ಇರಾಕ್‌ ದೇಶದ ಕತೆ: ಬುದ್ಧಿ ಕಲಿತ ಸೋಮಾರಿ


Team Udayavani, Dec 29, 2019, 4:19 AM IST

82

ಒಂದು ಪಟ್ಟಣದಲ್ಲಿ ಮಹಮೂದ್‌ ಎಂಬ ವ್ಯಾಪಾರಿಯಿದ್ದ. ಅವನು ಮನೆಮನೆಗಳಿಗೆ ಹೋಗಿ ಮೂಲೆಯಲ್ಲಿ ಎಸೆದ ಹಳೆಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದ. ಅದು ನಿರುಪಯೋಗಿ ವಸ್ತುವೆಂಬ ಭಾವನೆಯಿಂದ ಅವನು ಎಷ್ಟು ಕಡಿಮೆ ಬೆಲೆ ಕೊಟ್ಟರೂ ಅಷ್ಟನ್ನೇ ಜನ ಸ್ವೀಕರಿಸಿ ಅವನಿಗೆ ವಸ್ತುವನ್ನು ಒಪ್ಪಿಸಿಬಿಡುತ್ತಿದ್ದರು. ಬುದ್ಧಿವಂತನಾದ ಮಹಮೂದ್‌ ಈ ವಸ್ತುವನ್ನು ಥಳಥಳ ಹೊಳೆಯುವ ಹಾಗೆ ಮಾಡಿ ರಾಜ ಮಹಾರಾಜರು, ಧನಿಕರಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಅದೊಂದು ಅಮೂಲ್ಯ ವಸ್ತುವೆಂದು ಅವರು ಕೈತುಂಬ ಚಿನ್ನದ ನಾಣ್ಯಗಳನ್ನೇ ಬೆಲೆಯಾಗಿ ಕೊಟ್ಟು ಕೊಳ್ಳುತ್ತಿದ್ದರು. ಹೀಗೆ ಬಂದ ಹಣದಿಂದ ವ್ಯಾಪಾರಿ ಆಗರ್ಭ ಶ್ರೀಮಂತನಾದ.

ವ್ಯಾಪಾರಿಗೆ ಸಲೀಂ ಎಂಬ ಒಬ್ಬನೇ ಮಗನಿದ್ದ. ತನ್ನ ಮಗ ಮುಂದೆ ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿ ಸಂಪತ್ತನ್ನು ವೃದ್ಧಿಪಡಿಸುತ್ತಾನೆಂದು ವ್ಯಾಪಾರಿ ಭಾವಿಸಿದ್ದ. ಆದರೆ ಅವನಿಗೆ ಯಾವುದೇ ಕೆಲಸದಲ್ಲಿಯೂ ಆಸಕ್ತಿಯಿರಲಿಲ್ಲ. ಹೊಟ್ಟೆ ತುಂಬ ಊಟ ಮಾಡುವುದು, ಕೆಲಸ ಮಾಡದೆ ಅಲೆಯುವ ಗೆಳೆಯರ ಜೊತೆಗೆ ವಿಹಾರಕ್ಕೆ ಹೋಗುವುದು, ಹೊತ್ತೇರುವವರೆಗೂ ಮಲಗುವುದು ಇದರಲ್ಲಿಯೇ ಆಯುಷ್ಯ ಕಳೆಯುತ್ತಿದ್ದ. ಇದನ್ನು ಕಂಡು ವ್ಯಾಪಾರಿಗೆ ಬೇಸರವಾಗುತ್ತಿತ್ತು. ವೃತ್ತಿಯನ್ನು ಕಡೆಗಣಿಸಬಾರದೆಂದು ಹಲವು ರೀತಿಯಿಂದ ಮಗನಿಗೆ ಬುದ್ಧಿ ಹೇಳಿದ. ಆದರೂ ಅವನು ದಾರಿಗೆ ಬರಲಿಲ್ಲ. ಒಂದು ದಿನ ವ್ಯಾಪಾರಿ ಮನೆಯಲ್ಲಿರಲಿಲ್ಲ. ಅಮೀರನೊಬ್ಬ ಅವನ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಖರೀದಿ ಮಾಡಲು ಬಂದ. ಮಹಮೂದನ ಹೆಂಡತಿ ಸಲೀಂನನ್ನು ಕರೆದು ಅದನ್ನೆಲ್ಲ ಅವನಿಗೆ ತೋರಿಸಿ ವ್ಯಾಪಾರ ಮಾಡಲು ಹೇಳಿದಳು. ಆದರೆ ಸಲೀಂ ಅವನತ್ತ ತಲೆಯೆತ್ತಿಯೂ ನೋಡದೆ ಮುಸುಕೆಳೆದು ಮಲಗಿಬಿಟ್ಟ. ಅಮೀರ ಕಾದು ಕಾದು ನಿರಾಶನಾಗಿ ಹೋಗಿಬಿಟ್ಟ.

ಮಹಮೂದ್‌ ಮನೆಗೆ ಬಂದಾಗ ಮಗನ ಅಲಕ್ಷ್ಯದ ಕಾರಣದಿಂದ ದೊಡ್ಡ ವ್ಯಾಪಾರವೊಂದು ಕೈತಪ್ಪಿ ಹೋದ ವಿಚಾರ ಗೊತ್ತಾಯಿತು. ಮಗನ ಮೇಲೆ ತಾಳಲಾಗದ ಕೋಪ ಬಂತು. ಒಂದು ಬೆತ್ತ ತೆಗೆದು ಅವನನ್ನು ಚೆನ್ನಾಗಿ ಹೊಡೆಯಲು ಹೊರಟ. ಆಗ ಹೆಂಡತಿ ಅಡ್ಡ ನಿಂತಳು. “”ಹರಯಕ್ಕೆ ಕಾಲಿಡುತ್ತಿರುವ ಮಗನಿಗೆ ಹೊಡೆಯುವುದು ತರವಲ್ಲ. ಅವನಿಗೆ ಜೀವನ ಮಾಡುವುದು ಕಷ್ಟ ಎಂಬ ಅರಿವು ಮೂಡಿಸದೆ ಬೇಕಾದುದನ್ನೆಲ್ಲ ತಂದುಕೊಟ್ಟು ಸುಖವಾಗಿ ಬೆಳೆಸಿದ್ದೀರಿ. ಸರಿಯಾಗಿ ಪಾಠ ಕಲಿಸಿ ಒಳ್ಳೆಯ ದಾರಿಯಲ್ಲಿ ನಡೆಯಲು ಕಲಿಸಿಲ್ಲ. ಈಗ ಹೊಡೆಯುವ ಬದಲು ಅವನು ತಪ್ಪನ್ನು ಅರಿತುಕೊಳ್ಳುವ ಹಾಗೆ ಮಾಡಿಬಿಡಿ” ಎಂದು ಹೇಳಿದಳು.

ವ್ಯಾಪಾರಿ ಮಗನನ್ನು ಬಳಿಗೆ ಕರೆದ. “”ನಿನ್ನಂತಹ ಅವಿವೇಕಿಯನ್ನು, ಸೋಮಾರಿಯನ್ನು ಮಗನೆಂದು ಕರೆಯಲು ನನಗೆ ನಾಚಿಕೆಯಾಗುತ್ತದೆ. ನನ್ನ ಸ್ನೇಹಿತರ ಮಕ್ಕಳೆಲ್ಲರೂ ವಿದ್ಯೆ ಕಲಿತು ಹೆತ್ತವರಿಗೆ ಸಹಾಯ ಮಾಡುತ್ತಿರುವಾಗ ನೀನು ನಾನು ಗಳಿಸಿಟ್ಟುದನ್ನು ಕರಗಿಸುತ್ತ ಹಾಯಾಗಿ ಅಲೆಯುತ್ತ ಇರುವುದರಿಂದ ಬೇಸರವೂ ಆಗಿದೆ. ಮುಂದೆ ನಿನಗೆ ಈ ಮನೆಯಲ್ಲಿ ಆಶ್ರಯ ಬೇಕೆಂಬ ಭಾವನೆಯಿದ್ದರೆ ಇಗೋ ಒಂದು ನಾಣ್ಯವನ್ನು ಕೊಡುತ್ತೇನೆ. ಇದರಲ್ಲಿ ನೀನು ತಿನ್ನಲು, ಕುಡಿಯಲು, ನಮ್ಮ ಹಸುವಿಗೆ ಆಹಾರವಾಗಲು, ತೋಟ ಹಸಿರಾಗಲು, ಮನೆಯ ಕೋಣೆ ತುಂಬಲು ಬೇಕಾದಷ್ಟು ವಸ್ತುವನ್ನು ಕೊಂಡು ತರಬೇಕು. ಇದು ನಿನ್ನಿಂದ ಆಗುವುದಿಲ್ಲವೆಂದು ನಿನಗನಿಸಿದರೆ ಮರಳಿ ಮನೆಗೆ ಬರಬೇಡ. ಬರಿಗೈಯಲ್ಲಿ ಬಂದವನಿಗೆ ಮನೆಯ ಬಾಗಿಲು ತೆರೆದಿರುವುದಿಲ್ಲ” ಎಂದು ಕಟುವಾಗಿ ಹೇಳಿ ಒಂದು ನಾಣ್ಯವನ್ನು ಅವನ ಮುಂದೆ ಹಾಕಿದ.

ಸಲೀಂ ನಾಣ್ಯವನ್ನು ತೆಗೆದುಕೊಂಡು ಮನೆಯಿಂದ ಹೊರಟ. ಆದರೆ, ಈ ತನಕ ಅವನಿಗೆ ಒಂದು ನಾಣ್ಯ ತೆಗೆದುಕೊಂಡು ಪೇಟೆಗೆ ಹೋಗಿ ಗೊತ್ತಿರಲಿಲ್ಲ. ತನಗೂ ಗೆಳೆಯರಿಗೂ ದುಂದು ವೆಚ್ಚಕ್ಕೆ ಬೇಕಾಗುವಷ್ಟು ಹಣವನ್ನು ತಂದೆಯ ತಿಜೋರಿಯಿಂದ ಬಾಚಿಕೊಂಡು ಹೋಗಿ ಮನ ಬಂದಂತೆ ಖರ್ಚು ಮಾಡುತ್ತಿದ್ದವನಿಗೆ ತಂದೆಯ ಬೇಡಿಕೆ ಕಂಡು ದಿಕ್ಕು ತೋಚದ ಹಾಗಾಯಿತು. ತನ್ನ ಎಲ್ಲ ಗೆಳೆಯರ ಬಳಿಗೂ ಹೋಗಿ ಸಹಾಯ ಮಾಡುವಂತೆ ಕೇಳಿಕೊಂಡ. ಒಬ್ಬರೂ ಅವನ ಸಹಾಯಕ್ಕೆ ನಿಲ್ಲಲಿಲ್ಲ. “”ನಿನ್ನ ತಂದೆಗೆ ಹುಚ್ಚು ಹಿಡಿದಿದೆ. ಒಂದು ನಾಣ್ಯಕ್ಕೆ ಅವನು ಕೇಳುವುದೆಲ್ಲ ಸಿಗುವ ಕಾಲ ಕಳೆದುಹೋಯಿತು. ಈ ಮಾತನ್ನು ಹೋಗಿ ಅವನಿಗೇ ಹೇಳಿಬಿಡು” ಎಂದು ಬೆನ್ನು ಹಾಕಿ ನಿಂತರು.

ಆದರೆ, ಮರಳಿ ಮನೆಗೆ ಹೋದರೆ ತಂದೆ ತನ್ನತ್ತ ದಯೆ ತೋರುವುದಿಲ್ಲ ಎಂಬ ಅರಿವು ಸಲೀಂನಿಗೆ ಚೆನ್ನಾಗಿ ಗೊತ್ತಿದ್ದುದರಿಂದ ಮುಂದೆ ಮುಂದೆ ಹೋಗತೊಡಗಿದ. ದಾರಿಯಲ್ಲಿ ಒಬ್ಬ ಮೀನುಗಾರ ಬರುತ್ತ ಇದ್ದ. ಅವನೊಂದಿಗೆ, “”ಅಣ್ಣಾ, ನನಗೊಂದು ಸಹಾಯ ಮಾಡು. ನನ್ನ ಬಳಿ ಒಂದು ನಾಣ್ಯವಿದೆ. ಇದನ್ನು ತೆಗೆದುಕೊಂಡು ತಿನ್ನಲು, ಕುಡಿಯಲು, ಹಸುವಿಗೆ ಆಹಾರವಾಗಲು, ತೋಟ ಹಸಿರಾಗಲು, ಮನೆಯ ಕೋಣೆ ತುಂಬಲು ಯಾವುದಾದರೂ ವಸ್ತುವಿದ್ದರೆ ಕೊಟ್ಟುಬಿಡು” ಎಂದು ಕೇಳಿದ.

ಮೀನುಗಾರ ಸಲೀಂ ಕಡೆಗೆ ಕಣ್ಣು ಕೆಕ್ಕರಿಸಿ ನೋಡಿದ. “”ಪಾಪ, ನಿನಗೆ ತಲೆಕೆಟ್ಟಿದೆ ಅನಿಸುತ್ತದೆ. ಒಂದು ನಾಣ್ಯಕ್ಕೆ ಒಂದು ಒಣಮೀನೇ ಬರುವುದಿಲ್ಲ. ಇನ್ನು ನೀನು ಕೇಳಿದ ಅಷ್ಟೊಂದು ವಸ್ತುಗಳು ಸಿಗಬೇಕಿದ್ದರೆ ಯಾರಾದರೂ ಮಾಂತ್ರಿಕರಿಗೆ ಸಾಧ್ಯವಾಗಬಹುದು. ಮಾಡಲು ಕೆಲಸವಿಲ್ಲ ಎಂದು ತಲೆಹರಟೆ ಮಾಡುತ್ತಿದ್ದೀಯಾ? ಹೋಗು ಹೋಗು” ಎಂದು ಹೇಳಿ ತನ್ನ ದಾರಿ ಹಿಡಿದು ಹೋಗಿಬಿಟ್ಟ. ಆಮೇಲೆ ಒಬ್ಬ ವರ್ತಕ ಹೇಸರಗತ್ತೆಗಳು ಎಳೆಯುವ ಬಂಡಿಯಲ್ಲಿ ಸರಕುಗಳನ್ನು ಹೇರಿಕೊಂಡು ಅವನಿಗೆದುರಾಗಿ ಬಂದ. ಸಲೀಂ ಅವನನ್ನು ತಡೆದು ನಿಲ್ಲಿಸಿ ಅವನಲ್ಲಿಯೂ ಅದೇ ರೀತಿ ಕೇಳಿಕೊಂಡ.

ವರ್ತಕ ಸಲೀಂನನ್ನು ಮೂದಲಿಸಿ ನಕ್ಕುಬಿಟ್ಟ. “”ನೋಡು, ನಿನಗೆ ಕೇಳಿದ ವಸ್ತುಗಳನ್ನೆಲ್ಲ ಕೊಡಬೇಕೆಂಬ ಆಶೆ ನನಗೇನೋ ಇದೆ. ಆದರೆ ಅದೊಂದೂ ನನ್ನ ಬಳಿ ಇಲ್ಲ. ಇಲ್ಲಿ ಸಮೀಪದಲ್ಲಿ ಒಬ್ಬ ರೈತನಿದ್ದಾನೆ. ಅವನು ತುಂಬ ಹಣ್ಣುಗಳನ್ನು ಬೆಳೆಯುತ್ತಾನೆ. ನೀನು ಅವನಲ್ಲಿಗೆ ಹೋದರೆ ಈ ಹಣಕ್ಕೆ ಹೊಟ್ಟೆ ತುಂಬ ತಿನ್ನಲು ಒಂಟೆಯ ಗೊಬ್ಬರವನ್ನಾದರೂ ಕೊಡಬಹುದು, ಹೋಗಪ್ಪ” ಎಂದು ಹೇಳಿ ಮುಂದುವರೆದ.

ಸಲೀಂ ವರ್ತಕನ ಮಾತನ್ನು ನಂಬಿ ರೈತನ ಮನೆ ಹುಡುಕಿಕೊಂಡು ಅಲ್ಲಿಗೆ ಹೋದ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಬಳಿಗೆ ಹೋಗಿ ತನ್ನ ಕೋರಿಕೆಗಳನ್ನು ತಿಳಿಸಿದ. ರೈತನಿಗೆ ಕೋಪ ಬಂತು. “”ಒಂದು ನಾಣ್ಯಕ್ಕೆ ಯಾವ ಬೆಲೆಯಿದೆ ಎಂದು ಇದನ್ನೆಲ್ಲ ಕೇಳುತ್ತಿರುವೆ? ನಿನ್ನಂತಹ ಹುಚ್ಚನ ಜೊತೆಗೆ ಮಾತು ಆಡಲು ನನಗೆ ಬಿಡುವಿಲ್ಲ. ಇಲ್ಲಿಂದ ಹೋಗಿಬಿಡು” ಎಂದು ಹೇಳಿದ. ಆಗ ರೈತನ ಮಗಳು ಗಿಡಗಳಿಗೆ ನೀರು ಹಾಕುತ್ತ ಇದ್ದಳು. ಅವಳು ಸಲೀಂನ ಕಡೆಗೆ ನೋಡಿದಳು. ಅವನ ಮಾತುಗಳನ್ನು ಕೇಳಿಸಿಕೊಂಡಿದ್ದ ಅವಳು, “”ನೀನು ಕೇಳಿದ ಎಲ್ಲ ವಸ್ತುಗಳೂ ಆ ನಾಣ್ಯಕ್ಕೆ ದೊರಕಬಹುದು. ಆದರೆ ಅದಕ್ಕಾಗಿ ಮೂರು ತಿಂಗಳು ಕಾಯಬೇಕು. ನಾನು ಏನು ಹೇಳಿದರೂ ಹಾಗೆಯೇ ಮಾಡಬೇಕು. ನಿನ್ನ ಕೋರಿಕೆ ನೆರವೇರಿದ ಬಳಿಕ ನೀನು ತಂದೆಯ ಬಳಿಗೆ ಹಿಂತಿರುಗಬಹುದು” ಎಂದು ಹೇಳಿದಳು.

ಸಲೀಂ, “”ನೀನು ಏನು ಹೇಳಿದರೂ ಹಾಗೆಯೇ ಮಾಡುತ್ತೇನೆ. ತಂದೆಯ ಕೋರಿಕೆಯನ್ನು ನೆರವೇರಿಸಿ ಅವರ ಪ್ರೀತಿಯನ್ನು ಮರಳಿ ಗಳಿಸುವುದು ನನಗೆ ಮುಖ್ಯವಾಗಿದೆ” ಎಂದು ಹೇಳಿದ. ರೈತನ ಮಗಳು ನಾಣ್ಯವನ್ನು ಕೊಟ್ಟು ಒಂದು ಹಿಡಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತರಲು ಹೇಳಿದಳು. ಅವನಿಗೆ ಹಾರೆ ಕೊಟ್ಟು ಉದ್ದವಾದ ಮಡಿಗಳನ್ನು ತಯಾರಿಸಲು ಹೇಳಿದಳು. ಬಿಸಿಲಿನಲ್ಲಿ ಈ ಕೆಲಸ ಮಾಡಲು ಅವನಿಗೆ ಕಷ್ಟವಾಯಿತು. ಕೈಯಲ್ಲಿ ಬೊಬ್ಬೆಗಳಾದವು. ಆದರೂ ಮೂರು ತಿಂಗಳು ಕೆಲಸ ಮಾಡಿದರೆ ತನ್ನ ಕೋರಿಕೆ ನೆರವೇರುತ್ತದೆಂಬ ಆಶೆಯಲ್ಲಿ ಅವಳು ಹೇಳಿದ ಕೆಲಸಗಳನ್ನು ಮಾಡಿದ. ಮಡಿಯಲ್ಲಿ ಬೀಜಗಳನ್ನು ಬಿತ್ತಿ ನೀರು ಹಾಕಿದ. ಗಿಡವಾದ ಮೇಲೆ ಗೊಬ್ಬರ ನೀಡಿದ. ಮೂರು ತಿಂಗಳಾಗುವಾಗ ದೊಡ್ಡ ಗಾತ್ರದ ಕಲ್ಲಂಗಡಿ ಹಣ್ಣುಗಳಾದವು. ಆಗ ರಮ್ಜಾನಿನ ಉಪವಾಸದ ದಿನಗಳಾಗಿದ್ದ ಕಾರಣ ಒಂದು ಹಣ್ಣಿಗೆ ಒಂದು ಚಿನ್ನದ ನಾಣ್ಯ ಕೊಟ್ಟು ಹಲವರು ಖರೀದಿ ಮಾಡಿಕೊಂಡು ಹೋದರು.

ರೈತನ ಮಗಳು, “”ಒಂದು ಗಾಡಿ ಹಣ್ಣುಗಳೊಂದಿಗೆ ಚೀಲ ತುಂಬ ಚಿನ್ನದ ನಾಣ್ಯಗಳನ್ನು ತುಂಬಿಕೊಂಡು ತಂದೆಯ ಬಳಿಗೆ ಹೋಗು” ಎಂದು ಹೇಳಿದಳು. ಅಲ್ಲಿ ಏನು ಹೇಳಬೇಕೆಂಬುದನ್ನೂ ವಿವರಿಸಿದಳು. ಸಲೀಂ ತಂದೆಯ ಬಳಿಗೆ ಹೋದ. ನಾಣ್ಯಗಳನ್ನು ತಂದೆಯ ಮುಂದಿರಿಸಿದ. ಒಂದು ಹಣ್ಣನ್ನು ಕತ್ತರಿಸಿ ತಾಯಿಗೂ ತಂದೆಗೂ ತಿನ್ನಲು ಕೊಟ್ಟ. “”ನೋಡಿ, ಇದರಲ್ಲಿ ಹಸಿವು ಮಾಯವಾಗುತ್ತದೆ. ದಾಹ ಇಂಗುತ್ತದೆ. ಇದರ ಸಿಪ್ಪೆ ಹಸುವಿಗೆ ಆಹಾರವಾಗುತ್ತದೆ. ಬೀಜದಿಂದ ತೋಟ ಹಸಿರಾಗುತ್ತದೆ. ಮಾರಾಟದಿಂದ ಬಂದ ಹಣವನ್ನು ಸುರುವಿದರೆ ಒಂದು ಕೋಣೆ ತುಂಬುತ್ತದೆ” ಎಂದು ಹೇಳಿದ.

ಮಹಮೂದನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗನನ್ನು ಅಪ್ಪಿಕೊಂಡ. “”ನೀನು ಸೋಮಾರಿತನವನ್ನು ತೊರೆದುದು ಮಾತ್ರವಲ್ಲ, ಬುದ್ಧಿವಂತನೂ ಆಗಿರುವೆಯೆಂಬುದು ಅರ್ಥವಾಗುತ್ತಿದೆ. ನಿಜ ಹೇಳು, ನಿನ್ನಲ್ಲಿ ಈ ಪರಿವರ್ತನೆಗೆ ಯಾರು ಕಾರಣ?” ಎಂದು ಕೇಳಿದ. ಸಲೀಂ, “”ಒಬ್ಬ ರೈತನ ಮಗಳು ನನಗೆ ಇದನ್ನೆಲ್ಲ ಕಲಿಸಿದಳು” ಎಂದು ನಿಜ ವಿಷಯ ಹೇಳಿದ. “”ಅಂತಹ ಜಾಣೆ ನನ್ನ ಮನೆಗೆ ಸೊಸೆಯಾಗಿ ಬಂದರೆ ನಿನಗೂ ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಾಳೆ” ಎಂದು ಹೇಳಿ ಮಹಮೂದ್‌ ಆ ಹುಡುಗಿಯನ್ನು ಮಗನಿಗೆ ಮದುವೆ ಮಾಡಿಸಿದ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.