೆಯೋ, ಹತಾಶೆಯೋ!
“”ಸರ್, ಮನೆ ಬಂತು” ಆಟೋದವನೇ ಎಚ್ಚರಿಸಿದಾಗ ಅವನಿಗೆ ಹಣ ತೆತ್ತು ಬಂದು ಮನೆಗೆ ಹಾಕಿದ್ದ ಬೀಗ ತೆಗೆದು ಒಳ ಪ್ರವೇಶಿಸಿ ಕದ ಮುಚ್ಚಿದ್ದರು.
ಒಳಗಿನಿಂದ ಇವರ ಆಗಮನದ ಸುಳಿವು ದೊರೆತು ದನಿಯೊಂದು ತೂರಿ ಬಂದಿತು. ಧ್ವನಿ ಬಂದತ್ತ ಹೆಜ್ಜೆ ಹಾಕಿದವರಿಗೆ, ಒಳಗೆ ಮಂಚದ ಮೇಲೆ ಪ್ರಪಂಚದ ಗೊಡವೆಯೇ ಇಲ್ಲದವನಂತೆ ಅಡ್ಡಾಗಿದ್ದ ಹದಿಮೂರು ವರ್ಷದ ವಿಶೇಷ ಚೇತನದ ಮಗ, ನಗುತ್ತಾ ತನ್ನ ಭಾಷೆಯಲ್ಲಿ ಏನೋ ಉಸುರಿದ. ಮಗನ ಆಕೃತಿ ಚಂದ್ರಹಾಸರ ಕಣ್ಣಿಗೆ ಮುಸುಕಾಗಿ ಕಡೆಗೆ ಮಂಜಾಗಿ ಗೋಚರಿಸಿತು. ತಮ್ಮ ದುರ್ಬಲತೆಯನ್ನು ಅವನೆದುರು ಸಡಿಲಿಸದೇ ಹೊರಗೆಬಂದು ಮುಚ್ಚಿದ್ದ ಮುಂಬಾಗಿಲಿಗೊರಗಿ ಕುಸಿದು ಕುಳಿತರು. ಮನೆಗೆ ಮುಚ್ಚಿದ್ದ ಮುಂಬಾಗಿಲಿನಂತೇ ತಮ್ಮ ಅಂತರಂಗಕ್ಕೆ ಬಾಗಿಲು ಮುಚ್ಚಿಯೇ ಬದುಕುತ್ತ, ಒಳಗಣ ಸತ್ಯವನ್ನು ಯಾರಲ್ಲೂ ಬಿಚ್ಚಿಡದೇ ಬದುಕಿಬಂದ ಚಂದ್ರಹಾಸರ ಅಳು ಈಗ ನಿಧಾನವಾಗಿ ತಾರಕ್ಕೇರಿತು.
“”ಹುಡುಗರಾ… ನಿಮ್ಮ ಥರ ನನ್ನ ಮಗ ಇಲ್ಲಾ ಕಣೊ. ನಿಮಗೆ ದೇವರು ಎಲ್ಲಾ ಸಾಮರ್ಥ್ಯ ಕೊಟ್ಟಿದ್ದಾರೆ. ಅದನ್ನು ಬಳಸಿಕೊಂಡು ಚೆನ್ನಾಗಿ ಓದಲಿ ಎಂದು ಆಗ್ರಹದಿಂದ ಹೊಡೀತೀನಿ. ನಿಮ್ಮಲ್ಲಿ ನನ್ನ ಮಗನನ್ನು ಕಾಣುತ್ತೀನಿ…. ಒಬ್ಬ ಸಭ್ಯ, ನಿಷ್ಟಾವಂತ, ಶಿಸ್ತಿನ, ನಾಳಿನ ಸತ್ಪ್ರಜೆಯನ್ನು ಕಾಣಬೇಕೆಂದು, ನಿಮಗೆ ಶಿಕ್ಷೆ ಕೊಡ್ತೀನಿ ಕಣಪ್ಪಾ” ಎಂದು ಒಬ್ಬರೇ ಹಲುಬುತ್ತಾ ಅವರು ಅಳುತ್ತಿದ್ದರು.
ಅವರ ಅಂತರಂಗದ ಚೀರುವಿಕೆ ಮುಚ್ಚಿದ ಬಾಗಿಲಿನಂತೆ ಒಳಗೇ ಬಂಧನದಲ್ಲಿತ್ತು.
ವಿವೇಕಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ